Tuesday, October 18, 2011

ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............


              ಭ್ರಷ್ಟಾಚಾರದ ವಿರುದ್ದ ಹೋರಾಡಲು ಒಂದು ಹರಿತ ಆಯುಧಕ್ಕಾಗಿ ಉಪವಾಸ ಸತ್ಯಾಗ್ರಹಗಳೆಲ್ಲಾ ನಡೆದುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇನ್ನು ಸಿದ್ದವಾಗಿ ಬರಲಿರುವ ಲೋಕಪಾಲ್ ಮಸೂದೆ ಎಷ್ಟು ಹರಿತವೋ ಎಂಬುದನ್ನು ಕಾಲವೇ ಹೇಳಬೇಕು. ಭ್ರಷ್ಟಾಚಾರದ ವಿರುದ್ದ ಹೋರಾಡಲು ಈಗಾಗಲೇ ಒಂದು (ಸಾಕಷ್ಟು ಹರಿತವಾದ) ಆಯುದವಿದೆಯೆಂದು ಎಷ್ಟು ಜನಕ್ಕೆ ಗೊತ್ತು?? ಆ ಆಯುದವನ್ನು ಉಪಯೋಗಿಸಿ ಅಲ್ಲಿ ಎನು ನಡಿಯುತ್ತಿದೆ? ಎಂದು ತಿಳಿದುಕೊಂಡು ಭ್ರಷ್ಟಾಚಾರದ ಆಳವನ್ನು ಕಾಣಬಹುದು ಎಂಬುದು ಎಷ್ಟು ಜನರಿಗೆ ಗೊತ್ತಿದೆ?? ಆ ಆಯುದದ ಹೆಸರು ನಿಮಗೆಲ್ಲಾ ಎಲ್ಲೋ ಕೇಳಿ ಗೊತ್ತಿರಬಹುದು. ನಿಮ್ಮಲ್ಲಿ ಕೆಲವರಾದರೂ ಅದನ್ನು ಉಪಯೋಗಿಸಿಯೂ ಉಪಯೋಗಿಸಿರಬಹುದು. (ಕಾಮೆಂಟ್ ನಲ್ಲಿ ನಿಮ್ಮ ಅನುಭವ ಹೇಳಬಹುದು). ಅದೇ ಮಾಹಿತಿ ಹಕ್ಕು ಎಂಬ ಕಾನೂನು!!! ಈ ಲೇಖನ ಓದಿದ ಮೇಲೆ ಒಂದಿಬ್ಬರು ಇದನ್ನು ಉಪಯೋಗಿಸಿ ಅಲ್ಲಿ ಎನು ನಡಿಯುತ್ತಿದೆ ಎಂದು ತಿಳಿದುಕೊಂಡು ಸಂಬಂದಪಟ್ಟವರಿಗೆ ದೂರು ಕೊಟ್ಟರೆ ಕಾಮಗಾರಿಗಳು ಸ್ವಲ್ಪವಾದರೂ ಸರಿಯಾಗುತ್ತದೆ ಎಂಬುದೇ ನನ್ನ ಆಶಯ ಹಾಗೂ ನನ್ನ ಅನುಭವ. (ಹಾಗೆಲ್ಲಾ ಕಾಟಾಚಾರಕ್ಕೆ ಏನೇನೋ ಮಾಡದಂತೆ ಸ್ವಲ್ಪವಾದರೂ ಸರಿಯಾಗಿ ಕೆಲಸಮಾಡುವಂತೆ ಚುರುಕು ಮುಟ್ಟಿಸುತ್ತದೆ).ನಮ್ಮೂರ ರಸ್ತೆಯೊಂದರ ಕಳಪೆ ಡಾಮರ್ ಕಾಮಗಾರಿ ನಡೆದಾಗ - ಈ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ - ಕಾಮಗಾರಿಯ ಎಸ್ಟಿಮೆಶನ್ ತರಿಸಿ - ದೂರು ಕೊಡುತ್ತೇವೆಂದಾಗ – ಜಿಲ್ಲಾಪಂಚಾಯತ್ ಇಂಜೀನಿಯರ್ ಮತ್ತು ರಸ್ತೆ ಕಂಟ್ರಾಕ್ಟರ್ ನಮ್ಮ ಮನೆಯವರೆಗೂ ಪಾದಬೆಳೆಸಿ – ತಪ್ಪಾಗಿದ್ದನ್ನು ಒಪ್ಪಿಕೊಂಡು - ರಸ್ತೆಗೆ ಹೊಸದಾಗಿ ಜಲ್ಲಿ ಟಾರಿನ ಒಂದು ಪದರ ಹಾಕಿದ ವಿಷಯವೇ ಈ ಬ್ಲಾಗಿನ ಬರಹ.
ಟಾರ್ ಹಾಕಿದ್ದರೂ ಕೆಳಗೆ ಕಾಣಿಸುವ ದೊಡ್ಡಜಲ್ಲಿಕಲ್ಲುಗಳು!! 
            ಸುಮಾರು ಎರಡೂವರೆ ವರ್ಷದ ಕೆಳಗೆ ನಡೆದ ಘಟನೆ. ಬಸ್ಸುಗಳೋಡಾಡುವ ಮುಖ್ಯರಸ್ತೆಯಿಂದ ಎರಡೂವರೆ ಕಿ.ಮೀ. ದೂರವಿರುವ ನಮ್ಮೂರಿನ ಜಲ್ಲಿ ರಸ್ತೆಯ ಬದಿಗೆ ಅಲ್ಲಲ್ಲಿ ಲಾರಿಯಿಂದ ಕಲ್ಲುಗಳು ದಡದಡಾಂತ ಇಳಿಸಲ್ಪಟ್ಟವು. ನಾಲ್ಕೈದು ದಿನಗಳಲ್ಲಿ ಆ ದೊಡ್ಡ ಕಲ್ಲುಗಳನ್ನು ಸುತ್ತಿಗೆಯಲ್ಲಿ ಕುಟ್ಟಿ ಪುಡಿ ಮಾಡಲು ಒಂದೆರಡು ಲಂಬಾಣಿ ಕುಟುಂಬಗಳ ಆಗಮನವೂ ಆಯ್ತು. (ಸ್ವಲ್ಪ ಗಾಜುಗಣ್ಣಿನ ಬಿಳಿ ಕೆಂಪು ಮೈಬಣ್ಣದ ಅವರ ಚಿಳ್ಳೆಪಿಳ್ಳೆಗಳು – ಆಹಾ-ನೋಡಲು ಒಂದಕ್ಕಿಂತ ಒಂದು ಮುದ್ದಾಗಿದ್ದವು). ನೋಡುನೋಡುತ್ತಿದ್ದಂತೆಯೇ ಆ ಸುಡು ಬಿಸಿಲಿನಲ್ಲಿ ಮೂರು ಕೋಲಿನ ತಾತ್ಕಾಲಿಕ ಚಪ್ಪರ ಹಾಕಿಕೊಂಡು ಅದರಡಿ ಕೂತು ಆ ಕಲ್ಲುಗಳನ್ನು ಸುತ್ತಿಗೆಯಲ್ಲಿ ಒಡೆದು ಮುಷ್ಟಿಗಾತ್ರದ ಜಲ್ಲಿಗಳನ್ನಾಗಿ ಮಾಡಿದರು. ಐದಾರು ದಿನಗಳಲ್ಲೇ ಮತ್ತೊಂದಿಷ್ಟು ಜನರು, ರೋಡ್ ರೋಲರ್, ಡಾಮರ್ ಡ್ರಂಗಳು, ‘ಬೇಬಿಜೆಲ್ಲಿ’, ಡಾಮರ್-ಜಲ್ಲಿಕಲ್ಲು ಮಿಶ್ರಣ ಮಾಡುವ ಯಂತ್ರ-ಎಲ್ಲದರ ಆಗಮನವಾಯಿತು. ಹಳೆ ರಸ್ತೆಯನ್ನು ಅಗೆದು, ಅದಕ್ಕೆ ದೊಡ್ಡ ಜಲ್ಲಿ ಸುರಿದು, ರೋಡ್ ರೋಲರ್ ಓಡಿಸಿ, ಮಟ್ಟಮಾಡಿದಂತೆ ಮಾಡಿ, ಅದರಮೇಲೆ ಬೇಬಿಜಲ್ಲಿ ಡಾಂಬರ್ ಬಿಸಿ ಮಿಶ್ರಣ ಚೆಲ್ಲಿ, ಮತ್ತೊಂದೆರಡು ಬಾರಿ ರೋಡ್ ರೋಲರ್ ಓಡಿಸಿ, ಒಂದೂವರೆ ದಿನದಲ್ಲೇ ಟಾರ್ ರಸ್ತೆ ರೆಡಿಮಾಡಿ ಉಳಿದ (ಉಳಿಸಿದ) ಬೆಬಿಜಲ್ಲಿ,ಟಾರ್ ಡ್ರಂ ಎಲ್ಲಾ ಲಾರಿಗೆ ತುಂಬಿ ಕೆಲಸ ಮುಗಿಸಿ ಹೋದರು!!! ಚಿಕ್ಕಜಲ್ಲಿ ಹಾಗೂ ಡಾಂಬರ್ ಮಿಶ್ರಣ ಹಾಕಿದ್ದರೂ ಕೆಳಗೆ ಹಾಕಿದ್ದ ದೊಡ್ದಜಲ್ಲಿ ಕಾಣುತ್ತಿತ್ತು. ಸರಿಯಾಗಿ ಕಾಲಲ್ಲಿ ಒದ್ದರೆ ಎಲ್ಲಾ ಕಿತ್ತುಬರುವಂತಿತ್ತು. ಮಾಡುವಾಗ ಊರ ಜನ ಕೇಳಿದಾಗ – ಅದಿನ್ನೂ ಸೆಟ್ ಆಗಬೇಕು. ಕೆಲವೇ ದಿನದಲ್ಲಿ ಎಲ್ಲಾ ಸರಿಯಾಗಿ ಫಸ್ಟ್ ಕ್ಲಾಸ್ ಆಗುತ್ತದೆ – ಎಂಬ ಉತ್ತರ – ಮೇಸ್ತ್ರಿ ಕಡೆಯಿಂದ!!! ಶುದ್ದ ಕಳಪೆ ಕಾಮಗಾರಿ. ನಾನು ಮಾತ್ರ-ಅಲ್ಲಿ ಏನೂ ವೀರಾವೇಶದ ವಾಗ್ವಾದ ಮಾಡದೇ-ಆ ಕಾಮಗಾರಿ ಮಾಡುವಾಗಿನ ಫೋಟೋಗಳನ್ನ ತೆಗೆದಿಟ್ಟುಕೊಂಡೆ.
        ಈ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ ಬೇಕಾದ ಮಾಹಿತಿ ಕೇಳಲು ಸಂಬಂದಪಟ್ಟ ಕಛೇರಿಗಳಿಗೆ ಅಲೆಯುವ ಅವಶ್ಯಕತೆಯಿಲ್ಲ. ಒಂದು ರೂಪಾಯಿಗೆ ಕ್ಸೆರಾಕ್ಸ್ ಅಂಗಡಿಗಳಲ್ಲಿ ಸಿಗುವ ಮಾಹಿತಿ ಹಕ್ಕು ಫಾರಂ ತಂದು ಮನೆಯಲ್ಲೇ ಕೂತು ಭರ್ತಿಮಾಡಿ ಅಂಚೆ ಕಛೇರಿಯಿಂದ ಹತ್ತು ರೂಪಾಯಿ ಐ.ಪಿ.ಓ ತಂದು ಅದರೊಟ್ಟಿಗಿಟ್ಟು ಸಂಬಂದಪಟ್ಟ ಇಲಾಖೆಗೆ ಕೊರಿಯರ್ ಮಾಡಿದರೆ ಮುಗಿಯಿತು. ಒಂದು ತಿಂಗಳೊಳಗೇ ನಿಮ್ಮ ಮನೆಗೇ ಉತ್ತರ ಬರುತ್ತದೆ. (ಹಾಗೆ ಏನೂ ಉತ್ತರವೇ ಕೊಡದಿದ್ದರೆ ಅಧಿಕಾರಿಗಳು ದಿನಕ್ಕೆ ೨೫೦ ರೂಪಾಯಿ ದಂಡ ತೆರಬೇಕು). ಮಾಹಿತಿ ಹಕ್ಕು ಕಾನೂನನ್ನು ಮೊದಲ ಬಾರಿಗೆ ಬಳಸಿ ಜಿಲ್ಲಾ ಪಂಚಾಯತಿಯಿಂದ ಕಾಮಗಾರಿ ನಡೆದ ನಮ್ಮ ರಸ್ತೆಯ ಕೆಲಸದ ಎಸ್ಟಿಮೆಶನ್ ತರಿಸಿದೆ. (ಎಸ್ಟಿಮೆಶನ್=ಕಾಮಗಾರಿ ಹೇಗೆ ನಡೆಯಬೇಕು ಹಾಗೂ ಅದಕ್ಕೆ ಖರ್ಚೆಷ್ಟು ಎಂಬುದರ ಸಂಪೂರ್ಣ ವಿವರ). ಜೊತೆಗೆ ಜಲ್ಲಿ ಡಾಮರ್ ಕಾಮಗಾರಿ ಕಳಪೆಯಾದರೆ ಯಾರಿಗೆ ದೂರುಕೊಡಬೇಕೆಂಬ ಇನ್ನೊಂದು ಮಾಹಿತಿಯನ್ನೂ ಕೇಳಿದ್ದೆ!!!  ಪುಟವೊಂದಕ್ಕೆ ಎರಡು ರುಪಾಯಂತೆ (ಅದನ್ನೂ ಪೋಸ್ಟಲ್ ಐ.ಪಿ.ಓ. ಮೂಲಕ ಕೊರಿಯರ್ ಮಾಡಬೇಕು) ಐದಾರು ಪುಟಗಳ ಮಾಹಿತಿ ಕೈ ತಲುಪಿತು. ಎಸ್ಟಿಮೆಶನ್ ನೋಡಿದರೆ ನಮಗೆ ಗೊತ್ತಾಗುವುದು ಕಳಪೆ ಕಾಮಗಾರಿಯ ಸಂಪೂರ್ಣ ಮಾಹಿತಿ!!! ಪ್ರತಿ ಹಂತದಲ್ಲೂ ಕಳಪೆ ಹಾಗೂ ಕಾಟಾಚಾರದ ಕೆಲಸ ನಡೆದಿತ್ತು.
"ಕೆಲವೇ ದಿನದಲ್ಲಿ ಫಸ್ಟ್ ಕ್ಲಾಸ್ ಆಗುವ ರಸ್ತೆಯಂತೆ!!!"
          A4 ಸೈಜಿನ ಎರಡು ಪೇಪರ್ ತೆಗೆದುಕೊಂಡು – ಕಾಮಗಾರಿ ಯಾವ್ಯಾವ ಹಂತದಲ್ಲಿ ಎಷ್ಟೆಷ್ಟು ಕಳಪೆಯಾಗಿದೆಯೆಂದು ೧,೨,೩,೪..... ಎಂದು ಒಂದರಕೆಳಗೆ ಒಂದರಂತೆ ಸವಿಸ್ತಾರವಾಗಿ ಬರೆದುಕಾಮಗಾರಿ ನೂರಕ್ಕೆ ನೂರು ಎಸ್ಟಿಮೆಶನ್ ನಂತೆ ಮಾಡುವುದು ಕಷ್ಟಸಾದ್ಯವಾದರೂ ಸಂಪೂರ್ಣ ಕಳಪೆಯಾಗಿರುವುದರಿಂದ ದೂರುಕೊಡುವುದು ಅನಿವಾರ್ಯವಾಗಿದೆ. ಕಾಮಗಾರಿಯ ವಿವಿದ ಹಂತಗಳ ಫೋಟೊ ತೆಗೆದಿಟ್ಟುಕೊಂಡಿದ್ದು ಕಳಪೆಯಾಗಿದ್ದನ್ನು ಸರಿಪಡಿಸದಿದ್ದರೆ ಇಲಾಖೆಗೆ ಅಧಿಕೃತ ದೂರುಕೊಡಬೇಕಾಗುತ್ತದೆ. ಅಧಿಕೃತ ದೂರುಕೊಡುವ ಮೊದಲು (ಅಧಿಕೃತ ದೂರನ್ನು ಯಾರಿಗೆ ಕೊಡಬೇಕೆಂಬ ಮಾಹಿತಿಯನ್ನು ಮೊದಲೇ ಕೇಳಿಪಡೆದುಕೊಂಡಿದ್ದೆನಷ್ಟೇ!!) ನಿಮ್ಮ ಗಮನಕ್ಕೆ ಈ ಪತ್ರ – ಎಂಬ ಎಚ್ಚರಿಕೆಯೊಂದಿಗೆ ಪತ್ರವೊಂದನ್ನುಮೂರು ಪ್ರತಿಗಳನ್ನಾಗಿ ಕ್ಸೆರಾಕ್ಸ್ ಮಾಡಿ – ೧) ಜಿಲ್ಲಾ ಪಂಚಾಯತ್ ಇಂಜೀನಿಯರ್, ೨) ಜಿಲ್ಲಾ ಪಂಚಾಯತ್ ನಮ್ಮ ಕ್ಷೇತ್ರದ ಸದಸ್ಯರು ಹಾಗೂ ೩) ಕಾಮಗಾರಿ ಮಾಡಿದ ಕಂಟ್ರಾಕ್ಟರ್ – ಈ ಮೂರೂ ವಿಳಾಸಕ್ಕೆ ಕೊರಿಯರ್ ಮಾಡಿದೆ. ಸದಾ ನಗುಮೊಗದ ನಮ್ಮ ಘನವೆತ್ತ ಜಿಲ್ಲಾ ಪಂಚಾಯತ್ ಸದಸ್ಯರಿಂದ (ಈಗ ಮಾಜಿ) ಈವರೆಗೂ ಉತ್ತರ ಬಂದಿಲ್ಲ – ಉತ್ತರ ಕಳಿಸುವವರಿಗೆ ಕಷ್ಟವಾಗದಂತೆ ನನ್ನ ವಿಳಾಸ ಬರೆದಿದ್ದ ಐದು ರೂಪಾಯಿ ಪೋಸ್ಟ್ ಕವರ್ ಇಟ್ಟು ಕಳಿಸಿದ್ದರೂ ಕೂಡ!!!
        ಆದರೆ ಇಂಜೀನಿಯರ್ ಹಾಗೂ ಕಂಟ್ರಾಕ್ಟರ್ ಗೆ ಕಳಿಸಿದ್ದ ಪತ್ರ ಕೆಲಸಮಾಡಿತ್ತು. ನೀವು ಮಾಡಿದ ರಸ್ತೆ ಕಾಮಗಾರಿ ಕಳಪೆಯಾಗಿದೆಯೆಂದು ಗ್ರಾಮಸ್ಥರಿಂದ ದೂರು ಬಂದಿದ್ದು, ಮಳೆಗಾಲ ಕಳೆದ ನಂತರ ಸರಿಪಡಿಸದಿದ್ದರೆ ನಿಮ್ಮಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ – ಎಂದು ಇಂಜೀನಿಯರ್ ಕಂಟ್ರಾಕ್ಟರ್ಗೆ ಒಂದು ಪತ್ರ ಬರೆದು ಅದರ ನಕಲನ್ನು ನನಗೆ ಕಳಿಸಿದರು. ಕಂಟ್ರಾಕ್ಟರ್ ಕಡೆಯಿಂದಲೂ ಮಳೆಗಾಲ ಕಳೆದ ನಂತರ ಸರಿಪಡಿಸಿಕೊಡುವ ಆಶ್ವಾಸನೆಯ ಪತ್ರ ಬಂತು. ಇಷ್ಟೆಲ್ಲಾ ಓದಿ ನೀವು – ವಾವ್!!! ಆ ವರ್ಷ ಮಳೆಗಾಲ ಕಳೆದಕೂಡಲೇ ಕಂಟ್ರಾಕ್ಟರ್ ಬಂದು ರಸ್ತೆ ಸರಿಮಾಡಿಕೊಟ್ಟರು ತಾನೇ – ಎಂದು ಉದ್ಗಾರ ತೆಗೆಯಬೇಡಿ. ಮಳೆಗಾಲ ಮುಗಿದು ನಾಲ್ಕೈದು ತಿಂಗಳುಗಳಾದನಂತರವೂ ಅವರದ್ದು ಜಾಣಮರೆವು!!! ಆ ಜಾಣಮರೆವಿಗೆ ಔಷದಿಯಾಗಿ ಉಪಯೋಗಿಸಿದ್ದು ಮತ್ತೊಮ್ಮೆ ಮಾಹಿತಿಹಕ್ಕು ಕಾನೂನು!!! ಈ ಬಾರಿ ಕೇಳಿದ ಮಾಹಿತಿ – ರಸ್ತೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯ ಸಂಪೂರ್ಣ ವಿವರ (ಟೆಂಡರ್ ಕರೆದ ದಿನಾಂಕ, ತೆರೆದ ದಿನಾಂಕ, ಭಾಗವಹಿಸಿದ್ದ ಬಿಡ್ಡುದಾರರು, ಕೊಟ್ ಮಾಡಿದ ಬಿಡ್). ಚುರುಕು ಮುಟ್ಟಿತು. ಒಂದು ದಿನ (ನಾನು ಮನೆಯಲ್ಲಿರಲಿಲ್ಲ) ಕಂಟ್ರಾಕ್ಟರ್ ಹಾಗೂ ಇಂಜೀನಿಯರ್ ನಮ್ಮಮನೆಯವರೆಗೂ ಬಂದು – ಟಾರ್ ನ ಗುಣಮಟ್ಟ ಕಡಿಮೆಯಿದ್ದುದರಿಂದ ಹಾಗಾಗಿದ್ದು – ಎಂದು ಸ್ಪಷ್ಟೀಕರಣ ನೀಡಿ (!!!) ಇನ್ನೊಂದು ಪದರ ಟಾರ್ ಹಾಕಿ ಸರಿಪಡಿಸುವುದಾಗಿ ಹೇಳಿದರು. ಒಂದೆರೆಡು ದಿನಗಳಲ್ಲೇ ಮತ್ತೊಮ್ಮೆ ಲಾರಿ, ಬೇಬಿಜೆಲ್ಲಿ, ಟಾರ್ ಡ್ರಂಗಳು, ಟಾರ್ ಮತ್ತು ಜಲ್ಲಿ ಮಿಶ್ರಣಮಾಡುವ ಯಂತ್ರ, ರೋಡ್ ರೋಲರ್  ಹಾಗೂ ಕೆಲಸಗಾರರು – ಇವರೆಲ್ಲರ ಆಗಮನವಾಯಿತು. ರಸ್ತೆಯನ್ನೊಮ್ಮೆ ಗುಡಿಸಿ – ಹೊಸದಾಗಿ ಬಿಸಿ ಟಾರ್ ಜಲ್ಲಿ ಮಿಶ್ರಣ ಸುರಿದು – ಅದರಮೇಲೆ ರೋಡ್ ರೋಲರ್ ಓಡಿಸಿ – ರಸ್ತೆ ಸರಿಪಡಿಸಿದರು!!!! (ನಾಳೆ ನಮ್ಮೂರಿಗೆ ನೀವು ಬಂದಾಗ – ಎಲ್ಲಿ ಆ ಸೂಪರ್ ಸುಪ್ರಿಂ ರೋಡ್? ಎಂದು ಕೇಳಿದರೆ – ಇದು ಎರಡೂವರೆ ವರ್ಷ ಹಿಂದಿನ ಕಥೆ. ಮೂರ್ನಾಲ್ಕು ತಿಂಗಳಲ್ಲೇ ಹಾಳಾಗುವ ಬದಲು ಈಗ ಕಿತ್ತುಹೋಗಲು ಶುರುವಾಗಿದೆ!!!)
           ಸ್ವಲ್ಪ ಕಲ್ಪಿಸಿಕೊಳ್ಳೋಣ. ಮಾಹಿತಿ ಹಕ್ಕು ಎಂಬ ಕಾನೂನೇ ಇಲ್ಲದಿದ್ದರೆ? ಕಳಪೆ ರಸ್ತೆ ಕಾಮಗಾರಿ ದೂರುಕೊಡಲು ನಾನು ಜಿಲ್ಲಾಪಂಚಾಯತ್ ಆಫೀಸಿಗೆ ಹೋಗುವುದು. ಎಸ್ಟಿಮೆಶನ್ ಎಲ್ಲಿ ಸಿಗುತ್ತೆ?ಎಲ್ಲಿ ದೂರು ಕೊಡುವುದು? – ಎಂದು ನಾನು ಕೇಳುವುದು!! ಕೇಳುತ್ತಿರುವಂತೆಯೇ (ಯಾವನೋ ಒಬ್ಬ ಎಲ್ಲಾ ಸರಿಮಾಡುವವನು ಬಂದ – ಎಂಬಂತೆ ಆಶ್ಚರ್ಯ ಹಾಗು ಅಸಡ್ಡೆಯಿಂದ ನನ್ನನ್ನು ನೋಡುತ್ತಾ) ಅಲ್ಲಿ ಕೂತ ಯಾವನೋ ಒಬ್ಬ ಸಿಬ್ಬಂದಿ – ಕಿಸಕ್ಕನೆ ನಗುತ್ತಾ – ಸಾಹೇಬ್ರಿಲ್ಲ, ನಾಳೆ ಬನ್ನಿ – ಎಂದು ಹೇಳುವುದು. ಯಾವ ಎಸ್ಟಿಮೆಶನ್ ಮಾಹಿತಿ ಹಕ್ಕು ಕಾನೂನಿನ ಸಹಾಯದಿಂದ – ಇಪ್ಪತ್ತು ಮೂವತ್ತು ರೂಪಾಯಿಗೆ ನಮ್ಮ ಮನೆಬಾಗಿಲಿಗೆ ಬರುತ್ತದೋ – ಅದೇ ಎಸ್ಟಿಮೆಶನ್ ಗೆ ಆ ಕಾನೂನು ಇಲ್ಲದಿದ್ದರೆ - ನಾವು ಎಷ್ಟೊಂದು ಕಷ್ಟಪಡಬೇಕಾಗುತ್ತಿತ್ತು ಅಲ್ವಾ. 
            ಎಲ್ಲರಿಗೂ ಗೊತ್ತಿರುವ ಸತ್ಯವೇನೆಂದರೆ (ಹೆಚ್ಚಿನ ಎಲ್ಲಾ ಕಾಮಗಾರಿಗಳಲ್ಲಿ) ಕಾಮಗಾರಿಗೆಂದು ಬಿಡುಗಡೆಯಾಗುವ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗಿರುವುದಿಲ್ಲ. ಕಾಮಗಾರಿಗಳನ್ನು ಕಾಟಾಚಾರಕ್ಕೆಮಾಡಿ ಇಂಜೀನಿಯರ್, ಕಂಟ್ರಾಕ್ಟರ್ ಹಾಗು (ಹೆಚ್ಚಿನ ಸಂದರ್ಭದಲ್ಲಿ) ರಾಜಕಾರಣಿ – ಈ ಮೂರೂ ಜನ ಸೇರಿ ದುಡ್ಡು ಹೊಡೆಯುತ್ತಾರೆ. ಈ ಮೂರೂ ಜನರಲ್ಲಿ ರಾಜಕಾರಣಿ ಸ್ವಲ್ಪ ಸುರಕ್ಷಿತ. ಅವರು ತಿಂದಿದ್ದು ಗೊತ್ತೇ ಆಗುವುದಿಲ್ಲ!!! (ಕಂಡಲ್ಲೆಲ್ಲಾ ನಮಸ್ಕಾರ ಮಾಡುವ ಸದಾ ನಯವಂತಿಕೆ ಪ್ರದರ್ಶಿಸುವ ರಾಜಕಾರಣಿ (ಸಾದಾರಣವಾಗಿ) ದೊಡ್ಡ ಕಳ್ಳ ಆಗಿರುತ್ತಾನೆ). ಆದರೆ ಕಂಟ್ರಾಕ್ಟರ್ ಹಾಗೂ ಇಂಜೀನಿಯರ್ – ಒಬ್ಬ ಕಳಪೆ ಕಾಮಗಾರಿ ಮಾಡಿದವನು ಹಾಗೂ ಮತ್ತೊಬ್ಬ ಅದು ಸರಿಯಿದೆ. ಹಣ ಮಂಜೂರು ಮಾಡಬಹುದು ಎಂದು ಸಹಿ ಹಾಕಿದವನು – ಇಬ್ಬರೂ ಅಂಜಿಕೆಯಿಂದಲೇ ಇರುತ್ತಾರೆ. ಜನರಿಂದ ದೂರು ದಾಖಲಾಗಿ ಉನ್ನತ ತನಿಖೆಯಿಂದ ಕಾಮಗಾರಿ ಕಳಪೆಯೆಂದು ಸಾಬೀತಾದರೆ – ಕಂಟ್ರಾಕ್ಟರ್ ಕಪ್ಪು ಪಟ್ಟಿಗೆ ಸೇರಿದರೆ – ಇಂಜೀನಿಯರ್ ಸಸ್ಪೆಂಡ್ ಆಗಿ ಮನೆಗೆ ಹೋಗುತ್ತಾರೆ. ಸರ್ಕಾರ ಕಾಮಗಾರಿಗಳಿಗೆ ಲಕ್ಷಾಂತರ ರೂಪಾಯಿ ತೆಗೆದಿರಿಸಿ ಹ್ಯಾಗಾದರೂ ಮಾಡು ರಾಜಾ ಎಂದು ಹೇಳಿ ಕಂಟ್ರಾಕ್ಟರ್ ಕೈ ಮೇಲೆ ಹಾಕುವುದಿಲ್ಲ. ಗುಣಮಟ್ಟ ಕಾಪಾಡಲು ಇಂಜೀನಿಯರ್ ನೇಮಕ, ಹಾಗೂ ಗುಣಮಟ್ಟ ಕಳಪೆಯಾದರೆ ಅದನ್ನು ಸಾರ್ವಜನಿಕರು ದೂರುಕೊಡುವ ವ್ಯವಸ್ಥೆ ಹಾಗೂ ತನಿಖೆ ಇದ್ದೇ ಇರುತ್ತದೆ. ಇಂಜೀನಿಯರ್ ಹಾಗೂ ಕಂಟ್ರಾಕ್ಟರ್ ಸೇರಿ – ಕಳಪೆ ಕಾಮಗಾರಿ ಮಾಡಿ – ದುಡ್ಡು ನುಂಗಲು ಮುಖ್ಯ ಕಾರಣ – ತಾವೇನು ಮಾಡಿದರೂ ನಡೆಯುತ್ತೆ. ಜನ ಗೊಣಗುಟ್ಟುತ್ತಾರೆಯೇ ವಿನಃ (ಸರಿಯಾದ ಕ್ರಮದಲ್ಲಿ) ಕೆಳುವುದಿಲ್ಲ. (ಸರಿಯಾದ ಕ್ರಮದಲ್ಲಿ) ದೂರು ಕೊಡುವುದಿಲ್ಲ – ಎಂಬ ಧೈರ್ಯ!!! ಜನರ ಪರವಾಗಿ ಪ್ರಶ್ನಿಸಬೇಕಾಗಿದ್ದ ಜನಪ್ರತಿನಿದಿಯ ಕೈ ಬೆಚ್ಚಗೆ ಮಾಡಿ ಬುಟ್ಟಿಗೆ ಹಾಕಿಕೊಂಡ ಧೈರ್ಯ!!! ಜನ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ ನನ್ನ ಕುತ್ತಿಗೆಗೆ ತರುತ್ತಾರೆ, ನಾನು ಸಸ್ಪೆಂಡ್ ಆಗಬಹುದು ಎಂಬ ಹೆದರಿಕೆಯೇ ಸಾಕು – ಅತೀ ಕಳಪೆ ಕಾಮಗಾರಿಗೂ ಕಣ್ಮುಚ್ಚಿ ಇಂಜೀನಿಯರ್ ಸಹಿಹಾಕದಿರಲು!!! ಆದರೆ ಕೆಳುವರ್ಯಾರು? ಎಷ್ಟು ಜನ?? 
