Thursday, December 16, 2010

“ಆಳ ಮುಳುಗುವಿಕೆ” ಎಂಬ ಅಪಾಯಕಾರಿ ಕ್ರೀಡೆಯ ಕುರಿತು.............

              ನನಗೆ ತುಂಬಾ ಆಶ್ಚರ್ಯವೆಂದೆನಿಸುವ ವಿಷಯಗಳನ್ನ ಇತರರೊಡನೆ ಹಂಚಿಕೊಳ್ಳುವುದು ನನಗಿಷ್ಟ. ಈ ಹಿಂದಿನ ನನ್ನ ಅನೇಕ ಬರಹಗಳು ಅಂತಹವೇ. ಈಗ ನಾನು ಹೇಳಹೊರಟಿರುವುದು ಮುಳುಗುವಿಕೆ (Competitive Apnea) ಎಂಬ ಕ್ರೀಡೆಯ ಕುರಿತು. ಈ ಕ್ರೀಡೆಯ ವಿಷಯ ನಿಮಗೆ ಗೊತ್ತಿರುವ ಸಂಭವ ಕಡಿಮೆಯೆಂದೇ ನನ್ನನಿಸಿಕೆ. ಆದ್ದರಿಂದಲೇ ಈ ಲೇಖನ.
          ಗಾಳಿತುಂಬಿದ ಸಿಲಿಂಡರ್ ಮೊದಲಾದ ಆದುನಿಕ ಮುಳುಗು ಉಪಕರಣಗಳು ಬರುವ ಮೊದಲು ಮುಳುಗುವಿಕೆ ಎಂಬುದು ಮುತ್ತು ಆಯುವವರು ಹಾಗು ಸ್ಪಂಜು ಆಯುವವರಿಗೆ ಅನಿವಾರ್ಯವಾಗಿತ್ತು. ಉಸಿರನ್ನು ಸಾಕಷ್ಟು ಶ್ವಾಸಕೋಶದಲ್ಲಿ ತುಂಬಿಸಿಕೊಂಡು ಸಮುದ್ರದಾಳಕ್ಕೆ ಇಳಿದು ಮುತ್ತನ್ನು ಬಿಡಿಸಿ ತೆಗೆದು/ಸ್ಪಂಜನ್ನು ಆಯ್ದು ಮೇಲೆ ಬರಬೇಕಿತ್ತು. ಆದರೆ ಇಂದು ಕಾಲ ಬದಲಾಗಿದೆ. ಕೃತಕ ಉಸಿರಾಟ ನೀಡುವ ಮುಳುಗು ಉಪಕರಣಗಳು ಇಂದು ಈ ಕೆಲಸಗಳನ್ನು ಸುಲಭ ಮಾಡಿವೆ.(ಕೆಲವರು ನೀರಿನ ತೊಟ್ಟಿಗಳಲ್ಲೂ ಆ ಮೃದ್ವಂಗಿಗಳನ್ನು ಸಾಕಿ ಚಿಪ್ಪಿನೊಳಗೆ ಕಸ ತುರುಕಿ ಮುತ್ತು ಉತ್ಪಾದಿಸುತ್ತಾರೆ!!!) ವೃತ್ತಿ ಸಂಬಂದಿಸಿದ ಅನಿವಾರ್ಯತೆಯಿಲ್ಲದಿದ್ದರೂ ಇಂದು ಮುಳುಗುವಿಕೆ (Competitive Apnea) ಎಂಬುದು ದಾಖಲೆಗಳನ್ನು ಮುರಿಯುವ ಕ್ರೀಡೆಯಾಗಿ ಬೆಳೆಯುತ್ತಿದೆ!!!
         ತಮಗಿಂತ ಹಿಂದಿನವರು ಮಾಡಿದ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆಯಲು ಕೈಗೊಳ್ಳುವ ಈ ಮುಳುಗುವಿಕೆಯಲ್ಲಿ ಅನೇಕ ವಿದಗಳಿವೆ. ಅಷ್ಟೇನೂ ಅಪಾಯಕಾರಿಯಲ್ಲದ-ಈಜುಕೊಳದಲ್ಲಿ ಉಸಿರು ಒಳಗೆಳೆದುಕೊಂಡು ಆದಷ್ಟು ಹೊತ್ತು ಇರುವುದು, ಉಸಿರೆಳೆದುಕೊಂಡು ಮುಳುಗಿ ಆದಷ್ಟು ದೂರ ಕ್ರಮಿಸುವುದು-ಇವೆಲ್ಲಾ ಒಂದುಕಡೆಯಾದರೆ ಅಂಜದ,ಅಪಾಯಗಳಿಗೆ ಎದೆಯೊಡ್ಡುವ ವ್ಯಕ್ತಿತ್ವದವರಿಗೆ ಸದಾ ಸವಾಲಾಗಿರುವ ಮುಳುಗುವಿಕೆಯ ಪ್ರಕಾರವೇ ಮೈ ಝುಂ ಎನ್ನಿಸುವ ಆಳ ಮುಳುಗುವಿಕೆ!!!! ಹೆಚ್ಚಿನವರ ಅನಿಸಿಕೆಯಂತೆ ಪ್ರಪಂಚದ (ಬೇಸ್ ಜಂಪಿಂಗ್ ನಂತರದ) ಎರಡನೇ ಅತ್ಯಂತ ಅಪಾಯದ ಕ್ರೀಡೆ!!! ಬನ್ನಿ. ಇದರ ಬಗ್ಗೆ ಹೆಚ್ಚು ತಿಳಿಯೋಣ.
          ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು ಶ್ವಾಸಕೊಶದೊಳಗೆ ಗಾಳಿ ತುಂಬಿಕೊಂಡು ಒಬ್ಬ ವ್ಯಕ್ತಿ ಎಷ್ಟು ಆಳದವರೆಗೆ ನೀರಿನಲ್ಲಿ ಮುಳುಗಬಹುದು?? (ಸರಿಯಾದ ಪದಪ್ರಯೋಗವೆಂದರೆ-ಎಷ್ಟು ಆಳದವರೆಗೆ ಮುಳುಗಿ ಜೀವಂತವಾಗಿ ಮೇಲೇರಬಲ್ಲ??-ಎಂಬುದು) ೨೦ ಅಡಿ? ೩೦ ಅಡಿ?? ೫೦ ಅಡಿ??? ಊಹೂ. ನೀವು ಹತ್ತಿರದಲ್ಲೂ ಇಲ್ಲ. ಈ ಆಳ ಮುಳುಗುವಿಕೆಯಲ್ಲೂ ಎರಡು ವಿದಗಳಿವೆ. ಒಂದು-ಉಸಿರೆಳೆದುಕೊಂಡು ಲೋಹದ ತೂಕದೊಂದಿಗೆ ಆಳಕ್ಕಿಳಿಯುವುದು-ಯೋಜಿತ ಆಳ ತಲುಪಿದನಂತರ ಗಾಳಿ ಚೀಲದ ಸಹಾಯದಿಂದ ಸರಸರನೆ ಮೇಲೆ ಬರುವುದು.(ಗಾಳಿಚೀಲ ಒದಗಿಸಲು ಕೃತಕ ಉಸಿರಾಟದ ಸಹಾಯಕರಿರುತ್ತಾರೆ). ಈ ಪ್ರಕಾರದಲ್ಲಿ ವಿಶ್ವದಾಖಲೆ-ಉಸಿರು ಬಿಗಿಹಿಡಿದು ಓದಿ-೨೧೪ ಮೀಟರ್(೭೦೬ಅಡಿ)!!! ಇನ್ನೊಂದು ಪ್ರಕಾರ-ಸಮತೂಕ ಮುಳುಗುವಿಕೆ (Constant Weight Apnea)-ಮುಳುಗಲು ಹಾಗೂ ಮೇಲೇರಲು ಯಾವುದೇ ತೂಕ/ಗಾಳಿಚೀಲ ಉಪಯೋಗಿಸದೆ ಉಸಿರೆಳೆದು ಮುಳುಗಿ ಮೇಲೇಳುವುದು. (ಕಾಲುಗಳಿಗೆ ಜಾಲಪಾದ ಕಟ್ಟಿಕೊಳ್ಳಬಹುದು). ಇದು ಮುಳುಗುವಿಕೆ ಕ್ರೀಡೆಯಲ್ಲೇ ಅತ್ಯಂತ ಕಷ್ಟದ ವಿದ. ಈ ಪ್ರಕಾರದಲ್ಲೂ ಆಸ್ಟ್ರೇಲಿಯಾದ ಸಾಹಸಿಯೊಬ್ಬ ೧೨೪ ಮೀಟರ್(೪೦೯ಅಡಿ) ಆಳ ಕ್ರಮಿಸಿ ಮೇಲೆಬಂದಿದ್ದಾನೆ!!!! ಅಬ್ಬಾ ಮನುಷ್ಯರ ಛಲವೇ!!!
          ಕೇವಲ ಉಸಿರೆಳೆದುಕಟ್ಟಿಕೊಂಡು ೨೦೦-೩೦೦ ಅಡಿ ಆಳ ಮುಳುಗುವುದನ್ನು ಕಲ್ಪಿಸಿಕೊಂಡರೇನೇ ಈ ಆಳಮುಳುಗುವಿಕೆಯ ಅಪಾಯ ಹಾಗೂ ಭೀಕರತೆ ನೀರಿನಲ್ಲಿ ಈಜಾಡಿ, ಮುಳುಗಿಯೆದ್ದು ಅನುಭವವಿರುವ ಓದುಗರಿಗೆ ಮಾತ್ರ ಸುಲಭವಾಗಿ ಅರ್ಥವಾಗುತ್ತದೆ. ಉಸಿರೆಳೆದುಕೊಂಡು ಶ್ವಾಸಕೋಶದಲ್ಲಿ ತುಂಬಿರುವ ಗಾಳಿಯು ಗಾಳಿಚೀಲದಂತೆ ಮೇಲಕ್ಕೆ ದೇಹವನ್ನು ತಳ್ಳುವುದರಿಂದ ೧೫ ಮೀ. ಆಳದವರೆಗೆ ಮುಳುಗುವುದು ಕಷ್ಟವೇ. ಅಲ್ಲಿಂದ ಆಳಕ್ಕೆ,ಮೇಲಿನ ನೀರಿನ ಒತ್ತಡದಿಂದ, ದೇಹ ಕೆಳಕೆಳಕ್ಕೆ ಸುಲಭವಾಗಿ ಜಾರಲಾರಂಬಿಸುತ್ತದೆ. ಆಳಕ್ಕಿಳಿಯುತ್ತಾ ಹೋಗುತ್ತಿದ್ದಂತೆ ಪರಿಸರ ಬದಲಾಗುತ್ತಾ ಹೋಗುತ್ತದೆ. ಒಂದೊಂದೇ ಬಣ್ಣಗಳು ಮಾಯವಾಗುತ್ತಾ ಹೋಗಿ ನೀಲಿ ಬಣ್ಣವೇ ತುಂಬಿಕೊಳ್ಳುತ್ತದೆ. ೬೦ ಮೀಟರ್ ಗಿಂತ ಕೆಳಕ್ಕೆ ಹೋಗುತ್ತಿದ್ದಂತೆ ನೀಲಿ ಬೆಳಕೂ ಮಾಯವಾಗುತ್ತದೆ. ಅಲ್ಲಿಂದ ಮುಂದೆ ಬರೇ ಕತ್ತಲು!!! (ಅಲ್ಲಾಡದಂತೆ ಫಿಕ್ಸ್ ಮಾಡಲಾದ ಅಳತೆ ಹಗ್ಗವೇ ಮುಳುಗಿ ಮೇಲೆ ಬರುವವರಿಗೆ ದಾರಿದೀಪ. ಆ ಹಗ್ಗದ ಕೆಳತುದಿಯಲ್ಲಿ ಇಟ್ಟಿರುವ ಗುರುತೊಂದನ್ನು ಮೇಲೆ ತರಬೇಕು). ಇನ್ನು ಆಳಕ್ಕೆ ಹೋದಂತೆ ದೇಹದಲ್ಲಾಗುವ ಬದಲಾವಣೆಗಳು-ಆಳ ಹೋದಂತೆಲ್ಲಾ ಒತ್ತಡದಿಂದಾಗಿ ರಕ್ತ ಹೃದಯ ಹಾಗೂ ಶ್ವಾಸಕೋಶದ ಕಡೆ ನುಗ್ಗಲಾರಂಬಿಸುತ್ತದೆ. ಶ್ವಾಸಕೋಶದ ಗಾತ್ರ ಚಿಕ್ಕದಾಗುತ್ತಾ ಹೋಗುತ್ತದೆ. ರಕ್ತದಲ್ಲಿ ಸಾರಜನಕ ಅಂಶ ಹೆಚ್ಚಾಗಿ ಮುಳುಗುಗಾರರ ಮಾನಸಿಕ ಹಾಗೂ ದೈಹಿಕ ಸ್ಥಿತಿ ಬದಲಾಗಬಹುದು. ಒಟ್ಟಿನಲ್ಲಿ ಆಳ ಮುಳುಗಿ ಮೇಲೆ ಬರಲು ಅಸಮಾನ್ಯ ಮಾನಸಿಕ ಹಾಗು ದೈಹಿಕ ಸಾಮರ್ಥ್ಯ ಬೇಕೇ ಬೇಕು.
           ಸರಿ. ಈ ದಾಖಲೆಗಳೆಲ್ಲ ಎಲ್ಲಿ ಬರೆಯಲ್ಪಡುತ್ತವೆ? ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸುವರು ಯಾರು? ಅರಬ್ಬೀ ಸಮುದ್ರದಲ್ಲೂ ಮುಳುಗು ಹಾಕಿ ಇಂತಿಷ್ಟು ಆಳಕ್ಕೆ ಹೋಗಿಬಂದೆ ಎಂದರೆ ಆಗುತ್ತಾ? ಇಲ್ಲ. ಫುಟ್ಬಾಲ್ ಗೆ ಫಿಫಾ ಹಾಗೂ ಕ್ರಿಕೆಟ್ಟಿಗೆ ಐಸಿಸಿ ಇದ್ದಹಾಗೆ ಈ ಮುಳುಗುವಿಕೆ ಕ್ರೀಡೆಯೂ ಅಂತರಾಷ್ಟ್ರೀಯ ಸಂಸ್ಥೆಯೊಂದರ ನಿಯಂತ್ರಣಕ್ಕೊಳಕ್ಕೊಳಪ್ಪಟ್ಟಿದೆ. ಅದೇ-ಇಂಟರ್ನ್ಯಾಷನಲ್ ಅಸ್ಸೋಸಿಯೇಶನ್ ಫಾರ್ ದ ಡೆವಲಪ್ಮೆಂಟ್ ಆಫ್ ಆಪ್ನಿಯ (AIDA) – ನಿಯಮಾವಳಿಗೊಳಪಟ್ಟು ನಿರ್ದಿಷ್ಟ ಸ್ಥಳಗಳಲ್ಲಿ ನಡೆಯುವ ಮುಳುಗುವಿಕೆಯನ್ನು ಅಧಿಕೃತವಾಗಿ ದಾಖಲಿಸುವ ಸಂಸ್ಥೆ. ಸಂಸ್ಥೆಯ ಸದಸ್ಯರುಗಳೆಲ್ಲಾ ಸೇರಿ ವಿಮರ್ಶೆ ಮಾಡಿ ಅಂತಿಮವಾಗಿ ಸಿದ್ದಪಡಿಸುವ ನಿಯಮಾವಳಿಗಳಿಂದಾಗಿ ಕೆಲವೊಮ್ಮೆ ದಾಖಲೆಯ ಮುಳುಗುವಿಕೆ ನಡೆದರೂ ದಾಖಲೆಯ ಪುಸ್ತಕಕ್ಕೆ ಹೋಗದ ವಿಚಿತ್ರ ನೋಡಲು ಈ ಕೆಳಗಿನ ಪ್ಯಾರ ಓದಿ!!!  
ಸಾರಾ ಕ್ಯಾಂಬೆಲ್
         ೧೦೦ ಮೀಟರ್ ಆಳದವರೆಗೆ ಪುರುಷರು ಮುಳುಗಿ ಮೇಲೆಬಂದಿದ್ದರೂ ಮಹಿಳೆಯರ ಪಾಲಿಗೆ ಆ ೧೦೦ ಮೀಟರ್ ಗುರಿ ಗಗನಕುಸುಮವಾಗಿದೆ.(ಗಗನಕುಸುಮಕ್ಕಿಂತ ಆಳಕುಸುಮ ಪದಪ್ರಯೋಗವೇ ಸರಿಯೇನೋ!!). ಪ್ರಪಂಚಾದ್ಯಂತ ಇರುವ ಮುಳುಗುಪ್ರಿಯರ ಹಾಗೂ ಆಸಕ್ತರ ಕಣ್ಣು ಇಬ್ಬರು ಮಹಿಳೆಯರ ಈ ಸಾದನೆಯ ಪ್ರಯತ್ನದ ಮೇಲೆ ನೆಟ್ಟಿವೆ. ಮುಳುಗು ರಾಣಿ ಪಟ್ಟಕ್ಕೆ ಇವರಿಬ್ಬರ ನಡುವೆ ನಡೆಯುತ್ತಿರುವ ಸ್ಪರ್ದೆ ನಿಜಕ್ಕೂ ರೋಮಾಂಚಕಾರಿ. ಅವರೇ ಆಂಗ್ಲ ಸಂಜಾತೆ ಆದರೆ ಈಗ ಈಜಿಪ್ಟ್ ನಲ್ಲಿ ವಾಸಿಸುತ್ತಿರುವ ಸಾರಾ ಕ್ಯಾಂಬೆಲ್ ಹಾಗೂ ರಷ್ಯಾದ ನತಾಲಿಯ ಮೊಲ್ಖನೋವ. ಇವರಿಬ್ಬರೂ (ಬೇರೆಬೇರೆ ಸಂದರ್ಬದಲ್ಲಿ) ೧೦೦ ಮೀಟರ್ ಆಳ ಕ್ರಮಿಸಿದ್ದರೂ ಅದು ದಾಖಲೆಯಾಗದೆ ಅಧಿಕೃತವಾಗಿ ಆ ದಾಖಲೆ ಯಾರ ಹೆಸರಿಗೆ ಬರೆಯಲ್ಪಡುತ್ತದೆಂದು ಕಾಲವೇ ಹೇಳಬೇಕು. ಸದ್ಯಕ್ಕಂತೂ ಅತಿ ಆಳಕ್ಕೆ ಮುಳುಗಿದ ದಾಖಲೆ(೯೬ ಮೀಟರ್) ಕ್ಯಾಂಬೆಲ್ ಹೆಸರಲ್ಲೇ ಕಳೆದ ಒಂದೂವರೆ ವರ್ಷದಿಂದ ಇದೆ. ಆ ದಾಖಲೆ ಮಾಡಿದ ಐದೇ ದಿನದಲ್ಲಿ-೧೦೦ ಮೀಟರ್ ಗುರಿಮುಟ್ಟಲು-ಮುಳುಗಿದ ಕ್ಯಾಂಬೆಲ್ –ಆ ಗುರಿ ತಲುಪಿ-ಮೇಲೆ ಬಂದರೂ-ಮೇಲೆ ಬಂದವಳೇ ಎರಡು ದೀರ್ಘ ಉಸಿರೆಳೆದು-ಕೂಡಲೇ ಪ್ರಜ್ಞಾಶೂನ್ಯಳಾದಳು. ಆಕೆಯ ೧೦೦ ಮೀಟರ್ ಮುಳುಗುವಿಕೆ ಅಧಿಕೃತ ದಾಖಲೆಯಾಗಲೇ ಇಲ್ಲ. ಕಾರಣ-ಮುಳುಗಿ ಮೇಲೆ ಬಂದಮೇಲೆ ೬೦ ಸೆಕೆಂಡುಗಳವರೆಗೆ ಪ್ರಜ್ಞೆಕಳೆದುಕೊಳ್ಳಬಾರದೆಂಬ AIDA ನಿಯಮ!!!
           ಇನ್ನು ನತಾಲಿಯ ಕಥೆ ಇನ್ನೂ ಮಜವಾಗಿದೆ. ೨೫ ಸೆಪ್ಟಂಬರ್ ೨೦೦೯. ಉಸಿರೆಳೆದುಕೊಂಡು ನೀರಲ್ಲಿ ಮುಳುಗಿದ ನತಾಲಿಯ ಕನಸಿನ ಆ ಗುರಿ ಮುಟ್ಟಿದಳು. ೧೦೧ ಮೀಟರ್ ಆಳಕ್ಕಿಳಿದು ಮೇಲೆ ಬಂದಳು. ಮೇಲೆ ಬಂದವಳೇ ಉಸಿರು ಬಿಟ್ಟು ಎಳೆದುಕೊಂಡು ನಿಯಮದಂತೆ ೬೦ ಸೆಕೆಂಡುಗಳ ಕಾಲ ಪ್ರಜ್ಞಾಶೂನ್ಯಳಾಗದೆ ಎಚ್ಚರವಾಗಿಯೂ ಇದ್ದಳು. ಹೊಸ ದಾಖಲೆ ಅವಳ ಹೆಸರಲ್ಲಿ ಬರೆಯಲ್ಪಟ್ಟಿತು. ಆದರೆ ಈ ಸಂತೋಷ ಕೇವಲ ಏಳು ತಿಂಗಳು ಮಾತ್ರ. ಈ ವರ್ಷದ ಮೇ ತಿಂಗಳಲ್ಲಿ ಅವಳ ಹೆಸರನ್ನು ದಾಖಲೆ ಪುಸ್ತಕದಿಂದ ತೆಗೆಯಲಾಯಿತು!!! ಕಾರಣ?? ಅವಳ ತರಬೇತುದಾರ ಆ ಮುಳುಗುವಿಕೆಯ
ಆಯೋಜಕನಾಗಿದ್ದಲ್ಲದೆ ಮುಖ್ಯ ತೀರ್ಪುಗಾರನೂ ಆಗಿದ್ದ. AIDA ನಿಯಮಾವಳಿಗಳ ಪ್ರಕಾರ ಹಾಗೆ ಮಾಡುವಂತಿಲ್ಲ!!!
 (ಮುಳುಗುವಿಕೆ ಆಸಕ್ತರಲ್ಲಿ ಇನ್ನೂ ಈ ವಿಷಯದ ಬಗ್ಗೆ ವಾದ ವಿವಾದ ನಡೆಯುತ್ತಿದೆ).AIDA ಅಧಿಕೃತ ದಾಖಲೆಗಳು ಏನೇ ಇರಲಿ, ೧೦೧ ಮೀಟರ್ ಆಳ ಕ್ರಮಿಸಿದ ಮೊದಲ ಮಹಿಳೆ ನತಾಲಿಯ.
         ಅಪಾಯಕಾರಿ ಸಾಹಸಗಳನ್ನ ಕೈಗೊಳ್ಳುವ ವಿಷಯದಲ್ಲಿ ಪಾಶ್ಚಾತ್ಯರಿಗೆ ಸರಿಸಾಟಿ ನಮ್ಮವರಲ್ಲವೇ ಅಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಅತಿಸಾಹಸದ ಕ್ರೀಡೆಗಳು (Extreme Adventures) ಅಲ್ಲಿ ನಡೆಯುತ್ತಲೇ ಇರುತ್ತವೆ(ಯಂತೆ). ಟಿ.ವಿ. ವಾಹಿನಿಗಳು ಪ್ರಾಯೋಜಕರಾಗಿ ದುಡ್ಡು ಸುರಿಯುತ್ತವೆ. ವಾಚು,ಟೆಂಟ್,ಕ್ಯಾಮರ ಮೊದಲಾದವುಗಳ ಜಾಹಿರಾತುಗಳು ಕೈ ಬೀಸಿ ಕರೆಯುತ್ತವೆ. ಧೈರ್ಯ,ಛಲ, ಪ್ರೋತ್ಸಾಹ ಅವರಕಡೆಯಿದೆ. ನನಗೆ ಆಶ್ಚರ್ಯವೆನಿಸುವುದು-ಐದಾರು ಜನರ ತಂಡ-ಗೋಡೆಯಂತಹ ಸಾವಿರಾರು ಅಡಿ ಎತ್ತರದ ಬಂಡೆಯ ಪರ್ವತ ಏರುವುದು. ಕೆಳಗೆ ಪ್ರಪಾತ. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಂಡೆಯ ಮದ್ಯದ ಕೊರಕಲಿನೊಳಗೆ ಹುಕ್ಸ್ ಹಾಕಿ ನೇತಾಡುತ್ತಾ ಮೇಲೇರುತ್ತಾರೆ. ಅತಿ ಆಶ್ಚರ್ಯವೆಂದರೆ ಹತ್ತುತ್ತಾ ಕತ್ತಲಾದಾಗ (ಹುಕ್ಸ್ ಗಳಿಂದ ಹುಕ್ಸ್ ಗಳಿಗೆ ಕಟ್ಟಿದ ನೈಲಾನ್ ಹಗ್ಗದಲ್ಲಿ) ನೇತಾಡುವ ಟೆಂಟಿನಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಹತ್ತಲಾರಂಬಿಸುತ್ತಾರೆ!!!
        ನಿಮಗೆ ಈ ಮುಳುಗುವಿಕೆ ಕ್ರೀಡೆಯ ಬಗ್ಗೆ ಮೊದಲೇ ಗೊತ್ತಿತ್ತೇ? ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ.
            

