Tuesday, March 8, 2011

ಎಂಡೋಸಲ್ಫಾನ್ ಎಂಡೋಸಲ್ಫಾನ್ ಎಂಡೋಸಲ್ಫಾನ್ ಎಂಡೋಸಲ್ಫಾನ್....ಎಂಡೋಸಲ್ಫಾನ್ ಅತ್ಯಂತ ಕೆಟ್ಟದ್ದೇ?????


             ಟೊಂಯ್ಯ್ ಟೊಂಯ್ಯ್ ಎಂಬ ದುಃಖಭರಿತ ಹಿನ್ನಲೆ ದನಿಯೊಂದಿಗೆ ತಲೆದಪ್ಪ ಕೈಕಾಲು ಸೊಟ್ಟೆ ವಿಕಲಾಂಗ ಮಕ್ಕಳ ವ್ಯಕ್ತಿಗಳ ಚಿತ್ರಗಳು-ಒಂದೆರಡು ತಿಂಗಳಿಂದ ಈಚೆ ಇದನ್ನು ಮತ್ತೆ ಮತ್ತೆ ಟೀ.ವಿ ಯಲ್ಲಿ ನೀವು ನೋಡಿಯೇ ನೋಡಿರುತ್ತೀರಿ. ನಮ್ಮೆಲ್ಲಾ ಮಾದ್ಯಮಗಳು ಕರ್ನಾಟಕದ ಗಡಿಗೆ ತಾಗಿದಂತಿರುವ ಕಾಸರಗೋಡು ತಾಲೂಕಿನ ಕೆಲವು ಭಾಗದಲ್ಲಿ ನಡೆದ ಎಂಡೋಸಲ್ಫಾನ್ ದುರಂತದ ಬಗ್ಗೆ ವರದಿ ಮಾಡಿವೆ. (ಈ ದುರಂತ ನಡೆದು ದಶಕಗಳೇ ಆಗಿವೆ. ಆದರೆ ಈಗ ದೊಡ್ಡ ಸುದ್ದಿಯಾಗಿದೆ). ಮಂತ್ರಿಣಿಯೊಬ್ಬರು ಸಂತ್ರಸ್ತರ ಪರವಾಗಿ ಹೋರಾಡಿ ಅವರಿಗೆ ಪರಿಹಾರ ಕೊಡಿಸಲು ಪ್ರಯತ್ನಿಸುವುದಲ್ಲದೆ ಮುಂದೆಂದೂ ಹೀಗಾಗದಿರಲೆಂದು ಎಂಡೋಸಲ್ಫಾನನ್ನು ನಿಷೇದಿಸಲು ಮನವಿಮಾಡಿದ್ದಾರೆ. ಆಪ್ತ ಮಂತ್ರಿಣಿಯ ಮನವಿಯಂತೆ ಮಾನ್ಯ ಮುಖ್ಯಮಂತ್ರಿ ಯಡ್ಡಿಯೂರಪ್ಪರು ಕರ್ನಾಟಕದಲ್ಲಿ ತಾತ್ಕಾಲಿಕವಾಗಿ ಎಂಡೋಸಲ್ಫಾನ್ ಮಾರಾಟವನ್ನು ನಿಷೇದಿಸಿದ್ದಾರೆ. ಆದರೆ ಕೇಂದ್ರಸರ್ಕಾರ ಮಾತ್ರ ಬೇರೆಯೇ ರಾಗ ಹಾಡುತ್ತಿದೆ!! ತಿಮಿಂಗಿಲದಂತೆ ಕಾಣುವ ಶರದ್ ಪವಾರ್ ಎಂಡೋಸಲ್ಫಾನ್ ಪರವಾಗಿ ಮಾತಾಡುತ್ತಿದ್ದಾರೆ!!! ಆಸ್ಟ್ರೇಲಿಯಾ, ಬ್ರೆಜಿಲ್ ಮೊದಲಾದ ನಲವತ್ತಕ್ಕೂ ಹೆಚ್ಚು ದೇಶಗಳಲ್ಲಿ ಎಂಡೋಸಲ್ಫಾನ್ ಬಳಕೆಯಲ್ಲಿದೆ. ಸದ್ಯದಲ್ಲಿ ನಿಷೇದಿಸುವ ಅಗತ್ಯವಿಲ್ಲ. ಹಿಂದಿನ ನಾಲ್ಕು ತಜ್ಞರ ವರದಿಗಳು ನಿಷೇಧಿಸುವ ಅಗತ್ಯವಿಲ್ಲವೆಂದೇ ಹೇಳಿವೆ. ಇನ್ನೂ ಒಂದು ಹೊಸ ತಜ್ಞರ ಸಮಿತಿ ರಚಿಸಿ ಘಟನೆ ಪರಿಶೀಲಿಸಿ ಹಾನಿಯಬಗ್ಗೆ ಸಮಗ್ರ ವರದಿಕೊಟ್ಟರೆ ನಿಷೇದಿಸುವ ಬಗ್ಗೆ ಪರಿಶೀಲಿಸಬಹುದು-ಎಂದಿದ್ದಾರೆ!!!! ಅಬ್ಬಾ ಸೊಕ್ಕೆ!! ಅಂತಹಾ ವಿಷವನ್ನು ನಿಷೇದಿಸುವುದಿಲ್ಲವಂತೆ!!! ತಯಾರಿಸುವ ಕಂಪನಿಗಳಿಂದ ಎಷ್ಟು ದುಡ್ಡು ತಿಂದಿದ್ದಾನೇನೋ??-ಹೀಗೆಲ್ಲಾ ಸರಣಿ ಅಭಿಪ್ರಾಯಗಳು ನಿಮ್ಮ ತಲೆಯಲ್ಲಿ ಮೂಡಿದರೆ ಅದು ಅಸಹಜವಲ್ಲ. ಸಹಜ. ಆದರೆ ನಿಜ ಬೇರೆಯೇ ಇದೆ!! ನಾನು ಮುಂದೆ ಬರೆಯಲಿರುವ ಬರಹ ಎಂಡೋಸಲ್ಫಾನ್ ಅತ್ಯಂತ ಕೆಟ್ಟದು ಎಂಬ ನಿಮ್ಮ ಖಚಿತ ಅಭಿಪ್ರಾಯವನ್ನು ಬದಲಾಯಿಸದಿದ್ದರೂ ಸ್ವಲ್ಪವಾದರೂ ಅಲ್ಲಾಡಿಸಬಹುದು!!!! ಈ ಬಗ್ಗೆ ಹೆಚ್ಚಿಗೆ ಗೊತ್ತಿರುವವರನ್ನು ಕೇಳಿ ತಿಳಿದುಕೊಳ್ಳುವಂತೆ ಪ್ರೇರೇಪಿಸಬಹುದು. (ನೀವು ಹಾಗೆ ಮಾಡಿ ನಮ್ಮೊಂದಿಗೆ ಹಂಚಿಕೊಂಡರೆ ನನ್ನ ಅಭಿಪ್ರಾಯ ಸರಿಯೇ ತಪ್ಪೇ ಎಂದು ನನಗೂ, ಎಂಡೋಸಲ್ಫಾನ್ ಬಗ್ಗೆ ನಿಜವೇನು ಎಂದು ಇತರರಿಗೂ ಗೊತ್ತಾಗುತ್ತದೆ)