              ಗ್ರಾಮಾಂತರ ಪ್ರದೇಶದಲ್ಲೂ ಇಂದು ಬದಲಾವಣೆಗಳಾಗಿವೆ. ಪ್ರತೀ ಚಿಕ್ಕ ಹಳ್ಳಿಗಳಲ್ಲೂ ಧರ್ಮಸ್ಥಳ ಸಂಘ, ಸ್ವಸಹಾಯ ಸಂಘಗಳು, ಆ ಸಂಘ, ಈ ಸಂಘ – ಎಂದು ಹತ್ತಾರು ಸಂಘಗಳಿವೆ. ಯಾವುದೇ ಕಾಮಗಾರಿ ಹಳ್ಳಿಗೆ-ಊರಿಗೆ ಮಂಜೂರಾದರೆ ಸಂಘದ ಪರವಾಗಿ ಯಾರಾದರೊಬ್ಬರು ಆ ಕಾಮಗಾರಿಯ ಎಸ್ಟಿಮೆಶನನ್ನು ಮಾಹಿತಿ ಹಕ್ಕಿನ ಮೂಲಕ ತರಿಸಿ ಸ್ವಲ್ಪವಾದರೂ ಗಮನಿಸುತ್ತಿದ್ದಾರೆ ಕಾಮಗಾರಿಗಳು ಅಷ್ಟು ಕಳಪೆಯಾಗಲಿಕ್ಕಿಲ್ಲವೆಂಬುವುದು ನನ್ನ ಅಭಿಪ್ರಾಯ. ಕಾಮಗಾರಿ ತುಂಬಾ ಕಳಪೆ ಮಾಡಿದರೆ ಜನ ಪ್ರಶ್ನಿಸುತ್ತಾರೆ ಎಂಬ ಹೆದರಿಕೆ (ಸ್ವಲ್ಪವಾದರೂ) ಇಂಜೀನಿಯರ್ ಹಾಗೂ ಕಂಟ್ರಾಕ್ಟರ್ ಗಳಿಗೆ ಇರುತ್ತದೆ. ಈ ಲೇಖನ ಓದಿದವರಲ್ಲಿ – ನೂರಕ್ಕೆ ಹತ್ತರಷ್ಟು ಜನರಾದರೂ – ನಾಲ್ಕೈದು ಜನ ಪರಿಚಯದ ಜನರಿಗೆ ಅಥವಾ ಸಂಘದ ಸದಸ್ಯರಿಗೆ ಈ ವಿಷಯ ಹೇಳಿ – ಒಬ್ಬಿಬ್ಬರಾದರೂ (ಸಂಬಂದಪಟ್ಟ) ಮಾಹಿತಿ ಕೇಳಿದರೂ – ನಾನು ಬರೆದ ಈ ಬರಹ ಸಾರ್ಥಕವೆಂಬುದು ನನ್ನಭಿಪ್ರಾಯ.
          ಈ ಬರಹ ಮುಗಿಸುವ ಮೊದಲು ಒಂದು ಪ್ಯಾರಾವನ್ನು ಮಾಹಿತಿ ಹಕ್ಕು ಕಾನೂನು ವಿಷಯದಲ್ಲಿ ಹುಲಿಗಳಂತಿರುವ ಇಬ್ಬರಬಗ್ಗೆ ನಿಮಗೆ ತಿಳಿಸಲು ಮೀಸಲಾಗಿಡಲು ಬಯಸುತ್ತೇನೆ. ಅವರೇ ಕೊಪ್ಪದ ಸಮೀಪದ ತಲಮಕ್ಕಿ ಸುಬ್ರಮಣ್ಯ ಹಾಗೂ ಬಾಳೆಹೊನ್ನೂರು ಫೋಟೊ ಭಟ್ರು. ಕೊಪ್ಪಾ ಸಮೀಪ ತಲಮಕ್ಕಿ ಎಂಬ ಹಳ್ಳಿಯಲ್ಲಿರುವ ಸುಬ್ರಮಣ್ಯ – ತಲಮಕ್ಕಿಯ ತಮ್ಮ ಹಳ್ಳಿಯಲ್ಲಿರುವ ಫೋನಿಗೆ – ಅದು ಕೊಪ್ಪಾ ಎಕ್ಸ್ಚೇಂಜ್ ನಿಂದ ಹೊರಟಿದ್ದಕ್ಕೆ – ಬಿ.ಎಸ್.ಏನ್.ಎಲ್ ನವರು ಪಟ್ಟಣದ ಬಾಡಿಗೆ ಹಾಕುವುದಕ್ಕೆ ವಿರೋದಿಸಿ (ಗ್ರಾಮಾಂತ ಎಕ್ಸ್ಚೇಂಜ್ ಹಾಗೂ ಪಟ್ಟಣದ ಎಕ್ಸ್ಚೇಂಜ್ ಫೋನ್ ಗಳಲ್ಲಿ ಬಾಡಿಗೆಯಲ್ಲಿ ತುಂಬಾ ವ್ಯತ್ಯಾಸವಿದೆ) ಹೋರಾಡಿ ಗೆದ್ದವರು!!! ಇನ್ನು ಬಾಳೆಹೊನ್ನೂರಿನ (ಆರ್.ಟಿ.ಓ ಏಜೆಂಟ್!!!) ಫೋಟೊ ಭಟ್ರು. ಹೆಗಲಿಗೊಂದು ಜೋಳಿಗೆ ಹಾಕಿಕೊಂಡು ಭಟ್ರು ಶೂನ್ಯದೆಡೆ ನೋಡುತ್ತಾ ಸಿಗರೆಟ್ ಹಚ್ಚಿ ಧಂ ಎಳೆದರೆಂದರೆ ಯಾವುದೋ ಮಾಹಿತಿ ಕೇಳಲು ಸ್ಕೆಚ್ ಹಾಕುತ್ತಿದ್ದಾರೆಂದೇ ಅರ್ಥ. ಜನಜಾಗೃತಿಗೆ ಸಂಬಂದಿಸಿದ ಸಂಘವೊಂದರ ಸದಸ್ಯರೂ ಆಗಿರುವ ಭಟ್ಟರು ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ ಅನೇಕ ಅವ್ಯವಹಾರಗಳನ್ನು ಬಯಲಿಗೆಳೆದಿದ್ದಾರೆ. ಕೆನರಾ ಬ್ಯಾಂಕ್ ಚಿನ್ನದ ನಾಣ್ಯ ಪ್ರಕರಣದಲ್ಲಿ – ಇವರು ಕೇಳಿದ ನಾಲ್ಕು ಮಾಹಿತಿ ನೀಡದೆ ಸತಾಯಿಸಿದ ಬ್ಯಾಂಕ್ ಅಧಿಕಾರಿ – ೨೫೦೦೦ ರೂಪಾಯಿ ದಂಡ ಕಟ್ಟಬೇಕಾಯಿತು!!! (ಕೇಂದ್ರ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿ – ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ – ಅಧಿಕಾರಿ, ಇವರು ಹಾಗೂ ಕೇಂದ್ರ ಮಾಹಿತಿ ಆಯೋಗ (ದೆಹಲಿ) ಇವರ ನಡುವೆ ವೀಡಿಯೋ ಕಾನ್ಫಾರೆನ್ಸ್ ನಡೆದು ಬಗೆಹರಿದ ಘಟನೆ ಇದು)
    ವಿಶೇಷ ಸೂಚನೆ :- ಈ ಬರಹ ಓದಿ ಸ್ಪೂರ್ತಿಹೊಂದಿ ಒಂದಿಷ್ಟು ಮಾಹಿತಿ ಕೇಳೋಣ ಎಂದು ಹೊರಟವರು ನೀವಾಗಿದ್ದರೆ – ಚಿಕ್ಕ (ಆದರೆ ಬೆಲೆಕಟ್ಟಲಾಗದ) ಸಲಹೆ - ಎಳ್ಳಷ್ಟೂ ಸಂಬಂದವಿಲ್ಲದ, ಕೇವಲ ಅಧಿಕಾರಿಗಳಿಗೆ ಕಿರುಕುಳ ಕೊಡುವ ಒಂದೇ ಉದ್ದೇಶವಿಟ್ಟುಕೊಂಡು ಅನವಶ್ಯಕ ಮಾಹಿತಿಗಳನ್ನ ದಯವಿಟ್ಟು ಕೇಳಬೇಡಿ. (ಅದರಲ್ಲೂ ಪೋಲಿಸ್ ಇಲಾಖೆಯ ಬಗ್ಗೆ). ಯಾಕೆ? ಏನಾಗುತ್ತೆ?? – ಎಂಬುವುದು ನಿಮ್ಮ ಪ್ರಶ್ನೆಯಾಗಿದ್ದರೆ – ಅದಕ್ಕೆ ನನ್ನ ಉತ್ತರ – ಇಲ್ಲದಸಲ್ಲದ ಮಾಹಿತಿಗಳನ್ನು ಬೇರೆಬೇರೆ ಇಲಾಖೆಗಳಲ್ಲಿ ಕೇಳಿ ಪರಿಪಾಟಲು ಪಟ್ಟ ನನ್ನ ಸ್ನೇಹಿತನೊಬ್ಬನ ಕಥೆ – ನನ್ನ ಬ್ಲಾಗಿನಲ್ಲೇ ಮುಂದೊಂದುದಿನ ಬರೆಯುತ್ತೇನೆ.
              (ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ. ನಿಮ್ಮನಿಸಿಕೆಗಳು ನಮ್ಮ (ಮುಂದಿನ) ಬರಹಗಳನ್ನ ಸರಿಪಡಿಸುವ ಔಷಧ. ಬರಹ ಇಷ್ಟವಾಗಿ ಕಾಮೆಂಟ್ ಬರೆಯಲು ಪುರುಸೊತ್ತು ಸಿಗದಿದ್ದರೆ ಈ ಕೆಳಗಿರುವ +1 ರ ಮೇಲೆ ಕ್ಲಿಕ್ ಮಾಡಬಹುದು. ಫೇಸ್ ಬುಕ್ ನಲ್ಲಿ ಶೇರ್ ಮಾಡಿದರೆ ಹತ್ತಾರು ಜನರಿಗೆ ತಲುಪಿ, ಮೂರ್ನಾಲ್ಕು ಜನರಾದರೂ ಮಾಹಿತಿ ಕೇಳುವ ಮನಸ್ಸುಮಾಡಿ, ಒಂದಿಬ್ಬರಾದರೂ ಮಾಹಿತಿ ಕೇಳಿ ಒಂದಿಷ್ಟು ಉಪಯೋಗವಾದರೆ ನನ್ನ ಈ ಬರಹ ಸಾರ್ಥಕ) 
.  

Monday, July 4, 2011

ಕ್ರಯೋನಿಕ್ಸ್: ಕಾಯುತಿವೆ ಹೆಣಗಳು. ಮರುಹುಟ್ಟಿಗಾಗಿ!!!!!!!!