   
Enhanced by Zemanta

Sunday, November 7, 2010

ರೈಟ್ರು ಭಟ್ರು ಹೇಳಿದ “ಚೌಡಿಯ ಕಣ್ಣು ಕಟ್ಟಿದ” (ನಿಜ)ಕತೆ!!!!

                              ಮೊನ್ನೆ ಮುಸ್ಸಂಜೆಲಿ ಆಡಾಡ್ ಮಳೆ ಜೋರ್ ಬರ್ತಿದ್ದಾಗ-ಮಳೆ ನಿರೀಕ್ಷೆಯಿಲ್ಲದೆ ಮನೇಲಿ ಕೊಡೆ ಬಿಟ್ಟ್ ಬಂದಿದ್ದ ರೈಟ್ರುಭಟ್ರು-ಅದು ಇದು ಮಾತಾಡ್ತಾ-ನಂಬಿಕೆ ಆಚಾರಗಳ ವಿಚಾರ ಬಂದಾಗ-ಇತ್ತೀಚೆಗಷ್ಟೇ ನಡೆದ-ಅವರು ಬೇರೆ ಯಾರಿಗೂ ಹೇಳಬೇಡಿ ಎಂದು ಹೇಳಿ ಹೇಳಿದ-ಒಂದು ನಿಜ ಘಟನೆ ಇಗೋ ನಿಮ್ಮ ಮುಂದೆ. (ರೈಟ್ರುಭಟ್ರು –ಹಾಗೆಂದರೇನು?? ಎಂಬ ಯೋಚನೆ ನಿಮ್ಮ ತಲೆಯಲ್ಲಿ ಬಂದರೆ ನಿಮಗಾಗಿ ಹೆಚ್ಚಿನ ಮಾಹಿತಿ-ಹೆಚ್ಚು ಜಮೀನು ಇರುವ ಅಥವಾ ಜಮೀನಿನಿಂದ ದೂರದಲ್ಲಿ ವಾಸಿಸುತ್ತಿರುವ ಜನ ಜಮೀನಿನಲ್ಲಿ ನಡೆಯುವ ಕೆಲಸ ಕಾರ್ಯಗಳ ಮೇಲ್ವೀಚಾರಣೆಗಾಗಿ ಇರಿಸಿರುವ ವ್ಯಕ್ತಿಯನ್ನ ರೈಟ್ರು ಎಂದು ಕರೆಯುತ್ತಾರೆ. ಸದಾಶಿವ ಭಟ್ರು ಪಕ್ಕದ ಎಸ್ಟೇಟ್ನಲ್ಲಿ ಈ ಕೆಲಸ ಮಾಡ್ತಾ ಇದ್ದಾರೆ. ಆದ್ದರಿಂದ ಅವರನ್ನು ಜನ ಕರೆಯುವುದು ರೈಟ್ರುಭಟ್ರು ಅಂತನೇ!!!) ಈ ನಿಜಕತೆಯ ದ್ವಿತೀಯಾರ್ದದಲ್ಲಿ ಬರುವ ಪಾತ್ರದಾರಿಗಳಿಗೆ ಮೊದಲಾರ್ದದಲ್ಲಿ ನಡೆದ ಘಟನೆಯ ಬಗ್ಗೆ ಕಿಂಚತ್ತೂ ಅರಿವಿಲ್ಲ. ಆ ಘಟನೆಯ ಬಗ್ಗೆ ಸ್ವಲ್ಪ ಸುಳಿವು ಅವರಿಗೆ ಬಂದರೂ ನಿಜಕತೆಯ ಮೊದಲಾರ್ದದಲ್ಲಿ ಬರುವ ಪಾತ್ರದಾರಿಗಳನ್ನು ಅವರು ಸಮಾ ಬಯ್ಯದೆ ಬಿಡುವುದಿಲ್ಲ!!!! ಈ ನಿಜಕತೆ ಇಂತಿದೆ-
                         ಒಮ್ಮೆ ಕಾಪಿತೋಟದಲ್ಲಿ ಕೆಲಸ ಮಾಡಿಸುತ್ತಿರುವಾಗ ತಮ್ಮ ಕತ್ತಿ ನಾಪತ್ತೆಯಾಗಿದ್ದು ರೈಟ್ರುಭಟ್ರು ಗಮನಕ್ಕೆ ಬಂತು. ಸ್ವಲ್ಪ ಹೊತ್ತಿನ ಮುಂಚೆ ಉಪಯೋಗಿಸಿದ ಕತ್ತಿ ಇದ್ದಕ್ಕಿದ್ದಂತೆ ನಾಪತ್ತೆ!! ಅಲ್ಲೇ ಕೆಲಸಮಾಡುತ್ತಿರುವ ಯಾರದ್ದೋ ಕಿತಾಪತಿ ಎಂದೆಣಿಸಿದ ರೈಟ್ರುಭಟ್ರು ನನ್ ಕತ್ತಿ ಎಲ್ಲಿ? ಯಾರ್ ತಗಂಡಿದ್ದೀರಿ? ಎಂದು ವಿಚಾರಣೆ ಶುರುಮಾಡಿದರು. ಎಲ್ಲಾ ಕೆಲಸಗಾರರೂ ತಮಗೆ ಗೊತ್ತಿಲ್ಲ,ತಮಗೆ ಗೊತ್ತಿಲ್ಲ-ಎಂದೇ ಹೇಳಿದರು. ಸುಳ್ಳು ಹೇಳ್ತೀರಾ, ತಡಿರಿ ಬುದ್ದಿಕಲಿಸ್ತೀನಿ ಎಂದ ರೈಟ್ರುಭಟ್ರು ಕೊನೆಯ ಬಾಣವಾಗಿ ತೆಂಗಿನ ಕಾಯಿಯೊಂದಕ್ಕೆ ಕುಂಕುಮ ಹಚ್ಚಿ ನೀವ್ಯಾರೂ ನನ್ನ ಕತ್ತಿ ಮುಟ್ಟಿಲ್ಲ ತಾನೇ. ಈ ಕಾಯಿ ಮುಟ್ಟಿ ಹೇಳಿ. ಆ ಮೇಲ್ಮಕ್ಕಿ ಚೌಡಿಯೇ ನೋಡಿಕೊಳ್ಳಲಿ ಎಂದು ಹೇಳಿ ಅಲ್ಲಿದ್ದ ಎಲ್ಲಾ ಕೆಲಸಗಾರರ ಕೈಲಿ ಆ ಕಾಯಿ ಮುಟ್ಟಿಸಿ ಹೇಳಿದಂತೆ ಅದನ್ನು ತೆಗೆದುಕೊಂಡು ಹೋಗಿ ಕಾಡು ಉಡಿಯ ಮದ್ಯೆ ಇದ್ದ ಮೇಲ್ಮಕ್ಕಿ ಚೌಡಿಯ ಚಿಕ್ಕ ಗುಡಿಯ ಮುಂದೆ ಇಟ್ಟುಬಂದರು. (ಬಹುಶಃ ಕೆಲಸಗಾರರ್ಯಾರೂ ಆ ಕತ್ತಿ ತೆಗೆದುಕೊಂಡಿರಲಿಕ್ಕಿರಲಿಲ್ಲ. ರೈಟ್ರುಭಟ್ರು ಎಲ್ಲೋ ಇಟ್ಟಿರಬೇಕು. ಮೇಲ್ಮಕ್ಕಿ ಚೌಡಿ ತುಂಬಾ ಪ್ರಸಿದ್ದಿ!!! ಚೌಡಿ ಹೆಸರು ಕೇಳುತ್ತಿದ್ದಂತೆ-ನಿಜವಾಗಿ ಯಾರಾದ್ರೂ ತಗಂಡಿದ್ರೆ-ನೋಡಿ ಭಟ್ರೇ. ಇಲ್ಲೇ ಸಂದಿ ಬಿದ್ದಿದ್ಯಲ್ಲಾ ಎಂದು ಹೇಳಿ ಕತ್ತಿ ಕೊಡುತ್ತಿದ್ದಾರೆ ವಿನಾ ಅಪ್ಪಿತಪ್ಪಿ ಕಾಯಿ ಮುಟ್ಟುತ್ತಿರಲಿಲ್ಲ!!! ರೈಟ್ರುಭಟ್ರು ಅದನ್ನು ನನ್ನಜೊತೆ ಮಾತನಾಡುತ್ತಿರುವಾಗ ಒಪ್ಪಿಕೊಂಡರು). ಇದು ಮೊದಲಾರ್ದ ನಡೆದ ಘಟನೆಯಾದರೆ ದ್ವಿತಿಯಾರ್ದ ಮುಂದೆ ಓದಿ-
                                      ಮೇಲ್ಮಕ್ಕಿ ಚೌಡಿಯ ಗುಡಿಯ ಆಸುಪಾಸಿನಲ್ಲೇ ಮೇಲ್ಮಕ್ಕಿ ಹೆಗ್ಡೇರು ಕುಟುಂಬಕ್ಕೆ ಸೇರಿದ ಜಮೀನಿದೆ. ಮೊದಲು ಒಂದೇ ಮನೆಯಲ್ಲಿದ್ದ ಕುಟುಂಬ ಬೆಳೆದಂತೆ ಒಡೆದು ಇಂದು ಅಲ್ಲಿ ಮೂರ್ನಾಲ್ಕು ಮನೆಗಳಾಗಿವೆ. ಇತ್ತೀಚೆಗೆ ಯಾರೋ ಒಬ್ಬರ ಮನೇಲಿ ತುಂಬಾ ಅನಾರೋಗ್ಯ ಖರ್ಚು ವೆಚ್ಚಗಳಾದಾಗ ಹಾಗು ಇನ್ಯಾರೋ ಒಬ್ಬರ ಮನೇಲಿ ಜಾನುವಾರುಗಳಿಗೆ ಪದೇಪದೆ ತೊಂದರೆಯಾದಾಗ ಹೆಗ್ಡೇರು ಕುಟುಂಬದ ಹಿರಿ ಸದಸ್ಯರೆಲ್ಲಾ ಸೇರಿ ಸರಿಯಾದ ಕಡೆ ಕೇಳಿಸುವುದೆಂದು ತೀರ್ಮಾನಿಸಿದ್ದಾರೆ. ಅಂತೆಯೇ ನಾಲ್ಕೈದು ಮನೆ ಹಿರಿಯರು ಒಟ್ಟಾಗಿ, ನಿಮಿತ್ಯ ಹೇಳುವ ಮೂರ್ನಾಡು ರಾಮಭಟ್ಟರನ್ನು ಕಂಡಿದ್ದಾರೆ. ಕವಡೆ ಹಾಕಿದ ರಾಮಭಟ್ಟರು ನಿಮ್ಮ ಪರಿಸರದಲ್ಲಿ ಯಾವುದೋ ಚೌಡಿನೋ, ಮತ್ಯಾವುದೋ ಇರಬೇಕು ನೋಡಿ. ಅದರ ಕಣ್ಣು ಕಟ್ಟಿದಹಾಗಿದೆ(!!!!), ಅದಕ್ಕೇ ತೊಂದರೆಗಳು-ಎಂದು ಅರುಹಿದ್ದಾರೆ. ಕಾಡಿನೊಳಗೆ ಉಡಿಯ ಮಧ್ಯದಲ್ಲಿರುವ ಮೇಲ್ಮಕ್ಕಿ ಚೌಡಿಯ ಪುಟ ಗುಡಿ ಜ್ಞಾಪಿಸಿಕೊಂಡು ಹೌದೌದು. ಹಾಗೊಂದಿರುವುದು ಹೌದು.-ಎಂದು ಹೆಗ್ಡೇರುಗಳು (ಭಟ್ಟರ ನಿಮಿತ್ಯ ಹೇಳುವ ಜ್ಞಾನದ ಬಗ್ಗೆ ವಿಸ್ಮಯಪಡುತ್ತಾ) ತಲೆ ಆಡಿಸಿದ್ದಾರೆ. ರಾಮಭಟ್ಟರ ಸಲಹೆಯಂತೆ ಆ ಚೌಡಿಗೆ ಹಣ್ಣು ನೈವೇದ್ಯ ಅರ್ಪಿಸಿ ಇನ್ನು ಮುಂದೆ ಸರಿಯಾಗಿ ನಡೆದುಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ.
                              ಜಮೀನಿನಂಚಿನ  ಕಾಡಿನಲ್ಲಿ ಪೊದೆಗಳ ಮದ್ಯದಲ್ಲಿ ಮರದ ಕೆಳಗೆ ತುಂಬಾ ಕಷ್ಟದಲ್ಲಿ ಗುಡಿಯೆಂದು ಹೇಳಬಹುದಾದ ಕಲ್ಲಿನ ರಚನೆಯೊಂದರ ಒಳಗಿರುವುದೇ ಮೇಲ್ಮಕ್ಕಿ ಚೌಡಿ(ಯ ಕಲ್ಲು). ಅದಕ್ಕೆ ಬರುವ ದಾರಿಯಲ್ಲಿನ ಹಾಗೂ ಸುತ್ತಮುತ್ತ ಬೆಳೆದ ಉಡಿಯನ್ನ ಸವರಿ ಚೌಡಿಯ ಗುಡಿಯ ಬಳಿಗೆ ಬಂದ ಹೆಗಡೆಯವರ ಕುಟುಂಬದ ಸದಸ್ಯರಿಗೆ (ರೈಟ್ರುಭಟ್ರು ಕುಂಕುಮ ಹಚ್ಚಿ ಇಟ್ಟಿದ್ದ) ತೆಂಗಿನ ಕಾಯನ್ನು ನೋಡಿ ಆಕಾಶವೇ ತಲೆಮೇಲೆ ಬಿದ್ದಂತಾಗಿದೆ!! ನಿಮಿತ್ಯ ಹೇಳಿದ್ದು ಸರಿ. ನೋಡಿ.ಯಾವನೋ ಸತ್ ಮಲಗ್ಯಾನೆ-ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಪಿಯುಸಿ ಓದುತ್ತಿರುವ ಹೆಗಡೇರ ಕುಟುಂಬದ ಹುಡುಗನೊಬ್ಬ ಆ ಕಾಯನ್ನು ಮುಟ್ಟಲು ಹತ್ತಿರ ಹೋಗುತ್ತಿದ್ದಂತೆ ತಡಿ ತಡಿ ತಡಿ ಮುಟ್ಬ್ಯಾಡ ಎಂದು ಅವನನ್ನು ತಡೆದ ಹೆಗ್ಡೇರ ಕುಟುಂಬದ ಹಿರಿತಲೆಯೊಬ್ಬರು  ಮುರ್ನಾಡಿಗ್ಹೋಗಿ ರಾಂಭಟ್ರನ್ನೇ ಕೇಣಾಣ-ಅಂತ ಎಲ್ಲರ ತಲೆಯಲ್ಲೂ ಬಂದಿರಬಹುದಾದ ಸಲಹೆಯನ್ನು ಬಾಯ್ಬಿಟ್ಟು ಹೇಳಿದರು.
                  ಮತ್ತೊಮ್ಮೆ ಅವರೆಲ್ಲರ ಸವಾರಿ ಮೂರ್ನಾಡು ರಾಂಭಟ್ಟರ ಮನೆಕಡೆ ಹೊರಟಿದೆ. ದೂರದಲ್ಲಿ ಕುಳಿತೇ ಕವಡೆ ಹಾಕಿ ಚೌಡಿಯ ಕಣ್ಣುಕಟ್ಟಿದ ವಿಷಯ ಹೇಳಿದ ರಾಂಭಟ್ಟರ ನಿಮಿತ್ಯದ ಸಾಮರ್ಥ್ಯ ಹೊಗಳಿ ಮುಂದೇನು ಮಾಡಬೇಕು ಎಂದು ತಲೆತಗ್ಗಿಸಿ ಕೇಳಿಕೊಂಡಿದ್ದಾರೆ. ನಾನು ಹೇಳಿರಲಿಲ್ಲವಾ ಎಂದೇ ಮಾತು ಶುರುಮಾಡಿದ ರಾಂಭಟ್ಟರು ಯೋಚನೆ ಮಾಡಬೇಡಿ. ಎಲ್ಲದಕ್ಕೂ ಒಂದು ಪರಿಹಾರ ಅಂತಿದೆ ಎಂದು ಅಭಯ ನೀಡಿ ನಿವಾರಣೆಗೆ ಕೈಗೊಳ್ಳಬೇಕಾದ ಕಾರ್ಯಗಳ ಒಂದು ಪಟ್ಟಿಯನ್ನೇ ನಿಡಿದರು. ಅದೆಲ್ಲಾ ನಿಮಗೇ ಬಿಟ್ಟಿದ್ದು. ಎಷ್ಟ್ ಜನ ಬೇಕು ಏನೇನ್ ಬೇಕು ಏನೇನ್ ಮಾಡ್ಬೇಕು ನೀವೇ ಮಾಡ್ಬಿಡಿ. ಖರ್ಚು ನಾವ್ ನಾಕೈದ್ ಮನೆಯವರ್ ಹಂಚ್ಕಂಡ್ ಕೊಡ್ತೀವಿ-ಎಂದು ಹೆಗ್ಡೇರುಗಳು ಹೇಳಲು ಅದೆಲ್ಲಾ ನನಗ್ ಬಿಟ್ಬಿಡಿ. ಖರ್ಚು ಅಂದಾಜು ಇಂತಿಷ್ಟಾಗಬಹುದು ಎಂದ ರಾಂಭಟ್ರು ಯಾವುದೋ ಒಂದು ದಿನ ಗೊತ್ತುಮಾಡಿ ಕೊಟ್ಟರು. 
                 ಆ ದಿನದಂದು ಮೇಲ್ಮಕ್ಕಿಗೆ ರಾಮಭಟ್ಟರು ಮೂರ್ನಾಲ್ಕು ಮರಿಭಟ್ಟರುಗಳನ್ನ ಜೊತೆಗೆ ಕರೆದುಕೊಂಡುಬಂದು ಅಗತ್ಯದ ಪೂಜೆಗಳನ್ನು ಚೌಡಿಯ ಗುಡಿಯ ಪಕ್ಕ ಮಾಡಿದರು. ಊರಿನಲ್ಲಿರುವ ಹೆಗ್ಡೇರು ಕುಟುಂಬದ ಸದಸ್ಯರುಗಳಲ್ಲದೆ ಬೆಂಗಳೂರು ಸೇರಿದ್ದ ಹೆಗ್ಡೇರು ಕುಟುಂಬದ ಪಿಳಿಕೆಗಳೂ ಬಂದು ಸೇರಿದ್ದವು. ಹೊರಗೆ ಕೊಟ್ಟ ಹೆಣ್ಣುಮಕ್ಕಳೂ ಚಿಳ್ಳೆ ಪಿಳ್ಳೆಗಳೊಂದಿಗೆ ಬಂದಿದ್ದರು. (ಅಡಿಗೆ)ಭಟ್ಟರನ್ನು ಕರೆಸಿ ಉಟದ ವ್ಯವಸ್ಥೆಯೂ ಇತ್ತು. ಪೂಜೆಯೆಲ್ಲಾ ಮುಗಿಸಿ ಎಲ್ಲಾ ಸರಿಯಾಗಿದೆ. ಇನ್ನೇನು ಯೋಚನೆ ಮಾಡಬೇಡಿ ಎಂದು ಹೇಳಿ ರಾಮಭಟ್ಟರು ಪ್ರಸಾದ ಕೊಟ್ಟಾಗ ನೆರೆದ ಕುಟುಂಬದ ಸದಸ್ಯರಿಗೆಲ್ಲಾ ಯಾವುದೋ ಸಂಕಷ್ಟದಿಂದ ಹೊರಬಂದ ನಿರಾಳ ಭಾವ!!!!
               ದ್ವಿತಿಯಾರ್ದ ಘಟನೆ ಓದಿದ ಮೇಲೆ ನೀವೇ ಹೇಳಿ-ಮೊದಲಾರ್ದ ನಡೆದ ಘಟನೆ ಹೆಗಡೇರು ಕುಟುಂಬದವರಿಗೆ ಗೊತ್ತಾದರೆ ಸಮಾ ಬಯ್ಯುವುದಿಲ್ಲವೇ? ಇಡೀ ಘಟನೆಯನ್ನು ನೋಡಿದ ಎಸ್ಟೇಟ್ ಕೆಲಸಗಾರರು ಮುಸಿಮುಸಿ ನಗುತ್ತಿದ್ದಾರೆ.
               ಇದೊಂದು ಕೇವಲ ಮತ್ತೊಂದು ನಗೆಬರಹವಾಗಿ ಕೊನೆಯಾಗದಿರಲೆಂದು ಈ ಪ್ಯಾರ- ನಮ್ಮ ಜೀವನದಲ್ಲಿ (ಸಹಜವಾಗಿ ನಡೆಯುವ) ಇಷ್ಟ-ಅನಿಷ್ಟ ಘಟನೆಗಳನ್ನು ನಿರ್ದರಿಸುವುದು ಯಾವುದು?? ನಾವು ಹುಟ್ಟಿದ ಸಮಯದಲ್ಲಿನ ಆಕಾಶದಲ್ಲಿನ ಗ್ರಹನಕ್ಷತ್ರಗಳ ಸ್ಥಾನವೇ? (ಸಾಮಾನ್ಯ ಭಾಷೆಯಲ್ಲಿ-ಜಾತಕ,ಕುಂಡಲಿನಿ,Horoscope) ಅಥವಾ ನಮ್ಮ ಅಪ್ಪಂದೋ ಅಮ್ಮಂದೋ ಮಕ್ಕಳದ್ದೋ ಸೋಸೆದೋ ಜಾತಕವಾ? ಅಥವಾ ನಮ್ಮ ಆತ್ಮ ಈಗಿರುವ ದೇಹವನ್ನು ಸೇರುವುದಕ್ಕೆ ಮುಂಚೆ ಹಿಂದಿದ್ದ ಯಾವುದೋ ದೇಹದಲ್ಲಿ ನಡೆಸಿದ ಕರಾಮತ್ತುಗಳೇ? ಅಥವಾ ನಾವು ಕೈಗೊಳ್ಳುವ (ಸಂಖ್ಯಾದರಿತ) ಮಂತ್ರಗಳ ಪಠಣ ಹಾಗು ಹೋಮ ಹವನಗಳಾ? ಅಥವಾ ದೂರದ ಯಾವುದೋ ಒಂದು ದೇವಸ್ಥಾನಕ್ಕೆ ಹೋಗಿ ದರುಶನ ಮಾಡಿ ಚೀಟಿ ಮಾಡಿಸಿ ಸೇವೆ ಕೈಗೊಂಡ ಮೇಲೆ ಕಣ್ಣು ಬಿಟ್ಟು ನಮ್ಮ ಮೇಲೆ ಕೃಪೆತೋರುವ ಆ ದೇವರಾ?(ತೊಂದರೆ ಬಂದಾಗ ಹೊಗಿಬರ್ತೀವಿ ಅಂತ ಹರಕೆ ಹೊತ್ತರೂ ಸಮಸ್ಯೆ ಪರಿಹಾರವಾಗು(ತ್ತಂ)ತ್ತೆ!!!). ನೀವೇ ಹೇಳಬೇಕು-ಇವೆಲ್ಲವುವಾ ಅಥವಾ ಯಾವುದಾದರೂ ಒಂದಾ ಎರಡಾ ಅಥವಾ ಬೇರೆಯಾವುದಾದಾರಾ??? ಓದಿದವರು ದಯವಿಟ್ಟು ಉತ್ತರಿಸಿ. (ನನ್ನನಿಸಿಕೆಯಂತೆ ಇವೆಲ್ಲಾ ನಮ್ಮ ಇಷ್ಟ-ಅನಿಷ್ಟಗಳ ಮೇಲೆ ಎಳ್ಳಷ್ಟೂ ಪ್ರಭಾವಬೀರುವುದಿಲ್ಲ. ಬದಲಾಗಿ ಅಳುಕುವ ಮನಸ್ಸಿಗೆ ಸ್ವಲ್ಪ ಮಾನಸಿಕ ನೆಮ್ಮದಿ ನೀಡುತ್ತವೆ. ಆದರೆ ಅದಕ್ಕಾಗಿ ತೆರುವ ಬೆಲೆಯೆಷ್ಟು?)  
       ವಿ.ಸೂ- ಮೇಲ್ಮಕ್ಕಿ ಚೌಡಿ ಬಗ್ಗೆ ಹಾಗೆಲ್ಲಾ ಹಗುರವಾಗಿ ಮಾತಾಡಬಾರದಿತ್ತು, ಮೂರ್ನಾಡು ರಾಮಭಟ್ಟರು ತುಂಬಾ ಪ್ರಸಿದ್ದರು, ಅವರ ಬಗ್ಗೆ ನಿಮಗೇನ್ ಗೊತ್ತು-ಎಂದೆಲ್ಲಾ ಕ್ಯಾತೆ ತೆಗೆಯುವವರಿಗಾಗಿ-ಮೇಲೆ ಹೇಳಿದ ಘಟನೆ ಮಾತ್ರ ನೂರಕ್ಕೆ ನೂರು ಸತ್ಯ. ಪಾತ್ರಗಳು ಹಾಗು ಸ್ಥಳಗಳ ಹೆಸರು ಬದಲಿಸಲಾಗಿದೆ ಅಷ್ಟೆ.      

