Wednesday, May 16, 2012

ಬಲ್ಲಾಳರಾಯನದುರ್ಗದ ಮೇಲೆ ದನ ಮೇಯಿಸುವ ಲಕ್ಷ್ಮಣಗೌಡ.........

          ಬಾಳೆಹೊನ್ನೂರಿನಲ್ಲಿ ಬೆಳಗಿನ ತಿಂಡಿ ತಿಂದು – ಸ್ವಲ್ಪವೂ ನೇರವಿಲ್ಲದ, ಅಂಕು ಡೊಂಕಾದ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಸಾಗುತ್ತಾ ಸಾಗುತ್ತಾ – ಮಾಗುಂಡಿ, ಬಾಳೂರು, ಜಾವಳಿ, ಕೆಳಗೂರು ದಾಟಿ ಸುಂಕಸಾಲೆಯೆಂಬ ಚಿಕ್ಕ ಊರಿನಲ್ಲಿ ಬಲಕ್ಕೆ ತಿರುಗಿ ಒಂದಿಷ್ಟು ಕಿಲೋಮೀಟರು ಸಾಗಿದರೆ ಆ ದೊಡ್ಡ ದೇವಸ್ಥಾನ ಸಿಗುತ್ತದೆ. ಆಚೆ ಈಚೆ ಕಾಫಿ ಎಸ್ಟೇಟುಗಳು, ಬೆಟ್ಟ ಗುಡ್ಡಗಳು - ಬೈಕಿನಲ್ಲಿ ಆ ರಸ್ತೆಯಲ್ಲಿ ಸಾಗುವುದು ನಿಜಕ್ಕೂ ಮಜಾ!!! ಆ ದೇವಸ್ಥಾನ ಬಲ್ಲಾಳರಾಯನದುರ್ಗ ಚಾರಣದ ಮೊದಲ ಮೆಟ್ಟಿಲು (ಬೇಸ್ ಪಾಯಿಂಟ್). ದೇವಸ್ಥಾನದ ಎದುರೊಂದು ಕೊಳ – ದಡದಲ್ಲಿ ಟಿಂಗ್ ಟಿಂಗ್ ಎಂದು ಗಂಟೆಶಬ್ದಮಾಡುತ್ತಾ ಮೂರ್ನಾಕು ದನಗಳು ಮೇಯುತ್ತಿದ್ದವು.ಅಲ್ಲೆಲ್ಲೋ ಹಕ್ಕಿಯೊಂದು ಇಂಪಾಗಿ ಕೂಗುತ್ತಿತ್ತು. ಆ ಶಬ್ದಗಳನ್ನು ಬಿಟ್ಟರೆ ನೀರವ ನಿಶಬ್ದ ವಾತಾವರಣ. ಅರ್ಚಕರು ಅಲ್ಲೇ ಎಲ್ಲೋ ಹೋಗಿದ್ದರು. ಹಣ್ಣುಕಾಯಿ ಮಾಡಿಸಲು ಅರ್ಚಕರ ದಾರಿ ಕಾಯುತ್ತಿದ್ದ ಅರವತ್ತು ಎಪ್ಪತ್ತು ವರ್ಷದ ಸ್ಥಳೀಯ ರಾಮೇಗೌಡನನ್ನು ಮಾತಿಗೆ ಎಳೆದೆವು. ಅಲ್ಲಿಂದ ಮುಂದೆ ಬೆಟ್ಟದ ಮೇಲೆ ಹೋಗುವುದು ಹೇಗೆ ಹಾಗೂ ಎಷ್ಟುದೂರ ಎಂದು ಕೇಳುವುದು ನಮ್ಮ ಉದ್ದೇಶವಾಗಿತ್ತು. ಹೀಗೆ ಹೋಗಿ, ಹೀಗೆ ಹೋಗಿ ಎಂದು ದಾರಿ ಹೇಳಿದ ರಾಮೇಗೌಡರು ಬೆಟ್ಟದ ಮೇಲೆ ನೀರು ಇದೆಯಾ? ಎಂಬ ನಮ್ಮ ಪ್ರಶ್ನೆಗೆ ಉತ್ತರವಾಗಿ – ಹೊ ಇದೆ. ಅಲ್ ಲಕ್ಷ್ಮಣಗೌಡ ಇದಾನೆ. ಅವ್ನ್ ಕೇಳಿ. ಹೇಳ್ತಾನೆ ಎಂದರು.