           ಒಂದು ದಶಕದ ಹಿಂದಿನ ಕಥೆ. ಮಲೆನಾಡು-ಕರಾವಳಿಗಳಲ್ಲಿ ವನಿಲ್ಲಾದ್ದೇ ಮಾತುಕತೆ. ವನಿಲ್ಲಾಕ್ಕೆ ಚಿನ್ನದ ಬೆಲೆಯಿದ್ದ ದಿನಗಳವು. (ಇಂದು ವನಿಲ್ಲಾಕ್ಕೆ ಕಾಲಿಗೆ ಹಾಕುವ ಹವಾಯಿ ಚಪ್ಪಲಿಯಷ್ಟು ಬೆಲೆಯಷ್ಟೇ!!) ಜನವರಿ-ಪೆಬ್ರವರಿಯಲ್ಲಿ ತೋಟಕ್ಕೆ ನೀರುಬಿಟ್ಟಕೂಡಲೇ ವನಿಲ್ಲಾ ಬಳ್ಳಿಯಲ್ಲಿ ಎಲೆ ಖಾಂಡ ಸೇರುವ ಭಾಗದಿಂದ ಗೊಂಚಲು ಮೂಡಲಾರಂಬಿಸುತ್ತಿತ್ತು. ಅನಂತರ ಅದು ಉದ್ದ ಬೆಳೆದು ಅದರಲ್ಲಿ ಹತ್ತಿಪ್ಪತ್ತು ಹೂ ದಿನಕ್ಕೊಂದು ಒಮ್ಮೊಮ್ಮೆ ಎರೆಡರಂತೆ ಅರಳುತ್ತಿದ್ದವು. ಅವನ್ನು ಕೃತಕ ಪರಾಗಸ್ಪರ್ಶ ಮಾಡಿದರೆ ಕಾಯಿಕಟ್ಟುತ್ತಿತ್ತು. ವನಿಲ್ಲಾಕ್ಕೆ ಚಿನ್ನದ ಬೆಲೆಯಿದ್ದಾಗ ಒಂದೊಂದು ಗೊಂಚಲೂ ನೂರಾರು ರೂಪಾಯಿಯ ಮಾಲಾಗಿತ್ತು. ಎಳೆ ಗೊಂಚಲು ಎಲೆ ಖಾಂಡದ ಮದ್ಯೆ ಹೊರಡುತ್ತಿದ್ದಂತೆ ಅದನ್ನೊಂದು ಕೀಟ ಕೊರೆಯುತ್ತಿತ್ತು. ಹಾಗೂ ಕೊರೆದ ಆ ಜಾಗದಲ್ಲಿ ಶಿಲೀಂದ್ರ ಬೆಳೆದು ಇಡೀ ಇಡೀ ಗೊಂಚಲೇ ಪ್ರಾರಂಬದಲ್ಲೇ ಸುಟ್ಟು ಕರಟಿಹೋದಂತಾಗುತ್ತಿತ್ತು. ಸಾವಿರಾರು ರೂಪಾಯಿ ಹಾನಿ. ಈ ಕೀಟದ ಉಪಟಳ ಹೆಚ್ಚಾದಾಗ ನಾವು ಸುತ್ತಮುತ್ತಲಿನ ಉಳಿದ ಬೆಳೆಗಾರರು ಮಾಡಿದಂತೆ ಮಾನೋಕ್ರೋಟೋಪಾಸ್ (ಬೆಳೆಗಳಿಗೆ-ತರಕಾರಿಗಳಿಗೆ ಸಾದಾರಣವಾಗಿ ಉಪಯೋಗಿಸುವ ಅಂತರ್ವ್ಯಾಪಿ ಕೀಟನಾಶಕ) ಹಾಗೂ ಮ್ಯಾನ್ಕೊಜೆಬ್ (ಕಾಂಟ್ಯಾಕ್ಟ್ ಫನ್ಜಿಸೈಡ್)-ಇವೆರಡನ್ನು ನೀರಿನಲ್ಲಿ ಕರಡಿ ವನಿಲ್ಲಾ ಬಳ್ಳಿಗೆ ಸ್ಪ್ರೇ ಮಾಡಿದೆವು. ಸ್ವಲ್ಪ ಹತೋಟಿ ಬಂದಂತಾದರೂ ಹತ್ತು ಹನ್ನೆರಡು ದಿನಗಳಾದಮೇಲೆ ಮತ್ತೆ ಕೀಟಗಳ ಹಾವಳಿ ಶುರು!!! ಆಗ ಬೇರೊಬ್ಬರ ಸಲಹೆಯಂತೆ ರೋಗಾರ್ (ಒಂದು ಅಂತರ್ವ್ಯಾಪಿ ಕೀಟನಾಶಕ) ಹಾಗೂ ಬಾವಿಸ್ಟಿನ್ (ಒಂದು ಅಂತರ್ವ್ಯಾಪಿ ಶಿಲೀಂದ್ರನಾಶಕ)ಗಳನ್ನು ಒಟ್ಟುಸೇರಿಸಿ ಬಳ್ಳಿಗಳಿಗೆ ಹೊಡೆದೆವು. ಆದರೂ ಒಂದೆರಡು ವಾರಗಳ ನಂತರ ಮತ್ತೆ ಕೀಟಸಮಸ್ಯೆ ಅಲ್ಲಲ್ಲಿ ಕಾಣಿಸಿಕೊಂಡಿತು!!! (ನಮ್ಮ ಪಕ್ಕದೂರಿನ ವನಿಲ್ಲಾ ಮಾರಾಟಗಾರನೊಬ್ಬ ಸಾಗರದಲ್ಲಿನ ಪರಿಚಯಸ್ತ ಬೆಳೆಗಾರರೊಬ್ಬರಿಗೆ ಫೋನ್ ಮಾಡಿ ಅಲ್ಲಿ ಅವರು ಗೊಂಚಲು ಹೊರಡುವುದಕ್ಕೆ ಮುಂಚೆಯೇ ಎಂಡೋಸಲ್ಫಾನ್ ಹೊಡೆಯುತ್ತಾರೆಂಬ ಸುದ್ದಿ ಹೇಳಿದ. ಅದನ್ನು ಕೇಳಿ ಅಬ್ಬಾ!! ಅಂತಾ ವಿಷ ಉಪಯೋಗಿಸುತ್ತಾರೆಯೇ ಎಂದು ಆಶ್ಚರ್ಯವಾಯಿತು!!) ಏನೇ ಆಗಲಿ. ಈ ಕೀಟಸಮಸ್ಯೆಗೆ ಸೂಕ್ತ ಪರಿಹಾರವೇನೆಂದು-ಸಕಲೇಶಪುರದ ಸಾಂಬಾರು ಮಂಡಳಿ ಸಂಶೋದನಾಕೇಂದ್ರದಲ್ಲಿ ಹಿರಿಯ ವಿಜ್ಞಾನಿಗಳಾಗಿದ್ದ-ನನ್ನ (ಕಸಿನ್) ಅಕ್ಕಳ ಮೈದುನರೂ ಆಗಿದ್ದ-ಶ್ರೀಯುತರನ್ನು ದೂರವಾಣಿ ಮೂಲಕ ಸಂಪರ್ಕಿಸಿದೆವು.
              ಶ್ರೀಯುತರ (ಅವರ ಹೆಸರು ಬೇರೆಯೇ ಇದೆ) ಜೊತೆಗಿನ ನಮ್ಮ ಸಂಬಾಷಣೆ ಬರೆಯುವ ಮೊದಲು ಆ ಹಿರಿಯ ವಿಜ್ಞಾನಿಗಳ ಬಗ್ಗೆ ಒಂದು ಪ್ಯಾರ ಬರೆಯುವುದೇ ಸೂಕ್ತ. ಕೊಪ್ಪಾ ಮೂಲದವರಾದ ಶ್ರೀಯುತರದ್ದು ಸಾಂಬಾರು ಮಂಡಳಿಯಲ್ಲಿ ದೊಡ್ದಹೆಸರು. ತಮ್ಮ ತೂಕದ ವಸ್ತುನಿಷ್ಟ ವಿಶ್ಲೇಷಣೆಗೆ ಹೆಸರಾದವರು. ಅನೇಕ ಉಪಯುಕ್ತ ಸಂಶೋದನಾ ಪ್ರಬಂದ ಮಂಡಿಸಿದವರು.