Friday, October 1, 2010

ಪ್ಲುಟೊ-ಅದನ್ನು ಸೌರವ್ಯೂಹ ಗ್ರಹಗಳ ಗುಂಪಿನಿಂದ ಹೊರಗಿಟ್ಟಿದ್ದೇಕೆ??

                ಸೌರವ್ಯೂಹದ ಗ್ರಹಗಳನ್ನು ಹೆಸರಿಸಿ- ಈ ಪ್ರಶ್ನೆಗೆ ನಾವು ಉತ್ತರಿಸುತ್ತಿದ್ದೆವು- ಬುಧ, ಶುಕ್ರ,.............ಯುರೇನಸ್, ನೆಪ್ಚೂನ್ ಮತ್ತು ಪ್ಲುಟೊ. ಹೌದು. ನಾವು ಓದುವಾಗ ಸೌರವ್ಯೂಹದಲ್ಲಿ ಒಂಬತ್ತು ಗ್ರಹಗಳಿದ್ದವು. ಆದರೆ ಈಗ ಕಾಲ ಬದಲಾಗಿದೆ!!! ಪ್ಲುಟೊ ನವಗ್ರಹಗಳ ಆ ಗುಂಪಿನಲ್ಲಿ ಇಲ್ಲ. ಸೌರವ್ಯೂಹದಲ್ಲಿರುವುದು ಈಗ ಎಂಟೇ ಗ್ರಹಗಳು!!!  ನಾಲ್ಕು ವರ್ಷಗಳ ಹಿಂದೆ ಪ್ರಾಗ್ ನಲ್ಲಿ ನಡೆದ ಇಂಟರ್ನ್ಯಾಷನಲ್ ಆಸ್ಟ್ರೋನಾಮಿಕಲ್ ಯುನಿಯನ್ನ ೨೬ನೇ ಮಹಾಸಭೆಯ ತೀರ್ಮಾನದಂತೆ ಪ್ಲುಟೊವನ್ನು ಹೊರಗಿಡಲಾಗಿದೆ. ಈ ವಿಷಯ ನಿಮಗೆ ಗೊತ್ತಿದೆಯೆಂದೇ ಭಾವಿಸುತ್ತೇನೆ. ಆದರೆ ಈ ಪ್ಲುಟೊ ಗ್ರಹಗಳ ಪಟ್ಟಿಗೆ ಸೇರಿದ್ದು ಹೇಗೆ? ಸೇರಿಸಿ ಅದನ್ನು ಹೊರಗಿಟ್ಟಿದ್ದೇಕೆ?-ಎಂಬುದನ್ನು ನಿಮಗೆ ತಿಳಿಸುವುದೇ ಈ ಲೇಖನದ ಉದ್ದೇಶ.
               ೧೯ನೇ ಶತಮಾನದ ಕೊನೆಯಲ್ಲಾಗಲೇ ಯುರೋಪಿನಲ್ಲಿ ಸೌರವ್ಯೂಹದ ಎಂಟು ಗ್ರಹಗಳನ್ನ ಕಂಡುಹಿಡಿದು ಗುರುತಿಸಿ ಅಭ್ಯಸಿಸಲಾಗಿತ್ತು. ಆದರೆ ಇನ್ನೂ ಒಂದು ಗ್ರಹವಿರಬಹುದೆಂಬ ಕುತೂಹಲ ಸಂಶೋಧಕರಲ್ಲಿ ಮನೆಮಾಡಿತ್ತು. ಪ್ಲಾನೆಟ್-x’ – ಎಂಬ ಕಾಲ್ಪನಿಕ ಹೆಸರು ಕೊಟ್ಟು ಆ ಗ್ರಹದ ಹುಡುಕಾಟದಲ್ಲಿ ಪ್ರಪಂಚಾದ್ಯಂತ ಅಬ್ಸರ್ವೆಟರಿಗಳಲ್ಲಿ ಸಂಶೋಧಕರು ನಿರತರಾಗಿದ್ದರು. ಅದನ್ನು ತಾವೇ ಮೊದಲು ಗುರುತಿಸಲು ಅವರಲ್ಲೇ ಪೈಪೋಟಿ ಇತ್ತು!!! ಅಂತಹಾ ಅಬ್ಸರ್ವೇಟರಿಗಳಲ್ಲಿ ಅಮೆರಿಕಾದ ಧನಿಕ ಹವ್ಯಾಸಿ ಖಗೋಳಶಾಸ್ತ್ರಜ್ಞ ಪರ್ಸಿವಲ್ ಲೊವೆಲ್ ಅರಿಜೊನಾದಲ್ಲಿ ಸ್ಥಾಪಿಸಿದ್ದ ಸ್ವಂತ ಅಬ್ಸರ್ವೇಟರಿಯೂ ಒಂದು. ಅಲ್ಲಿ (೧೯೨೯ರಲ್ಲಿ) ಆ ಕೆಲಸವನ್ನು ಯುವ ಖಗೋಳಶಾಸ್ತ್ರಜ್ಞನೊಬ್ಬನಿಗೆ ವಹಿಸಲಾಗಿತ್ತು. ಕಂಪ್ಯೂಟರ್ ಹಾಗೂ ಡಿಜಿಟಲ್ ತಂತ್ರಜ್ನಾನವಿಲ್ಲದ ಆ ಕಾಲದಲ್ಲಿ ಅಂತರಿಕ್ಷದಲ್ಲಿ ಹುಡುಕಾಟ ತುಂಬಾ ಶ್ರಮ ಬೇಡುವ ಕೆಲಸವಾಗಿತ್ತು. ವ್ಯವಸ್ತಿತವಾಗಿ ಅನಂತಾಕಾಶದಲ್ಲಿ ಗ್ರಹಗಳ ಪಥದ (ಕ್ರಾಂತಿವೃತ್ತ) ಚಿಕ್ಕ ಭಾಗದ ಫೋಟೋಗಳನ್ನ (ದೂರದರ್ಶಕದಿಂದ) ತೆಗೆಯುವುದು-ಮತ್ತೆ ಒಂದು ವಾರ ಬಿಟ್ಟು ಅದೇ ಚಿಕ್ಕ ಭಾಗದ ಫೋಟೋವನ್ನು ಮತ್ತೊಮ್ಮೆ ತೆಗೆಯುವುದು-ಸಾವಿರಾರು ಚುಕ್ಕಿ(dots)ಗಳಿರುವ ಆ ಎರಡು ಫೋಟೋಗಳಲ್ಲಿ ಯಾವುದಾದರೂ ಚುಕ್ಕಿ ಸ್ಥಾನಪಲ್ಲಟವಾಗಿದೆಯೇ ಎಂದು ಗಮನಿಸುವುದು-ಹೀಗೆ ಸಾಗಿತ್ತು ಕೆಲಸ. (ಇಂದಿನ ಡಿಜಿಟಲ್ ಯುಗದಲ್ಲಿ ಇದು ತುಂಬಾ ಸುಲಭ). ಹತ್ತು ತಿಂಗಳ ಶ್ರಮದ ಕೆಲಸ ಹಾಗೂ ಸಾವಿರಾರು ಫೋಟೋಗಳು-ಕೊನೆಗೊಂದು ದಿನ-ವಾರಗಳ ಅಂತರದಲ್ಲಿ ತೆಗೆದ ಒಂದು ಜೊತೆ ಫೋಟೋದಲ್ಲಿ-ಉಳಿದೆಲ್ಲಾ ಚುಕ್ಕಿಗಳು ಸ್ಥಿರವಾಗಿದ್ದರೂ ಒಂದೇ ಚುಕ್ಕಿ ಕೆಲವೇ ಮಿಲಿಮೀಟರ್ ಚಲಿಸಿದ್ದು ಕಂಡುಬಂತು!!!. ಮತ್ತೂ ಒಂದು ತಿಂಗಳು ಸತತವಾಗಿ ಅದನ್ನು ಅಭ್ಯಸಿಸಿ ಅದರ ಗ್ರಹಪಥ ಲೆಕ್ಕಾಚಾರ ಮಾಡಿ ಅರಿಜೋನಾದಿಂದ ಪ್ಲಾನೆಟ್-ಎಕ್ಸ್ ಕಂಡುಹಿಡಿದ ಸುದ್ದಿ ಪ್ರಪಂಚಕ್ಕೆ ಬಿತ್ತು. ಇಡೀ ಪ್ರಪಂಚವೇ ಬೆಕ್ಕಸಬೆರಗಾಯಿತು. 
                       ನಂತರದ್ದು ಪ್ಲಾನೆಟ್-ಎಕ್ಸ್ ಗೆ ಹೆಸರಿಡುವ ಕೆಲಸ. ಪ್ರಪಂಚದ ಮೂಲೆಮೂಲೆಗಳಿಂದ ಅರಿಜೋನಾಕ್ಕೆ ಅನೇಕ ಸಲಹೆಗಳು ಹರಿದು ಬಂದವು. ೧೧ ವರ್ಷದ ಬ್ರಿಟಿಷ್ ಹುಡುಗಿಯಿಂದ ಬಂದ ಸಲಹೆ-ಸೂರ್ಯನಿಂದ ಅತಿ ದೂರದಲ್ಲಿ ಕತ್ತಲ ಪಥದಲ್ಲಿ ಸುತ್ತುವುದರಿಂದ-ಇತರೆಲ್ಲಾ ಗ್ರಹಗಳಿಗೆ ಗ್ರೀಕ್ ಪುರಾಣದ ಹೆಸರಿಟ್ಟಂತೇ-ಕತ್ತಲೆಯ ಪಾತಾಳ ಲೋಕದ ಗ್ರೀಕ್ ದೇವತೆ ಪ್ಲುಟೊ ಹೆಸರು-ಅದನ್ನು ಹೊಸ ಗ್ರಹಕ್ಕೆ ನಾಮಕರಣ ಮಾಡಲಾಯಿತು!! ಈ ಪ್ಲುಟೊ ಎಷ್ಟು ಪುಟ್ಟ ಗ್ರಹವೆಂದರೆ ಸೌರವ್ಯೂಹದ ಕೆಲವು ಉಪಗ್ರಹಗಳೇ ಇದಕ್ಕಿಂತ ಎಷ್ಟೋ ದೊಡ್ಡವು!!! ಇದರ ಭೌತಿಕ ರಚನೆಯೂ ವಿಚಿತ್ರ. ಅತ್ತ ಭೂಮಿ, ಮಂಗಳಗಳಂತೆ ಗಟ್ಟಿ ಹೊರಮೈಯೂ ಇಲ್ಲ. ಇತ್ತ ಗುರು,ಶನಿಯಂತೆ ದಟ್ಟ ಅನಿಲದಿಂದ ಕೂಡಿದ್ದೂ ಅಲ್ಲ. ಅತಿ ಶೀತಕ್ಕೆ ಅನಿಲಗಳು ಗಡ್ಡೆಕಟ್ಟಿ ಗ್ರಹದ ಮೇಲ್ಮೈ ಆಗಿದೆ!!! ಇದರ ಪಥವೂ ಉಳಿದೆಲ್ಲಾ ಗ್ರಹಗಳ ಪಥಕ್ಕಿಂತ ಸ್ವಲ್ಪ ವಾರೆ.
              ದಶಕಗಳು ಕಳೆದಂತೆ ಕಂಪ್ಯೂಟರ್ ಹಾಗೂ ಡಿಜಿಟಲ್ ತಂತ್ರಜ್ಞಾನ ಮುಂದುವರೆದಂತೆ ಖಗೋಳ ವೀಕ್ಷಣೆಯಲ್ಲೂ ಕ್ರಾಂತಿಕಾರಕ ಸುಧಾರಣೆಗಳಾದವು. ೧೯೯೨ರಲ್ಲಿ ಹವಾಯಿಯ ಮೌನ ಕೀ ಅಬ್ಸರ್ವೆಟರಿ ಪ್ಲುಟೊ ಆಚೆ ಮತ್ತೊಂದು ಹೊಸ ಆಕಾಶಕಾಯ ಪತ್ತೆಮಾಡಿತು. ಏಳೆಂಟು ವರ್ಷಗಳಲ್ಲೇ ಅಂತಹ ೩೦೦ಕ್ಕೂ ಹೆಚ್ಚು ಗ್ರಹಗಳ ತರದ ಆಕಾಶಕಾಯಗಳು ಪತ್ತೆಯಾದವು!!! ನಾಸಾ ಕಂಡುಹಿಡಿದ ಒಂದು ಆಕಾಶಕಾಯವಂತೂ ಪ್ಲುಟೊಗಿಂತ ದೊಡ್ಡದಾಗಿತ್ತು.(ಕೆಲವು ವರ್ಷದ ಕೆಳಗೆ ಏರಿಸ್ ಎಂಬ ಹತ್ತನೇ ಗ್ರಹದ ಪತ್ತೆ-ಎಂಬ ಸುದ್ದಿ ನೀವು ಪತ್ರಿಕೆಗಳಲ್ಲಿ ಓದಿರಬಹುದು). ಹಾಗಾದರೆ ಅವುಗಳನ್ನೆಲ್ಲಾ ಸೌರವ್ಯೂಹದ ಗ್ರಹಗಳ ಸಾಲಿನಲ್ಲಿ ಸೇರಿಸುವುದೇ ಅಥವಾ ಪ್ಲುಟೊವನ್ನು ಆ ಸಾಲಿನಿಂದ ಹೊರದಬ್ಬುವುದೇ-ಎಂಬ ವಿಷಯದಲ್ಲಿ ಖಗೋಳವಿಜ್ಞಾನಿಗಳಲ್ಲೇ ಎರಡು ಬಣವಾಯಿತು!!! 
                    ಈ ವಾದ ವಿವಾದಗಳಿಗೆ ಮಂಗಳ ಹಾಡಲು ಇಂಟರ್ನ್ಯಾಷನಲ್ ಆಸ್ತ್ರೋನೋಮಿಕಲ್ ಸೊಸೈಟಿ (IAU)ನಿರ್ದರಿಸಿತು. (ಅನೇಕ ದೇಶಗಳ ಕೆಲವು ಸಾವಿರ ವೃತ್ತಿಪರ ಸಂಶೋದಕರು ಸದಸ್ಯರಾಗಿರುವ ಒಂದು ಸಂಸ್ಥೆ ಈ ಸೊಸೈಟಿ). ಗ್ರಹಗಳಿಗೆ ಸಂಬಂದಿಸಿದಂತೆ ಆಕಾಶಕಾಯವೊಂದನ್ನು ಗ್ರಹವೆಂದು ಪರಿಗಣಿಸಲು ಅದಕ್ಕೆ ಇರಬೇಕಾದ ಅರ್ಹತೆಗಳನ್ನು ಪಟ್ಟಿಮಾಡಿ ಒಂದು ಗೊತ್ತುವಳಿ ಅಂಗೀಕರಿಸಲಾಯಿತು. ಆ ಗೊತ್ತುವಳಿ (IAU Resolution 5A) ಪ್ರಕಾರ ಆಕಾಶಕಾಯವೊಂದನ್ನು ಗ್ರಹವೆಂದು ಪರಿಗಣಿಸಲು –                                            
೧)ಗೋಳಾಕಾರ ಹೊಂದಿರಲು ಸಾಕಾಗುವಷ್ಟು ದ್ರವ್ಯರಾಶಿಯನ್ನು ಹೊಂದಿರಬೇಕು.  
೨)ವೃತ್ತಾಕಾರದ ಪಥದಲ್ಲಿ ಸೂರ್ಯನನ್ನು ಸುತ್ತುತ್ತಿರಬೇಕು. ಹಾಗೂ
೩)ತನ್ನ ಪಥದ ಸುತ್ತಮುತ್ತವಿರುವ ಚಿಕ್ಕಪುಟ್ಟ ಆಕಾಶಕಾಯಗಳನ್ನು ಗುಡಿಸಿ ಹಾಕುವಷ್ಟು ಬಲಿಷ್ಟ ಗುರುತ್ವಾಕರ್ಷಣಾ ಶಕ್ತಿ ಹೊಂದಿರಬೇಕು.
            ಮೊದಲೆರಡು ಅರ್ಹತೆ ಹೊಂದಿದ್ದ ಪ್ಲುಟೊಗೆ ಮೂರನೆ ಅರ್ಹತೆ ಇರಲೇ ಇಲ್ಲ!!! ಅದರ ಗುರುತ್ವಾಕರ್ಷಣೆ ಶಕ್ತಿ ಅಷ್ಟು ಕಡಿಮೆ. ಬೇರೆ ದೊಡ್ಡ ಗ್ರಹಗಳ ಗುರುತ್ವಾಕರ್ಷಣಾ ಶಕ್ತಿ ಎಷ್ಟಿರುತ್ತದೆಯೆಂದರೆ ಅವುಗಳ ಪಥದ ಸುತ್ತಮುತ್ತಲಿನ ಆಕಾಶಕಾಯಗಳು ಒಂದೇ ಆ ಗ್ರಹಗಳೊಂದಿಗೇ ಕೂಡಿಕೊಂಡಿರುತ್ತವೆ ಇಲ್ಲಾ ಅದರ ಸುತ್ತ ಸುತ್ತುವ ಉಪಗ್ರಹವಾಗಿ ಸೇರಿಕೊಂಡಿರುತ್ತವೆ. ಆದರೆ ಪುಟ್ಟ ಪ್ಲುಟೊ ಪಥದಲ್ಲಿ ಅಲ್ಲಲ್ಲಿ ಸಾವಿರಾರು ಚಿಕ್ಕಪುಟ್ಟ ಆಕಾಶಕಾಯಗಳು. ಆದ್ದರಿಂದ ೨೦೦೬ರ ಆಗಸ್ಟ್ ೨೪ರಂದು ಜೆಕ್ ಗಣರಾಜ್ಯದ ಪ್ರಾಗ್ ನಲ್ಲಿ ನಡೆದ ಇಂಟರ್ನ್ಯಾಷನಲ್ ಆಸ್ತ್ರೋನಾಮಿಕ್ ಯೂನಿಯನ್ನ ಸಾಮಾನ್ಯ ಸಭೆಯಲ್ಲಿ ಮತದಾನದ ಮೂಲಕ ಪ್ಲುಟೊವನ್ನು ಸೌರವ್ಯೂಹದ ಗ್ರಹಗಳ ಪಟ್ಟಿಯಿಂದ ಹೊರಗಿಡಲಾಯಿತು.  