                   ಅಮೇರಿಕಾ ಸಂಯುಕ್ತ ಸಂಸ್ಥಾನದ ಆ ನಗರವೊಂದರಲ್ಲಿ – ಹೊರಗಿನಿಂದ ತೀರಾ ಸಾದಾರಣವಾಗಿ ಕಾಣುವ ಆ ಕಟ್ಟಡವೊಂದರ ಒಳಗೆ - ಕೇವಲ ಯಂತ್ರಗಳ ಗುಯ್ ಗುಟ್ಟುವಿಕೆ ಸದ್ದಿನ ಆ ಗಂಭೀರ ಪರಿಸರದಲ್ಲಿ – ಮೈನಸ್ ೧೯೬ ಡಿಗ್ರೀಯ ದ್ರವರೂಪ ಸಾರಜನಕದ ಅತಿ ಶೀತ ವಾತಾವರಣದ ಆ ಪ್ರತಿಯೊಂದು ಕೋಶದೊಳಗೆ – ಹೌದು ನಿಜ(!!!!) – ಕಾಯುತಿವೆ ದೇಹಗಳು. ಮರುಹುಟ್ಟಿಗಾಗಿ!!!! ಹಾಗೆ ದೇಹಗಳನ್ನು ಆ ರೀತಿ ಕಾಪಿಡಲು – ಪ್ರಾಣ ಆ ದೇಹದಿಂದ ಹೋಗುವುದಕ್ಕಿಂತ ತುಂಬಾ ಮೊದಲೇ – ಆ ದೇಹ ಹೊಂದಿದ್ದ ವ್ಯಕ್ತಿಗಳಿಗೂ ಹಾಗೂ ಆ ಸಂಸ್ಥೆಗೂ ಒಪ್ಪಂದವಾಗಿ ಹಣಸಂದಾಯವಾಗಿದೆ!!. ಅದರಂತೆ ಅವುಗಳನ್ನು (ಆ ದೇಹಗಳನ್ನು) ಸಂರಕ್ಷಿಸಿಡಲಾಗಿದೆ. ಸರಿ. ಪ್ರಾಣ ಹೋದ ದೇಹಗಳನ್ನು ಮಣ್ಣುಮಾಡುವುದು ಬಿಟ್ಟು ಅಲ್ಲೇಕೆ ಅತಿ ಶೀತದಲ್ಲಿ ಸಂರಕ್ಷಿಡಲಾಗಿದೆ?? ಕ್ರಯೋನಿಕ್ಸ್ ಅಂದರೆ ಎನು??? ಈ ಎಲ್ಲಾ ಕೌತುಕಮಯ ವಿಷಯವನ್ನು ನಿಮ್ಮ ಮುಂದಿಡುವುದೇ ಈ ಬ್ಲಾಗ್ ಬರಹದ ಉದ್ದೇಶ. ಆ ದೇಹಗಳು ಮರುಹುಟ್ಟು ಪಡೆಯಬಹುದೇ ಎಂಬ ಪ್ರಶ್ನೆಗೆ ಮಾತ್ರ ಕಾಲವೇ ಉತ್ತರ ಹೇಳಬೇಕು.
ದ್ರವಸಾರಜನಕದ ಕೋಶ 

                   ಮನುಷ್ಯರ ಆಯಸ್ಸು ನಮಗೆಲ್ಲಾ ಗೊತ್ತಿರುವಂತೆ ಹೆಚ್ಚೆಂದರೆ ೧೨೦ ವರ್ಷ. ಅದೆಷ್ಟೇ ಶಕ್ತಿಶಾಲಿ ವ್ಯಕ್ತಿಯಾದರೂ ಒಂದಲ್ಲಾ ಒಂದು ದಿನ ಸಾಯಲೇ ಬೇಕು. ಸತ್ತಮೇಲೆ ಒಂದೇ ಮಣ್ಣು ಇಲ್ಲಾ ಬೂದಿಯಾಗಬೇಕು. ಹೀಗೆಂದು ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ ಎಲ್ಲರೂ ಹೀಗೆ ತಿಳಿದುಕೊಂಡಿಲ್ಲ!! ಈ ಪ್ರಪಂಚದಲ್ಲಿ-ಕೆಲವೇ ಕೆಲವು ಮಂದಿ ಮಾತ್ರ-ಮುಂದೆಂದೋ ಒಂದು ದಿನ ವಿಜ್ಞಾನ ಮುಂದುವರೆದು-ಮರಣ ಹೊಂದಿದರೂ ಕೊಳೆಯಲು ಬಿಡದೆ ದೇಹವನ್ನು ಸುಸ್ಥಿತಿಯಲ್ಲಿಟ್ಟಿದ್ದರೆ-ಭವಿಷ್ಯದಲ್ಲಿ ಮುಂದೆಂದಾದರೂ ಮರುಜೀವ ಪಡೆಯಬಹುದೆಂದು ನಂಬಿದ್ದಾರೆ!!!!! ಅವರೇ ಕ್ರಯೋನಿಸ್ಟ್ ಗಳು (ಅತಿಶೀತದೇಹಸಂರಕ್ಷಕವಾದಿಗಳು-ಎಂದು ಕರೆಯಬಹುದೇನೋ!!!). ಹಾಗೆ ದೇಹವನ್ನು (ಅಥವಾ ಅಂಗಾಗಗಳನ್ನು) ಸಾವಿನ ನಂತರ ಕೊಳೆಯದಂತೆ ಅತಿಶೀತದಲ್ಲಿ ಸಂರಕ್ಷಿಸಿಡುವ ವಿದಾನವೇ ಕ್ರಯೋನಿಕ್ಸ್!!!
            ಆ ರೀತಿ ಸಾವನ್ನು ತಾತ್ಕಾಲಿಕವೆಂದು ಸ್ವೀಕರಿಸಿ ಮುಂದೆಂದೋ ಬದುಕುವ ಕನಸುಕಂಡವರು ಸಾವಿರಾರುಜನ ಇರಬಹುದು. ಆದರೆ ಆ ದಿಕ್ಕಿನಲ್ಲಿ ಪ್ರಯತ್ನ ಮಾಡಿದವನು ಮಾತ್ರ ಭೌತಶಾಸ್ತ್ರದ ಆ ಪ್ರೊಫೆಸರ್. ಆತನ ಹೆಸರೇ ರಾಬರ್ಟ್ ಚೆಸ್ಟರ್ ವಿಲ್ಸನ್ ಎಟಿಂಜರ್. ಈ ವಿಷಯದ ಬಗ್ಗೆ ಪ್ರಾಸ್ಪೆಕ್ಟಾಫ್ ಇಮ್ಮೊರ್ಟಾಲಿಟಿ (Prospect of Immortality)ಎಂಬ ಮಹಾ ಪ್ರಬಂದ ಬರೆದ ಈ ಕನಸುಗಾರ ಅದನ್ನು ಕಾರ್ಯರೂಪಕ್ಕೂ ತಂದ. ಆತನ ಕನಸಿನ ಫಲವೇ ೧೯೭೬ ರಲ್ಲಿ ಡೆಟ್ರಾಯಿಟ್ ಹೊರವಲಯದಲ್ಲಿ ಸ್ಥಾಪಿತವಾದ ಇಂತಹ ದೇಹಗಳನ್ನು ಭವಿಷ್ಯಕ್ಕಾಗಿ ಸಂರಕ್ಷಿಸಿಡುವ ಕ್ರಯೋನಿಕ್ಸ್ ಇನ್ಸ್ಟಿಟ್ಯುಟ್. ಎಟಿಂಜರ್ ದೇಹಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿಡುವ ಆ ಕೇಂದ್ರ ತೆರೆದಮೇಲೆ ಆದ ಮೊದಲ ಗಿರಾಕಿಯೇ ಆತನ ಅಮ್ಮ!!! ಹೌದು. ದ್ರವರೂಪ ಸಾರಜನಕದ ಆ ಕೋಶದೊಳಗೆ ಮೊತ್ತಮೊದಲು ಸಂರಕ್ಷಿಸಿಟ್ಟಿದ್ದು ಎಟಿಂಜರ್ ಸತ್ತ ತನ್ನ ತಾಯಿಯನ್ನ!!! ಇಂದು ಆಕೆಯ ದೇಹದ ಜೊತೆಗೆ ಎಟಿಂಜರ್ನ ಮೊದಲ ಹಾಗೂ ಎರಡನೆಯ ಹೆಂಡತಿಯರ ದೇಹಗಳೂ ಹಾಗೂ ೯೨ ಇತರೆ ದೇಹಗಳೂ ದ್ರವಸಾರಜನಕದ ಅತಿಶೀತ ಕೊಶಗಳಲ್ಲಿ ಕೆಡದೇ ಆ ಕೇಂದ್ರದಲ್ಲಿ ಸಂರಕ್ಷಿಸಲ್ಪಟ್ಟಿದೆ. ಕೇವಲ ಮನುಷ್ಯವರದ್ದೊಂದೇ ಅಲ್ಲ, ೬೪ ನಾಯಿ-ಬೆಕ್ಕು ಮೊದಲಾದ ಮುದ್ದಿನ ಪ್ರಾಣಿಗಳ ದೇಹ ಅಲ್ಲದೇ ೧೬೦ ಮನುಷ್ಯರ ಅಂಗಾಂಗಗಳನ್ನು ಅಲ್ಲಿ ಸಂರಕ್ಷಿಸಿಡಲಾಗಿದೆ. (ನೀವು ಓದುತ್ತಿರುವ ದಿನದ ಲೆಕ್ಕ ಬೇರೆಯೇ (ಹೆಚ್ಚು) ಇರಬಹುದು. ತಿಳಿಯುವ ಕುತೂಹಲವಿದ್ದರೆ ಇಲ್ಲಿ ಕ್ಲಿಕ್ಕಿಸಿ). ಇಲ್ಲಿ ಮಜಾ ಏನೆಂದರೆ ೯೨ ವರ್ಷದ ಆ ಪುಣ್ಯಾತ್ಮ ಎಟಿಂಜರ್ ಇನ್ನೂ ಬದುಕಿಯೇ ಇದ್ದಾನೆ.  
        ಇವರಿಗೆಲ್ಲ ತಲೆಕೆಟ್ಟಿದೆಯೇ? ಕಾನೂನು ಇದನ್ನು ಒಪ್ಪುತ್ತದೆಯೇ?? ಜೇಬು ತುಂಬಾ ದುಡ್ಡಿದ್ದು ಸಂಸಾರದಲ್ಲಿ ಮುನಿಸಿಕೊಂಡು ಮುಂದೊಮ್ಮೆ ಹುಟ್ಟುವ ಬಯಕೆಯ ಧನಿಕರೆ?? ಇಲ್ಲ. ಜೀವ ಇರುವಾಗ ಸಾವಿರಾರು ಡಾಲರ್ ತೆತ್ತು ತಮ್ಮ ದೇಹವನ್ನು ಶೈತ್ಯದಲ್ಲಿ ಸಂರಕ್ಷಿಸಿರುವ ಹಾಗೂ ಹಾಗೂ ಹಣ ಪಾವತಿಸಿ ಮುಂಗಡವಾಗಿ ಅಲ್ಲಿ ಸ್ಥಳ ಕಾದಿರಿಸಿರುವ ಅನೇಕ ಜನ ತಮ್ಮತಮ್ಮ ಕ್ಷೇತ್ರದಲ್ಲಿ ಮೆದಾವಿಗಳೇ!!! ಅಮೇರಿಕಾ (ಯು.ಎಸ್.ಎ) ಮತ್ತು ರಷ್ಯಾಗಳಲ್ಲಿ ಮಾತ್ರ ಹೆಣಗಳನ್ನು ಈ ರೀತಿ ಇಡಲು ಕಾನೂನಿನ ಒಪ್ಪಿಗೆ ಇದೆ. ಅದಕ್ಕೇ ಯುರೋಪಿನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಜರ್ಮನಿಯ ಕ್ರಯೋನಿಸ್ಟ್ ಗಳು ಅಮೆರಿಕಾದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹತ್ತಿರ ಹತ್ತಿರ ಒಂದೂಕಾಲು ಲಕ್ಷ ಯುರೋಸಮಗ್ರ ದೇಹಶೀತಲೀಕರಣ ಸೌಲಭ್ಯಕ್ಕೆ ಸಹಿಮಾಡಿದರೆ-ಸಾವು ಸಮೀಪಿಸುತ್ತಿರುವಂತೆಯೇ ರಕ್ತ ತೆಳುಮಾಡುವ ರಾಸಾಯನಿಕ ಹಾಗೂ ವೈಟಮಿನ್ ಇ ಗಳನ್ನು ರಕ್ತನಾಳಗಳೊಳಗೆ ತಳ್ಳುವುದು-ಒಮ್ಮೆ ಸಾವು ಅಧಿಕೃತವಾಗಿ ಧೃಡಪಟ್ಟನಂತರ ದೇಹವನ್ನು ಶೀತಲೀಕರಿಸುವುದು-ಅದೇ ಸಮಯದಲ್ಲಿ ರಕ್ತವನ್ನು ಬದಲಾಯಿಸಿ ಅದರ ಸ್ಥಾನದಲ್ಲಿ ಸಂರಕ್ಷಣಾ ದ್ರಾವಣವನ್ನು ರಕ್ತನಾಳದಲ್ಲಿ ತುಂಬುವುದು-ಕೊನೆಯಲ್ಲಿ ದ್ರವರೂಪ ಸಾರಜನಕ ಕೋಶದಲ್ಲಿ ಸಂರಕ್ಷಿಸಿಡುವುದು-ಎಲ್ಲವೂ ಸೇರಿ ಬರುತ್ತದೆ!!! (ಒಮ್ಮೆಲೇ ಅಷ್ಟು ಹಣ ತೆರಲು ಆಗದಿದ್ದರೆ ವಿಮೆಯಂತೆ ಕಂತುಗಳಲ್ಲಿ ಕಟ್ಟಬಹುದಂತೆ) ಎಂಥಾ ಆಶ್ಚರ್ಯ!!!!! (‘ದ್ರವರೂಪದ ಸಾರಜನಕ- ಹಾಗೆಂದರೇನು?? ಎಂಬುವುದು ನಿಮ್ಮ ಪ್ರಶ್ನೆಯಾಗಿದ್ದರೆ- ನೀವು ವ್ಯವಸಾಯ ವೃತ್ತಿಯವರಾಗಿದ್ದು ನಿಮ್ಮ ಮನೆಯಲ್ಲಿ ದನಕರುಗಳಿದ್ದರೆ-ದನಗಳಿಗೆ ಕೃತಕ ಗರ್ಭದಾರಣೆ ಮಾಡಿಸುತ್ತಿದ್ದರೆ-ಕೃತಕ ಗರ್ಭದಾರಣೆ ಮಾಡಿಸಲು ಬಂದವರನ್ನು ಕೇಳಿದರೆ-ಅವರು ಹೇಳುತ್ತಾರೆ ಅದರ ಉಪಯೋಗ ಹಾಗೂ ಪ್ರಾಮುಖ್ಯತೆ).
     ಮುಂದೆಂದಾದರೂ ಒಂದು ದಿನ ಆ ದೇಹಗಳು ಜೀವಪಡೆದು ಎದ್ದು ನಡೆಯುತ್ತವೆಯೇ? ಇದು ಸಾದ್ಯವೇ?? ಇವತ್ತು ಈ ಪರಿಕಲ್ಪನೆ ನಂಬಲೇ ಕಷ್ಟವಾಗುತ್ತದೆಯಲ್ಲವೆ. ಹಾಗಾದರೆ ಅತಿಶೀತದಲ್ಲಿ ದೇಹಗಳ ಸಂರಕ್ಷಣೆ (ಹಾಗು ಮುಂದೆ ಅದರ ಉಪಯೋಗ) ಅಸಾದ್ಯವೆ? ಅಥವಾ ಕಷ್ಟಸಾದ್ಯವೆ? ನಿಸರ್ಗದಲ್ಲಿ ಲಕ್ಷಾಂತರ ವರ್ಷಗಳಿಂದ-ಅನೇಕ ಪ್ರಾಣಿಗಳು-ಅತಿ ಶೀತ ವಾತಾವರಣಕ್ಕೆ ಮೊದಲೇ ಸಜ್ಜಾಗಿ-ತನ್ನೆಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿ-ಅನೇಕ ತಿಂಗಳುಗಳ ಹಿಮಚಳಿಯನ್ನು ನಿದ್ರಿಸಿ ಕಳೆಯುತ್ತವೆ.(ಹೈಬರ್ನೆಶನ್-ಎಂದು ಕರೆಯುತ್ತಾರೆ). ನಾನು-ಅತಿಶೀತವಾತಾವರಣದಲ್ಲಿ ಜೀವವನ್ನು ಸಂರಕ್ಷಿಸಿಡುವ ಬಗ್ಗೆ ಮುಂದೆ ಕೊಡಲಿರುವ ಉದಾಹರಣೆ-ಕೆಲವು ದಶಕಗಳ ಹಿಂದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವೆಂಬುದನ್ನು-ಆ ಉದಾಹರಣೆ ಓದಿದಮೇಲೆ ನೀವೇ ಒಪ್ಪುತ್ತೀರಿ.