ಸಾಂಬಾರು ಗಿಡಗಳ ಬಗ್ಗೆ ವಿಷಯ ಚೆನ್ನಾಗಿ ತಿಳಿದುಕೊಂಡಿರುವ ಹಾಗೂ ಅದಕ್ಕಿಂತ ಹೆಚ್ಚಾಗಿ ಹೊಸಹೊಸ ವಿಷಯ ತಿಳಿದುಕೊಳ್ಳಲು ಸದಾ ಉತ್ಸಾಹ ತೋರುವ ವ್ಯಕ್ತಿ. ಕಾರ್ಯಕ್ರಮಗಳಲ್ಲಿ ಎಂದೂ ಒಟ್ರಾಶಿ ಕಾಟಾಚಾರಕ್ಕೆ ಏನೇನೋ (ರೈತರ ಎದುರು) ವದರುವವರಲ್ಲ. (ಅನೇಕಜನ ಕೃಷಿತಜ್ಞರು ಎದುರಿಗೆ ಕೂತ ರೈತರನ್ನು ಗೂಬೆಗಳೆಂದು ತಿಳಿದು ಒಟ್ಟಾರೆ ಏನೇನೋ ವದರುತ್ತಿರುತ್ತಾರೆ!!) ಕಾರ್ಯಕ್ರಮಗಳಲ್ಲಿ ಏನಾದರೊಂದು ಚರ್ಚೆ ನಡೆಯುತ್ತಿದ್ದು ಗಲಾಟಿ ವಾತಾವರಣವಿದ್ದು ಆ ಸಮಯದಲ್ಲಿ ತಮ್ಮ ಅಭಿಪ್ರಾಯ ಹೇಳಲು ಇವರು ಎದ್ದು ನಿಂತರೆ ಅವರ ಮಾತು ಕೇಳಲು ಇಡೀ ಸಭೆಯೇ ನಿಶಬ್ದವಾಗುತ್ತಿತ್ತು. ಈಗ ಅವರು ಬಹುಷಃ ಸಿಕ್ಕಿಂ ನ ಗ್ಯಾಂಗ್ಟಕ್ ನಲ್ಲಿ ಕೆಲಸಮಾಡುತ್ತಿರಬೇಕು.
            ಅತ್ತ ಫೋನ್ ಎತ್ತಿದ ಶ್ರೀಯುತರಿಗೆ ಕೀಟಬಾದೆ ಸಮಸ್ಯೆಯನ್ನೂ ಹಾಗೂ ಅದರ ನಿಯಂತ್ರಣಕ್ಕೆ ಉಪಯೋಗಿಸಿದ ಕೀಟನಾಶಕ/ಶಿಲೀಂದ್ರನಾಶಕಗಳ ಪಟ್ಟಿಯನ್ನು ಸಂಕ್ಷಿಪ್ತವಾಗಿ ಹೇಳಿ ಅಲ್ಪಸ್ವಲ್ಪ ಕೀಟಗಳ ಹಾವಳಿ ಇರುವುದರಿಂದ ಇನ್ನೇನು ಸ್ಪ್ರೇ ಮಾಡಬಹುದೆಂದು ಸಲಹೆ ಕೇಳಿದೆ. ಅವರಿಂದ ಬಂದ ಉತ್ತರ-ಸಾಕು. ಭೂಮಿಗೆ ತುಂಬಾ ವಿಷ ಸುರಿದುಬಿಟ್ಟಿದ್ದೀರಿ. ಎಲ್ಲೋ ಅಲ್ಪಸ್ವಲ್ಪ ಕೀಟಬಾದೆಯಿದ್ದರೆ ಸದ್ಯಕ್ಕಂತೂ ಏನೂ ಬೇಡ. ಆಗ ನಾನು-ಈ ವರ್ಷವಂತೂ ಹೀಗೆ ಆಯಿತು-ಮುಂದಿನವರ್ಷ ಕೀಟಬಾದೆ ಬಗ್ಗೆ ಮುಂಜಾಗರೂಕತೆ ತೆಗೆದುಕೊಳ್ಳೋಣ-ಯಾವುದಾದರೊಂದು ಒಳ್ಳೇ ಕೀಟನಾಶಕವನ್ನು ಗೊಂಚಲು ಹೊರಡುವ ಸಮಯದಲ್ಲೇ ಸ್ಪ್ರೇ ಮಾಡಿಬಿಡೋಣವೆಂದು ಮನದಲ್ಲೇ ಆಲೋಚಿಸಿ-ಆಯಿತು, ಇವೆಲ್ಲದಕ್ಕಿಂತ ಕಡಿಮೆ ಹಾನಿಕಾರಕ ಹಾಗೂ ಕಡಿಮೆ ವಿಷದ ಕೀಟನಾಶಕ ಯಾವುದಾದರೂ ಇದ್ದರೆ ಹೇಳಿ. ಬರುವ ವರ್ಷ ಪ್ರಾರಂಬದಲ್ಲೇ ವನಿಲ್ಲಾ ಬೀಳುಗಳಿಗೆ ಸ್ಪ್ರೇ ಮಾಡುತ್ತೇವೆ-ಎಂದು ಕೇಳಿದಾಗ ಶ್ರೀಯುತರಿಂದ ಬಂದ ಉತ್ತರ-ಒಮ್ಮೆ ನನಗೇ ತುಂಬಾ ಆಶ್ಚರ್ಯವಾಯಿತು-ಎಂಡೋಸಲ್ಫಾನ್(!!!!!!!!). ಎಂಡೋಸಲ್ಫಾನ್ ಸ್ಪ್ರೇ ಮಾಡಿ.ಎಲ್ಲದಕ್ಕಿಂತ ಅದೇ ಕಡಿಮೆ ಹಾನಿಕಾರಕ ಎಂದು.
           ಹೌದು. ಇದೊಂದು ವಿಚಿತ್ರ. ಆದರೂ ಸತ್ಯ!!! ಎಲ್ಲಾ ಕೀಟನಾಶಕಗಳೂ ವಿಷವೇ. ಆದರೆ ಇಂದು ಮಾರುಕಟ್ಟೆಯಲ್ಲಿ ಸಿಗುವ (ನೀವು ಹಗಲಲ್ಲಿ ಈ ಬ್ಲಾಗ್ ಓದುತ್ತಿದ್ದರೆ-ಈ ಕ್ಷಣದಲ್ಲಿ ಸಾವಿರಾರು ರೈತರಿಂದ ಸಿಂಪಡನೆಯಾಗುತ್ತಿರುವ)- ಮಾನೋಕ್ರೋಟೋಪಾಸ್,ರೋಗಾರ್ -ಮೊದಲಾದ ಹೆಚ್ಚಿನ ಎಲ್ಲಾ ಕೀಟನಾಶಕಗಳಿಗಿಂತ ಎಂಡೋಸಲ್ಫಾನ್ ಕಡಿಮೆ ವಿಷದ್ದು ಹಾಗೂ ಹಾಗಾಗಿ ಅವೆಲ್ಲಕ್ಕೆ ಹೋಲಿಸಿದರೆ ಒಳ್ಳೆಯದು!!!! ಇನ್ನೊಂದು ರೀತಿಯಲ್ಲಿ ಹೇಳುವುದಾದರೆ-ನಾವು (ದಿನನಿತ್ಯ) ತಿನ್ನುವ ದೋಸೆ,ಹುಳಿ,ಸಾಂಬಾರು,ಸಾರು,ತರಕಾರಿ ಪಲ್ಯ,ಕೆಲವು ಹಣ್ಣುಗಳು (ಉದ್ದು-ತೊಗರಿ ಗಿಡಗಳಿಗೆ, ತರಕಾರಿ ಗಿಡಗಳಿಗೆ ಕಾಲಕಾಲಕ್ಕೆ ಮೇಲೆ ಹೇಳಿದ ಕೀಟನಾಶಕ/ಶಿಲೀಂದ್ರನಾಶಕಗಳನ್ನು ನಿರೀಕ್ಷಿತ ಪಸಲು ಪಡೆಯಲು ಹೆಚ್ಚಿನ ಎಲ್ಲಾ ರೈತರು ಸ್ಪ್ರೇ ಮಾಡೇಮಾಡಿರುತ್ತಾರೆ!!!)-ಕುಡಿಯುವ ಹಾಲು (ದನಗಳಿಗೆ ದಿನಾ ಹಾಕುವ ಹತ್ತಿ,ಶೇಂಗಾ ಹಿಂಡಿಗಳಲ್ಲಿ ಹತ್ತಿ ಹಾಗೂ ನೆಲಗಡಲೆ ಗಿಡಗಳಿಗೆ ಹೊಡೆದ ಕೀಟನಾಶಕಗಳ ಅಂಶ ಇದ್ದೇಇರುತ್ತೆ!!)-ಇವೆಲ್ಲದರಲ್ಲೂ ಎಂಡೋಸಲ್ಫಾನ್ ಗಿಂತ ಹೆಚ್ಚು ವಿಷದ ಹಾಗೂ ಅಪಾಯಕಾರಿಯಾದ ಕೀಟನಾಶಕಗಳು ಸಾದಾರಣವಾಗಿ ಇದ್ದೇ ಇರುತ್ತವೆ. ಪಾಪ ಎಂಡೋಸಲ್ಫಾನ್ ಮಾತ್ರ ನಿಷೇದಕ್ಕೊಳಗಾಗಿದೆ!!! ಎಷ್ಟೊಂದು ವಿಚಿತ್ರ ಅಲ್ವಾ?? ನಂಬಲೇ ಕಷ್ಟವಾಗುತ್ತದೆ.
           ಶ್ರೀಯುತರು ಹಾಗೆಂದಕೂಡಲೇ ಅವರು ಹೇಳಿದ್ದು ಸತ್ಯವಿರಬಹುದೇನೋ ಎಂದು ನಾನು ನಂಬಿದಂತೆ ನೀವೂ ನಂಬಬೇಕು ಎಂದು ನಾನು ಹೇಳುತ್ತಿಲ್ಲ. ಈ ಬ್ಲಾಗ್ ಓದುಗರ್ಯಾರಾದರೂ ಕೀಟನಾಶಕಗಳ ವಿಷಯದಲ್ಲಿ ತಜ್ಞರಾಗಿದ್ದರೆ ಅಥವಾ ಆ ವಿಷಯದಲ್ಲಿ ಹೆಚ್ಚು ತಿಳಿದುಕೊಂಡವರಿದ್ದರೆ ಎಂಡೋಸಲ್ಫಾನ್ ಬೇರೆಲ್ಲಾ ಕೀಟನಾಶಕಗಳಿಗಿಂತ ಕಡಿಮೆ ಹಾನಿಕಾರಕ ಎಂಬ ವಿಷಯ ಸತ್ಯವೋ ಸುಳ್ಳೋ ಎಂಬುದನ್ನು ನಮ್ಮೊಂದಿಗೆ ಹಂಚಿಕೊಂಡರೆ ಅನುಕೂಲ. ಅಥವಾ ಓದುಗರ್ಯಾರಾದರೂ ತಮ್ಮ ಪರಿಚಯದ ಈ ವಿಷಯದ ಬಗ್ಗೆ ಹೆಚ್ಚು ತಿಳಿದುಕೊಂಡ ವ್ಯಕ್ತಿಗಳಿಗೆ ಈ ಲೇಖನವನ್ನು ಕಳಿಸಿ/ಅಥವಾ ವಿಷಯ ಕೇಳಿ ಅವರ ಅಭಿಪ್ರಾಯ ತಿಳಿದುಕೊಳ್ಳಬಹುದು. (ನನ್ನ ಬ್ಲಾಗ್ ಬರಹಕ್ಕೆ ಯಾರುಬೇಕಾದರೂ ಕಾಮೆಂಟ್ ಬರೆಯಲಾಗುವಂತೆ ಸೆಟ್ಟಿಂಗ್ ಮಾಡಿದ್ದೇನೆ)
            ಮಾದ್ಯಮದಲ್ಲಿ ಎಂಡೋಸಲ್ಫಾನ್ ದುರಂತವನ್ನು ಕಣ್ಣಾರೆ ನೋಡಿರುವ ನಿಮಗೆ ಒಂದು ಪ್ರಶ್ನೆ ಮೂಡಬಹುದು. ಹಾಗಾದರೆ ಕಾಸರಗೋಡಿನಲ್ಲಿ ಗೇರು ಮರಗಳಿಗೆ ಎಂಡೋಸಲ್ಫಾನ್ ಹೊಡೆದಿದ್ದು ಸುಳ್ಳೇ? ಆ ಜಾಗದಲ್ಲಿ ವಿಕಲಾಂಗತೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ಸುಳ್ಳೇ?? ಅವರೆಲ್ಲಾ ನರಳುತ್ತಿರುವುದು ಸುಳ್ಳೇ??? ಪಡ್ರೆ ಸುತ್ತಮುತ್ತ ಗೇರುಮರಗಳಿಗೆ ಎಂಡೋಸಲ್ಫಾನ್ ಸಿಂಪಡಿಸಿದ್ದು ಸತ್ಯ. ಕೆಲವೊಂದು ವರದಿಗಳ ಪ್ರಕಾರ ಅಲ್ಲೆಲ್ಲ ವಿಕಲಾಂಗತೆ ಹೆಚ್ಚಿದ್ದದ್ದೂ ಸತ್ಯವಿರಬಹುದು. (ಬಹುಷಃ) ಕಾರಣ ಎಂಡೋಸಲ್ಫಾನ್ ಗಿಂತ ಅದನ್ನು ಸಿಂಪಡಿಸಿದ ರೀತಿಯದ್ದು!!!!. ಚಿಕ್ಕ ವಿಮಾನವೋ ಹೆಲಿಕ್ಯಾಪ್ಟರೋ ಯಾವುದೋ ಒಂದರ ಮೂಲಕ ಎತ್ತರದಿಂದ ಮರಗಳೆಲ್ಲದರ ಮೇಲೆ ಮೇಲಿನಿಂದ ಬೀಳುವಂತೆ ಸಿಂಪಡಿಸಿದ್ದು ಆ ರೀತಿ ಸಿಂಪಡಿಸಿದ್ದರಿಂದ ಕುಡಿಯುವ ನೀರಿಗೋ ಅಥವಾ ನೀರಿನ ಮೂಲಕ್ಕೋ ಹೆಚ್ಚಿನ ಪ್ರಮಾಣದಲ್ಲಿ ಸೇರಿ ವಿಕಲಾಂಗಕತೆಗೆ ಕಾರಣವಾಗಿರಬಹುದು. 
         (ಹೆಚ್ಚಿನ ಮಾಹಿತಿ ಬಯಸುವವರಿಗಾಗಿ- ದಿನನಿತ್ಯ ಸಾವಿರಾರು ಲೀಟರ್ ಭೂಮಿಗೆ ಸುರಿಯಲ್ಪಡುತ್ತಿರುವ ಮಾನೋಕ್ರೋಟೋಪಾಸ್ ಹಾಗೂ ಅತ್ಯಂತ ಕೆಟ್ಟದ್ದೆಂದು ನಿಷೇದಕ್ಕೊಳಗಾಗಿರುವ ಎಂಡೋಸಲ್ಫಾನ್ ಇವೆರಡರ ವಿಷತೆ () ವಿಶ್ಲೇಷಣೆ- ಮಾನೋಕ್ರೋಟೋಪಾಸ್- World Health Organization (WHO) Acute Hazard Rankings (???ಪ್ರಕಾರ 1b (Highly hazardous) (ಹೆಚ್ಚಿನ ಮಾಹಿತಿ).  ಎಂಡೋಸಲ್ಫಾನ್ ranking - 2 (Moderately hazardous) (ಹೆಚ್ಚಿನ ಮಾಹಿತಿ)!!!!!)
        ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ-ಅನಿಸಿಕೆಗಳಿಗೆ ಕಾತುರನಾಗಿದ್ದೇನೆ.
 