             ನಿರೀಕ್ಷೆಯಂತೆ ಹೆಚ್ಚಿನ ಪ್ರತಿರೋಧ ಬಂದಿದ್ದು ಅಮೆರಿಕಾದಿಂದ. ಏಕೆಂದರೆ ಅಮೇರಿಕಾ ಕಂಡುಹಿಡಿದ ಒಂದೇ ಒಂದು ಗ್ರಹ ಅದು. ಜನಸಾಮಾನ್ಯರು ಹಾಗೂ ಖಗೋಳಶಾಸ್ತ್ರಜ್ಞರಿಂದ ಪ್ರತಿಭಟನಾ ಪತ್ರಗಳು ಸಾಕಷ್ಟು ಸಂಖ್ಯೆಯಲ್ಲಿ IOU ತಲುಪಿದವು. ಪುಟಾಣಿ ಪ್ಲುಟೊವನ್ನು ಹೊರಗಟ್ಟಿದಕ್ಕೆ ಮಕ್ಕಳು ಮರುಗಿದರು!! ‘to pluto’ ಎಂಬುವುದು ಹಿಂದೊತ್ತು ಅಥವಾ ಮೌಲ್ಯಕಳೆ (to demote or to devalue something)ಎಂಬರ್ಥದಲ್ಲಿ ಬಳಸಲಾರಂಬಿಸಲ್ಪಟ್ಟಿತು!!!! ನ್ಯೂ ಮೆಕ್ಸಿಕೋ ರಾಜ್ಯದ ಪಾರ್ಲಿಮೆಂಟ್ ಅಂತೂ ರಾತ್ರಿ ಆಕಾಶದಲ್ಲಿ ನ್ಯೂ ಮೆಕ್ಸಿಕೋ ಮೇಲೆ ಪ್ಲುಟೊ ಹಾದು ಹೋಗುವವರೆಗೂ ಅದನ್ನು ಗ್ರಹವೆಂದೇ ಪರಿಗಣಿಸುವ ತೀರ್ಮಾನ ಕೈಗೊಂಡಿತು!! (ಅರಿಜೊನಾ ಆ ರಾಜ್ಯದಲ್ಲಿ ಬರುತ್ತದೆ)
            ಈ ವಿಷಯ ನಿಮಗೆ ಗೊತ್ತಿತ್ತೇ? ಈಗ ನಿಮಗೊಂದು ಪ್ರಶ್ನೆ-ಸೌರವ್ಯೂಹದಲ್ಲಿ ಎಷ್ಟು ಗ್ರಹಗಳಿವೆ? ಅವುಗಳ ಹೆಸರೇನು?(ಕೊನೆಯ ಎರಡು ಗ್ರಹಗಳ ಹೆಸರು ಸಾಕು!!) ಲೇಖನ ಓದಿದವರು ನಿಮ್ಮನಿಸಿಕೆ ಬರೆದರೆ ಸಂತೋಷ.           
                                            

Friday, September 10, 2010

ಟಾಮೀ!!!!!.....ಮಲೆನಾಡಿನ ಶಿಕಾರಿಯ ಒಂದು (ಕಟ್ಟು)ಕಥೆ.

                 ಒಂದು ದಶಕದ ಹಿಂದೆ-ನಾನು ಹಾಸ್ಟೆಲ್ಲಿನಲ್ಲಿ ಇದ್ದು ಓದುತ್ತಿದ್ದಾಗ-ಓದಿ ಓದಿ ಬೇಜಾರಾಗಿ ಸ್ನೇಹಿತರೆಲ್ಲ ಅಪರಾತ್ರಿ ಯಾರದ್ದೋ ರೂಮಿನಲ್ಲಿ ಸೇರಿ ಪಟಾಕಿ ಹೊಡೆಯುತ್ತಿದ್ದಾಗ-ತೇಲಿ ಬಂದ ವಿಷಯವೇ ಈ ಸ್ವಾರಸ್ಯಕರ ಕಥೆ!!! ನಾಲ್ಕು ಜನ ಸೇರಿ ಲೋಕಾಭಿರಾಮವಾಗಿ ಮಾತಾಡುವಾಗ ಎಲ್ಲರ ಗಮನವನ್ನು ತನ್ನೆಡೆ ಸೆಳೆಯಲು ಕಾಲು ಬಾಲ ಸೇರಿಸಿ ಕಥೆ ಹೇಳುವವರನ್ನು ನೀವು ನೋಡಿರಬಹುದು. ನಮ್ಮ ಸಹಪಾಟಿ ರಮೇಶನೂ ಅಂತಹವನೇ. ರಮೇಶ ಬಯಲುಸೀಮೆಯಾವನಾದರೂ ಅವನ ತಾಯಿಯ ತವರೂರು ಮಲೆನಾಡಿನ ನಮ್ಮ ತಾಲೂಕು ಕೊಪ್ಪಾಕ್ಕೆ ಸೇರಿದ ಒಂದು ಹಳ್ಳಿ. ಅಲ್ಲಿ ಅವನ ಸೋದರಮಾವ ಮತ್ತು ತಾಯಿಯ ನೆಂಟರೆಲ್ಲಾ ಜಮೀನು ಮಾಡಿಕೊಂಡು ಇದ್ದಾರೆ. ಅವರ ಮಾವ ಹಾಗೂ ಅವರ ಗೆಳೆಯರೆಲ್ಲಾ ಶಿಕಾರಿಗೆ ಹೋಗುತ್ತಿರುತ್ತಾರಂತೆ. ಹಾಗೆ ಒಮ್ಮೆ ಶಿಕಾರಿಗೆ ಹೋದಾಗ, ನಿಜವಾಗಿ ನಡೆದ ಘಟನೆ. ಹೌದು ಕಂಡ್ರೋ ಎಂದು ಒಗ್ಗರಣೆ ಹಾಕಿ-ರಮೇಶ ಹೇಳಿದ್ದು ಹೀಗೆ-
               ರಮೇಶನ ಸೋದರ ಮಾವ ಹಾಗೂ ಮೂರ್ನಾಲ್ಕು ಸ್ನೇಹಿತರು ಒಮ್ಮೆ ಶಿಕಾರಿಗೆ ಹೋದರಂತೆ. ಜೊತೆಗೆ ಅವರ ನಾಯಿ ಟಾಮಿ ಕೂಡಾ ಇತ್ತಂತೆ. ಶಿಕಾರಿಗೆ ಹೊರಡುವ ಪರಿವಾರದಲ್ಲಿ ನಾಯಿ ಎಂದೆಂದೂ ಅವಿಭಾಜ್ಯ ಅಂಗ. ವಾಸನೆಯಿಂದಲೇ ಪ್ರಾಣಿಗಳನ್ನು ಗುರುತಿಸುವುದು, ಅದನ್ನು ಬೆನ್ನತ್ತುವುದು, ಬೆದರಿ ಕದ್ದು ಕೂತ ಪ್ರಾಣಿಗಳನ್ನು ಅಲ್ಲಿಂದ ಎಬ್ಬಿಸುವುದು-ಈ ಕಾರ್ಯಗಳಲ್ಲಿ ನಾಯಿಗಳ ಕಾರ್ಯಕ್ಷಮತೆ ಮನುಷ್ಯರಿಗಿಂತ ಹೆಚ್ಚಂತೆ. (ನಾನೆಂದೂ ಶಿಕಾರಿಗೆ ಹೋದವನಲ್ಲ!!! ಅನುಭವಿಗಳಿಂದ ಕೇಳಿತಿಳಿದಿದ್ದು). ಹೀಗೆ ಶಿಕಾರಿಗೆ ಹೋದವರಿಗೆ ಗಂಟೆಗಟ್ಟಲೆ ಅಲೆದರೂ ಒಂದೇ ಒಂದು (ಯೋಗ್ಯ) ಪ್ರಾಣಿ ಸಿಗಲಿಲ್ಲ. ಅಲೆದಲೆದು ಸುಸ್ತಾಗಿ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಹಂದಿಗಳ ಹಿಂಡೊಂದು ಕಾಣಿಸುವುದೆ!!!! ಕೇಳಬೇಕೆ? ಸುಸ್ತು ಮರೆತು ನಾಯಿ ಹಾಗೂ ಶಿಕಾರಿಗಾರರು ಹಂದಿಗಳ ಬೆನ್ನತ್ತಿದರು. 
                ಉಳಿದ ಹಂದಿಗಳು ಚಲ್ಲಾಚದುರಿ ದಿಕ್ಕುಪಾಲಾಗಿ,ಮರಿಹಂದಿಯೊಂದು ಮಾತ್ರ ಗುಂಪಿನಿಂದ ಬೇರೆಯಾಗಿ ಒಂಟಿಯಾಯಿತು. ಇವರು ಮರಿಹಂದಿಯ ಬೆನ್ನು ಬಿದ್ದರು. ಆ ಮರಿಹಂದಿಯೋ ಇವರನ್ನು ಚೆನ್ನಾಗಿ ಕುಣಿಸಿತು. ಒಮ್ಮೆ ಪೊದೆಯಲ್ಲಿ ಓಡಿಹೋಗಿ ಸೇರಿಕೊಳ್ಳುವುದು-ಅಲುಗಾಡದೆ ಇರುವುದು-ನಾಯಿ, ಮನುಷ್ಯರು ತುಂಬಾ ಹತ್ತಿರ ಬರುತ್ತಿದ್ದಂತೆ ಪಟ್ಟನೆ ಅಲ್ಲಿಂದ ಓಟಕೀಳುವುದು. ಶಿಕಾರಿಗಾರರು ಸುಸ್ತೋ ಸುಸ್ತು.ಇದು ಹೀಗೇ ಎರಡು ಮೂರು ಸರ್ತಿ ಪುನರಾವರ್ತನೆಯಾದಾಗ-ಹಂದಿಮರಿ ಓಡಿಹೋಗಿ ಪೋದೆಯೊಂದನ್ನು ಸೇರಿಕೊಂಡಾಗ-ಅದನ್ನು ಹೊರಗೆ ಹೊರಡಿಸುವ ಗೋಜಿಗೆ ಹೋಗದೆ-ಶಿಕಾರಿಗಾರರು ಪೊದೆಗೇ ಬೆಂಕಿಯಿಟ್ಟರು!! ಹೇಗೂ ಸಾಯಿಸಿಯೇ ತಿನ್ನುವುದಲ್ಲವೇ? ಬೆಂಕಿಲೇ ಸಾಯಲಿ-ಎಂಬುದು ಅವರೆಣಿಕೆ. ಪೊದೆ ಪೂರ್ತಿ ಉರಿಯುವ ತನಕ ಬೀಡಿ ಸೇದುತ್ತ,ಅದು ಇದು ಹರಟುತ್ತ ವಿಶ್ರಾಂತಿ ಪಡೆದರು.
               ಸ್ವಲ್ಪ ಹೊತ್ತು ಬಿಟ್ಟು ಬೆಂಕಿಉರಿ ಕಡಿಮೆಯಾದಮೇಲೆ ಕೆದಕಿ ನೋಡಿದರೆ ಹದವಾಗಿ ಬೆಂದ ಹಂದಿಮಾಂಸ!!! ಅಷ್ಟು ಚೂರು ಮಾಂಸ ಮನೆಗೆ ತೆಗೆದುಕೊಂಡು ಹೋಗುವುದು ಹೇಗೆ? ಹೇಗೂ ಸುಸ್ತಾಗಿ ಹಸಿವಾಗಿದೆ. ಇಲ್ಲೇ ತಿಂದುಮುಗಿಸುವ- ಎಂದು ತಿರ್ಮಾನಿಸಿದ ರಮೇಶನ ಸೋದರಮಾವ ಮತ್ತು ಅವರ ಸ್ನೇಹಿತರು ಅಲ್ಲೇ ಅದನ್ನು ತಿಂದು ಮುಗಿಸಿದರಂತೆ!! ಹೊಟ್ಟೆ ಸ್ವಲ್ಪ ತಣ್ಣಗಾಗಿ ಕಾಡಿಂದ ಮನೆದಿಕ್ಕಿಗೆ ಹೊರಟಾಗಲೇ ಅವರಿಗೆ ತಮ್ಮ ನಾಯಿ ಟಾಮಿಯ ಜ್ಞಾಪಕ ಬಂದಿದ್ದು. ಕುರುಕುರು, ಟಾಮಿ, ಟಾಮೀ-ಎಷ್ಟು ಕರೆದರೂ ಟಾಮಿಯ ಸುಳಿವಿಲ್ಲ!! ಬದುಕಿದ್ದರೆ ತಾನೇ ಟಾಮಿ ಬರುವುದು?? ಪೊದೆಗೆ ಬೆಂಕಿ ಹಚ್ಚಿದಾಗ ಜಾಣ ಮರಿಹಂದಿ ಎಲ್ಲೋ ಓಡಿಹೋಗಿ ಇವರ ನಾಯಿ ಟಾಮಿಯೇ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡು ಸತ್ತುಹೋಯ್ತಂತೆ!! ಇವರು ತಿಂದು ತೇಗಿದ್ದು ಟಾಮಿಯ ಮಾಂಸವಂತೆ!!!!!
                ಸದ್ದುಮಾಡದೆ ಈ ಕಥೆ ಕೇಳುತ್ತಿದ್ದ ಎಲ್ಲರೂ ಕಥೆ ಮುಗಿಯುತ್ತಿದ್ದಂತೆ ಗೊಳ್ಳೆಂದು ನಕ್ಕರು. ನಾನಂತೂ ಈ ಕತೆಯನ್ನು ಎಳ್ಳಷ್ಟು ನಂಬುವುದಿಲ್ಲ. ಉಪ್ಪು-ಗಿಪ್ಪು ಇಲ್ಲದೆ ಮಾಂಸವನ್ನು ಹಾಗೆಯೇ ತಿನ್ನಬಹುದೆ?? ಈ ಕತೆಯ ಸತ್ಯಾಸತ್ಯತೆಯನ್ನು ಬ್ಲಾಗಿನಲ್ಲಿ ಶಿಕಾರಿಯಬಗ್ಗೆ ಬರೆಯುವ ಯಡೂರಿನ ಪ್ರವೀಣ್ ಗೌಡ ಅವರೇ ಹೇಳಬೇಕು.(ಇದನ್ನು ಓದಿದರೆ ಕಾಮೆಂಟ್ ನಲ್ಲಿ ಬರೆಯಿರಿ). ಅದೇನೇ ಇರಲಿ, ಈ ಘಟನೆ ನಂತರ ಸ್ನೇಹಿತರ ವಲಯದಲ್ಲಿ (ಕೆಲವು ತಿಂಗಳ ವರೆಗೆ) ರಮೇಶ ಟಾಮಿಯೆಂದೇ ಕರೆಯಲ್ಪಡುತ್ತಿದ್ದ!!!. ರಮೇಶ. ರಮೇಶಾ- ಎಂದು ಕರೆದರೂ ಕತ್ತೆತ್ತಿ ನೋಡದಿದ್ದರೆ ಹಾಯ್ ಟಾಮ್ಸ್ ಎಂದು ಕರೆದರೆ ಸಾಕು. ಗುರಾಯಿಸುತ್ತಿದ್ದ!!!! 