        ಇಂದು ವೀರ್ಯಾಣು ಹಾಗೂ ಅಂಡಾಣು ಬ್ಯಾಂಕುಗಳು ಎಲ್ಲಾ (ಸಾದಾರಣ ದೊಡ್ಡ) ಊರುಗಳಲ್ಲೂ ಇವೆ. ವೀರ್ಯಾಣು ಹಾಗೂ ಅಂಡಾಣುಗಳನ್ನು ಎಂದೋ ತೆಗೆದು ಅತಿಶೀತವಾತಾವರಣದಲ್ಲಿ ಸಂರಕ್ಷಿಸಿಟ್ಟಿರುತ್ತಾರೆ. ಅಗತ್ಯಬಿದ್ದಾಗ ಅಗತ್ಯವಿದ್ದವರಿಗೆ ಅದನ್ನು ವರ್ಗಾಯಿಸುತ್ತಾರೆ. ಕೃತಕಗರ್ಭದಾರಣೆಯಿಂದ ಮಗು ಹುಟ್ಟುವುದು ಇಂದು ಅತ್ಯಾಶ್ಚರ್ಯದ ವಿಷಯವೇ ಅಲ್ಲ. ಅತಿಶೀತವಾತಾವರಣದಲ್ಲಿ ವೀರ್ಯಾಣುಗಳು (ಅಂದರೆ ಜೀವ) ಹಾಳಾಗದೆ ಇರುತ್ತವೆ ಎಂಬುದೂ ಅಷ್ಟೇ ಸತ್ಯ!!! ಸ್ಟೆಮ್ ಸೆಲ್ ಗಳಿಗೂ ಬ್ಯಾಂಕ್ ಬಂದಿದೆ. ಇಂದು ಪರಿಹಾರವೇ ಇಲ್ಲದ ಅನೇಕ ಆರೋಗ್ಯಕ್ಕೆ ಸಂಬಂದಪಟ್ಟ ಸಮಸ್ಯೆಗಳಿಗೆ ಮುಂದೆ ಈ ಸ್ಟೆಮ್ ಸೆಲ್ ಗಳು ದಾರಿಯಾಗಲಿವೆ. ಇವೆಲ್ಲಾ ಸಂಗತಿಗಳು ಕೆಲವು ದಶಕಗಳ ಹಿಂದೆ ಕಲ್ಪಿಸಿಕೊಳ್ಳಲೂ ಸಾದ್ಯವಿರಲಿಲ್ಲವಲ್ಲವೆ?
     ಈ ಅತಿಶೀತದೇಹಸಂರಕ್ಷಣೆ ಬಗ್ಗೆ ನಮ್ಮದೇನೆ ಕುತೂಹಲವಿದ್ದರೆ ಅದು ಕುತೂಹಲವಷ್ಟೇ. ನಮ್ಮದೇನೆ ಪ್ರಶ್ನೆಗಳಿದ್ದರೂ ಅವು ಕೇವಲ ಪ್ರಶ್ನೆಗಳಷ್ಟೇ. ಆ ಕುತೂಹಲಗಳಿಗೆ ಆ ಪ್ರಶ್ನೆಗಳಿಗೆ ಸದ್ಯಕ್ಕಂತೂ ಸಮರ್ಪಕ ಉತ್ತರ ಸಿಗುವ ಸಂಬವವಿಲ್ಲ. ಅವು ಪ್ರಶ್ನೆಗಳಾಗಿ ನಮ್ಮಲ್ಲಿಯೇ ಉಳಿಯುತ್ತವೆ. ಕಾಲವೇ ಅವಕ್ಕೆ ಉತ್ತರಹೇಳಬೇಕು. ಆ ಕಾಲವನ್ನು ನಮ್ಮ ಕ್ಷಣಿಕ ಜೀವಿತಾವದಿಯಲ್ಲಿ ನಾವು ಕಾಣುತ್ತೇವೆಯೇ ಎಂಬುದನ್ನೂ ಕಾಲವೇ ಉತ್ತರಿಸಬೇಕು!! ಒಂದಂತೂ ನಿಜ.   ಒಂದಿಷ್ಟು ಮನುಷ್ಯರು-ಆ ಮನುಷ್ಯರ ಚಿತ್ರ ವಿಚಿತ್ರ ಆಸೆಗಳು-ಆ ಆಸೆಗಳನ್ನು ಪೂರೈಸಲು ಎಷ್ಟಾದರೂ ದುಡ್ಡು ಚೆಲ್ಲುವ ಅವರ ಮನೋಭಾವ-ಆ ಮನೋಭಾವವನ್ನೇ ಬಂಡವಾಳವನ್ನಾಗಿಸಿ ದುಡ್ಡುಮಾಡುವ ಒಂದಿಷ್ಟು ಮಂದಿ. ಒಟ್ಟಾರೆ ಈ ಪ್ರಪಂಚವೇ ವಿಚಿತ್ರ.
     ಕ್ರಯೋನಿಕ್ಸ್ ಬಗ್ಗೆ ಈ ಮೊದಲೇ ನಿಮಗೆ ಗೊತ್ತಿತ್ತೆ? ಅಥವಾ ನಿಮಗೂ ಇದೊಂದು ಹೊಸ ವಿಷಯವೇ? ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ. (ಈ ಲೇಖನ ನಿಮಗೆ ಮೆಚ್ಚುಗೆಯಾಗಿದ್ದು ಕಾಮೆಂಟ್ ಬರೆಯಲು ಪುರುಸೊತ್ತಿಲ್ಲದಿದ್ದರೆ   (ಈ ಪ್ಯಾರದ) ಕೆಳಗೆ +1 ರ ಮೇಲೆ ಕ್ಲಿಕ್ ಮಾಡಬಹುದು!!)






Wednesday, May 4, 2011

ಬೊಜ್ಜು ಕರಗಿಸುವ ತಾಯತ!!!!!!!


              ಕೂತೇ ಮಾಡುವ ಕೆಲಸ, ಕಡಿಮೆ ಓಡಾಟ, ಜೋಬು ತುಂಬುವ ಸಂಬಳದಿಂದ ಸದಾ (ಅಗತ್ಯಕ್ಕಿಂತ ಹೆಚ್ಚು) ತುಂಬುತ್ತಿರುವ ಹೊಟ್ಟೆ, ಓಡಾಡಲು ಸದಾ ಕಾರು-ಸ್ಕೂಟರ್-ಬೈಕ್, ಸುಭದ್ರ ಆರ್ಥಿಕತೆಯಿಂದ ಮಾನಸಿಕ ನೆಮ್ಮದಿ, ಮನಕ್ಕೊಪ್ಪುವ ಮಡದಿ/ಗಂಡ - ಹೀಗೆ ಅನೇಕ (ಒಮ್ಮೊಮ್ಮೆ ಒಂದೇ ಅಥವಾ ಅದಕ್ಕಿಂತ ಹೆಚ್ಚಿನ) ಕಾರಣಗಳಿಂದ ಇಂದು ಬೊಜ್ಜು ಎಂಬುದು ಒಂದು ಅತಿ ದೊಡ್ಡ ಸಮಸ್ಯೆಯಾಗಿದೆ ಎಂಬ ಮಾತನ್ನು ಯಾರೂ ಅಲ್ಲಗೆಳೆಯಲಾರಿರೆಂದು ನನ್ನ ನಂಬಿಕೆ. ಹೊಟ್ಟೆ, ತೊಡೆಯ ಸುತ್ತ (ಕೆಲವರಿಗೆ ಕುತ್ತಿಗೆ ಹಾಗು ಸರ್ವ ಅಂಗಾಂಗಗಳ ಸುತ್ತ!!!) ಶೇಖರವಾಗುವ ಈ ಬೊಜ್ಜು ನಿಮಗೆಲ್ಲರಿಗೂ ಗೊತ್ತಿರುವಂತೆ ಅನೇಕ (ಜೀವವನ್ನೇ ಮೊಟಕುಗೊಳಿಸುವಂತಹ) ಕಾಯಿಲೆಗಳಿಗೆ ಹೆದ್ದಾರಿ. ಮದುಮೇಹ, ಹೃದಯ ಸಂಬಂದೀ ಕಾಯಿಲೆಗಳು, ಮೂಳೆ ಸವೆಯುವಿಕೆ, ಗಂಟು ನೋವು, ಸೊಂಟ ನೋವು, ಋತುಚಕ್ರದಲ್ಲಿ ಏರುಪೇರು- ಒಂದೇ ಎರಡೇ???. ಓದುತ್ತಾ ಓದುತ್ತಾ ಒಮ್ಮೆ ಸೊಂಟದ ಮೇಲೆ ಕೈ ಆಡಿಸಿಕೊಂಡು (ಟೈರ್ ತರ ಬೊಜ್ಜು ಹೆಬ್ಬೆರಳು ಹಾಗು ಉಳಿದ ಬೆರಳುಗಳ ಮದ್ಯ ಸಿಕ್ಕರೆ) ಗಾಬರಿಯಾಗಬೇಡಿ. ಎಲ್ಲವಕ್ಕೂ ಒಂದು ಪರಿಹಾರವಿದೆ. ಆ ಪರಿಹಾರವೇ ಬೊಜ್ಜು ಕರಗಿಸುವ ತಾಯತ!!!! ಅದರ ಬಗ್ಗೆ ನನಗೆ ಮಾಹಿತಿಯಿದ್ದು (ನಿಮ್ಮಲ್ಲಿ ಕೆಲವರಿಗಾದರೂ ಉಪಯೋಗವಾಗಲೆಂಬ ಪರೋಪಕಾರ ಬುದ್ದಿಯಿಂದ) ಅದನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ!!!!
ನಂತರ!!!!
        ಹೌದು.ನಿಜ. ಅಂತದ್ದೊಂದು ತಾಯತವಿರುದು ನಂಬುವುದು ಕಷ್ಟವಾದರೂ ಇರುವುದು ನಿಜ. ನೀವೂ ಅಂತದ್ದೊಂದು ತಾಯತ ಕಟ್ಟಿಕೊಂಡರೆ ನಿಮ್ಮ ಬೊಜ್ಜೂ ದಿನೇದಿನೇ ಕರಗಿ ಸ್ಮಾರ್ಟ್ ಆಗುವುದು ನಿಮ್ಮ ಗಮನಕ್ಕೆ ಬಂದೇ ಬರುತ್ತದೆ. ಇನ್ನೇಕೆ ತಡ?. ಆದರೆ ಒಂದು ವಿಚಾರ. ಹೇಗೆ ಗಣಪತಿ ವ್ರತ ಮಾಡುತ್ತೇನೆಂದು ಹೇಳಿ ಕಾಟಾಚಾರಕ್ಕೆ ನಾಲ್ಕು ಹೂ ಏರಿಸಿದರೆ ಆ ವ್ರತದ ಫಲ ದೊರಕದೆ ಮಡಿಯಿಂದ ಒಂದು ನಿರ್ದಿಷ್ಟ ಕ್ರಮದಲ್ಲಿ ವ್ರತ ಮಾಡಿದಾಗ ಮಾತ್ರ ಅದರ ಫಲ ದೊರಕುತ್ತದೋ ಹಾಗೆಯೇ-ಹೇಗೆ ಸತ್ಯನಾರಾಯಣ ಕಥೆ ಮಾಡುತ್ತೇನೆಂದು ಹೇಳಿ ಒಟ್ರಾಶಿ ಮಾಡಿದರೆ ಅದರ ಫಲ ದೊರಕದೆ ಮಡಿಯಿಂದ ಕ್ರಮವರಿತು ಮಾಡಿದರೆ ಮಾತ್ರ ಸತ್ಫಲ (!!??) ದೊರೆಯುತ್ತದೋ ಹಾಗೆಯೇ-ಹೇಗೆ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡುತ್ತೇನೆಂದು ಹೇಳಿ ನಿಯಮ ನಿಷ್ಠೆಯಿಂದ ವ್ರತ ಮಾಡದೆ ಹೋದರೆ ಅಲ್ಲಿ ಜ್ಯೋತಿಯೂ ಕಾಣದೆ ತೊಂದರೆಗಳುಂಟಾಗುತ್ತವೋ ಹಾಗೆಯೇ-ಈ ತಾಯತ ಕಟ್ಟಿಕೊಂಡರೂ ಫಲ ಸಿದ್ದಿಯಾಗಬೇಕಾದರೆ (ಅಂದರೆ ಬೊಜ್ಜುಕರಗಿ ದಪ್ಪ ಕಡಿಮೆಯಾಗಬೇಕಾದರೆ) ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು!!! ಹಾಗಾದರೆ ಮಾತ್ರ ಫಲಸಿದ್ದಿ. ತಲೆಕೆಡಿಸಿಕೊಳ್ಳಬೇಡಿ. ತುಂಬಾ ಸುಲಭದ ನಿಯಮಗಳನ್ನು (ಹೆಚ್ಚೇನಿಲ್ಲ) ಪಾಲಿಸಿದರಾಯಿತಷ್ಟೆ. ಕಡಿಮೆ ಬೊಜ್ಜಿನ ಸ್ಮಾರ್ಟ್ ಶರೀರ ನಿಮ್ಮದಾಗುತ್ತದೆ!!! ತಾಯತ ಕಟ್ಟಿಕೊಂಡು ಪಾಲಿಸಬೇಕಾದ ಆ ನಿಯಮಾವಳಿಗಳನ್ನ ಅತಿ ಮುಖ್ಯವಾದವುಗಳು ಮೊದಲು ಮೊದಲು-ಕಡಿಮೆ ಕಡಿಮೆ ಮುಖ್ಯವಾದದ್ದು ಅನಂತರ ಅನಂತರ-ಈ ಕ್ರಮದಲ್ಲಿ ಕೆಳಗೆ ಬರೆದಿದ್ದೇನೆ.
     ೧) ರಾತ್ರಿ ಮಲಗುವಾಗ ಬೆಳಿಗ್ಗೆ ೫:೫೦ಕ್ಕೆ ಅಲರಾಂ ಇಡುವುದು. ಮೊಬೈಲ್ ನಲ್ಲಾದರೆ ಒಮ್ಮೆ ಮಾಡಿದರೆ ಸಾಕು. (ಪ್ರತಿ ದಿನ ಆ ಸಮಯಕ್ಕೇ ಎಬ್ಬಿಸುತ್ತೆ). ನಾನು ಹೇಳಲಿಲ್ವಾ. ಎಷ್ಟೊಂದು ಸುಲಭದ ನಿಯಮಗಳು!!!