          ಲಕ್ಷ್ಮಣಗೌಡ ಬೆಟ್ಟದ್ ಮೇಲೆ ಏನ್ ಮಾಡ್ತಾನೆ?- ನಾವು. ರಾಮೇಗೌಡರು – ದನಾ ಮೇಯ್ಸ್ತಾ ಇರ್ತಾನೆ. ವಾರಕ್ಕೊಂದ್ ಸಲಾ ಮನೆಗ್ ಬರ್ತಾನೆ. ಉಳುದ್ ಟೈಮ್ ಬೆಟ್ಟದ್ ಮೇಲೇ ಇರ್ತಾನೆ ಅಂದರು. ಬಲ್ಲಾಳರಾಯನದುರ್ಗದ ಬೆಟ್ಟ ನೋಡುವ ಕುತೂಹಲಕ್ಕಿಂತ ನಮಗೀಗ – ವಾರಕ್ಕೊಮ್ಮೆ ಮನೆಗೆ ಬಂದು ಅಕ್ಕಿ ಸಾಮಾನು ತಗಂಡ್ ಹೋಗಿ – ಒಬ್ಬಂಟಿಯಾಗಿಯೇ ಬೆಟ್ಟದ ಮೇಲೆ ದನಮೇಯ್ಸ್ತಾ ದಿನಕಳೆಯುವ – ಲಕ್ಷ್ಮಣಗೌಡನನ್ನು ನೋಡುವ ಹಾಗೂ ಆತನ ಅನುಭವಗಳನ್ನು ಕೇಳುವ ಕುತೂಹಲವೇ ಹೆಚ್ಚಾಯಿತು. (ನೂರಾರು ದನಗಳ ಮದ್ಯೆ ಒಬ್ಬಂಟಿ ಎಂಬ ಭಾವನೆ ತನಗೆ ಕಾಡುವುದಿಲ್ಲ ಎಂದು ಮೇಲೆಹೋಗಿ ಮಾತಾಡಿಸುತ್ತಿದ್ದಾಗ ಲಕ್ಷ್ಮಣಗೌಡ ಹೇಳಿದ).
ಬೆಟ್ಟಕ್ಕೆ ದಾರಿ 
               ದೇವಸ್ಥಾನದಿಂದ ಸ್ವಲ್ಪ ಮುಂದೆ ಎಸ್ಟೇಟ್ ಒಂದಕ್ಕೆ ಹೋಗುವ ದಾರಿಯಲ್ಲೇ ಮುಂದೆ ಸಾಗಿ ಬಲಕ್ಕೆ ಕಾಣುವ (ದನಗಳು ಓಡಾಡುವ ತರದ) ಚಿಕ್ಕ ಕಾಲುದಾರಿಯಲ್ಲಿ ಒಂದಿಷ್ಟು ದೂರ ಸಾಗಿದರೆ ಕಾಡು ಕೊನೆಯಾಗಿ ಹುಲ್ಲು ಹಾಗು ಅಲ್ಲಲ್ಲಿ ಬಂಡೆಕಲ್ಲುಗಳಿರುವ ದಾರಿ ಸಿಗುತ್ತದೆ. ಹೆಂಗಸರು ಮಕ್ಕಳೂ ಆರಾಮವಾಗಿ (=ತುಂಬಾ ಕಷ್ಟಪಡದೇ) ನಡೆದು ಹೋಗಬಹುದು. ದೇವಸ್ಥಾನದಿಂದ ಬೆಟ್ಟದ ತಲೆಗೆ ಎರಡು ಮೂರು ಗಂಟೆಗಳ ದಾರಿಯಷ್ಟೆ. ಕಾಡು ಕೊನೆಯಾಗುತ್ತಿರುವಂತೆಯೇ ಪ್ರಕೃತಿ ಸೌಂದರ್ಯ ಅನಾವರಣಗೊಳ್ಳಲಾರಂಬಿಸುತ್ತದೆ. ಒಂದು ಬದಿ ಆಳದಲ್ಲಿ ದಕ್ಷಿಣಕನ್ನಡ ಜಿಲ್ಲೆ. ಮತ್ತೊಂದು ಬದಿ ನಮ್ಮ ಚಿಕ್ಕಮಗಳೂರು ಜಿಲ್ಲೆ. ಬೆಟ್ಟದ ಮೇಲೆ ಹಿಂದ್ಯಾವುದೋ ಒಂದು ಕಾಲದಲ್ಲಿ ಯಾರೋ ಒಬ್ಬ ಪಾಳೆಗಾರನೋ ಯಾರೋ (ಆತನ ಹೆಸರು ಬಲ್ಲಾಳರಾಯ ಇರಬಹುದು. ಈ ಬ್ಲಾಗ್ ಲೇಖನ ಓದಿದವರು ಯಾರಾದರೂ ಗೊತ್ತಿದ್ದವರು ತಿಳಿಸಿದರೆ ಅನುಕೂಲ) ಕಟ್ಟಿದ ಕೋಟೆಯ ಅವಶೇಷಗಳಿವೆ. ವೀಕ್ಷಣೆಗೆ ಮಾಡಿದ ಬುರುಜುಗಳೂ ಅರ್ದ ಜರಿದು ಬಿದ್ದ ಸ್ಥಿತಿಯಲ್ಲಿವೆ.
ಬೆಟ್ಟದ ಮೇಲೆ!!!
         ಬಲ್ಲಾಳರಾಯನದುರ್ಗ ಬೆಟ್ಟದ ವಿಶೇಷವೇನೆಂದರೆ ಅದು ಇತರ ಕೆಲವು ನಮ್ಮ ಪಶ್ಚಿಮಘಟ್ಟದ ಬೆಟ್ಟಗಳಂತೆ ಚೂಪಾಗಿಲ್ಲ. ಮುಳ್ಳಯ್ಯನಗಿರಿ, ಕೊಡಚಾದ್ರಿ ಹಾಗೂ ಮೇರ್ತಿ ಮೊದಲಾದ ಬೆಟ್ಟಗಳ ತುದಿ ಚೂಪು. ಶಿಖರಾಗ್ರದಲ್ಲಿ ವಿಸ್ತಾರದ ಜಾಗವಿರುವುದಿಲ್ಲ. ಆದರೆ ಕುದ್ರೆಮುಖ ಹಾಗಲ್ಲ. ಬೆಟ್ಟದಮೇಲೆನೇ ವಿಸ್ತಾರವಾದ ಜಾಗವಿದ್ದು ಐದಾರು ಸಾವಿರ ಅಡಿ ಎತ್ತರದಲ್ಲಿ ದಟ್ಟಕಾಡು, ತೊರೆ ಹಾಗೂ ಜಲಪಾತವಿದೆ. ಬಲಾಳರಾಯನದುರ್ಗ ಬೆಟ್ಟವೂ ಕುದುರೆಮುಖಬೆಟ್ಟದಂತೆ. ಬೆಟ್ಟದ ಮೇಲೆ ಕುದ್ರೆಮುಖ ಬೆಟ್ಟದ ಮೇಲಿಗಿಂತಲೂ ಕಿಲೋಮೀಟರ್ ಗಟ್ಟಲೆ ವಿಸ್ತಾರವಾದ ಜಾಗವಿದೆ. (ಹತ್ತುವ ಮೊದಲು ಕೆಳಗಿನಿಂದ ಬೆಟ್ಟ ನೋಡಿದಾಗ ಅದು ಗಮನಕ್ಕೆ ಬರುವುದಿಲ್ಲ). ಬೆಟ್ಟದ ಮೇಲ್ಬಾಗ ತಲುಪುತ್ತಿದ್ದಂತೆ ಅದ್ಭುತ ಸೌಂದರ್ಯ ಅನಾವರಣಗೊಳ್ಳುತ್ತದೆ!!! ಚಿಕ್ಕಮಗಳೂರು ಜಿಲ್ಲೆಕಡೆ (ನಾವು ಬಂದ ಕಡೆ) ಕೋಟೆಯ ಬುರುಜು ಹಾಗು ಮುಂದೆ ಪ್ರಪಾತ. ಇನ್ನೊಂದುಕಡೆ ಚಿಕ್ಕಪುಟ್ಟ ರಾಶಿರಾಶಿ ಬೋಳು ಬೆಟ್ಟಗಳು. ಅವುಗಳ ಮೇಲೆ ಹಸಿರು ಎಳೆಹುಲ್ಲಿನ ಹೊದಿಕೆ. (ಡಿಸೆಂಬರ್ ನಿಂದ ಮಾರ್ಚಿ ಕೊನೆಯವರೆಗೆ ಬಹುಶಃ ಒಣಗಿದ ಹುಲ್ಲಿನ ಹೊದಿಕೆಯಿರುತ್ತದೇನೋ). ಆ ಚಿಕ್ಕಪುಟ್ಟ ಬೆಟ್ಟಗುಡ್ಡಗಳ ಮದ್ಯದಲ್ಲಿ ಶೋಲಾ ಕಾಡು. ನಾಕೈದಾರು ಚಿಕ್ಕ ಗುಡ್ಡಗಳು ಸೇರುವಲ್ಲಿ ಒತ್ತೊತ್ತಾಗಿ ಮರಗಳಿರುವ ರತ್ನಗಂಬಳಿ ಹಾಸಿದಂತೆ ದಟ್ಟಕಾಡು. ಅಂತಾ ಜಾಗದಲ್ಲಿ ಚಿಕ್ಕ ನೀರಿನ ಹರಿವು. ಒಂದೆರಡು ಘಂಟೆ ನಡೆದು ಬೆಟ್ಟದ ಮೇಲೆಯೇ ಇರುವ ಆ ಚಿಕ್ಕಪುಟ್ಟ ಗುಡ್ಡಗಳು ಹಾಗು ಶೋಲಾ ಕಾಡುಗಳನ್ನು ದಾಟಿ ದೂರದಲ್ಲಿ ಸ್ವಲ್ಪ ಎತ್ತರದಲ್ಲಿ ಕಾಣುವ ಬೆಟ್ಟವನ್ನು ಹತ್ತಿದರೆ-ಬಹುಶಃ ಬಾರೀ ಪ್ರಪಾತ ಹಾಗು ಅಲ್ಲಿಂದಾಚೆ ದಕ್ಷಿಣಕನ್ನಡ ಕಾಣಬಹುದು. ಒಂದು ರಾತ್ರಿ ಬೆಟ್ಟದ ಮೇಲೆ ತಂಗಿದರೆ ಎಲ್ಲಾ ನೋಡಬಹುದೇನೋ. ಮಳೆಗಾಲದ ನಂತರದ ಅಕ್ಟೋಬರ್ ತಿಂಗಳಲ್ಲಿ ಬೆಟ್ಟಹತ್ತಿದರೆಬೆಟ್ಟದಮೇಲಿನ ಶೋಲಾ ಕಾಡಿನ ನಡುವೆ ಹರಿಯುವ (ಮಳೆಯಿಂದ ಮೈದುಂಬಿಕೊಂಡಿರುವ) ತೋರೆಯನ್ನೇ ಅನುಸರಿಸಿ ನಡೆದರೆ – ಆ ತೊರೆ ದಕ್ಷಿಣಕನ್ನಡದಕಡೆ ಆಳದ ಜಲಪಾತವಾಗಿ ಬೀಳುವ ಭಯಂಕರ ದೃಶ್ಯ ಕಾಣಬಹುದೆನ್ನಿಸುತ್ತದೆ!! (ಆ ಕಡೆಯಿಂದ ಅದಕ್ಕೊಂದು ಹೆಸರೂ ಇರಬಹುದು!!!). ನಾನು ಎಷ್ಟೇ ಹೇಳಿದರೂ ಎಂದೆಂದೂ ಅದು ನೀವೇ ಹೋಗಿ ನೋಡಿದಂತಾಗುವುದಿಲ್ಲ. ಆದರೆ ಆ ದೃಶ್ಯಾವಳಿಯ ಒಂದಿಷ್ಟು ಫೋಟೋಗಳನ್ನ – ಹೆಚ್ಚಿನವು (ಬದಿಯಲ್ಲಿ ಒಂದೆರಡು ಹಿತನುಡಿ ಬರೆದು) ಗೋಡೆಗೆ ದೊಡ್ಡದಾಗಿ ಅಂಟಿಸುವ ಪೋಸ್ಟರ್ ಗಳಿಗೆ ಹೇಳಿಮಾಡಿಸಿದಂತಿವೆ – ಅವುಗಳನ್ನು ನನ್ನ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಮೆಸ್ಮರೈಸಿಂಗ್ ಮಲ್ನಾಡ್ ಎಂಬ ಆಲ್ಬಮ್ಮಲ್ಲಿ ಹಾಕಿದ್ದೀನಿ. ಅವುಗಳನ್ನು ನೋಡಲು ಇಲ್ಲಿಕ್ಲಿಕ್ಕಿಸಿ. (ಪುರುಸೊತ್ತಿದ್ದರೆ ಕಾಮೆಂಟಿಸಿ).