Friday, June 25, 2010

ಹಕ್ಕಿಯ ಹಿಕ್ಕೆಗಳ ಗಣಿಗಾರಿಕೆ!!!!!


                ಆಂಗ್ಲ ಮಾಸಿಕವೊಂದರಲ್ಲಿ ಮೊದಲ ಬಾರಿಗೆ ಈ ಲೇಖನ ಓದಿದಾಗ ನಾನೊಂದು ತೀರ್ಮಾನಕ್ಕೆ ಬಂದೆ- ಈ ಪ್ರಪಂಚದಲ್ಲಿ ಸಂಭವಿಸುವ ಅಚ್ಚರಿಗಳಿಗೆ ಕೊನೆಮೊದಲೇ ಇಲ್ಲ-ಎಂದು!! ಅಷ್ಟು ಆಶ್ಚರ್ಯವಾಯಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳುವುದೇ ಈ ಲೇಖನ. ನೀವು ಕಲ್ಲಿದ್ದಿಲು ಗಣಿಗಾರಿಕೆ ಕೇಳಿರಬಹುದು, ಚಿನ್ನ, ಬಾಕ್ಸೈಟ್ ಗಣಿಗಾರಿಕೆ ಕೇಳಿರಬಹುದು. ಬಳ್ಳಾರಿ ಗಣಿಗಾರಿಕೆಯಂತೂ ಕೇಳಿಯೇ ಕೇಳಿರುತ್ತೀರಿ. ಆದರೆ ನಾನು ಈ ಮುಂದೆ ಬರೆಯಲಿರುವ ಗಣಿಗಾರಿಕೆ ಬಗ್ಗೆ ನೀವು ಇಲ್ಲಿಯವರೆಗೂ ಕೇಳಿರುವ ಸಂಭವ ಕಡಿಮೆಯೆಂದೇ ನನ್ನ ಅನಿಸಿಕೆ.
               ಡಿಸ್ಕವರಿ ಅಥವಾ ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ನಲ್ಲಿ ಒಮ್ಮೆಯಾದರೂ ಈ ದೃಶ್ಯವನ್ನು ನೀವು ನೋಡಿಯೇ ನೋಡಿರುತ್ತೀರಿ. ಶಾಂತ ಸಾಗರ. ಮರಗಿಡಗಳಿಲ್ಲದ  ಚೂಪು ಕೊಡುಗಲ್ಲುಗಳಿಂದ ಕೂಡಿದ ದ್ವೀಪ. ದಡಕ್ಕೆ ಅಪ್ಪಳಿಸುವ ತೆರೆಗಳು. ಸಾವಿರ ಸಾವಿರ ಕಡಲ ಹಕ್ಕಿಗಳ ಕಲರವ. ಬಂಡೆಗಳ ಮಧ್ಯ ಅವುಗಳ ಸಂಸಾರ. ತೆರೆಗಳೊಂದಿಗೆ ಬರುವ ಮೀನು ಏಡಿಗಳನ್ನು ಅವು ಹೆಕ್ಕುವುದು.(ಕೆಲವೊಮ್ಮೆ ಆ ಹಕ್ಕಿಗಳನ್ನು ನೀರೋಳಗಿರುವ ಸೀಲ್ ಗಳು ಗಬಕ್ಕನೆ ಹಿಡಿದು ತಿನ್ನುತ್ತಿರುತ್ತವೆ). ಪೆರು ದೇಶದ ಪಶ್ಚಿಮದಲ್ಲಿನ ಶಾಂತ ಸಾಗರದ ತೀರದಲ್ಲಿ ಅಂತಹ ಒಂದು ದ್ವೀಪಸಮೂಹವಿದೆ. (Guanape Norte). ಆ ದ್ವೀಪದಲ್ಲಿ ಸಾವಿರ ಸಾವಿರ ಕಡಲ ಹಕ್ಕಿಗಳು ವಾಸಿಸುತ್ತವೆ. ಹಕ್ಕಿಗಳನ್ನು ಬಿಟ್ಟರೆ ಮರಗಿಡಗಳಾಗಲಿ, ಇತರ ಪ್ರಾಣಿಗಳಾಗಲೀ ವಾಸಿಸಲಾಗದ ಅಂತಹ ದ್ವೀಪಗಳಲ್ಲಿ ಕೆಲವು ವರ್ಷಗಳಿಗೊಮ್ಮೆ (ಕೆಲವು ತಿಂಗಳು ಮಾತ್ರ) ಮನುಷ್ಯರ ಸಂಚಾರ, ಮನುಷ್ಯರ ವಾಸ ಕಂಡುಬರುತ್ತದೆ!!! ಅವರು ಅಲ್ಲೇನು ಮಾಡುತ್ತಾರೆ? ಅವರಿಗೇನು ಕೆಲಸ?? ಆಶ್ಚರ್ಯವಾಯಿತೇ??? ಅಲ್ಲಿ ನಡೆಯುವುದೇ ನಾನು ಹೇಳ ಹೊರಟಿರುವ ಹಕ್ಕಿಗಳ ಹಿಕ್ಕೆಗಳ ಗಣಿಗಾರಿಕೆ!!!!  


            ಆ ಕೆಲವೊಂದು ತಿಂಗಳುಗಳು ಮಾತ್ರ ದ್ವೀಪದ ನಿರ್ಜನ ಬ್ಯಾರಕ್ ಗಳಿಗೆ ಜೀವ ಬರುತ್ತವೆ. ತಮ್ಮ ಸಂಸಾರವನ್ನು ಊರಲ್ಲೇ ಬಿಟ್ಟು ಪೆರುವಿನ ಮುಖ್ಯ ಭೂಬಾಗದಿಂದ ಬರುವ ಕೆಲಸದಾಳುಗಳಿಗೆ ಆ ಬ್ಯಾರಕ್ ಗಳೇ ಆಶ್ರಯ ತಾಣ.(ಅಲ್ಲಿಗೆ ಕುಡಿಯುವ ನೀರಿನಿದ ಹಿಡಿದು ಎಲ್ಲವೂ ಮುಖ್ಯ ಭೂ ಭಾಗದಿಂದ ಬರಬೇಕು!!). ಬೆಳ್ಳಂಬೆಳಗ್ಗೆ ಸೂರ್ಯ ಹುಟ್ಟುವ ಮೊದಲೇ ಅವರ ದಿನಚರಿ ಆರಂಭವಾಗುತ್ತದೆ. ದೊಡ್ಡ ಮಗ್ಗಿನ ತುಂಬಾ ಕಾಫಿಯೇ ಬೆಳಗಿನ ಉಪಾಹಾರ. ಬ್ಯಾರಕ್ ನಿಂದ ಹೊರಡುವ ಜನ ಮುಂಜಾನೆಯ ತಂಪಿನ ವಾತಾವರಣದಲ್ಲಿ ಹಕ್ಕಿಗಳು ವಾಸಿಸುವ ಜಾಗಗಳಿಗೆ ತಲಪುತ್ತಾರೆ. ಮಾಮೂಲಿ ಗಣಿಗಾರಿಕೆ ಮಣ್ಣೆತ್ತುವ ಮಿಶಿನ್, ದೊಡ್ಡ ಲಾರಿಗಳ ಮುಖಾಂತರ ನಡೆದರೆ ಈ ಗಣಿಗಾರಿಕೆಯಲ್ಲಿ ಆಯುಧ ಲೋಹದ ಹಲ್ಲುಗಳಿರುವ ದೊಡ್ಡ ಬ್ರಶ್ ಗಳು, ಪಿಕಾಸಿ, ಸಬ್ಬಲ್ಲು, ಚೀಲಗಳು!!!

            ಈ ದ್ವೀಪ ಮೊದಲೇ ಹೇಳಿದಂತೆ ಸಾವಿರ ಸಾವಿರ ಕಡಲ ಹಕ್ಕಿಗಳಿಗೆ ಮರಿಮಾಡುವ ಸ್ಥಳ. ಅವುಗಳ ಹಿಕ್ಕೆಗಳು ಕಲ್ಲು ಬಂಡೆಗಳ ಮೇಲೆ ಅಂಟಿ ಬಿದ್ದಿರುತ್ತವೆ. ಎಂಟತ್ತು ವರ್ಷಗಳಲ್ಲಿ ಹಿಕ್ಕೆಗಳ ಒಂದು ಪದರವೇ ಕಲ್ಲು ಬಂಡೆಗಳ ಮೇಲೆ ಸಂಗ್ರಹವಾಗಿರುತ್ತದೆ.ಸತ್ತ ಅಸಂಖ್ಯ ಹಕ್ಕಿಗಳ ದೇಹಗಳೂ ಅದರಲ್ಲಿ ಸೇರಿಕೊಂಡು ಕುಂಬಾಗಿ ಹೋಗಿರುತ್ತದೆ. ಗಣಿಗಾರರು ಸಬ್ಬಲ್ಲು, ಪಿಕಾಸಿಗಳಿಂದ ಕೆಲವೆಡೆ ಒಂದು ಅಡಿಗೂ ಹೆಚ್ಚು ದಪ್ಪವಿರುವ ಆ ಹಿಕ್ಕೆಯ ಪದರವನ್ನು ಕುಟ್ಟಿ ಪುಡಿಮಾಡುತ್ತಾರೆ . ಬ್ರಶ್ ಗಳನ್ನು ಉಪಯೋಗಿಸಿ ಬಂಡೆಗಳ ಸಂದಿಯಿಂದ ಚೂರೂ ಬಿಡದೆ ಗುಡಿಸುತ್ತಾರೆ. ಅದನ್ನೆಲ್ಲಾ ಚೀಲದಲ್ಲಿ ತುಂಬಿ ಒಂದೆಡೆ ಹಾಕುತ್ತಾರೆ. ಅನಂತರ ಅದರಲ್ಲಿ ಸೇರಿರುವ ಮೂಳೆಯ ದೊಡ್ಡ ತುಂಡುಗಳು, ಕಲ್ಲುಗಳನ್ನು ಬೇರೆ ಮಾಡುವ ಕೆಲಸ. ಜಾಲರಿಗಳಿಗೆ ಅದನ್ನು ಹಾಕಿ ಜಾಲರಿಗಳನ್ನು ಅಲುಗಾಡಿಸಿದಾಗ ನುಣುಪಾದ ಹಳದಿ ಪುಡಿಯಂತ ಕೆಟ್ಟ ವಾಸನೆಯ ವಸ್ತು ಸಿಗುತ್ತದೆ. ಅದರ ಹೆಸರೇ ಗುಅನೋ(Guano)!!! ಅದಕ್ಕಿದೆ ಬೆಲೆ!!! ಗಣಿಗಾರಿಕೆ ನಡೆಯುವ ಸ್ಥಳ ಹಿಕ್ಕೆಗಳ ಕೆಟ್ಟ ವಾಸನೆ ಹಾಗೂ ದೂಳಿನಿಂದ ಕೂಡಿರುತ್ತದೆ. ದಿನದಂತ್ಯಕ್ಕೆ ಎಲ್ಲರ ತಲೆ ಕೂದಲು,ಮೀಸೆ, ಮೈ ರೋಮದ ಬಣ್ಣ ಬದಲಾಗಿರುತ್ತದೆ. ಸಹಜವಾಗಿಯೇ ವಾಸನೆ ಘ್ರಹಿಸುವ ನರಗಳು ಸತ್ತಂತಾಗಿರುತ್ತವೆ. ಟನ್ನುಗಟ್ಟಲೆ ಸಿಗುವ ಅದನ್ನು ಚೀಲಕ್ಕೆ ತುಂಬಿ ಹುಲಿದು ಟ್ರಾಲಿಗಳ ಮುಖಾಂತರ ಹಡಗಿಗೆ ಸಾಗಿಸಿ ಬೇರೆಡೆ ಕಳಿಸಲಾಗುತ್ತದೆ.
          ಆಯ್ತು, ಅದರ ಉಪಯೋಗವೇನು? ಹಕ್ಕಿಗಳ ಹಿಕ್ಕೆಯ ಈ ಗುಅನೋ ಸಾರಜನಕ, ರಂಜಕ, ಪೊಟಾಶ್, ಕ್ಯಾಲ್ಸಿಯಂ – ಇವನ್ನೆಲ್ಲಾ ಒಳಗೊಂಡ ಉತ್ತಮ ಗೊಬ್ಬರ!!! ಈಗ ಬಿಡಿ, ಯಾವುದೇ ಚಿಕ್ಕ ಊರಿಗೆ ಹೋದರೂ ಈ ಎಲ್ಲಾ ಗೊಬ್ಬರಗಳೂ (ಸರ್ಕಾರ ಕೊಡುವ ಸಬ್ಸಿಡಿಯಿಂದ) ಕಡಿಮೆ ಬೆಲೆಗೆ ದೊರೆಯುತ್ತದೆ. ಆದರೆ ರಸಗೊಬ್ಬರಗಳ ಆವಿಷ್ಕಾರಕ್ಕಿಂತ ಹಿಂದಿನ ದಿನಗಳಲ್ಲಿ ಈ ಗುಅನೋ ಬೆಳೆಯ ಇಳುವರಿ ಹೆಚ್ಚು ಮಾಡುವ ಮಾಯಾ ಮಂತ್ರದ ವಸ್ತುವಾಗಿತ್ತು. ಇದರ ಸಂಗ್ರಹಣೆಯ ವಿಷಯದಲ್ಲಿ ಯುದ್ದಗಳೇ ಆಗಿವೆ. ದ್ವೀಪದ ಇಳಿಜಾರು ಪ್ರದೇಶಗಳಲ್ಲಿ ಈ ಗುಅನೋ ಮಳೆಯಲ್ಲಿ ತೊಳೆದು ಹೋಗಿ ಸಮುದ್ರ ಸೇರಿ ದಂಡವಾಗದಂತೆ ಕೋಟೆಗೋಡೆತರ  ಕಿಲೋಮೀಟರ್ಗಟ್ಟಲೆ ಉದ್ದ ಕಟ್ಟಿದ್ದರು. ಈ ರಸಗೊಬ್ಬರಗಳ ಕಾಲದಲ್ಲಿ ಗುಅನೋಗೆ ಆಗಿನಷ್ಟು ಪ್ರಾಮುಖ್ಯತೆ ಇಲ್ಲದಿದ್ದರೂ ಈ ಸಾವಯವ ಗೊಬ್ಬರಕ್ಕೆ ತನ್ನದೇ ಆದ ಬೇಡಿಕೆಯಿದೆ.
           ಈ ಲೇಖನ (ಹಾಗೂ ಚಿತ್ರ) ನೋಡಿದಮೇಲೆ ನಿಮಗೂ ನನಗೆ ಮೊದಲ ಬಾರಿ ಓದಿದಾಗ ಆದಷ್ಟೇ ಆಶ್ಚರ್ಯವಾಗಬಹುದು. ಈ ಪ್ರಪಂಚದಲ್ಲಿ ಸಂಭವಿಸುವ ಅಚ್ಚರಿಗಳಿಗೆ ಕೊನೆಮೊದಲೇ ಇಲ್ಲ-ಎಂಬ ತೀರ್ಮಾನಕ್ಕೆ ನೀವೂ ಬರುತ್ತೀರೆಂದು ನಂಬಿರುತ್ತೇನೆ. ಈ ಮೊದಲು ಈ ವಿಷಯ ನಿಮಗೆ ಗೊತ್ತಿತೆ?             