19 comments:

  1. ಮಾಚಿಕೊಪ್ಪರೆ ನಮಸ್ಕಾರ,
    ನನ್ನ ಅಭಿಪ್ರಾಯದಲ್ಲಿ ಸಾವಯವ ಕೃಷಿಗೆ ಪ್ರೋತ್ಸಾಹ ಕೊಟ್ಟು ಎಲ್ಲಾ ತರಹದ ಹಾನಿಕಾರಕ ರಾಸಾಯನಿಕ ಕ್ರಿಮನಾಷಕಗಳನ್ನು ನಿಷೇಧಿಸುವುದು ಒಳ್ಳೆಯದಲ್ಲವೆ?

    'ಅಡಿಕೆ ಪತ್ರಿಕೆ'ಯ ನಾ.ಕಾರಂತ ಪೆರಾಜೆಯವರನ್ನು (http://hasirumatu.blogspot.com/) ಈ ಲೇಖನಕ್ಕೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು, ಕೇಳಿಕೊಂಡಿದ್ದೇನೆ.

    ReplyDelete
  2. ಎಂಡೋಸಲ್ಫಾನಕ್ಕಿಂತ ಹೆಚ್ಚಿನ ವಿಷದ ಕೀಟನಾಶಕ ನಮ್ಮ ಆಹಾರ ಪದಾರ್ಥಗಳಲ್ಲಿ ಸೇರಿರುತ್ತದೆ ಎಂದು ತಿಳಿದು ಆಶ್ಚರ್ಯವಾಯಿತು. ಹೆಲಿಕಾಪ್ಟರಗಳ ಮೂಲಕ ಸಿಂಪರಣೆ ಮಾಡಿದಾಗ, ಈ ವಿಷವು ಎಲ್ಲೆಡೆ ಹರಡುತ್ತದೆ ಎಂದು ನನಗೂ ಅನಿಸಿತ್ತು. ರಾಸಾಯನಿಕ ಕೀಟನಾಶಕಗಳ ಬದಲಾಗಿ biological ಕೀಟನಾಶಕಗಳನ್ನು ಅಭಿವೃದ್ಧಿಪಡಿಸುವದು ಸಮಂಜಸ ಉಪಾಯವಾಗಬಹುದು.

    ReplyDelete
  3. ನಾವು ದಿನನಿತ್ಯ ಎಷ್ಟು ವಿಷವನ್ನು ತಿನ್ನುತ್ತೇವೋ ಈ ಕೀಟನಾಶಕಗಳ ಹಾವಳಿಯಿಂದ. ಅದಲ್ಲದೆ ಪರಿಸರದ ಸಮತೋಲವನ್ನು ಇನ್ನಿಲ್ಲದಂತೆ ಹಾಳುಗೆಡವುತ್ತಿದ್ದೇವೆ. ನೈಸರ್ಗಿಕವಾದ ಪರಿಹಾರ ಕಂಡುಕೊಳ್ಳುವುದೊಂದೇ ಪರಿಹಾರ ಅನ್ನಿಸುತ್ತದೆ.

    ReplyDelete
  4. ಸಮಂಜಸವಾದ ಬರಹ.ಇಲ್ಲಿ ಬರುವ ಪ್ರತಿಕ್ರಿಯೆಗಳಿಗಾಗಿ ಎದುರುನೋಡುತ್ತಿದ್ದೇನೆ.ನಿಮ್ಮ ಕಾಳಜಿಗೆ ಧನ್ಯವಾದಗಳು.

    ReplyDelete
  5. ಪ್ರೀತಿಯ ಸಹೋದರ ನಿಮ್ಮ ಲೇಖನ ಎನ್ದೊಸಲ್ಪ್ಹಾನ್ ಬಗ್ಗೆ ಇನ್ನೂ ಸ್ವಲ್ಪ ಸ್ಪಷ್ಟವಾಗಿರಬೇಕಿತ್ತು ಇದು ನನ್ನ ಅನಿಸಿಕೆ. ನನ್ನ ಅಭಿಪ್ರಾಯದಲ್ಲಿ ಯಾವುದೇ ಪರಿಸರದ ಮಣ್ಣಿನಲ್ಲಿ ಆ ಮಣ್ಣಿನ ಗುಣಲಕ್ಷಣಗಳ ಆಧಾರದಂತೆ ಅಲ್ಲಿನ ಹವಾಮಾನಕ್ಕೆ ಒಗ್ಗುವ ಬೆಳೆ ಬೆಳೆಯುವುದು ಸೂಕ್ತ ಅಲ್ಲವೇ , ಇಂದು ಯಾವುದೇ ಬೆಲೆಯಲ್ಲಿ ದುಡ್ಡು ಬರುತ್ತೆ ಅಂದ್ರೆ ಎಲ್ಲಾ ಪ್ರದೇಶಗಳಲ್ಲೂ ಅದನ್ನು ಬೆಳೆಯಲು ಹೋಗುತ್ತಾರೆ, ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಯಾರೂ ಯೋಚಿಸುವುದಿಲ್ಲಾ . ಆ ಪ್ರದೇಶಕ್ಕೆ ಒಗ್ಗದ ಬೆಲೆ ಬೆಳೆಯಲು ಹೋದಾಗ ಸಹಜವಾಗಿ ಆ ಬೆಳೆ ತಿನ್ನಲು ಹೊಸ ಕೀಟಗಳ ಆಗಮನ ಆಗುತ್ತದೆ.ಅದನ್ನು ನಿಯಂತ್ರಿಸಲು ರಾಸಾಯನಿಕಗಳ ಬಳಕೆಯಾಗಿ ಭೂಮಿಗೆ ಇನ್ನಷ್ಟು ವಿಷ ತುಂಬಿ ಅದರ ಓದಲ ಫಲವತ್ತತೆ ಹಾಳಾಗುತ್ತದೆ.ಕೊನೆಗೆ ಯಾವ ಬೆಳೆ ಬೆಳೆಯಲು ಆಗದ ಬಂಜರು ಭೂಮಿಯಾಗುವ ಸಂಭವ ಇರುತ್ತದೆ.ಹಾಗು ಹಾವಾಮಾನ ವೈಪರಿತ್ಯಕ್ಕೂ ಇದು ದಾರಿಯಾಗುತ್ತದೆ.ಬಹುಷಃ ನಮ್ಮ ದಾಹಕ್ಕೆ ಭೂಮಿ ಬಲಿಯಾಗುತ್ತಿದೆ ಅನ್ನಿಸುತ್ತದೆ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  6. ವಿಷಯದ ಹಿಂದೆ ಮುಂದೆ ಆಚೆ ಈಚೆಯ ಅರಿವಿಲ್ಲದೇ ಯಾರೋ ಹೇಳಿದ್ದನ್ನೇ ನಂಬಿ ಏನೇನೋ ಬರೆಯುವವರ ನಡುವೆ ಒಂದಿಷ್ಟು ಸಂಶೋಧನೆ ಮಾಡಿ ಬರೆದು ಎಲ್ಲರ ಅಭಿಪ್ರಾಯಕ್ಕೆ ಮ(ನ್ನ)ಣೆ ಹಾಕಿರುವ ನಿಮ್ಮ ಬರಹ ಓದಿ ನಿಜಕ್ಕೂ ಖುಷಿಯಾಯ್ತು.....