ಬೆಟ್ಟದ ಮೇಲೆ-ಮತ್ತೊಂದು ದೃಶ್ಯ 

        ಬೆಟ್ಟದ ತಲೆ ಮುಟ್ಟಿದಾಗ ಮದ್ಯಾಹ್ನ ಒಂದು ಘಂಟೆ. ಮೇಲ್ಬಾಗದಲ್ಲಿ, ನೆಲದಿಂದ ಐದಾರು ಅಡಿ ಎತ್ತರದ, ಸುತ್ತಲೂ ಕಲ್ಲುಮೇಲೆ ಕಲ್ಲು ಪೇರಿಸಿ ಕಟ್ಟಿದ ಮುರುಕು ಗೋಡೆಯಿರುವ ವಿಶಾಲವಾದ ಅವಶೇಷವಿದೆ. ಮೂರ್ನಾಲ್ಕು ಮೆಟ್ಟಿಲೇರಿ – ಅಡ್ಡಲಾಗಿದ್ದ ಮರದ ಗಳ ಸೊಪ್ಪು (ಹೆಬ್ಬಾಗಿಲು??) ಬದಿಗೆ ಸರಿಸಿ ಒಳಗೆ ಹೋದಾಗ ನಮಗೆ ಕಾಣಿಸಿದ್ದೇ ಕೋಟೆಯ ಆಸ್ಥಾನ-ಈಗ ದನದ ಲಾಯ!!! ರಾತ್ರಿ ದನಗಳನ್ನು ಒಟ್ಟುವ ಜಾಗ. ಇನ್ನೂ ಮುಂದೆ ಮತ್ತೊಂದು ಮುರುಕು ಗೋಡೆ ದಾಟಿದಾಗ ನಮಗೆ ಕಂಡಿದ್ದೇ – ಎರಡು ಜೊತೆ ಬಡಿಗೆಗಳನ್ನ ತಲೆಕೆಳಗಾದ ವಿ ಆಕಾರದಲ್ಲಿ ಹತ್ತು ಅಡಿ ದೂರದಲ್ಲಿ ಹುಗಿದು, ನಾಕೈದು ಅಡಿ ಎತ್ತರದಲ್ಲಿ ಅದಕ್ಕೊಂದು ಮರದ ಗಳ ಅಡ್ಡ ಇಟ್ಟು, ಅದರ ಮೇಲೆ ನೀಲಿ ಟಾರ್ಪಲ್ ಹಾಸಿ ಮಾಡಿದ – ದುರ್ಗದ (ತಾತ್ಕಾಲಿಕ) ಅಧಿಪತಿ ಲಕ್ಷ್ಮಣ ಗೌಡನ ಅಂತಃಪುರ!!!(ಜೊತೆಗೆ ಅಡಿಗೆ ಕೋಣೆ ಹಾಗೂ ಊಟದ ಹಾಲ್). ಆದರೆ ಎಲ್ಲಿ ಲಕ್ಷ್ಮಣಗೌಡ? ಎಲ್ಲಿ ದನಗಳು?? ಹೊರಗೆಬಂದು ನೋಡಿದಾಗ ವಿಶಾಲ ಬೆಟ್ಟದಮೇಲೆ ದೂರದಲ್ಲೆಲ್ಲೋ ಹಸಿರ ನಡುವೆ ಕಪ್ಪು ಬಿಳಿ ಚುಕ್ಕಿಗಳ ತರ ದನಗಳು!!  