Tuesday, June 1, 2010

“ಅಡಿಕೆ ಹಳದಿಎಲೆ ರೋಗ” ನೀವು ಸಿದ್ದರಾಗಿದ್ದೀರಾ?


                 ಬ್ಲಾಗ್ ಪ್ರಪಂಚದಲ್ಲಿ ಅನೇಕ ಜನ ಅಡಿಕೆ ಬೆಳೆಗಾರರಿದ್ದಾರೆ. ಅವರಿಗಾಗಿ ಈ ಲೇಖನ!!.(ಆಸಕ್ತರೂ ಓದಬಹುದು)

                        ಆ ಒಂದು ವರ್ಷವನ್ನು ಜ್ಞಾಪಿಸಿಕೊಳ್ಳಿ. ತುಂಬಾ ಮಳೆಬಂದ ವರ್ಷ ಅದು. ಎಡೆಬಿಡದ ಮಳೆಯಿಂದಾಗಿ ಆ ವರ್ಷ ಅಡಿಕೆ ಕೊನೆಗಳಿಗೆ (ಶಿಲೀಂದ್ರ ನಾಶಕ) ಔಷದಿ (ಕಾಪರ್ ಸಲ್ಫೇಟ್) ಸಮಯಕ್ಕೆ ಸರಿಯಾಗಿ ಸಿಂಪಡಿಸಲು ಆಗಿರಲೇ ಇಲ್ಲ. ಪರಿಣಾಮ? ಎಳೆ ಕಾಯಿಗಳು ಉದುರಿ ಬಿದ್ದಿದ್ದವು. ಹೆಚ್ಚಿನ ಪಸಲು ನೆಲ ಸೇರಿತ್ತು!!! ಅಡಿಕೆಯ ಆಆ ವರ್ಷದ ಪಸಲನ್ನೇ ನಂಬಿ ಜೀವನ ನಡೆಸುವ ಬೆಳೆಗಾರನ ಕಥೆ ಹೇಗಾಗಬೇಡ? ಆ ಒಂದು ವರ್ಷ ಸಂಸಾರ ತೂಗಿಸುವುದು ಎಷ್ಟು ಕಷ್ಟ. ಇನ್ನು ಪ್ರತೀ ವರ್ಷ ಅಡಿಕೆ ಪಸಲು ಇದೇ ರೀತಿ ಕೈಕೊಡುತ್ತಿದ್ದರೆ ಅಲ್ಲೆಲ್ಲಾ ಜೀವನ ಹೇಗಿರಬಹುದು?

                        ಬನ್ನಿ. ಸಾಂಪ್ರದಾಯಕವಾಗಿ ಅಡಿಕೆ ಬೆಳೆ ಬೆಳೆಯುವ ಪ್ರದೇಶವಾದ ಕೊಪ್ಪ-ಶೃಂಗೇರಿ ತಾಲೂಕಿಗೆ ಬನ್ನಿ. ಸಾವಿರಾರು ಸಂಸಾರಗಳಲ್ಲಿ ಅಡಿಕೆ ಪಸಲು ಅದೆಷ್ಟೋ ವರ್ಷಗಳಿಂದ ಸತತವಾಗಿ ನೆಲಕಚ್ಚುತ್ತಾ ಬಂದಿದೆ. ಅದೆಷ್ಟೋ ಕುಟುಂಬಗಳ ಕೆಂಪಡಿಕೆ ಉತ್ಪಾದನೆ ಎಕರೆಗೆ ೪೦-೫೦ ಕೆ.ಜಿ !!!! ಯಾಕೆ ಹೀಗೆ? ಏನು ಕಾರಣ? ಕಾರಣ ಅಡಿಕೆಯ ಮಾರಣಾಂತಕಾರಿ ರೋಗ. "ಹಳದಿ ಎಲೆ ರೋಗ". ಸಾವಿರಾರು ಎಕರೆ ಅಡಿಕೆತೋಟವನ್ನು ನುಂಗಿ ನೀರುಕುಡಿದು ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಈ ರೋಗದ ಬಗ್ಗೆ ತಿಳಿದುಕೊಳ್ಳಲು ಕುತೂಹಲವೇ? ಮುಂದೆ ಓದಿ.
               ಹೌದು. ಅಡಿಕೆಗೆ ಮಾರಣಾಂತಿಕ ಈ ರೋಗ ಕೊಪ್ಪಾ ತಾಲೂಕಿನ ದಕ್ಷಿಣ ಭಾಗದ ಕೆಲವು ಹಳ್ಳಿಗಳಲ್ಲಿ ೪೦-೫೦ ವರ್ಷದ ಕೆಳಗೆ ಅಲ್ಲಲ್ಲಿ ಕಾಣಿಸಿಗೊಂಡಿತು. ನಿದಾನವಾಗಿ ಹರಡುತ್ತಿದ್ದ ಈ ರೋಗ ಈಗ ಎಂಟತ್ತು ವರ್ಷಗಳಿಂದ ಆಶ್ಚರ್ಯಕರ ವೇಗದಲ್ಲಿ ಹರಡುತ್ತಿದೆ. ಈ ರೋಗದ ಮೊದಲ ಸೂಚನೆ ಪಸಲು ಹೆಚ್ಚಾಗುವುದು!!! ಬುಡಕ್ಕೆ ಏನೂ ಹಾಕದಿದ್ದರೂ ಬಲವಾದ ಕೊನೆಗಳೇ ಇರುತ್ತವೆ. ಅನಂತರ ಪಸಲು ಕಡಿಮೆಯಾಗಲಾರಂಬಿಸುತ್ತದೆ. ಅಡಿಕೆ ಎಲೆ (ತುದಿಯಿಂದ) ಹಳದಿಯಾಗಲಾರಂಬಿಸುತ್ತದೆ. (ಹೊಸದಾಗಿ ಬರುವ ಎಲೆಗಳು ಹಸಿರಾಗೇ ಇರುತ್ತವೆ. ಬೇರುಹುಳ ತೊಂದರೆಯಲ್ಲಿ ಸುಳಿ ಎಲೆಗಳು ಹಳದಿಯಾಗಿರುತ್ತದೆ). ಅಡಿಕೆ ಕಾಯಿಗಳ ಗಾತ್ರ ತುಂಬಾ ಚಿಕ್ಕದಾಗುತ್ತದೆ.(ಕೈ ಕಿರು ಬೆರಳಿನಷ್ಟು ದಪ್ಪ!!) ಸುಲಿದರೆ ಕೆಳ ಅರ್ದ ಕಪ್ಪು ಮೇಲರ್ದ ಮಾಮೂಲಿ ಬಣ್ಣವಿರುವ ಮೆದು ಅಡಿಕೆ. ಬೇಯಿಸಿ ಹರಡಿದರೆ ಬಿಸಲಿಗೆ ಇನ್ನೂ ಚಿಕ್ಕದಾಗಿ ಚಿರುಟಿಹೋಗುತ್ತದೆ!! ಮಳೆಗಾಲದ ಕೊನೆಯಲ್ಲಿ ಹಾಗೂ ನೆಲ ಜೌಗು ಇರುವ ಪ್ರದೇಶದಲ್ಲಿ ಎಲೆ ಹೆಚ್ಚು ಹಳದಿಯಾಗಿರುತ್ತದೆ. ಬೇಸಿಗೆಯಲ್ಲಿ ಅಷ್ಟು ಹಳದಿ ಕಾಣಿಸುವುದಿಲ್ಲ. ಮಾಮೂಲಿನಂತೆ ಹಸಿರಾಗೇ ಕಾಣಿಸುತ್ತದೆ. (ನನ್ನ ಪರಿಚಯಸ್ತರ ತೋಟವೊಂದನ್ನ ಬೇಸಿಗೆಯಲ್ಲಿ ನೋಡಿ ದೂರದ ಪಾರ್ಟಿ ಕೊಂಡಿತು!! ಇವರಾಗೇ ರೋಗದ ವಿಷಯ ಹೇಳಲು ಹೋಗಲಿಲ್ಲ)

              ಸರಿ. ಯಾವುದರಿಂದ ಈ ರೋಗ ಬರುತ್ತದೆ? ಹೇಗೆ ಹರಡುತ್ತದೆ? ಸಂಶೋದನೆಗಳೆನಾದರು ಆಗಿದೆಯೇ? ಇನ್ನೂ ಪರಿಹಾರ ಸಿಕ್ಕಿಲ್ಲವೇ? ಸಂಶೋದನೆ ಎಂದರೆ ರೈತರು ಅಸಡ್ಡೆ ಮುಖ ಮಾಡುತ್ತಾರೆ. ಮೇಲಿಂದ ಮೇಲೆ ಅನೇಕ ಸಂಶೋದನೆ ನಡೆದಿದ್ದರೂ ರೋಗದ ಕಾರಣ ಹಾಗೂ ಹರಡುವಿಕೆಯ ಸ್ಪಸ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಫೈಟೋಪ್ಲಾಸ್ಮ,ಸೂಕ್ಷ್ಮ ಪೋಷಕಾಂಶಗಳ ಕೊರತೆ, ಕೆಡಾಂಗ್ - ಕೆಡಾಂಗ್ ರೋಗ – ಹೀಗೆ ಅನೇಕ ಸಿದ್ದಾಂತಗಳಲ್ಲಿ ವಿಜ್ಞಾನಿಗಳು ಮುಳುಗೇಳುತ್ತಿದ್ದಾರೆ!! (ಇಲ್ಲೊಂದು ಸ್ವಾರಸ್ಯಕರ ವಿಷಯ ಹೇಳಲು ಬಯಸುತ್ತೇನೆ. ಹಳದಿ ಎಲೆ ರೋಗಕ್ಕೆ ಸಂಬಂದಪಟ್ಟ ಸೆಮಿನಾರ್ ಒಂದಕ್ಕೆ ಬ್ರಹ್ಮಾವರದಿಂದ ಒಬ್ಬರು ವಿಜ್ಞಾನಿ ಬಂದಿದ್ದರು. ಅಡಿಕೆ ಕೊನೆಗಳಿಗೆ ಸಿಂಪಡಿಸುವ ಕಾಪರ್ ಸಲ್ಫೇಟ್ ಮಣ್ಣಿಗೆ ಸೇರುವುದೇ ರೋಗಕ್ಕೆ ಕಾರಣವೆಂದು ಪ್ರತಿಪಾದಿಸಿದರು!!! ನೀವು ಒಂದಾದರೂ ಗಿಡದ ಬುಡಕ್ಕೆ ಅದನ್ನು ಹಾಕಿ ಬದಲಾವಣೆ ಗಮನಿಸಿ ಹೇಳುತ್ತಿದ್ದೀರಾ ಎಂದು ನಾನು ಕೇಳಿದೆ. ಅವರಿಗೆ ಸಿಟ್ಟೇ ಬಂತು. ಹೆಚ್ಚಿನ ವಿವರಗಳಿಗೆ ಆ ಬಗ್ಗೆ ಅವರು ಬರೆದ ಪುಸ್ತಕವನ್ನು ಎಲ್ಲರೂ ಓದುವಂತೆ ವೇದಿಕೆಮೇಲಿಂದ ಸಲಹೆ ಮಾಡಿದರು. ೨೦ ರೂಪಾಯಿಯ ಆ ಚಿಕ್ಕ ಪುಸ್ತಕ ಅನೇಕ ಪ್ರತಿ ಮಾರಾಟ ಕಂಡಿತು. ಎಷ್ಟು ಬುದ್ದಿವಂತರು ನಮ್ಮ ವಿಜ್ಞಾನಿಗಳು.ರೋಗಕ್ಕೆ ಅವರು ಹೇಳಿದ ಕಾರಣವೇ ಇರಬಹುದು. ಆದರೆ ಪ್ರಯೋಗಗಳನ್ನು ಮಾಡದೆ ನಮ್ಮಂತೆ ಹೇಳುವುದು ಸರಿಯೇ?)

                  ತೋಟಗಾರಿಕ ಬೆಳೆಗಳ ಬಗ್ಗೆ ಸಂಶೋಧನೆಗೆಂದೆ ಸರ್ಕಾರಿ ಸಂಸ್ಥೆ CPCRI ಕಾಸರಗೋಡಿನಲ್ಲಿದೆ. (ಇದರ ಶಾಖೆ ಕರ್ನಾಟಕದಲ್ಲಿ ವಿಟ್ಲದಲ್ಲಿದೆ). ತೋಟಗಾರಿಕಾ ಬೆಳೆಗಳಿಗೆ ತಗಲುವ ರೋಗಗಳ ಸಂಶೋದನೆಗೆ ಸರ್ಕಾರದಿಂದ ನಿಯುಕ್ತರಾದ ವಿಜ್ಞಾನಿಗಳ ದಂಡೇ ಅಲ್ಲಿದೆ. ಅವರೇನು ಹೇಳುತ್ತಾರೆ ಕೇಳೋಣ. ರೋಗದ ಕಾರಣದ ಬಗ್ಗೆ ಅವರಲ್ಲಿ ಅಸ್ಪಷ್ಟತೆಯಿಲ್ಲ. CPCRI ಪ್ರಕಾರ ಹಳದಿ ರೋಗಕ್ಕೆ ಕಾರಣ 'ಫೈಟೋಪ್ಲಾಸ್ಮಾ' ಎಂಬ ಅತಿ ಸೂಕ್ಷ್ಮ ಜೀವಿ!!! ಅವು ಮರದಿಂದ ಮರಕ್ಕೆ ಹರಡುವುದು ಒಂದು ಜಾತಿಯ ಮಿಡತೆಯಿಂದ. (ಈ ಸಂಶೋದಯ ಬಗ್ಗೆ ಅವರೊಂದು ಪುಸ್ತಕ ಪ್ರಕಟಿಸಿದ್ದಾರೆ) ಈ ರೋಗಕ್ಕೆ ಚಿಕಿತ್ಸೆಯೇ ಇಲ್ಲ. ಆದರೆ ಸಕಾರಣದೊಂದಿಗೆ ಈ ಸಂಶೋದನೆಯ ಖಚಿತತೆ ಬಗ್ಗೆ ಅನುಮಾನ ವ್ಯಕ್ತಪಡಿಸುವ ಬೆಳೆಗಾರರು ಮತ್ತು ವಿಜ್ಞಾನಿಗಳು ಅನೇಕಜನ ಇದ್ದಾರೆ!!

                     ಫೈಟೋಪ್ಲಾಸ್ಮದಿಂದ ಪಾಮ್ ಜಾತಿಯ ಮರಗಳಿಗೆ ಹಳದಿ ಎಲೆ ರೋಗ ಬರುವುದು ಹೊಸ ವಿಷಯವೇನಲ್ಲ. ಅಮೇರಿಕಾ ಖಂಡಗಳಲ್ಲಿ ಸಾವಿರಾರು ಎಕರೆ ತೆಂಗಿನ ತೋಟ ಹಳದಿ ರೋಗದಿಂದ ನೆಲಕಚ್ಚಿದೆ.ಇದಕ್ಕೆ ಇಲ್ಲಿಯವರೆಗೂ ಚಿಕಿತ್ಸೆ ಕಂಡುಹಿಡಿದಿಲ್ಲ ಎಂಬುದೂ ಸತ್ಯ. ಆದರೆ ಮಾಲಿಕ್ಯುಲರ್ ಬಯಾಲಜಿ ಮಟ್ಟದ ಸಂಶೋದನೆಗಳಿಂದ ( PCR ವಿದಾನ, DNA ಮೂಲಕ ) ಫೈಟೋಪ್ಲಾಸ್ಮ ಇರುವಿಕೆಯನ್ನು ಪತ್ತೆಹಚ್ಚುತ್ತಾರೆ. (ಈ ವಿಷಯದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಒಂದು ಯಾಹೂ ಗ್ರೂಪ್ (CICLY-Centre for Information on Lethal Yellowing)ಇದೆ. ಆಸಕ್ತರು ಸೇರಿ ಮಾಹಿತಿ ಹಂಚಿಕೊಳ್ಳಬಹುದು).ಈ PCR ಟೆಕ್ನಿಕ್ ಉಪಯೋಗಿಸಿ ರೋಗದ ಕಾರಣ ಫೈಟೋಪ್ಲಾಸ್ಮ ಎಂದು CPCRI ಸಂಶೋದನೆ ಮಾಡಿದಂತಿಲ್ಲ. (ಹೆಚ್ಚಿನ ಮಾಹಿತಿಗೆ CICLYಯ ಭಾರತಕ್ಕೆ ಸಂಬಂದಿಸಿದ, ಕೊನೆಯ ಬಾರಿ ೨೦೦೫ ರಲ್ಲಿ ಅಪ್ ಡೆಟ್ ಆದ ಈ ಜಾಲ ಪುಟ ನೋಡಿ). ಆದರೇನಂತೆ, ಈ ರೋಗಕ್ಕೆ ತಮ್ಮ ತೋಟವನ್ನು ಕಳೆದುಕೊಂಡ ಬೆಳೆಗಾರರೊಬ್ಬರ ಮಗ ಈ PCR ಟೆಕ್ನಿಕ್ ಉಪಯೋಗಿಸಿ ರೋಗ ಪೀಡಿತ ಅಡಿಕೆ ಸಸ್ಯ(ಭಾಗ)ದ ಸಂಶೋದನೆ ಮಾಡಿದ್ದಾರೆ. ಆದರೆ ಪಲಿತಾಂಶ CPCRI ಹೇಳಿಕೆಗೆ ತದ್ವಿರುದ್ದ!!! ಅವರ ಸಂಶೋದನೆಗಳ ಪ್ರಕಾರ ಈ ರೋಗಕ್ಕೆ CPCRI ಹೇಳುವಂತೆ ಫೈಟೋಪ್ಲಾಸ್ಮ ಕಾರಣವಲ್ಲ!!!!. (ಈ ಸಂಶೋದನೆಯ ಮಾಹಿತಿ ಅಂತರ್ಜಾಲದಲ್ಲಿದ್ದು ಆಸಕ್ತರು ನೋಡಬಹುದು .ಈಗ ಅಮೆರಿಕದಲ್ಲಿರುವ ಶೃಂಗೇರಿ ಮೂಲದ ಇನ್ನೊಬ್ಬ ತಳಿ ಶಾಸ್ತ್ರಜ್ಞ ಡಾ. ರಾಜೇಂದ್ರ ಕೂಡ CPCRI ಸಂಶೋದನೆಯ ವಿದಾನ ಹಾಗೂ ಖಚಿತತೆಯನ್ನು ಅನುಮಾನಿಸುತ್ತಾರೆ).