    ನಿಜ. ಎಂಡೋಗಿಂತ ಅಪಾಯಕಾರಿಯಾದ ಎಷ್ಟೋ ಕೀಟನಾಶಕಗಳನ್ನು ನಾವಿಂದು ಬಳಸುತ್ತಿದ್ದೇವೆ. ನಮಗೆ ಗೊತ್ತಿಲ್ಲದೇ ಸೇವಿಸುತ್ತಿದ್ದೇವೆ. ಹಾಗಂತ ಕಾಸರಗೋಡಿನ ದುರಂತಕ್ಕೆ ಅದು ಕಾರಣವಲ್ಲ ಎಂದು ಹೇಳುತ್ತಿಲ್ಲ.ಆ ಬಗ್ಗೆ ನಿಜವಾದ ತಜ್ಙರ ಅಧ್ಯನ ಇನ್ನೂ ಆಗಿಲ್ಲ. ಇದುವರೆಗೆ ಮಾಡಿದವರೆಲ್ಲ ಕೀಟನಾಶಕಗಳ ಬಗ್ಗೆ ವೈಜ್ಙಾನಿಕವಾಗಿ ಗೊತ್ತಿಲ್ಲದೇ ಇದ್ದವರು. ಕೀಟ ತಜ್ಣ್ಗರಿಗೆ ಕೆಮಿಕಲ್ಲುಗಳ ಬಗ್ಗೆ, ಅವುಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಗೊತ್ತಿರುವುದಿಲ್ಲ. ಆದರೂ ಕೀಟನಾಶಕಗಳನ್ನು ರೆಕಮೆಂಡ್ ಮಾದುತ್ತಾರೆ.ಇದು ನಮ್ಮ ಪರಿಸ್ಥಿತಿ!!

    ಮತ್ತೂ ಅಪಾಯಕಾರಿ ಸಂಗತಿಯೆಂದರೆ ಮುಂದಿನ ಪೀಳಿಗೆಯ ಜವಾಬ್ದಾರಿಯುತ ಕೃಷಿ ವಿಜ್ಙಾನಿಗಳನ್ನು ತಯಾರು ಮಾಡುವ ಜವಾಬ್ದಾರಿಯುಳ್ಳ ಕ್ರಷಿ ಕಾಲೇಜುಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ. ವಿಧ್ಯಾರ್ಥಿಗಳನ್ನು ಬಿಡಿ. ಸ್ವತಃ ಅಲ್ಲಿನ ಬಹುತೇಕ ಪ್ರಧ್ಯಾಪಕ ಕಮ್ ವಿಜ್ಙಾನಿಗಳಿಗೇ ಈ ಬಗ್ಗೆ ಗೊತ್ತಿಲ್ಲ...!

    ರಾಸಾಯನಿಕ ಕೃಷಿ ಹಾನಿಕಾರಕ ಹೌದು ಎಂಬುದರಲ್ಲಿ ಎರೆಡು ಮಾತಿಲ್ಲ. ಹಾಗಂತ ಸಾವಯವದಿಂದಲೇ ಎಲ್ಲವನ್ನೂ ನಿಯಂತ್ರಣ ಮಾಡಿ ಬೆಳೆಯುತ್ತಿರುವ ಜನಸಂಖ್ಯೆಗೆ ಉಣಿಸುತ್ತೇವೆಂಬುದೂ ಅಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಬೇಕಿರುವುದು ಇವೆರೆಡರ ಮಧ್ಯದ ಹಾದಿ. ರಾಸಾಯನಿಕಗಳ ಜವಾಬ್ದಾರಿಯಿತ ಬಳಕೆ.

    ಅಮೃತವೂ ಅತಿಯಾದರೆ ವಿಷವಾಗುತ್ತದೆ. ಅತ್ಯಲ್ಪ ಪ್ರಮಾಣದಲ್ಲಿ ವಿಷವೂ ಅಮೃತವಾಗಬಹುದು!!

    -ಟೀಂ ಯುವಲಹರಿ,ಕೃಷಿ ಮಹಾವಿದ್ಯಾಲಯ, ಹಾಸನ

    ReplyDelete
  7. ಎಂಡೋಗಿಂತ ಹಾನಿಕಾರಕ ಕೀಟನಾಶಕವಿದೆಯೆಂದು ಹೇಳಿದ್ದೀರಿ.ಇರಬಹುದು ಆದರೆ ಇದು ಇದರಿಂದ ಆದ ಹಾಗೂ ಆಗುತ್ತಿರುವ ಹಾನಿಯ ಪ್ರಮಾಣವನ್ನು ಕಡಿಮೆ ಗೊಳಿಸುವುದಿಲ್ಲಾ. ನಿಮ್ಮ ಲೇಖನದ ಪ್ರಾರಂಭವೇ ನಿಮ್ಮ ಪಕ್ಷಪಾತತನವನ್ನು ಎತ್ತಿ ತೋರಿಸುತ್ತದೆ.ನೀವು ಹೇಳಿದಂತೆ ಇದು (ಪಡ್ರೆ ಯಲ್ಲಿ)ಎಂದೋ ಆದ ವಿಷಯವಲ್ಲ ಇದು ಇಂದೂ ಕಾಣಬಹುದು.ನಿಮಗೆ ಅರಿವಿಲ್ಲದಿರಬಹುದು ಇದು ಕಾಸಗೋದು ಜಿಲ್ಲೆ ಯಲ್ಲಿ ಮಾತ್ರವಲ್ಲ ನಮ್ಮ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ , ಪಟ್ರಮೆ ಮತ್ತು ನಿಡ್ಲೆ ಗ್ರಾಮಗಳಲ್ಲೂ ನಡೆದಿದೆ. ಎಲ್ಲ ರಾಸಾಯನಿಕ ಕೀಟನಾಶಕಗಳು ಹಾನಿಕಾರಕ ಆದರೆ endo ದ ಪರಿಣಾಮ ನೇರವಾಗಿ ಕಾಣಬಹುದು.ಇನ್ನು ಸಿಂಪ ಡಿಸುವ ಕ್ರಮದಿಂದಾಗಿ ಜಾಸ್ತಿ ಹಾನಿಯಾಗುವುದಿಲ್ಲ ಆದರೆ ಏನು ಸಿಂಪ ಡಿಸುತ್ತಾರೆ ಅದರಿಂದ ಮಾತ್ರ. ಕಡಿಮೆ ಹಾನಿಕಾರಕವಾದ ಮಾತ್ರಕ್ಕೆ ಅದನ್ನು ನಿಷೇಧಿಸುವ ಅಗತ್ಯವಿಲ್ಲವೋ. ಇನ್ನು ಹಲವರು ಮುಖವಾಡಗಳು ಇದು endo ದ ಪರಿನಾಮವಲ್ಲ ಎಂದು ಹೇಳುತ್ತಾರೆ. ಹಾಗಾದರೆ ಇದು ಯಾಕೆ ಮತ್ತು ಯಾವುದರಿಂದ ಎಂದು ನಿಖರವಾಗಿ ಹೇಳಲು ಅವರಿಗೆ ಇದುವರೆಗೆ ಸಾಧ್ಯವಾಗಲಿಲ್ಲ . ಅಲ್ಲಿಯ ಜನಜೀವನ, ಪರಿಸರದ ಮೇಲೆ ನಡೆದ ಅತ್ಯಾಚಾರವನ್ನು ಸ್ವತಹ ನೋಡಿದವರಿಗಷ್ಟೇ ಅರ್ಥವಾಗಬಹುದೇನೋ.ಇಂತಹ ಪ್ರಾಮುಖ್ಯ ವಿಚಾರಗಳಲ್ಲಿ ಬರೆಯುವ ಲೇಖನ ಗಳು ಸಂಪೂರ್ಣ ಹಾಗೂ ನಿಖರವಾದ ಮಾಹಿತಿ ಕೊಡಬೇಕು ಮತ್ತು ಅಪೂರ್ಣ ಮಾಹಿತಿ ಕೊಟ್ಟು ಜನರನ್ನು ದಿಕ್ಕು ತಪ್ಪಿಸ ಬಾರದು.