     ೨) ಅಲರಾಂ ಹೊಡೆದಕೂಡಲೇ ಎದ್ದು ಪ್ರಾತಃ ವಿದಿಗಳನ್ನು ಮುಗಿಸಿ ೬:೦೫ ರಿಂದ ೬:೪೫ ರವರೆಗೆ-ಮೊದಲು ಸ್ವಲ್ಪ ಹೊತ್ತು ಮೆಲು ಓಟ (ಜಾಗಿಂಗ್)-ಅನಂತರ ವೇಗದ ನಡಿಗೆ ಮಾಡಲೇಬೇಕು. ಮೊದಲು ಹದಿನೈದು ದಿನ ಐದು ನಿಮಿಷ ಜಾಗಿಂಗ್ ಮೋವತ್ತೈದು ನಿಮಿಷ ವೇಗದ ನಡಿಗೆ. ನಂತರದ ೧೫ ದಿನ ೧೦ ನಿಮಿಷ ಜಾಗಿಂಗ್ ಹಾಗು ೩೦ ನಿಮಿಷ ನಡಿಗೆ. ಹೀಗೆ ಹದಿನೈದು ಹದಿನೈದು ದಿನಕ್ಕೊಮ್ಮೆ ಜಾಗಿಂಗ್ ಸಮಯ ಹೆಚ್ಚಿಸಿ ಕೊನೆಗೆ ಪ್ರತಿದಿನ ೧೫ ನಿಮಿಷ ಜಾಗಿಂಗ್ ಹಾಗು ೨೫ ನಿಮಿಷ ವೇಗದ ನಡಿಗೆ ಮಾಡಲೇಬೇಕು. (ಅನುಕೂಲಕ್ಕೆ ತಕ್ಕಂತೆ (ಹಾಗೂ ಕಾಲಕ್ಕೆ ತಕ್ಕಂತೆ) ಶುರುಮಾಡುವ ಸಮಯವನ್ನು ಹಿಂದೊತ್ತಬಹುದು. ಆದರೆ ಮುಂದೂಡುವಂತಿಲ್ಲ!!!) 
ಮೊದಲು
    ೩) ಬೆಣ್ಣೆ/ತುಪ್ಪ ವಾರಕ್ಕೆ ಮೂರುಬಾರಿಗಿಂತ ಹೆಚ್ಚು ಉಪಯೋಗಿಸಬಾರದು.
    ೪) ಐಸ್ಕ್ರೀಂ ವಾರಕ್ಕೆ ನಾಕುಬಾರಿಗಿಂತ ಹೆಚ್ಚು ತಿನ್ನಬಾರದು.
    ೫) ಸಿಹಿ ಪದಾರ್ತ, ಕುರ್ಕುರೆ ತರ ತಿಂಡಿಗಳು, ಪಾನಿಪುರಿ ಇತ್ಯಾದಿಗಳನ್ನು ತಿನ್ನಬಹುದು. ಆದರೆ ದಿನಕ್ಕೊಮ್ಮೆ ಮಾತ್ರ. (ಹೆಚ್ಚಿಗೆ ಉಪಯೋಗಿಸಿದರೆ ತಾಯತದಿಂದ ನಿರೀಕ್ಷಿತ ಫಲ ದೊರೆಯುವುದಿಲ್ಲ)
    ೬) ಎಣ್ಣೆ-ಉಪಯೋಗಿಸದಿದ್ದರೆ ತಾಯತದ ಫಲ ಬೇಗ ಸಿಗುತ್ತದೆ. ೧೫ ದಿನಕ್ಕೊಮ್ಮೆ ಅಲ್ಪಸ್ವಲ್ಪ ಹಾಕಿದರೂ ಓಕೆ. 
    ೭) ಬತ್ತಿ-ಊಹೂಂ. ಎಂದೆಂದೂ ಬೇಡ. ಬತ್ತಿ ಎಳೆದರೆ ನಿಷ್ಫಲ ಗ್ಯಾರಂಟಿ!!!
           ನೋಡಿ. ತಾಯತ ಕಟ್ಟಿಕೊಂಡು ನಿರೀಕ್ಷಿತ ಫಲ ದೊರಕಲು ಮಾಡಲೇಬೇಕಾದ ನಿಯಮಾವಳಿಗಳು ಎಷ್ಟೊಂದು ಸುಲಭವಿದೆಯಲ್ಲವಾ?? ಅಯ್ಯಪ್ಪಮಾಲೆ ಹಾಕಿದವರು ಮಾಡಲೇಬೇಕಾದ-ಅತಿ ಮುಂಚೆ ಹಾಗೂ ರಾತ್ರಿ ಚಳೀಲಿ ತಣ್ಣೀರ್ ಸ್ನಾನ-ಅಂತಹ ಕಷ್ಟ ನಿಯಮಾಚರಣೆಗಳಿಲ್ಲ. ಬೇರೆ ವ್ರತಾಚರಣೆಗಳಿಗೆ ಹೋಲಿಸಿದರೆ ನನ್ನ ಬಳಿಯಿರುವ ಬೊಜ್ಜು ಕರಗಿಸುವ ತಾಯತ ಕಟ್ಟಿಕೊಂಡು ಪಾಲಿಸಬೇಕಾದ ನಿಯಮಗಳು ನಿಜಕ್ಕೂ ಸುಲಭ ಹಾಗು ಸರಳ. ಜೋಬಿಗೆ ಕತ್ತರಿಹಾಕುವ ಯಾವ ಸಲಹೆ-ಸೂಚನೆಗಳೂ ಇಲ್ಲ. ಹಾಗೆ ಮಾಡಬೇಡಿ-ಹೀಗೆ ಮಾಡಬೇಡಿ, ಅದು ಮುಟ್ಟಬೇಡಿ-ಇದು ತಿನ್ನಬೇಡಿ-ಎಂಬ ದೊಡ್ಡ ಪಟ್ಟಿ ಇಲ್ಲ ಅಲ್ವಾ? ದೇವರ ದಯೆಯಿಂದ ಅಂತಹ ತಾಯತ ನನಗೆ ಲಭಿಸಿದೆ!!!
          ಇಷ್ಟು ಓದುತ್ತಿರುವಂತೆ ನಿಮ್ಮ ಮನದಲ್ಲಿ (ಕೆಲವರಿಗಾದರೂ) ಮೂಡುತ್ತಿರುವ ಭಾವನೆಗಳನ್ನು ಇಲ್ಲಿ ಕುಳಿತೇ ನಾನು ಅರ್ಥಮಾಡಿಕೊಳ್ಳಬಲ್ಲೆ. ಅಂತಹ ತಾಯತ ಇರುವುದು ಹೌದೇ? (ಉತ್ತರ:ಹೌದು), ಇರುವುದು ಹೌದಾದರೆ ನಿಮ್ಮಲ್ಲಿ ಇರುವುದು ಹೌದೇ?? (ಇದಕ್ಕೂ ಉತ್ತರ : ಹೌದೌದು!!!). ನಿಮ್ಮಲ್ಲಿ ಇರುವುದೇ ಹೌದಾದರೆ ನಿಮ್ಮ ಸಂಪರ್ಕ ಮಾಹಿತಿಗಳು (ಮೊಬೈಲ್ ನಂಬರ್, ಮೈಲ್ ಐ.ಡಿ) ಎಲ್ಲಿ???-ಈ ಎಲ್ಲಾ ಕುತೂಹಲಕ್ಕೆ ಇಗೋ ಇಲ್ಲಿದೆ ಮಾಹಿತಿ- ಆ ಸಂಪರ್ಕಮಾಹಿತಿಗಳೆಲ್ಲ ನಿಮಗೆ ಅಗತ್ಯವಿಲ್ಲ. ಫ್ಯಾನ್ಸಿ ಐಟಂ ಅಥವಾ ಕುಂಕುಮ ಎಲ್ಲ ಸಿಗುವ ಯಾವುದಾದರೂ ಅಂಗಡಿಗೆ ಹೋಗಿ ಎರಡು ರುಪಾಯಿಗೋ ಐದು ರುಪಾಯಿಗೋ ಸಿಗುವ ಕಾಶಿದಾರವೊಂದನ್ನು ತನ್ನಿ.ತೊಳೆದು ಇಷ್ಟದೇವರ ಮುಂದಿಟ್ಟು (ನನ್ನ ಗಮನಕ್ಕೆ ಬರಲೆಂದು) ಈ ಲೇಖನದ ಕೊನೆಯಲ್ಲಿ ಕಾಮೆಂಟ್ ನಲ್ಲಿ ಬರೆಯಿರಿ/ಫೇಸ್ ಬುಕ್ ನನ್ನ ವಾಲ್ ನಲ್ಲಿ ಬರೆಯಿರಿ/ಆರ್ಕುಟ್ ನಲ್ಲಿ ಸ್ಕ್ರಾಪ್ ಮಾಡಿರಿ. ೨೪ ಘಂಟೆಗಳಲ್ಲಿ ಆ ತಾಯತಕ್ಕೆ ಶಕ್ತಿಯನ್ನು ಇಲ್ಲಿಂದಲೇ ಆವಾಹನೆ ಮಾಡುತ್ತೇನೆ!!!!! ಅನಂತರ ಕಟ್ಟಿಕೊಂಡು ನಿಯಮ ಪಾಲಿಸಿ. (ಹೊರಗಡೆ ಕೆಲಸದ ಸಮಯದಲ್ಲಿ ಕಟ್ಟಿಕೊಂಡಿರಲು ಕಿರಿಕಿರಿಯಾದರೆ ಬೆಳಿಗ್ಗೆ ಆರರಿಂದ ಎಂಟರವರೆಗೆ ಕಟ್ಟಿಕೊಂಡರೆ ಸಾಕು). ಆರು ತಿಂಗಳಲ್ಲೇ ನಿಮ್ಮ ಬೊಜ್ಜು ಸಾಕಷ್ಟು ಕರಗಿ ನೀವು ತೆಳ್ಳಗಾಗುವುದರಲ್ಲಿ ಅನುಮಾನವೇ ಇಲ್ಲ!!! ಈ ತಾಯತದ ಇನ್ನೊಂದು ಮಹಿಮೆಯೆಂದರೆ ಇದು ನಿಮ್ಮನ್ನು ದಿನವಿಡೀ ಉಲ್ಲಸಿತರಾಗಿಟ್ಟಿರುತ್ತದೆ!!
        ಆರು ತಿಂಗಳಲ್ಲಿ ಬೊಜ್ಜು ಕರಗದಿದ್ದರೆ??-ಇದಲ್ಲವೇ ನಿಮ್ಮ ಪ್ರಶ್ನೆ? ಆರು ತಿಂಗಳು ತಾಯತ ಕಟ್ಟಿಕೊಂಡರೂ ಬೊಜ್ಜು ಸ್ವಲ್ಪವೂ ಕರಗದಿದ್ದರೆ ನಿಯಮಾಚರಣೆಗಳಲ್ಲಿ ಏನೋ ಲೋಪವಾಗಿದೆಯೆಂದೇ ಅರ್ಥ. ನಿಯಮಾಚರಣೆಗಳನ್ನು ನೂರಕ್ಕೆ ನೂರು ಪಾಲಿಸಿದರೂ ಬೊಜ್ಜು ಸ್ವಲ್ಪವೂ ಕರಗದಿದ್ದರೆ (ಈ ರೀತಿ ಸಲಹೆಕೊಟ್ಟಿದ್ದಕ್ಕೆ ಪರಿಹಾರವಾಗಿ) ನಿಮ್ಮ ದುಡ್ಡನ್ನು ನಾನೇ ವಾಪಸ್ ಕೊಡುತ್ತೇನೆ!!! ಮುಂದಿನ ಬಾರಿ ದೇವರಿಗೆ ಕಾಣಿಕೆಹಾಕುವಾಗ ಐದು ರೂಪಾಯಿ ಕಡಿಮೆ ಹಾಕಿ ಹಾಗೂ (ಮೇಲೆ ತಿಳಿಸಿದ ಕ್ರಮದಲ್ಲಿ-ಕಾಮೆಂಟ್/ವಾಲ್/ಸ್ಕ್ರಾಪ್) ನನ್ನ ಗಮನಕ್ಕೆ ತನ್ನಿ. ಇಲ್ಲಿಂದಲೇ ಐದು ರೂಪಾಯಿಯನ್ನು ದೇವರಿಗೆ (೨೪ ಘಂಟೆಯಲ್ಲಿ) ಜಮಾ ಮಾಡುತ್ತೇನೆ!!!!
(ಅತಿ ಮುಖ್ಯ ಸೂಚನೆ : ಎರಡನೇ ನಿಯಮ ಆಚರಣೆ ಮಾಡುವಾಗ ಎದೆ ಅಥವಾ ಹೊಟ್ಟೆಯ ಮೇಲ್ಬಾಗದಲ್ಲಿ ನೋವು ಬಂದರೆ ಕೂಡಲೇ ಹೃದಯತಜ್ಞರ ಸಲಹೆ ಪಡೆದು ಇ.ಸಿ.ಜಿ ಹಾಗೂ ಟಿ.ಎಂ.ಟಿ. ಮಾಡಿಸಿಕೊಳ್ಳಲೇಬೇಕು.) 

Tuesday, March 8, 2011

ಎಂಡೋಸಲ್ಫಾನ್ ಎಂಡೋಸಲ್ಫಾನ್ ಎಂಡೋಸಲ್ಫಾನ್ ಎಂಡೋಸಲ್ಫಾನ್....ಎಂಡೋಸಲ್ಫಾನ್ ಅತ್ಯಂತ ಕೆಟ್ಟದ್ದೇ?????