                ಇನ್ನೊಂದು ತಮಾಷೆಯೆಂದರೆ ಈ ಸಂಶೋದನೆಯ ವಿಷಯಕ್ಕೆ (ಕಳೆದ ವಿಧಾನ ಸಭಾ ಚುನಾವಣೆಯಲ್ಲಿ) ರಾಜಕೀಯ ಬಣ್ಣ ಬಂದಿದ್ದು!! ಹಿಂದೆ ಗೆದ್ದ ಜನಪ್ರತಿನಿಧಿಗಳು ಏನೂ ಮಾಡಿಲ್ಲವೆಂದು ಹೇಳುತ್ತಾ ತಾವು ಅಧಿಕಾರ ಹಿಡಿದರೆ ಶೃಂಗೇರಿಯಲ್ಲಿ ಸಂಶೋದನಾ ಕೇಂದ್ರ ತೆರೆಯುವುದಾಗಿ ಬಿ.ಜೆ.ಪಿ ತುತ್ತೂರಿ ಊದಿತು (ಹೇಳಿದಂತೆ ಆಗುತ್ತಿದೆ). ಆದರೆ ದಳ ಮತ್ತು ಕಾಂಗ್ರೆಸ್ ನಾಯಕರು (ರೋಗಕ್ಕೆ ಪರಿಹಾರ ಇಲ್ಲ ಎಂಬ CPCRI ವಿಜ್ಞಾನಿಗಳ ಮಾತು ನಂಬಿ) ಅದೆಲ್ಲೋ ತೋಟಗಾರಿಕಾ ಮಿಶನ್ ನಲ್ಲಿರುವ ಎಷ್ಟೋ ಸಾವಿರ ಕೋಟಿ ತಂದು ರೋಗ ಬಾದಿತರಿಗೆ ಒಂದೇ ಸಾರ್ತಿ ಪರಿಹಾರವಾಗಿ ಎಕರೆಗೆ ಎರಡೋ ಮೂರೋ ಲಕ್ಷ ಕೊಡುವ ಪತ್ರಿಕಾ ಹೇಳಿಕೆ ಕೊಡಲಾರಂಬಿಸಿದರು!! ತಕ್ಷಣ ಎಚ್ಚೆತ್ತ ಬಿ.ಜೆ.ಪಿ. ಯವರು ಸರ್ವೇ ಮಾಡಿ ಎಕರೆಗೆ ಐದು ಲಕ್ಷ ಕೊಡುವುದಾಗಿ ತೇಲಿಬಿಟ್ಟರು. (ಉದ್ದದ ಕ್ಯೂನಲ್ಲಿ ನಿಂತು ಪಹಣೆ ತಂದು ರೈತರು ತೋಟಗಾರಿಕಾ ಇಲಾಖೆಗೆ ಫಾರಂ ಭರ್ತಿಮಾಡಿ ಕೊಟ್ಟಿದ್ದಾರೆ. ರೋಗವೇ ಬಾರದ ಎಷ್ಟೋ ರೈತರು ತಮ್ಮ ತೋಟದಲ್ಲೂ ರೋಗವಿದೆ ಎಂದು ಹೇಳಿಕೊಂಡಿದ್ದಾರೆ. ಸರ್ವೇ ಮಾಡಿದ ಶಾಸ್ತ್ರವೂ ನಡೆದಿದೆ)

                     ಮತ್ತೂ ಒಂದು ದೊಡ್ಡ ತಮಾಷೆಯೆಂದರೆ, ಈ ರೋಗಕ್ಕೆ ಕಾರಣವೇನೆಂದು ಒಂದಿಷ್ಟು ಜನ ಹೊಸನಗರನೋ ಸಾಗರನೋ ಅಲ್ಲೆಲ್ಲೋ ಹೋಗಿ ಅಲ್ಯಾರಿಂದಲೋ ಅಷ್ಟಮಂಗಲ ಪ್ರಶ್ನೆ ಇಡಿಸಿದ್ದು!!! ಆ ಅಷ್ಟಮಂಗಲ ಪ್ರಶ್ನೆ(ಗೆ) ಹೇಳುವವರ ಪ್ರಕಾರ ಈ ರೋಗಕ್ಕೆ ಕಾರಣ ಶೃಂಗೇರಿ ಶ್ರೀಗಳು ಯಾವುದೋ ಒಂದು ಕಾಲದಲ್ಲಿ ಏನೋ ತಪ್ಪು ಮಾಡಿದ ಭಕ್ತಾದಿಗಳಿಗೆ ಕೊಟ್ಟ ಶಾಪವಂತೆ.(ಶೃಂಗೇರಿ ಮಠ ಇದನ್ನು ಅಲ್ಲಗೆಳೆಯಿತು) ಅದಕ್ಕೆ ಹೋಮ ಹವನ ಮಾಡಿ ಚಿನ್ನದ ಅಡಿಕೆ ಯಾವುದೋ ಎರಡ್ಮೂರು ದೇವರಿಗೆ ಅರ್ಪಿಸಬೇಕಂತೆ.(ಎಲ್ಲಾ ಎಕರೆಗೆ ಇಂತಿಷ್ಟು ಅಂತ ದುಡ್ಡು ಎತ್ತಿ ಅದನ್ನೂ ನೆರವೇರಿಸಿಯಾಯಿತು)

                    ಸರಿ. ಎಕರೆಗೆ ಎಪ್ಪತ್ತೆಂಬತ್ತು ಕೆ.ಜಿ. ಅಡಿಕೆಯಿಂದ ಜನ ಹೇಗೆ ಜಿವನಸಾಗಿಸುತ್ತಾರೆ? ಈ ಅನುಮಾನ ನಿಮಗೆ ಮೂಡಬಹುದು. ರೋಗ ಬಂದ ಜಾಗದಲ್ಲಿ ಕಾಫಿ ಚೆನ್ನಾಗಿ ಆಗುತ್ತದರಿಂದ ಸ್ವಲ್ಪ ಬಚಾವ್. (ಆದರೆ ಕಾಫಿ ಅಡಕೆಗೆ ಸಮವಲ್ಲ. ಕೆಲಸ ಹೆಚ್ಚು;ಆದಾಯ ಕಡಿಮೆ) ಮಕ್ಕಳು ಓದಿ ಬೆಂಗಳೂರಲ್ಲಿ ಕೆಲಸ ಸೇರಿದ್ದಾರೆ. ಸ್ವಲ್ಪ ಕಡಿಮೆ ಓದಿದವರು ಬೆಂಗಳೂರು ಮೊದಲಾದ ಪೇಟೆಗಳನ್ನು ಸೇರಿ ಸ್ವ ಉದ್ಯೋಗ (ಅಡಿಗೆ,ಕ್ಯಾಂಟಿನ್ ಇತ್ಯಾದಿ) ಮಾಡುತ್ತಿದ್ದಾರೆ. ಅಡಿಕೆ ಪಸಲಿನ ಅಂದಾಜಿನಲ್ಲಿ ಸಾಲ ಮಾಡಿಕೊಂಡಿರುವ ಹೊಸತಾಗಿ ರೋಗ ಬಂದಿರುವ ಬೆಳೆಗಾರರಿಗೆ ಮಾತ್ರ ತುಂಬಾ ಕಷ್ಟ. ಕಗ್ಗತ್ತಲಲ್ಲಿ ಬೆಳ್ಳಿಯ ಗೆರೆಯಂತೆ ಕಾಣುವುದು ಕೆಲವು ರೈತರ ಪ್ರಯತ್ನ. ಅಷ್ಟೇನೂ ಓದಿಲ್ಲದ ಶೃಂಗೇರಿಯ ರೈತ ಮಾವಿನಕಾಡು ಬಾಲಕೃಷ್ಣ ಈ ರೋಗದ ಬಗ್ಗೆ ಒಂದಿಷ್ಟು ಪ್ರಯೋಗ ಮಾಡಿದ್ದು ಅವರು ಈ ರೋಗ ಲಘು ಪೋಷಕಾಂಶಗಳ ಕೊರತೆಯಿಂದಲೇ ಬರುವುದೆಂದು ವಿಜ್ಞಾನಿಗಳ ಜೊತೆಗೂ ವಾದ ಮಾಡುತ್ತಾರೆ.

                          ಈಗ ಆಗಬೇಕಾಗಿರುವುದೇನು ಎಂದು ಪ್ರತಿಯೊಬ್ಬ ಅಡಿಕೆ ಬೆಳೆಗಾರ ಯೋಚನೆ ಮಾಡುವುದು ಒಳಿತು. ಇಂದಲ್ಲಾ ನಾಳೆ ಈ ರೋಗ (ಹೀಗೇ ಬಿಟ್ಟರೆ) ಅಡಿಕೆ ಬೆಳೆಯುವ ಪ್ರದೇಶವನ್ನೆಲ್ಲಾ ನಾಶ ಮಾಡುವುದು ಶತಸಿದ್ದ. ಈಗ ಮೊದಲು ಆಗಬೇಕಿರುವುದು ಇದು ಫೈಟೋಪ್ಲಾಸ್ಮಾದಿಂದ ಬರುವ ರೋಗ ಹೌದೋ ಅಲ್ಲವೋ ಎಂಬ ಖಚಿತ ಸಂಶೋದನೆ (ಮಾಲಿಕ್ಯುಲರ್ ಬಯಾಲಜಿ ಮಟ್ಟದಲ್ಲಿ). ಫೈಟೋಪ್ಲಾಸ್ಮದಿಂದಾ ಎಂದಾದರೆ ಅಲ್ಲಿಗೆ ಒಂದು ಅಧ್ಯಾಯ ಮುಗಿದಂತೆ!! ಹೆಚ್ಚಿಗೆ ತಲೆಕೆಡಿಸಿಕೊಳ್ಳದೆ ರೋಗ ನಿರೋದಕ ಶಕ್ತಿ ಹೊಂದಿರುವ ತಳಿ (resistant variety ) ಅಭಿವೃದ್ದಿಪಡಿಸಿ ಹಂಚುವುದು. (ರೋಗ ಬಂದ ಜಾಗದಲ್ಲಿ ಅತೀ ಅಪರೂಪಕ್ಕೆ ಒಂದೊಂದು ಮರಗಳು ಚೆನ್ನಾಗಿಯೇ ಇರುತ್ತವೆ). ಫೈಟೋಪ್ಲಾಸ್ಮ ಅಲ್ಲಾ ಎಂದಾದರೆ ಬೇರೆ ಕಾರಣ ಹುಡುಕುವುದು.

ಈ ಮಾಹಿತಿ ನಿಮಗೆ ಉಪಯೋಗವಾಯಿತೆ? ಅಡಿಕೆ ಹಳದಿ ಎಲೆ ರೋಗದ ಬಗ್ಗೆ ನಿಮ್ಮ ಪ್ರಶ್ನೆಗಳೇನಾದರೂ ಇದ್ದರೆ ಸ್ವಾಗತ.
ಕೆಲವು ಜಾಲ ಕೊಂಡಿಗಳು-
   CPCRI - http://cpcri.nic.in/
   ಹಳದಿ ರೋಗದ ಬಗ್ಗೆ ಯಾಹೂ ಗ್ರೂಪ್ - http://tech.groups.yahoo.com/group/cicly/
   CICLY ಹೋಂ ಪೇಜ್ - http://www.avxl82.dsl.pipex.com/CICLY/main.html
   CICLY ನಲ್ಲಿ ಭಾರತದ ಬಗ್ಗೆ ಇರುವ ಮಾಹಿತಿ - http://www.avxl82.dsl.pipex.com/CICLY/india.html

Friday, May 21, 2010

ಸರ್ ಜಾರ್ಜ್ ಎವರೆಸ್ಟ್ – ಆತನೆಂದೂ ಎತ್ತರದ ಆ ಪರ್ವತ ನೋಡಿರಲೇ ಇಲ್ಲ!!!


         ಕೆಲವೊಂದು ವಿಷಯಗಳು ಎಷ್ಟು ಆಶ್ಚರ್ಯದಿಂದ ಕೂಡಿರುತ್ತವೆಂದರೆ ಅವುಗಳನ್ನು ನಂಬುವುದೇ ಕಷ್ಟವಾಗುತ್ತವೆ. ಇದಕ್ಕೆ ಎವರೆಸ್ಟ್ ಪರ್ವತಕ್ಕೆ ಆ ಹೆಸರು ಹೇಗೆ ಬಂತೆಂಬ ವಿಷಯವೇ ಒಂದು ಒಳ್ಳೆಯ ಉದಾಹರಣೆ. ನಾವು ಶಾಲಾ ಪುಸ್ತಕಗಳಲ್ಲಿ ಓದಿರುವುದೇನು? "ಸರ್ ಜಾರ್ಜ್ ಎವರೆಸ್ಟ್ ಮೊದಲ ಬಾರಿಗೆ ಅದರ ಎತ್ತರ ಕಂಡು ಹಿಡಿದ. ಅದಕ್ಕೆ ಅವನ ಹೆಸರನ್ನೇ ಅದಕ್ಕೆ ಇಡಲಾಗಿದೆ"-ಎಂದು ತಾನೇ? ಆದರೆ ಸತ್ಯ ವಿಚಿತ್ರವಾಗಿದೆ. ಭಾರತದ ಸರ್ವೇಯರ್ ಜನರಲ್ ಆಗಿದ್ದ ಸರ್ ಜಾರ್ಜ್ ಎವರೆಸ್ಟ್ ಎಂದೂ ಆ ಪರ್ವತವನ್ನ ಕಣ್ಣಾರೆ ಕಂಡಿರಲಿಲ್ಲ!!!! ಆಶ್ಚರ್ಯವೇ? ಮುಂದೆ ಓದಿ-

     ೧೯ ನೇ ಶತಮಾನದ ಪ್ರಾರಂಬದಲ್ಲಿ ಆಗ ಭಾರತದಲ್ಲಿ ಬಲವಾಗಿ ಕಾಲುರಿದ್ದ ಈಸ್ಟ್ ಇಂಡಿಯಾ ಕಂಪನಿ ಒಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿತು. ಅದೇ "ಭಾರತದ ಮಹಾ ಮೊಜಣೆ" (The Great Arc Project) ಸಂಪೂರ್ಣ ಭಾರತವನ್ನು ಭೂಪಟೀಕರಿಸುವ ದೊಡ್ಡ ಯೋಜನೆಯದು. (ಹೊಸ ಹೊಸ ಪ್ರದೇಶಗಳ ಅನ್ವೇಷಣೆಯಲ್ಲಿ ಯುರೋಪಿಯನ್ನರಿಗಿರುವಷ್ಟು ಆಸಕ್ತಿ ಮತ್ತಾರಿಗೂ ಇಲ್ಲವೆಂದೇ ನನ್ನನಿಸಿಕೆ. ಪ್ರಪಂಚದ ಇತಿಹಾಸವನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. ಅತಿ ಕಷ್ಟಕರವಾದ ಪ್ರದೇಶ ನುಗ್ಗಿ ಜಾಲಾಡಿದ್ದಾರೆ- ಆಫ್ರಿಕಾ, ಅಮೇರಿಕಾ ಖಂಡಗಳು, ಆಸ್ಟ್ರೇಲಿಯಾ, ಅಂಟಾರ್ಕ್ಟಿಕ. ನಮ್ಮ ದೇಶದ ಭೂಗೊಳವನ್ನು ಸರಿಯಾಗಿ ನಮಗೆ ತಿಳಿಸಲೂ ನಮಗೆ ಅವರೇ ಬರಬೇಕಾಯಿತು!!) ೧೮೦೨ ರಲ್ಲಿ ಚೆನ್ನೈನಿಂದ ಆರಂಭವಾದ ಈ ದೊಡ್ಡ ಗಾತ್ರದ ಸರ್ವೇ ಯೋಜನೆ ಅನೇಕ ದಶಕಗಳ ಕಾಲ ಮುಂದುವರೆಯಿತು. ಆವರೆಗೆ ಪ್ರಪಂಚದಲ್ಲೆಲ್ಲೂ ಅಷ್ಟು ದೊಡ್ಡ ಗಾತ್ರದ ಸರ್ವೇ ನಡೆದಿರಲಿಲ್ಲ. ಹಳ್ಳ-ಕೊಳ್ಳ,ಪ್ರವಾಹ, ಮರುಭೂಮಿ, ದಟ್ಟ ಕಾಡುಗಳು,ಹಿಮಬೆಟ್ಟಗಳು-ಹೀಗೆ ಎಲ್ಲಾ ಪ್ರದೇಶಗಳಲ್ಲಿ ಕಬ್ಬಿಣದ ಸರಪಳಿಗಳನ್ನು ಎಳೆಯುತ್ತ ನೂರಾರು ಜನ ಕೆಲಸಗಾರರು, ಗಣಿತಜ್ಞರು ಸೇರಿ ತ್ರಿಕೋನಮಿತಿ (trigonometry) ಆದಾರದ ಮೇಲೆ ನಡೆಸಿದ ಸರ್ವೇ ಅದು. ಸಾವಿರಾರು ಪುಟಗಳಲ್ಲಿ ಅದನ್ನು ದಾಖಲಿಸಲಾಯಿತು.

            ಇದನ್ನು ಪ್ರಾರಂಬಿಸಿದವನು ವಿಲಿಯಂ ಲ್ಯಾಮ್ಮ್ಬನ್. ಇವನ ನಂತರ ಸರ್ವೇಯರ್ ಜನರಲ್ ಆಫ್ ಇಂಡಿಯಾ ಆಗಿ ನೆಮಕವಾದವನೇ ಸರ್ ಜಾರ್ಜ್ ಎವರೆಸ್ಟ್. ಈತ ಸರ್ವೇಯರ್ ಜನರಲ್ ಆಗಿದ್ದ ಕಾಲದಲ್ಲೂ (೧೮೨೩-೧೮೪೩) ಈ ಕ್ಲಿಷ್ಟಕರ ಸರ್ವೇ ಯೋಜನೆ ಮುಂದುವರೆದು ಹಿಮಾಲಯದ ಬುಡದವರೆಗೂ ತಲುಪಿತು. ೧೮೪೩ ರಲ್ಲಿ ಎವರೆಸ್ಟ್ ನಿವೃತ್ತಿ ಹೊಂದಿ ತಾಯ್ನಾಡಿಗೆ ಹೋಗಿ ನೆಲೆಸುತ್ತಾನೆ. ಆತನ ನಂತರ ಸರ್ವೇಯರ್ ಜನರಲ್ ಆಫ್ ಇಂಡಿಯಾ ಆಗಿ ಬಂದ ಆಂಡ್ರ್ಯೂ ವಾನ ಕಾಲದಲ್ಲಿ ಹಿಮಾಲಯದ ಸುತ್ತಮುತ್ತ ಸರ್ವೇ ನಡೆಯುತ್ತದೆ.

          ತನ್ನ ಕೈ ಕೆಳಗಿನ ಸರ್ವೇ ಅಧಿಕಾರಿಗಳಿಂದ ಒಟ್ಟುಪಡಿಸಿದ ದತ್ತಾಂಶಗಳ ಆದಾರದ ಮೇಲೆ ಆಂಡ್ರ್ಯೂ ವಾ ೧೮೫೬ರಲ್ಲಿ ಕಲ್ಕತ್ತಾ ಎಸಿಯಾಟಿಕ್ ಸೊಸೈಟಿಗೆ ೮೮೪೦ ಮೀ ಎತ್ತರದ 'ಪೀಕ್ XV' ಬಹುಶಃ ಪ್ರಪಂಚದ ಅತ್ಯಂತ ಎತ್ತರದ ಪರ್ವತವಾಗಿರಬೇಕೆಂದು ವರದಿ ಮಾಡುತ್ತಾನೆ. (ಅಲ್ಲಿಯವರೆಗೆ ಜನ ಅತಿ ಎತ್ತರದ ಶಿಖರ ಇನ್ನೂ ಸಂಪೂರ್ಣವಾಗಿ ಶೋಧಿಸದ ಆಂಡಿಸ್ನಲ್ಲೆಲ್ಲೋ ಇರಬೇಕೆಂದು ನಂಬಿದ್ದರು) ಅಷ್ಟಲ್ಲದೇ ಅದಕ್ಕೆ ತನಗಿಂತ ಮೊದಲು ಸರ್ವೇಯರ್ ಜನರಲ್ ಆಗಿದ್ದ ಎವರೆಸ್ಟ್ ಹೆಸರನ್ನು ಸೂಚಿಸುತ್ತಾನೆ. ಅದಕ್ಕೆ ಸಕಾರಣ ಇವತ್ತಿಗೂ ಗೊತ್ತಿಲ್ಲ!!! (ಆದರೆ ಜಾರ್ಜ್ ಎವರೆಸ್ಟ್ ಅದಕ್ಕೆ ಸ್ಥಳೀಯ ಹೆಸರಾದ 'ಚೋಮೊಲುಂಗ್ಮ'ವೇ ಸರಿಯಾದ್ದೆಂದು ಸೂಚಿಸಿದನೆಂದು ಹೇಳಲಾಗಿದೆ). ಏನೇ ಆಗಲಿ ಆ ಶಿಖರ ಅವನ ಹೆಸರು ಹೊದ್ದು ನಿಂತಿದೆ. ಆದರೆ ಅದನ್ನೆಂದೂ ಅವನು ಕಣ್ಣಾರೆ ನೋಡಿರಲೇ ಇಲ್ಲ!!! ಆದರೆ ಇವತ್ತಿಗೂ ಪಾಠದ ಪುಸ್ತಕಗಳು ಆತ ಅದರ ಎತ್ತರ ಕಂಡು ಹಿಡಿದವನು ಎಂದೇ ಹೇಳುತ್ತಿವೆ. ಹಾಗೂ ಹೆಚ್ಚಿನ ಜನ ಹಾಗೇ ನಂಬಿದ್ದಾರೆ!!! ತರಗುಟ್ಟುವ ಚಳಿಯಲ್ಲಿ ಅದರ ಸುತ್ತ ಮುತ್ತ ಸರ್ವೇ ಮಾಡಿ ಅದರ ಎತ್ತರ ಕಂಡುಹಿಡಿದ ಪುಣ್ಯಾತ್ಮ ಯಾರೋ. ದೇವರೇ ಬಲ್ಲ.
            ಈ ವಿಷಯ ನಿಮಗೆ ಗೊತ್ತಿತ್ತೇ? ಇದನ್ನು ಓದಿದ ಮೇಲೆ ಕನ್ನಡದ ಒಂದು ಗಾದೆ ನೆನಪಾಗುವುದಿಲ್ಲವೇ? (ಈರಪ್ಪ-ಸೂರಪ್ಪ ಎಂಬ ಹೆಸರು ಒಳಗೊಂಡಿರುವ ಸ್ವಲ್ಪ non-veg ಗಾದೆ ಅದು!!)