    ReplyDelete
  8. ಸದಾಶಿವ ಅವರು ಬರೆದಿದ್ದು-"ಲೇಖನದ ಪ್ರಾರಂಭವೇ ನಿಮ್ಮ ಪಕ್ಷಪಾತತನವನ್ನು ಎತ್ತಿ ತೋರಿಸುತ್ತದೆ.ನೀವು ಹೇಳಿದಂತೆ ಇದು (ಪಡ್ರೆ ಯಲ್ಲಿ)ಎಂದೋ ಆದ ವಿಷಯವಲ್ಲ ಇದು ಇಂದೂ ಕಾಣಬಹುದು"
    ಎಂದೋ ಆದ ವಿಷಯಗಳ ಪರಿಣಾಮ ಇಂದೂ ಕಾಣುತ್ತಿರಬಹುದು. ಇಂದೂ ಆಗುತ್ತಿದೆಯೇ ಎಂದು (ಅಂದರೆ ೫-೬ ವರ್ಷದ ಈಚೆ ಹುಟ್ಟಿದ ಮಕ್ಕಳಲ್ಲಿ ಅಂಗವಿಕಲತೆ, ೫-೬ ವರ್ಷಗಳೀಚೆ ಜನಸಾಮಾನ್ಯರಲ್ಲಿ ವಿಕಲಾಂಗತೆಯ ಅಸಹಜ ಹೆಚ್ಚಳ) ಕೊಕ್ಕಡ,ಪಟ್ರಮೆ,ನಿಡ್ಲೆ ಹಾಗೂ ಪಡ್ರೆ ಗ್ರಾಮಸ್ಥರೇ ಹೇಳಬೇಕು.

    ReplyDelete
  9. ನಿಮ್ಮ ಲೇಖನ ಓದಿ ಗಾಭರಿಯಾಯಿತು.ಎಷ್ಟೊಂದು ವಿಷ ನಮ್ಮ ದೇಹವನ್ನು ಸೇರುತ್ತಿದೆಯಲ್ಲವೇ!ಈ ಎಲ್ಲ ವಿಷಗಳನ್ನೂ detoxify ಮಾಡುತ್ತಿರುವ ನಮ್ಮ ಲಿವರ್ ಮತ್ತು ಕಿಡ್ನಿ ಗಳಿಗೆ ನಮೋನ್ನಮಃ ಎನ್ನ ಬೇಕು.

    ReplyDelete
  10. Maachikoppa ravare,

    Samayochita lekhana, kelavu hosa vishyagalannu tilidukonde nimma lekhanada moolaka...

    ReplyDelete
  11. Endosulphan upayogisuvudakintha saavayuva krishi kade gamana harisuvudu suktha anisuttade..aarogyakku volleyadu...bhumige kuda yavude vishagalu seruvudilla..

    ReplyDelete
  12. ನಿಮ್ಮ ಅಭಿಪ್ರಾಯಗಳು ಸರಿಯೇ. ಕನಿಷ್ಟಪಕ್ಷ ನಮ್ಮ ಸರ್ಕಾರಕ್ಕೆ ಒಂದು ವಿಷಕಾರಿ ಕೀಟನಾಶಕವನ್ನು ನಿಷೇಧಿಸಲು ನಿರ್ಧಾರ ಕೈಗೊಳ್ಳಲು (ಅದರ ಪರಿಣಾಮ ಮಾಧ್ಯಮದಲ್ಲಿ ಪ್ರಕಟವಾದ ದಿನದಿಂದ ಹಿಡಿದು) 32 ವರ್ಷ ಬೇಕಾಯ್ತು!! ಸಾಮುದಾಯಿಕವಾಗಿ ನೋಡಿದರೆ, ಎಂಡೋಸಲ್ಫಾನ್ ವಿರುದ್ಧದ ಹೋರಾಟ ಒಂದು ಸಂಕೇತ ಮಾತ್ರ ಆಗಬೇಕು. ಎಲ್ಲ ರಾಸಾಯನಿಕಗಳ ಬಳಕೆಯನ್ನೂ ನಾವು ತಡೆಯಬೇಕು. ಆದರೆ ಎಂಡೋಸಲ್ಫಾನ್ ನಿಷೇಧವನ್ನು ಖಾಯಂಗೊಳಿಸಲೇ ಎಷ್ಟೆಲ್ಲ ಸಮಯ ಕಳೆಯುತ್ತಿದೆ ಎಂದರೆ ವಿಚಿತ್ರ ಅಲ್ಲವೆ? ನಿಮ್ಮ ಲೇಖನಕ್ಕಾಗಿ ವಂದನೆಗಳು.
    ಅಂದಹಾಗೆ ನಿಮ್ಮ ಬ್ಲಾಗಿನ ಇತರೆ ಲೇಖನಗಳನ್ನೂ ಗಮನಿಸಿದೆ. ತುಂಬಾ ಒಳ್ಳೆಯ ಶೈಲಿಯಲ್ಲಿ ಬರೆಯುತ್ತಿದ್ದೀರಿ. ಅಭಿನಂದನೆಗಳು.

    ReplyDelete
  13. www.elsevier.com/locate/gentox please see 2005 edition. You can also read the latest taranga issue.

    ReplyDelete
  14. i am sorry for you

    ReplyDelete
  15. ನಮ್ಮ ಹುಡುಗರಿಗೆ ಪಾಠ ಮಾಡಿದ ಮಮತಾ ಮೇಡಂ ಒಮ್ಮೆ ಹೇಳಿದ್ದರು. ಒಮ್ಮೆ ಒಬ್ಬನಿಗೆ ಹೊಡೆದರೆ ಎಲ್ಲ ಮಕ್ಕಳಲ್ಲಿ ಹೆದರಿಕೆ ಮೂಡಲು ಸಾಕಾಗುತ್ತದೆ. ಅಮೇಲೆ ನಮ್ಮ ಕೈಯಲ್ಲಿ ಕೋಲಿದ್ದರೆ ಸಾಕು – ಮಕ್ಕಳ ನಿಯಂತ್ರಣಕ್ಕೆ. ಹಾಗೆ ಈಗ ಎಂಡೊಗೆ ಹೊಡೆದರೆ ಉಳಿದ ಕೀಟನಾಶಕಗಳ ಬಗೆಗೂ ನಮ್ಮವರು ಎಚ್ಚರಿಕೆ ವಹಿಸುತ್ತಾರೆ.

    ಈಗ ಹೆಚ್ಚಿನ ಕೃಷಿಕರು ಕೀಟನಾಶಕವನ್ನೂ ಗಿಡಗಳ ಆಹಾರ ಅನ್ನುವ ಭ್ರಮೆಯಲ್ಲಿರುವ ಕಾರಣ ಒಮ್ಮೆ shock treatment ಖಂಡಿತಾ ಅಗತ್ಯ. ಈ ವಿಷಗಳ ಅಗತ್ಯವಿರುವುದಕ್ಕಿಂತ ಹಲವಾರು ಪಾಲು ಉಪಯೋಗಿಸುತ್ತಿದ್ದಾರೆ. ಹಾಗೆ ಹತ್ತು ವರ್ಷ ಹಿಂದೆ ನಮ್ಮಲ್ಲಿದ್ದ ಔಷದಿಗಳಾದ terramycin, tetrracyclin ಈಗ ಎಲ್ಲಿ ಹೋದವು ? ಅವು ಕ್ಷಮತೆ ಕಳಕೊಂಡಿವೆ ಎಂದಾದರೆ ನಲುವತ್ತು ವರ್ಷಗಳಿಂದ ಉಪಯೋಗಿಸುತ್ತಿರುವ ಎಂಡೋಸಲ್ಫನ್ ಇನ್ನೂ ಪ್ರಯೋಜನ ಇವೆಯೋ ? ಯಾರಾದರೂ ಇದನ್ನು ಪ್ರಯೋಗ ಮಾಡಿ ನೋಡಿದ್ದಾರಾ ? ಈ ತಯಾರಕರು ಪ್ರಾಮಾಣಿಕರಾಗಿದ್ದರೆ ವಿರೋದಿಸುವವರ ಮೇಲೆ ಏಕೆ ಬಲ ಹಾಗೂ ಭಯ ಪ್ರಯೋಗ ಮಾಡುತ್ತಾರೆ ?