             ಟೊಂಯ್ಯ್ ಟೊಂಯ್ಯ್ ಎಂಬ ದುಃಖಭರಿತ ಹಿನ್ನಲೆ ದನಿಯೊಂದಿಗೆ ತಲೆದಪ್ಪ ಕೈಕಾಲು ಸೊಟ್ಟೆ ವಿಕಲಾಂಗ ಮಕ್ಕಳ ವ್ಯಕ್ತಿಗಳ ಚಿತ್ರಗಳು-ಒಂದೆರಡು ತಿಂಗಳಿಂದ ಈಚೆ ಇದನ್ನು ಮತ್ತೆ ಮತ್ತೆ ಟೀ.ವಿ ಯಲ್ಲಿ ನೀವು ನೋಡಿಯೇ ನೋಡಿರುತ್ತೀರಿ. ನಮ್ಮೆಲ್ಲಾ ಮಾದ್ಯಮಗಳು ಕರ್ನಾಟಕದ ಗಡಿಗೆ ತಾಗಿದಂತಿರುವ ಕಾಸರಗೋಡು ತಾಲೂಕಿನ ಕೆಲವು ಭಾಗದಲ್ಲಿ ನಡೆದ ಎಂಡೋಸಲ್ಫಾನ್ ದುರಂತದ ಬಗ್ಗೆ ವರದಿ ಮಾಡಿವೆ. (ಈ ದುರಂತ ನಡೆದು ದಶಕಗಳೇ ಆಗಿವೆ. ಆದರೆ ಈಗ ದೊಡ್ಡ ಸುದ್ದಿಯಾಗಿದೆ). ಮಂತ್ರಿಣಿಯೊಬ್ಬರು ಸಂತ್ರಸ್ತರ ಪರವಾಗಿ ಹೋರಾಡಿ ಅವರಿಗೆ ಪರಿಹಾರ ಕೊಡಿಸಲು ಪ್ರಯತ್ನಿಸುವುದಲ್ಲದೆ ಮುಂದೆಂದೂ ಹೀಗಾಗದಿರಲೆಂದು ಎಂಡೋಸಲ್ಫಾನನ್ನು ನಿಷೇದಿಸಲು ಮನವಿಮಾಡಿದ್ದಾರೆ. ಆಪ್ತ ಮಂತ್ರಿಣಿಯ ಮನವಿಯಂತೆ ಮಾನ್ಯ ಮುಖ್ಯಮಂತ್ರಿ ಯಡ್ಡಿಯೂರಪ್ಪರು ಕರ್ನಾಟಕದಲ್ಲಿ ತಾತ್ಕಾಲಿಕವಾಗಿ ಎಂಡೋಸಲ್ಫಾನ್ ಮಾರಾಟವನ್ನು ನಿಷೇದಿಸಿದ್ದಾರೆ. ಆದರೆ ಕೇಂದ್ರಸರ್ಕಾರ ಮಾತ್ರ ಬೇರೆಯೇ ರಾಗ ಹಾಡುತ್ತಿದೆ!! ತಿಮಿಂಗಿಲದಂತೆ ಕಾಣುವ ಶರದ್ ಪವಾರ್ ಎಂಡೋಸಲ್ಫಾನ್ ಪರವಾಗಿ ಮಾತಾಡುತ್ತಿದ್ದಾರೆ!!! ಆಸ್ಟ್ರೇಲಿಯಾ, ಬ್ರೆಜಿಲ್ ಮೊದಲಾದ ನಲವತ್ತಕ್ಕೂ ಹೆಚ್ಚು ದೇಶಗಳಲ್ಲಿ ಎಂಡೋಸಲ್ಫಾನ್ ಬಳಕೆಯಲ್ಲಿದೆ. ಸದ್ಯದಲ್ಲಿ ನಿಷೇದಿಸುವ ಅಗತ್ಯವಿಲ್ಲ. ಹಿಂದಿನ ನಾಲ್ಕು ತಜ್ಞರ ವರದಿಗಳು ನಿಷೇಧಿಸುವ ಅಗತ್ಯವಿಲ್ಲವೆಂದೇ ಹೇಳಿವೆ. ಇನ್ನೂ ಒಂದು ಹೊಸ ತಜ್ಞರ ಸಮಿತಿ ರಚಿಸಿ ಘಟನೆ ಪರಿಶೀಲಿಸಿ ಹಾನಿಯಬಗ್ಗೆ ಸಮಗ್ರ ವರದಿಕೊಟ್ಟರೆ ನಿಷೇದಿಸುವ ಬಗ್ಗೆ ಪರಿಶೀಲಿಸಬಹುದು-ಎಂದಿದ್ದಾರೆ!!!! ಅಬ್ಬಾ ಸೊಕ್ಕೆ!! ಅಂತಹಾ ವಿಷವನ್ನು ನಿಷೇದಿಸುವುದಿಲ್ಲವಂತೆ!!! ತಯಾರಿಸುವ ಕಂಪನಿಗಳಿಂದ ಎಷ್ಟು ದುಡ್ಡು ತಿಂದಿದ್ದಾನೇನೋ??-ಹೀಗೆಲ್ಲಾ ಸರಣಿ ಅಭಿಪ್ರಾಯಗಳು ನಿಮ್ಮ ತಲೆಯಲ್ಲಿ ಮೂಡಿದರೆ ಅದು ಅಸಹಜವಲ್ಲ. ಸಹಜ. ಆದರೆ ನಿಜ ಬೇರೆಯೇ ಇದೆ!! ನಾನು ಮುಂದೆ ಬರೆಯಲಿರುವ ಬರಹ ಎಂಡೋಸಲ್ಫಾನ್ ಅತ್ಯಂತ ಕೆಟ್ಟದು ಎಂಬ ನಿಮ್ಮ ಖಚಿತ ಅಭಿಪ್ರಾಯವನ್ನು ಬದಲಾಯಿಸದಿದ್ದರೂ ಸ್ವಲ್ಪವಾದರೂ ಅಲ್ಲಾಡಿಸಬಹುದು!!!! ಈ ಬಗ್ಗೆ ಹೆಚ್ಚಿಗೆ ಗೊತ್ತಿರುವವರನ್ನು ಕೇಳಿ ತಿಳಿದುಕೊಳ್ಳುವಂತೆ ಪ್ರೇರೇಪಿಸಬಹುದು. (ನೀವು ಹಾಗೆ ಮಾಡಿ ನಮ್ಮೊಂದಿಗೆ ಹಂಚಿಕೊಂಡರೆ ನನ್ನ ಅಭಿಪ್ರಾಯ ಸರಿಯೇ ತಪ್ಪೇ ಎಂದು ನನಗೂ, ಎಂಡೋಸಲ್ಫಾನ್ ಬಗ್ಗೆ ನಿಜವೇನು ಎಂದು ಇತರರಿಗೂ ಗೊತ್ತಾಗುತ್ತದೆ)
           ಒಂದು ದಶಕದ ಹಿಂದಿನ ಕಥೆ. ಮಲೆನಾಡು-ಕರಾವಳಿಗಳಲ್ಲಿ ವನಿಲ್ಲಾದ್ದೇ ಮಾತುಕತೆ. ವನಿಲ್ಲಾಕ್ಕೆ ಚಿನ್ನದ ಬೆಲೆಯಿದ್ದ ದಿನಗಳವು. (ಇಂದು ವನಿಲ್ಲಾಕ್ಕೆ ಕಾಲಿಗೆ ಹಾಕುವ ಹವಾಯಿ ಚಪ್ಪಲಿಯಷ್ಟು ಬೆಲೆಯಷ್ಟೇ!!) ಜನವರಿ-ಪೆಬ್ರವರಿಯಲ್ಲಿ ತೋಟಕ್ಕೆ ನೀರುಬಿಟ್ಟಕೂಡಲೇ ವನಿಲ್ಲಾ ಬಳ್ಳಿಯಲ್ಲಿ ಎಲೆ ಖಾಂಡ ಸೇರುವ ಭಾಗದಿಂದ ಗೊಂಚಲು ಮೂಡಲಾರಂಬಿಸುತ್ತಿತ್ತು. ಅನಂತರ ಅದು ಉದ್ದ ಬೆಳೆದು ಅದರಲ್ಲಿ ಹತ್ತಿಪ್ಪತ್ತು ಹೂ ದಿನಕ್ಕೊಂದು ಒಮ್ಮೊಮ್ಮೆ ಎರೆಡರಂತೆ ಅರಳುತ್ತಿದ್ದವು. ಅವನ್ನು ಕೃತಕ ಪರಾಗಸ್ಪರ್ಶ ಮಾಡಿದರೆ ಕಾಯಿಕಟ್ಟುತ್ತಿತ್ತು. ವನಿಲ್ಲಾಕ್ಕೆ ಚಿನ್ನದ ಬೆಲೆಯಿದ್ದಾಗ ಒಂದೊಂದು ಗೊಂಚಲೂ ನೂರಾರು ರೂಪಾಯಿಯ ಮಾಲಾಗಿತ್ತು. ಎಳೆ ಗೊಂಚಲು ಎಲೆ ಖಾಂಡದ ಮದ್ಯೆ ಹೊರಡುತ್ತಿದ್ದಂತೆ ಅದನ್ನೊಂದು ಕೀಟ ಕೊರೆಯುತ್ತಿತ್ತು. ಹಾಗೂ ಕೊರೆದ ಆ ಜಾಗದಲ್ಲಿ ಶಿಲೀಂದ್ರ ಬೆಳೆದು ಇಡೀ ಇಡೀ ಗೊಂಚಲೇ ಪ್ರಾರಂಬದಲ್ಲೇ ಸುಟ್ಟು ಕರಟಿಹೋದಂತಾಗುತ್ತಿತ್ತು. ಸಾವಿರಾರು ರೂಪಾಯಿ ಹಾನಿ. ಈ ಕೀಟದ ಉಪಟಳ ಹೆಚ್ಚಾದಾಗ ನಾವು ಸುತ್ತಮುತ್ತಲಿನ ಉಳಿದ ಬೆಳೆಗಾರರು ಮಾಡಿದಂತೆ ಮಾನೋಕ್ರೋಟೋಪಾಸ್ (ಬೆಳೆಗಳಿಗೆ-ತರಕಾರಿಗಳಿಗೆ ಸಾದಾರಣವಾಗಿ ಉಪಯೋಗಿಸುವ ಅಂತರ್ವ್ಯಾಪಿ ಕೀಟನಾಶಕ) ಹಾಗೂ ಮ್ಯಾನ್ಕೊಜೆಬ್ (ಕಾಂಟ್ಯಾಕ್ಟ್ ಫನ್ಜಿಸೈಡ್)-ಇವೆರಡನ್ನು ನೀರಿನಲ್ಲಿ ಕರಡಿ ವನಿಲ್ಲಾ ಬಳ್ಳಿಗೆ ಸ್ಪ್ರೇ ಮಾಡಿದೆವು. ಸ್ವಲ್ಪ ಹತೋಟಿ ಬಂದಂತಾದರೂ ಹತ್ತು ಹನ್ನೆರಡು ದಿನಗಳಾದಮೇಲೆ ಮತ್ತೆ ಕೀಟಗಳ ಹಾವಳಿ ಶುರು!!! ಆಗ ಬೇರೊಬ್ಬರ ಸಲಹೆಯಂತೆ ರೋಗಾರ್ (ಒಂದು ಅಂತರ್ವ್ಯಾಪಿ ಕೀಟನಾಶಕ) ಹಾಗೂ ಬಾವಿಸ್ಟಿನ್ (ಒಂದು ಅಂತರ್ವ್ಯಾಪಿ ಶಿಲೀಂದ್ರನಾಶಕ)ಗಳನ್ನು ಒಟ್ಟುಸೇರಿಸಿ ಬಳ್ಳಿಗಳಿಗೆ ಹೊಡೆದೆವು. ಆದರೂ ಒಂದೆರಡು ವಾರಗಳ ನಂತರ ಮತ್ತೆ ಕೀಟಸಮಸ್ಯೆ ಅಲ್ಲಲ್ಲಿ ಕಾಣಿಸಿಕೊಂಡಿತು!!! (ನಮ್ಮ ಪಕ್ಕದೂರಿನ ವನಿಲ್ಲಾ ಮಾರಾಟಗಾರನೊಬ್ಬ ಸಾಗರದಲ್ಲಿನ ಪರಿಚಯಸ್ತ ಬೆಳೆಗಾರರೊಬ್ಬರಿಗೆ ಫೋನ್ ಮಾಡಿ ಅಲ್ಲಿ ಅವರು ಗೊಂಚಲು ಹೊರಡುವುದಕ್ಕೆ ಮುಂಚೆಯೇ ಎಂಡೋಸಲ್ಫಾನ್ ಹೊಡೆಯುತ್ತಾರೆಂಬ ಸುದ್ದಿ ಹೇಳಿದ. ಅದನ್ನು ಕೇಳಿ ಅಬ್ಬಾ!! ಅಂತಾ ವಿಷ ಉಪಯೋಗಿಸುತ್ತಾರೆಯೇ ಎಂದು ಆಶ್ಚರ್ಯವಾಯಿತು!!) ಏನೇ ಆಗಲಿ. ಈ ಕೀಟಸಮಸ್ಯೆಗೆ ಸೂಕ್ತ ಪರಿಹಾರವೇನೆಂದು-ಸಕಲೇಶಪುರದ ಸಾಂಬಾರು ಮಂಡಳಿ ಸಂಶೋದನಾಕೇಂದ್ರದಲ್ಲಿ ಹಿರಿಯ ವಿಜ್ಞಾನಿಗಳಾಗಿದ್ದ-ನನ್ನ (ಕಸಿನ್) ಅಕ್ಕಳ ಮೈದುನರೂ ಆಗಿದ್ದ-ಶ್ರೀಯುತರನ್ನು ದೂರವಾಣಿ ಮೂಲಕ ಸಂಪರ್ಕಿಸಿದೆವು.
              ಶ್ರೀಯುತರ (ಅವರ ಹೆಸರು ಬೇರೆಯೇ ಇದೆ) ಜೊತೆಗಿನ ನಮ್ಮ ಸಂಬಾಷಣೆ ಬರೆಯುವ ಮೊದಲು ಆ ಹಿರಿಯ ವಿಜ್ಞಾನಿಗಳ ಬಗ್ಗೆ ಒಂದು ಪ್ಯಾರ ಬರೆಯುವುದೇ ಸೂಕ್ತ. ಕೊಪ್ಪಾ ಮೂಲದವರಾದ ಶ್ರೀಯುತರದ್ದು ಸಾಂಬಾರು ಮಂಡಳಿಯಲ್ಲಿ ದೊಡ್ದಹೆಸರು. ತಮ್ಮ ತೂಕದ ವಸ್ತುನಿಷ್ಟ ವಿಶ್ಲೇಷಣೆಗೆ ಹೆಸರಾದವರು. ಅನೇಕ ಉಪಯುಕ್ತ ಸಂಶೋದನಾ ಪ್ರಬಂದ ಮಂಡಿಸಿದವರು.ಸಾಂಬಾರು ಗಿಡಗಳ ಬಗ್ಗೆ ವಿಷಯ ಚೆನ್ನಾಗಿ ತಿಳಿದುಕೊಂಡಿರುವ ಹಾಗೂ ಅದಕ್ಕಿಂತ ಹೆಚ್ಚಾಗಿ ಹೊಸಹೊಸ ವಿಷಯ ತಿಳಿದುಕೊಳ್ಳಲು ಸದಾ ಉತ್ಸಾಹ ತೋರುವ ವ್ಯಕ್ತಿ. ಕಾರ್ಯಕ್ರಮಗಳಲ್ಲಿ ಎಂದೂ ಒಟ್ರಾಶಿ ಕಾಟಾಚಾರಕ್ಕೆ ಏನೇನೋ (ರೈತರ ಎದುರು) ವದರುವವರಲ್ಲ. (ಅನೇಕಜನ ಕೃಷಿತಜ್ಞರು ಎದುರಿಗೆ ಕೂತ ರೈತರನ್ನು ಗೂಬೆಗಳೆಂದು ತಿಳಿದು ಒಟ್ಟಾರೆ ಏನೇನೋ ವದರುತ್ತಿರುತ್ತಾರೆ!!) ಕಾರ್ಯಕ್ರಮಗಳಲ್ಲಿ ಏನಾದರೊಂದು ಚರ್ಚೆ ನಡೆಯುತ್ತಿದ್ದು ಗಲಾಟಿ ವಾತಾವರಣವಿದ್ದು ಆ ಸಮಯದಲ್ಲಿ ತಮ್ಮ ಅಭಿಪ್ರಾಯ ಹೇಳಲು ಇವರು ಎದ್ದು ನಿಂತರೆ ಅವರ ಮಾತು ಕೇಳಲು ಇಡೀ ಸಭೆಯೇ ನಿಶಬ್ದವಾಗುತ್ತಿತ್ತು. ಈಗ ಅವರು ಬಹುಷಃ ಸಿಕ್ಕಿಂ ನ ಗ್ಯಾಂಗ್ಟಕ್ ನಲ್ಲಿ ಕೆಲಸಮಾಡುತ್ತಿರಬೇಕು.