Saturday, April 17, 2010

ಈಗ ಫೈಲ್ ಗಳಿಗೆ ಕನ್ನಡದಲ್ಲೇ ಹೆಸರು ಕೊಡಬಹುದು!!!



             ಮುಂಗಾರುಮಳೆ ಹಾಡು ಕೇಳದೆ ತುಂಬಾ ದಿನ ಆಗಿದೆ.- ಹೀಗೆಂದು ಅನ್ನಿಸುತ್ತಿದ್ದಂತೆ ಕರ್ಸರ್ Music ಮೇಲೆ ಹೋಗುತ್ತದೆ. ಅಲ್ಲಿ Mungaaru male ಫೈಲ್ ಕ್ಲಿಕ್ ಮಾಡುತ್ತೀರಿ. "ಅನಿಸುತಿದೆ ಯಾಕೋ ಇಂದು" ಹಾಡು ಕೇಳಬೇಕೆನ್ನಿಸುತ್ತದೆ. Anisutide yaako indu ಎಂಬ ಫೈಲ್ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ ಆಲಿಸುತ್ತೀರಿ.


ಅದೇ ರೀತಿ ಫೋಟೋ ಫೈಲ್ ಗಳಿಗೂ ನಾವು ಸಾದಾರಣವಾಗಿ ಇಂಗ್ಲಿಷ್ನಲ್ಲೇ ಹೆಸರು ಕೊಟ್ಟಿರುತ್ತೇವೆ.- Bayakemane photos, flowers, kids at home, falls ಇತ್ಯಾದಿ, ಇತ್ಯಾದಿ.


              ಈಗ ನೀವು ಸೇವ್ ಮಾಡುವ ಫೈಲ್ ಗಳಿಗೂ ಕನ್ನಡದಲ್ಲೇ ಹೆಸರು ಕೊಡಬಹುದು!!! ಆಶ್ಚರ್ಯವಾಯಿತೇ?. ಇದು ನಿಜ.(ಹಾಗೂ ತುಂಬಾ ಸುಲಭ).ಮೊದಲು ಅಂತರ್ಜಾಲದಿಂದ Google Transliteration IME
ಎಂಬ ಇನ್ ಪುಟ್ ಮೆಥಡ್
ಇಳಿಸಿಕೊಳ್ಳಬೇಕು. ಆ ಜಾಲತಾಣದ ಲಿಂಕ್ ಇಂತಿದೆ- http://www.google.com/ime/transliteration/ .ಈ ಪುಟದಲ್ಲಿ Choose your IME language ನಲ್ಲಿ Kannada ಆಯ್ಕೆ ಮಾಡಿಕೊಂಡು Download Google IME ಕ್ಲಿಕ್ ಮಾಡಿ ಡೌನ್ಲೋಡ್ ಆದ ಫೈಲನ್ನು ರನ್ ಮಾಡಿದರೆ ಮುಗಿಯಿತು. Taskbar ನ notification area ದಲ್ಲಿ (ಬಲಬದಿಯ ಕೆಳ ಮೂಲೆಯಲ್ಲಿ) EN ಎಂದು ಕೂತಿರುತ್ತದೆ. ನಾವು ಯಾವುದಾದರೊಂದು ಕಡೆಯಲ್ಲಿ ಕನ್ನಡದಲ್ಲಿ ಟೈಪ್ ಮಾಡಬೇಕೆಂದಾಗ ಈ EN ಮೇಲೆ ಕ್ಲಿಕ್ ಮಾಡಿ KD Kannada ಆಯ್ಕೆ ಮಾಡಿಕೊಂಡು ಟೈಪಿಸಿದರೆ ಕನ್ನಡ ಅಕ್ಷರ ಮೂಡಿಸಬಹುದು. ಇಲ್ಲಿ ಯಾವುದಾದರೂ ಕಡೆ ಎಂದರೆ ಚಾಟ್ ಬಾಕ್ಸ್ ಇರಬಹುದು, ಹೊಸ ಮೇಲ್ ಇರಬಹುದು, ಅಥವಾ ಎಂ.ಎಸ್. ಆಫೀಸ್ ಇರಬಹುದು.

                ಈಗ ಮತ್ತೆ Mungaaru male ಗೆ ಹೋಗೋಣ. Mungaaru male ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ Rename ಆಪ್ಶನ್ ಕ್ಲಿಕ್ ಮಾಡಿ. ಈಗ ಬಲಬದಿಯ ಕೆಳ ಮೂಲೆಯಲ್ಲಿರುವ EN ಮೇಲೆ ಕ್ಲಿಕ್ ಮಾಡಿ KD Kannada ಆರಿಸಿಕೊಂಡು ಕನ್ನಡದಲ್ಲೇ "ಮುಂಗಾರು ಮಳೆ" ಎಂದು ಫೈಲ್ ಗೆ ಹೆಸರು ಕೊಡಬಹುದು.!!! ಹೀಗೆ ಯಾವ ಫೈಲ್ ಗೂ ಬೇಕಾದರೂ ಕನ್ನಡದಲ್ಲೇ ಹೆಸರು ಕೊಡಬಹುದು.


                   ನಾನು ಆದಷ್ಟು ಮಟ್ಟಿಗೆ ಸರಳವಾಗಿ ಹೇಳಲು ಪ್ರಯತ್ನಪಟ್ಟು ಬರೆದಿದ್ದೇನೆ. ಮಾಡಿ ನೋಡಿ. ಏನಾಯಿತು ಹೇಳಿ. ನಿಮಗೆ ಈ ವಿಷಯ ಮೊದಲೇ ಗೊತ್ತಿತ್ತಾ? (ಅಥವಾ ನನಗೆ ಗೊತ್ತಾಗಿದ್ದು ಇತ್ತೀಚೆಗಾ?)


Friday, April 2, 2010

ಬೊಲಿವಿಯಾದ "ಸಾವಿನ ಹೆದ್ದಾರಿ" ; ಪ್ರಪಂಚದ ಅತ್ಯಂತ ದುರ್ಗಮ ರಸ್ತೆ!!!

                   ಅನೇಕ ವರ್ಷಗಳ ಕೆಳಗೆ ಎಲ್ಲೋ ಓದಿದ ನೆನಪು. ಬಯಲುಸೀಮೆಯಲ್ಲೇ ಯಾವಾಗಲೂ ಬಸ್ ಓಡಿಸುತ್ತಿದ್ದ ಡ್ರೈವರ್ಗೆ ಚಾರ್ಮಾಡಿ ಘಾಟಿ ರೂಟ್ ಕೊಟ್ಟರಂತೆ. ಹೋಗಿಬಂದ ಮೇಲೆ ಅವನು ಮೊದಲು ಮಾಡಿದ ಕೆಲಸ ಕೈ ಮುಗಿದು ಇನ್ನು ಆ ರೂಟಿಗೆ ಹಾಕಬೇಡಿ ಎಂದು ಕೇಳಿಕೊಂಡಿದ್ದು!! ಕೆಲವೊಂದು ಗುಡ್ಡಗಾಡು ರಸ್ತೆಗಳು ಹಾಗೇ. ಪ್ರಯಾಣ ರೋಮಾಂಚನ. (ನಮ್ಮಲ್ಲಿ ಶೃಂಗೇರಿ-ಜಯಪುರ-ಬಸರಿಕಟ್ಟೆ-ಹೊರನಾಡು ರಸ್ತೆ ಸ್ವಲ್ಪ ಹಾಗೇ). ಹಿಮಾಲಯದ ತಪ್ಪಲಲ್ಲಿ ಅಂತಹ ಅನೇಕ ರಸ್ತೆಗಳಿವೆ. ಪ್ರಪಂಚ ಮಟ್ಟದಲ್ಲಿ ಅತಿ ಅಪಾಯಕಾರಿ ದುರ್ಗಮ ಹೆದ್ದಾರಿಯೆಂದು ಹೆಸರುಮಾಡಿರುವ ರಸ್ತೆಯ ವಿವರವನ್ನು ನಿಮ್ಮ ಮುಂದೆ ಬಿಚ್ಚಿಡುವುದೇ ಈ ಲೇಖನ. ಅದೇ ಬೊಲಿವಿಯಾದ “ಸಾವಿನ ಹೆದ್ದಾರಿ”.
                  ಬೊಲಿವಿಯಾ ನಿಮಗೆ ಗೊತ್ತಿರಬಹುದು. ದಕ್ಷಿಣ ಅಮೇರಿಕಾದ ಒಂದು ಬಡ ಚಿಕ್ಕ(ಆ ಖಂಡದ ಬೇರೆ ದೇಶಗಳಿಗೆ ಹೋಲಿಸಿದರೆ!!) ದೇಶ. ಸಮುದ್ರ ತೀರವೇ ಇಲ್ಲದ ಈ ದೇಶದ ಜಿಯಾಗ್ರಫಿಯೇ ವಿಚಿತ್ರ. ಪಶ್ಚಿಮ ಭಾಗದಲ್ಲಿ ಗಗನಚುಂಬಿ ಆಂಡಿಸ್ (Andes)ಪರ್ವತ ಶ್ರೇಣಿ. ಪೂರ್ವದಲ್ಲಿ ತಗ್ಗಿನ ಅಮೆಜಾನ್ ಮಳೆಕಾಡು. ಆಲ್ಟಿಪ್ಲೇನೋ ಎಂದು ಕರೆಯಲ್ಪಡುವ ಆಂಡಿಸ್ ಪರ್ವತದ ಅತಿ ಎತ್ತರದ ವಿಶಾಲ ಪ್ರದೇಶದಲ್ಲಿ ಬೊಲಿವಿಯಾದ ರಾಜಧಾನಿ ಲಾ-ಪಾಜ್(La-Paz) ಇದೆ. ಇದು ಪ್ರಪಂಚದ ಅತ್ಯಂತ ಎತ್ತರದ ರಾಜಧಾನಿಗಳಲ್ಲಿ ಒಂದು!! ಸಮುದ್ರ ಮಟ್ಟದಿಂದ 14,000 ಅಡಿಗೂ ಎತ್ತರ. (ನಮ್ಮ ಬೆಂಗಳೂರು 3,000 ಅಡಿ ಹಾಗೂ ನಾನೀಗ ಕೂತು ಬರೆಯುತ್ತಿರುವ ನನ್ನೂರು 2300 ಅಡಿ ಎತ್ತರದಲ್ಲಿದೆ) ರಾಜಧಾನಿ ಲಾ-ಪಾಜನ್ನು ಪಶ್ಚಿಮದ ತಗ್ಗಿನ ಅಮೆಜಾನ್ ಮಳೆಕಾಡಿನ ಪ್ರಾರಂಭದಲ್ಲಿರುವ ಬೊಲಿವಿಯಾದ ಮತ್ತೊಂದು ಪ್ರಮುಖ ನಗರ ಕೊರೈಕೋವನ್ನು ಸೇರಿಸುವ 70 ಕಿ.ಮೀ. ಉದ್ದದ ಹೆದ್ದಾರಿಯೇ ಪ್ರಪಂಚದ ಅತಿ ದುರ್ಗಮ ರಸ್ತೆ-“ಸಾವಿನ ಹೆದ್ದಾರಿ” (Death Road)
                ಲಾ-ಪಾಜ್ ದಿಂದ ಹೊರಡುವ ಹೆದ್ದಾರಿ ಮೊದಲ ಕೆಲವು ಕಿಲೋಮೀಟರ್ ಏರು ದಾರಿ ಸಾಗಿ 15,000 ಅಡಿಗೂ ಎತ್ತರ ತಲುಪುತ್ತದೆ. ಅಲ್ಲಿಂದ ಕಿಲೋಮೀಟರ್ಗಟ್ಟಲೆ ಬರೇ ಇಳಿಜಾರು. ರಸ್ತೆ ಮುಗಿಯುವ ಕೊರೈಕೋ ನಗರವಿರುವುದು 3,900 ಅಡಿ ಎತ್ತರದಲ್ಲಿ. ಕೇವಲ 50-60 ಕಿ.ಮೀ. ಗಳಲ್ಲಿ 11,000 ಅಡಿ ಎತ್ತರ ಕಳೆದುಕೊಳ್ಳುತ್ತದೆ ಈ ರಸ್ತೆ. ಹಾವಿನಂತೆ ಆಂಡಿಸ್ ಪರ್ವತಗಳ ಸಂದಿ ಸಂದಿಯಲ್ಲಿ ಸಾಗುವ ಈ ರಸ್ತೆ ಲೆಕ್ಕವಿಲ್ಲದಷ್ಟು ಅಪಾಯಕಾರಿ ತಿರುವುಗಳನ್ನು, ಕಡಿದಾದ ಪ್ರಪಾತಗಳನ್ನು ಹೊಂದಿದ್ದು ಕೆಲವೊಂದುಕಡೆ ಅತಿ ಇಳಿಜಾರಾಗಿದೆ.ಕೆಲವೆಡೆ ಕಡಿದಾದ ಬೆಟ್ಟಗಳನ್ನು ಕೊರೆದು ರಸ್ತೆ ಮಾಡಿದ್ದು ಅಗಲ ತುಂಬಾ ಕಡಿಮೆ. ಪ್ರಪಾತದ ಬದಿಯಲ್ಲಿ ತಡೆ ಗೋಡೆಗಳು ಇಲ್ಲ!! (ನೆಲ ಒದ್ದೆ ಇದ್ದಾಗ ಸ್ವಲ್ಪ ಬದಿಗೆ ವಾಹನ ಹೋದರೆ ಕುಸಿದು ಪ್ರಪಾತಕ್ಕೆ ಸೇರಿದರೂ ಆಶ್ಚರ್ಯವಿಲ್ಲ) ಉರುಳುವ ಜಲ್ಲಿ ಕಲ್ಲುಗಳು ಬೇರೆ. ಇವೆಲ್ಲದಕ್ಕೂ ಜೊತೆಯಾಗಿ ಆಗಾಗ್ಯೆ ಕವಿಯುವ ಮಂಜು ಹಾಗೂ ಮಳೆ!! ದೇಶದ ಎರಡು ಪ್ರಮುಖ ನಗರಗಳನ್ನು ಸೇರಿಸುವ ರಸ್ತೆಯಾದ್ದರಿಂದ ವಾಹನದಟ್ಟಣೆಯನ್ನು ನೀವೇ ಊಹಿಸಿಕೊಳ್ಳಿ-ಲಾರಿಗಳು,ಬಸ್ಸುಗಳು,ಟ್ಯಾಂಕರ್ಗಳು. ವರ್ಷಕ್ಕೆ ಸರಾಸರಿ ನೂರು ಜನ ಸಾಯುತ್ತಿದ್ದರು.
                     “ನೂರು ಜನ ಸಾಯುತ್ತಿದ್ದರು” – ಎಂದು ಭೂತಕಾಲ ಬಳಸಿದೆ. ಹೌದು. 2006 ರ ಈಚೆಗೆ ಕಾಲ ಬದಲಾಗಿದೆ. ಜನ ಈ ದುರ್ಗಮ ರಸ್ತೆಯಲ್ಲಿ ಓಡಾಡುವ ಅನಿವಾರ್ಯತೆಯಿಲ್ಲ!! ಕಣಿವೆಯ ಮತ್ತೊಂದು ಬದಿಯಲ್ಲಿ ಅಗಲದ ಆದುನಿಕ ರಸ್ತೆ ನಿರ್ಮಾಣವಾಗಿದೆ. ತಡೆಗೋಡೆಗಳೂ ಇವೆ. ಆದರೂ ಪ್ರತಿವರ್ಷ ಸಾವಿರಾರು ಜನ ದುರ್ಗಮ ಆ ಹಳೆ ರಸ್ತೆಯಲ್ಲೇ ಸಂಚರಿಸಲು ಇಷ್ಟಪಡುತ್ತಾರೆ. ಅದೂ ಸೈಕಲ್ಲಲ್ಲಿ!!! ಆಶ್ಚರ್ಯವಾಗಬಹುದು. ಹೌದು ನಿಜ. ರಕ್ತದಲ್ಲಿ ಹೆಚ್ಚು ಅಡ್ರಿನಾಲಿನ್ ಇರುವ ಸಾಹಸಿ ಪ್ರವಾಸಿಗರು. ಅವರಿಗಾಗಿಯೇ ಸೈಕಲ್ ಪ್ರವಾಸ ಆಯೋಜಿಸುವ ಅನೇಕ ಏಜೆಂಟರು ಲಾ-ಪಾಜ್ ನಲ್ಲಿದ್ದಾರೆ. ರಸ್ತೆಯ ಅತಿ ಎತ್ತರದ ಬಾಗಕ್ಕೆ ವಾಹನದಲ್ಲಿ ಸೈಕಲ್ ಮತ್ತು ಸಾಹಸಿಗರನ್ನು ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಸೈಕಲ್ ಹತ್ತಿ ಸಾಹಸಿಗರು ಇಳಿಯಲಾರಂಬಿಸುತ್ತಾರೆ. ಬೆಂಗಾವಲಿಗೆ ವಾಹನ ಹಿಂದಿರುತ್ತದೆ. (ಆಗಾಗ್ಯೆ ಟಯರ್-ಬ್ರೇಕ್ ಶೂ ಬದಲಾಯಿಸಲು). ಭೀಕರ ಬಸ್ ಅಪಘಾತದಲ್ಲಿ ತನ್ನ ಕುಟುಂಬದ ಎಲ್ಲಾ ಸದಸ್ಯರನ್ನೂ ಕಳೆದುಕೊಂಡ ವ್ಯಕ್ತಿಯೊಬ್ಬ ಅಪಘಾತ ನಡೆದ ತಿರುವಿನಲ್ಲಿ ವಾಹನಗಳನ್ನು ನಿಯಂತ್ರಿಸಲು ಸದಾ ಇರುತ್ತಾನಂತೆ!!!


        ಈ ಪ್ರಪಂಚ ಎಷ್ಟು ವಿಚಿತ್ರ ಅಲ್ವಾ?