    ರೈತರು ಎಚ್ಚರಿಕೆ ವಹಿಸಿದರೆ ನಾವೂ ಮಾರುಕಟ್ಟೆಯಿಂದ ದೈರ್ಯವಾಗಿ ತರಕಾರಿ ತರಬಹುದು. ತಿನ್ನಬಹುದು. ಈಗ ಭಯವಾಗುತ್ತದೆ.

    ReplyDelete
  16. ಗೋವಿಂದ ನೆಲ್ಯಾರುಗೆ-
    ಪ್ರಪಂಚದ ಮೊತ್ತಮೊದಲ ಆಂಟಿಬಯೋಟಿಕ್ ಪೆನ್ಸಿಲಿನ್ ಇನ್ನೂ ಇಂದೂ ಅತಿ ಹೆಚ್ಚು ಬಳಸಲ್ಪಡುತ್ತಿದೆ!!!!!

    ReplyDelete
  17. ಸುಬ್ರಹ್ಮಣ್ಯರೇ, ಜನನಿ ಭೂಮಿಯನ್ನು ಸಹಜವಾದ ಸಾವಯವ ಗೊಬ್ಬರದ ಬದಲು ಕೃತಕ ಗೊಬ್ಬರಗಳಿಂದ ಹಾಗೂ ರಾಸಾಯನಿಕಗಳಿಂದ ಕಲುಷಿತಗೊಳಿಸಿ ದುರಸ್ತಿ ಮಾಡಲಾಗದ ಹಂತಕ್ಕೆ ಈಗಾಗಲೇ ತಂದುಕೊಂಡಿದ್ದೇವೆ, ಇನ್ನೂ ಅದನ್ನೇ ಮುಂದುವರಿಸಿದರೆ ಪರಿಣಾಮವನ್ನು ನಾವೇ ಅನುಭವಿಸುತ್ತಾ ಅದಲ್ಲಾ ಇದು ಇದಲ್ಲಾ ಅದು ಎಂದುಕೊಳ್ಳುತ್ತಾ ಸಮಜಾಯಿಷಿ ಕೊಟ್ಟುಕೊಂಡು ಇರಬೇಕಷ್ಟೇ! ಲೇಖನ ಸಕಾಲಿಕವಾಗಿದೆ.

    ReplyDelete
  18. ಪತ್ರಿಕೆಗಳಲ್ಲಿ ಬರುತ್ತಿರುವ ಎಂಡೋ ನರಕ ನಿಜವಾಗಿ "ಹೆಲಿಕಾಪ್ಟರ್ ನರಕ" ಎಂದಾಗಬೇಕು. ಸರಕಾರಿ ಗೇರುತೋಟಕ್ಕೆ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಫಾನ್ ಸ್ಪ್ರೇ ಮಾಡಿದಾಗ ಅದು ಗೇರು ತೋಟ ಮಾತ್ರವಲ್ಲದೆ ಜನವಸತಿ ಪ್ರದೇಶಗಳು, ಇತರ ಬೆಳೆ, ನೀರಿನ ಮೂಲಗಳ ಮೇಲೆ ಬಿದ್ದು ಉಂಟಾದ ಹಾನಿಯೇ ಹೊರತು ಎಂಡೋಸಲ್ಫಾನಿನ ವಿಷಮತೆಯಿಂದಾದ ಹಾನಿಯಲ್ಲ. ಎಂಡೋ ಬದಲು ಇತರ (ನೀವು ಹೇಳಿದ ಮೊನೊಕ್ರೊಟೊಫಾಸ್) ಇತ್ಯಾದಿಗಳನ್ನು ಸ್ಪ್ರೇ ಮಾಡಿದ್ದರೆ ಹಾನಿ ಇನ್ನೂ ಅಧಿಕವಾಗಿರುತ್ತಿತ್ತು. ವಿದೇಶಗಳಲ್ಲಿ ವಿಶಾಲ ಪ್ರದೇಶಗಳಲ್ಲಿ ತೋಟಗಳಿದ್ದು, ಮಧ್ಯದಲ್ಲಿ ವಸತಿ ಪ್ರದೇಶಗಳು ಇತ್ಯಾದಿ ಇರುವುದಿಲ್ಲ. ವಿರಳವಾಗಿ ಇದ್ದರೂ ಅಂತಹ ಪ್ರದೇಶಗಳಲ್ಲಿ ಸ್ಪ್ರೇ ಆಗದಂತೆ ತಡೆಯಲು ಅಟೋಮೇಟೆದ್ ಸಿಸ್ಟಮ್ ಗಳು ಹೆಲಿಕಾಪ್ಟರಿನಲ್ಲಿ ಇರುತ್ತವೆ. ಈ ಬಗ್ಗೆ ಹೆಚ್ಚು ವಿವರಗಳು ಬೇಕಿದ್ದಲ್ಲಿ ಯೂ ಟ್ಯೂಬ್ ನಲ್ಲಿ ವೀಡಿಯೋಗಳು ಸಿಗುತ್ತವೆ. ನಮ್ಮ ಸರಕಾರಗಳಿಗೋ ವಿದೇಶದಲ್ಲಿರುವುದು ಪ್ರಶ್ನೆಮಾಡಬಾರದ ಪರಮಸತ್ಯ. ಅದಕ್ಕೇ ಈ ಹೆಲಿಕಾಪ್ಟರ್ ಸ್ಪ್ರೇ ಯನ್ನು ಇಲ್ಲಿ ಕೂಡ ಕಾಪಿ ಮಾಡಿದರು. ಅದರ ಪರಿಣಾಮವೇ ಎಂಡೋ ನರಕ. ಎಂಡೋ ವೃತ್ತಾಂತದ ಬಗೆಗಿನ ಯಾವುದೋ ಬ್ಲಾಗ್ ಗೆ ಇದೇ ರೀತಿ ಪ್ರತಿಕ್ರಿಯೆ ಬರೆದಿದ್ದೆ ನಾನು. ದುರದೃಷ್ಟವೆಂದರೆ ಪತ್ರಿಕೆ ಮತ್ತು ಇತರೆಡೆಗಳಲ್ಲಿ ನಿಜವಾದ ಸಮಸ್ಯೆ ಬಿಂಬಿತವಾಗದೇ ಎಂಡೋಕ್ರೈನ್ ಸ್ರವಿಕೆಯಿಂದಾದ (!!! :)) ಗಾಳಿ ಸುದ್ದಿಗಳೇ ಹೆಚ್ಚಾಗಿ ಬಿತ್ತರವಾಗುತ್ತವೆ. ಇದನ್ನು ಸಾಮಾನ್ಯ ಜನ ನಂಬುತ್ತಾರೆ ಕೂಡ.

    ಕೀಟನಾಶಕದ ವಿಷಮತೆಯನ್ನು ಅದರ ಡಬ್ಬಾ ಮೇಲಿನ ಕಲರ್ ಕೋಡ್ ನ ಮುಖಾಂತರ ತಿಳಿಯಬಹುದು. ಕೆಂಪಗಿದ್ದರೆ ಅತೀ ವಿಷ, ಹಳದಿ ಇದ್ದರೆ ಸಾಮಾನ್ಯ ವಿಷ, ನೀಲಿ ಇದ್ದರೆ ಅಲ್ಪ ವಿಷ ಮತ್ತು ಹಸಿರಾಗಿದ್ದರೆ ವಿಷರಹಿತವಾದದ್ದು. ನನಗೆ ನೆನಪಿರುವಂತೆ ಎಂಡೋ ಬಾಟಲಿಯಲ್ಲಿ ಹಳದಿ ಬಣ್ಣ ಇರುತ್ತದೆ. ಉಳಿದಂತೆ ವಿವರಣೆ ಅನಗತ್ಯ.

    ReplyDelete