            ಅತ್ತ ಫೋನ್ ಎತ್ತಿದ ಶ್ರೀಯುತರಿಗೆ ಕೀಟಬಾದೆ ಸಮಸ್ಯೆಯನ್ನೂ ಹಾಗೂ ಅದರ ನಿಯಂತ್ರಣಕ್ಕೆ ಉಪಯೋಗಿಸಿದ ಕೀಟನಾಶಕ/ಶಿಲೀಂದ್ರನಾಶಕಗಳ ಪಟ್ಟಿಯನ್ನು ಸಂಕ್ಷಿಪ್ತವಾಗಿ ಹೇಳಿ ಅಲ್ಪಸ್ವಲ್ಪ ಕೀಟಗಳ ಹಾವಳಿ ಇರುವುದರಿಂದ ಇನ್ನೇನು ಸ್ಪ್ರೇ ಮಾಡಬಹುದೆಂದು ಸಲಹೆ ಕೇಳಿದೆ. ಅವರಿಂದ ಬಂದ ಉತ್ತರ-ಸಾಕು. ಭೂಮಿಗೆ ತುಂಬಾ ವಿಷ ಸುರಿದುಬಿಟ್ಟಿದ್ದೀರಿ. ಎಲ್ಲೋ ಅಲ್ಪಸ್ವಲ್ಪ ಕೀಟಬಾದೆಯಿದ್ದರೆ ಸದ್ಯಕ್ಕಂತೂ ಏನೂ ಬೇಡ. ಆಗ ನಾನು-ಈ ವರ್ಷವಂತೂ ಹೀಗೆ ಆಯಿತು-ಮುಂದಿನವರ್ಷ ಕೀಟಬಾದೆ ಬಗ್ಗೆ ಮುಂಜಾಗರೂಕತೆ ತೆಗೆದುಕೊಳ್ಳೋಣ-ಯಾವುದಾದರೊಂದು ಒಳ್ಳೇ ಕೀಟನಾಶಕವನ್ನು ಗೊಂಚಲು ಹೊರಡುವ ಸಮಯದಲ್ಲೇ ಸ್ಪ್ರೇ ಮಾಡಿಬಿಡೋಣವೆಂದು ಮನದಲ್ಲೇ ಆಲೋಚಿಸಿ-ಆಯಿತು, ಇವೆಲ್ಲದಕ್ಕಿಂತ ಕಡಿಮೆ ಹಾನಿಕಾರಕ ಹಾಗೂ ಕಡಿಮೆ ವಿಷದ ಕೀಟನಾಶಕ ಯಾವುದಾದರೂ ಇದ್ದರೆ ಹೇಳಿ. ಬರುವ ವರ್ಷ ಪ್ರಾರಂಬದಲ್ಲೇ ವನಿಲ್ಲಾ ಬೀಳುಗಳಿಗೆ ಸ್ಪ್ರೇ ಮಾಡುತ್ತೇವೆ-ಎಂದು ಕೇಳಿದಾಗ ಶ್ರೀಯುತರಿಂದ ಬಂದ ಉತ್ತರ-ಒಮ್ಮೆ ನನಗೇ ತುಂಬಾ ಆಶ್ಚರ್ಯವಾಯಿತು-ಎಂಡೋಸಲ್ಫಾನ್(!!!!!!!!). ಎಂಡೋಸಲ್ಫಾನ್ ಸ್ಪ್ರೇ ಮಾಡಿ.ಎಲ್ಲದಕ್ಕಿಂತ ಅದೇ ಕಡಿಮೆ ಹಾನಿಕಾರಕ ಎಂದು.
           ಹೌದು. ಇದೊಂದು ವಿಚಿತ್ರ. ಆದರೂ ಸತ್ಯ!!! ಎಲ್ಲಾ ಕೀಟನಾಶಕಗಳೂ ವಿಷವೇ. ಆದರೆ ಇಂದು ಮಾರುಕಟ್ಟೆಯಲ್ಲಿ ಸಿಗುವ (ನೀವು ಹಗಲಲ್ಲಿ ಈ ಬ್ಲಾಗ್ ಓದುತ್ತಿದ್ದರೆ-ಈ ಕ್ಷಣದಲ್ಲಿ ಸಾವಿರಾರು ರೈತರಿಂದ ಸಿಂಪಡನೆಯಾಗುತ್ತಿರುವ)- ಮಾನೋಕ್ರೋಟೋಪಾಸ್,ರೋಗಾರ್ -ಮೊದಲಾದ ಹೆಚ್ಚಿನ ಎಲ್ಲಾ ಕೀಟನಾಶಕಗಳಿಗಿಂತ ಎಂಡೋಸಲ್ಫಾನ್ ಕಡಿಮೆ ವಿಷದ್ದು ಹಾಗೂ ಹಾಗಾಗಿ ಅವೆಲ್ಲಕ್ಕೆ ಹೋಲಿಸಿದರೆ ಒಳ್ಳೆಯದು!!!! ಇನ್ನೊಂದು ರೀತಿಯಲ್ಲಿ ಹೇಳುವುದಾದರೆ-ನಾವು (ದಿನನಿತ್ಯ) ತಿನ್ನುವ ದೋಸೆ,ಹುಳಿ,ಸಾಂಬಾರು,ಸಾರು,ತರಕಾರಿ ಪಲ್ಯ,ಕೆಲವು ಹಣ್ಣುಗಳು (ಉದ್ದು-ತೊಗರಿ ಗಿಡಗಳಿಗೆ, ತರಕಾರಿ ಗಿಡಗಳಿಗೆ ಕಾಲಕಾಲಕ್ಕೆ ಮೇಲೆ ಹೇಳಿದ ಕೀಟನಾಶಕ/ಶಿಲೀಂದ್ರನಾಶಕಗಳನ್ನು ನಿರೀಕ್ಷಿತ ಪಸಲು ಪಡೆಯಲು ಹೆಚ್ಚಿನ ಎಲ್ಲಾ ರೈತರು ಸ್ಪ್ರೇ ಮಾಡೇಮಾಡಿರುತ್ತಾರೆ!!!)-ಕುಡಿಯುವ ಹಾಲು (ದನಗಳಿಗೆ ದಿನಾ ಹಾಕುವ ಹತ್ತಿ,ಶೇಂಗಾ ಹಿಂಡಿಗಳಲ್ಲಿ ಹತ್ತಿ ಹಾಗೂ ನೆಲಗಡಲೆ ಗಿಡಗಳಿಗೆ ಹೊಡೆದ ಕೀಟನಾಶಕಗಳ ಅಂಶ ಇದ್ದೇಇರುತ್ತೆ!!)-ಇವೆಲ್ಲದರಲ್ಲೂ ಎಂಡೋಸಲ್ಫಾನ್ ಗಿಂತ ಹೆಚ್ಚು ವಿಷದ ಹಾಗೂ ಅಪಾಯಕಾರಿಯಾದ ಕೀಟನಾಶಕಗಳು ಸಾದಾರಣವಾಗಿ ಇದ್ದೇ ಇರುತ್ತವೆ. ಪಾಪ ಎಂಡೋಸಲ್ಫಾನ್ ಮಾತ್ರ ನಿಷೇದಕ್ಕೊಳಗಾಗಿದೆ!!! ಎಷ್ಟೊಂದು ವಿಚಿತ್ರ ಅಲ್ವಾ?? ನಂಬಲೇ ಕಷ್ಟವಾಗುತ್ತದೆ.
           ಶ್ರೀಯುತರು ಹಾಗೆಂದಕೂಡಲೇ ಅವರು ಹೇಳಿದ್ದು ಸತ್ಯವಿರಬಹುದೇನೋ ಎಂದು ನಾನು ನಂಬಿದಂತೆ ನೀವೂ ನಂಬಬೇಕು ಎಂದು ನಾನು ಹೇಳುತ್ತಿಲ್ಲ. ಈ ಬ್ಲಾಗ್ ಓದುಗರ್ಯಾರಾದರೂ ಕೀಟನಾಶಕಗಳ ವಿಷಯದಲ್ಲಿ ತಜ್ಞರಾಗಿದ್ದರೆ ಅಥವಾ ಆ ವಿಷಯದಲ್ಲಿ ಹೆಚ್ಚು ತಿಳಿದುಕೊಂಡವರಿದ್ದರೆ ಎಂಡೋಸಲ್ಫಾನ್ ಬೇರೆಲ್ಲಾ ಕೀಟನಾಶಕಗಳಿಗಿಂತ ಕಡಿಮೆ ಹಾನಿಕಾರಕ ಎಂಬ ವಿಷಯ ಸತ್ಯವೋ ಸುಳ್ಳೋ ಎಂಬುದನ್ನು ನಮ್ಮೊಂದಿಗೆ ಹಂಚಿಕೊಂಡರೆ ಅನುಕೂಲ. ಅಥವಾ ಓದುಗರ್ಯಾರಾದರೂ ತಮ್ಮ ಪರಿಚಯದ ಈ ವಿಷಯದ ಬಗ್ಗೆ ಹೆಚ್ಚು ತಿಳಿದುಕೊಂಡ ವ್ಯಕ್ತಿಗಳಿಗೆ ಈ ಲೇಖನವನ್ನು ಕಳಿಸಿ/ಅಥವಾ ವಿಷಯ ಕೇಳಿ ಅವರ ಅಭಿಪ್ರಾಯ ತಿಳಿದುಕೊಳ್ಳಬಹುದು. (ನನ್ನ ಬ್ಲಾಗ್ ಬರಹಕ್ಕೆ ಯಾರುಬೇಕಾದರೂ ಕಾಮೆಂಟ್ ಬರೆಯಲಾಗುವಂತೆ ಸೆಟ್ಟಿಂಗ್ ಮಾಡಿದ್ದೇನೆ)
            ಮಾದ್ಯಮದಲ್ಲಿ ಎಂಡೋಸಲ್ಫಾನ್ ದುರಂತವನ್ನು ಕಣ್ಣಾರೆ ನೋಡಿರುವ ನಿಮಗೆ ಒಂದು ಪ್ರಶ್ನೆ ಮೂಡಬಹುದು. ಹಾಗಾದರೆ ಕಾಸರಗೋಡಿನಲ್ಲಿ ಗೇರು ಮರಗಳಿಗೆ ಎಂಡೋಸಲ್ಫಾನ್ ಹೊಡೆದಿದ್ದು ಸುಳ್ಳೇ? ಆ ಜಾಗದಲ್ಲಿ ವಿಕಲಾಂಗತೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ಸುಳ್ಳೇ?? ಅವರೆಲ್ಲಾ ನರಳುತ್ತಿರುವುದು ಸುಳ್ಳೇ??? ಪಡ್ರೆ ಸುತ್ತಮುತ್ತ ಗೇರುಮರಗಳಿಗೆ ಎಂಡೋಸಲ್ಫಾನ್ ಸಿಂಪಡಿಸಿದ್ದು ಸತ್ಯ. ಕೆಲವೊಂದು ವರದಿಗಳ ಪ್ರಕಾರ ಅಲ್ಲೆಲ್ಲ ವಿಕಲಾಂಗತೆ ಹೆಚ್ಚಿದ್ದದ್ದೂ ಸತ್ಯವಿರಬಹುದು. (ಬಹುಷಃ) ಕಾರಣ ಎಂಡೋಸಲ್ಫಾನ್ ಗಿಂತ ಅದನ್ನು ಸಿಂಪಡಿಸಿದ ರೀತಿಯದ್ದು!!!!. ಚಿಕ್ಕ ವಿಮಾನವೋ ಹೆಲಿಕ್ಯಾಪ್ಟರೋ ಯಾವುದೋ ಒಂದರ ಮೂಲಕ ಎತ್ತರದಿಂದ ಮರಗಳೆಲ್ಲದರ ಮೇಲೆ ಮೇಲಿನಿಂದ ಬೀಳುವಂತೆ ಸಿಂಪಡಿಸಿದ್ದು ಆ ರೀತಿ ಸಿಂಪಡಿಸಿದ್ದರಿಂದ ಕುಡಿಯುವ ನೀರಿಗೋ ಅಥವಾ ನೀರಿನ ಮೂಲಕ್ಕೋ ಹೆಚ್ಚಿನ ಪ್ರಮಾಣದಲ್ಲಿ ಸೇರಿ ವಿಕಲಾಂಗಕತೆಗೆ ಕಾರಣವಾಗಿರಬಹುದು. 
         (ಹೆಚ್ಚಿನ ಮಾಹಿತಿ ಬಯಸುವವರಿಗಾಗಿ- ದಿನನಿತ್ಯ ಸಾವಿರಾರು ಲೀಟರ್ ಭೂಮಿಗೆ ಸುರಿಯಲ್ಪಡುತ್ತಿರುವ ಮಾನೋಕ್ರೋಟೋಪಾಸ್ ಹಾಗೂ ಅತ್ಯಂತ ಕೆಟ್ಟದ್ದೆಂದು ನಿಷೇದಕ್ಕೊಳಗಾಗಿರುವ ಎಂಡೋಸಲ್ಫಾನ್ ಇವೆರಡರ ವಿಷತೆ () ವಿಶ್ಲೇಷಣೆ- ಮಾನೋಕ್ರೋಟೋಪಾಸ್- World Health Organization (WHO) Acute Hazard Rankings (???ಪ್ರಕಾರ 1b (Highly hazardous) (ಹೆಚ್ಚಿನ ಮಾಹಿತಿ).  ಎಂಡೋಸಲ್ಫಾನ್ ranking - 2 (Moderately hazardous) (ಹೆಚ್ಚಿನ ಮಾಹಿತಿ)!!!!!)
        ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ-ಅನಿಸಿಕೆಗಳಿಗೆ ಕಾತುರನಾಗಿದ್ದೇನೆ.