       ಬೆಟ್ಟ ಹತ್ತಿ ಸುಸ್ತಾದ ನಾವೆಲ್ಲಾ – ಅಲ್ಲೇ ಸಮೀಪದ ಶೋಲಾ ಕಾಡಿನ ಮರದನೆರಳಿನಲ್ಲಿ – ಬುತ್ತಿ ಬಿಚ್ಚಿ ಸಮಾ ತಿಂದು – ಬೆಟ್ಟ ಸುತ್ತಲು ಮದ್ಯಾಹ್ನದ ಬಿಸಲಿನ ಉರಿ ಕಡಿಮೆಯಾಗಲೆಂದು – ನೆಲಕ್ಕೆ ಬೆನ್ನುಕೊಟ್ಟು ಮಲಗಿದ ನಮ್ಮನ್ನೆಲ್ಲ – ಸಂಜೆ ನಾಕುಗಂಟೆಹೊತ್ತಿಗೆ ಎಬ್ಬಿಸಿದ್ದು – ಟಿಣಿ ಟಿಣಿ ಗಂಟೆ ಶಬ್ದ ಹಾಗೂ , ಆಆ, ಹೋಯ್, ಬಾ, ಬಾಬಾ ಎಂಬ ಶಬ್ದಗಳು!! ಬೆಟ್ಟಹೇಗಿರುತ್ತೆ ಎಂಬ ಒಂದು ಕುತೂಹಲ ತಣಿಸಿಕೊಂಡಿದ್ದ ನಮಗೆ ನಮ್ಮ ಮತ್ತೊಂದು ಕುತೂಹಲದ ಕೇಂದ್ರ ಲಕ್ಷ್ಮಣಗೌಡನೇ ನಮ್ಮೆದುರಿದ್ದ!!! ಸಾದಾರಣ ಮೈಕಟ್ಟಿನ ಅಂದಾಜು ಐವತ್ತು ವರ್ಷದ ಸಾಮಾನ್ಯ ಎತ್ತರದ ಮನುಷ್ಯನೇ ಈ ಲಕ್ಷ್ಮಣಗೌಡ. ನಾವು ತಿಂದುಂಡು ಮಿಕ್ಕಿದ್ದ ಚಪಾತಿ ಪಲ್ಯ ಮೊಸರನ್ನು (ಬಿಸಾಡುವ ಬದಲು) ಆತನ ಕೈಮೇಲೆ ಹಾಕಿ ಮಾತಿಗೆಳೆದೆವು. ಸಹಜವಾಗಿಯೇ ಆತನೂ ತನ್ನಬಗ್ಗೆ ಹೇಳಿಕೊಳ್ಳಲಾರಂಬಿಸಿದ.
           ಲಕ್ಷ್ಮಣಗೌಡ ಬಲ್ಲಾಳರಾಯನ ದುರ್ಗದ ಬೆಟ್ಟದಬುಡದ ಒಂದು ಹಳ್ಳಿಯ ಒಬ್ಬ ಸಾದಾರಣ ರೈತ. ಮನೆಮಠ ಇದೆ.ಮದುವೆಯಾಗಿ ದೊಡ್ಡ ಮಕ್ಕಳುಗಳೂ ಇದ್ದಾರೆ. ಮಗ ಒಬ್ಬ ಉಜಿರೆಯಲ್ಲಿ ಕೆಲಸಮಾಡುತ್ತಿದ್ದಾನಂತೆ. ಕೃಷಿಕಾರ್ಯಗಳೆಲ್ಲಾ ಮುಗಿದು ಜೊತೆಗೆ (ಕೆಳಗೆ ಕಾಡಿನಲ್ಲಿ) ದನಗಳಿಗೆ ಮೇವೂ ಕಡಿಮೆಯಾದಾಗ – ಪ್ರತಿವರ್ಷ ಪೆಬ್ರವರಿ ಮಾರ್ಚ್ ಹೊತ್ತಿಗೆ – ತನ್ನಮನೆ ಎತ್ತುದನಗಳು ಜೊತೆಗೆ ಊರವರ ಹಾಗೂ ನೆಂಟರ ಎತ್ತುದನ ಎಮ್ಮೆಗಳನ್ನೂ – ಈ ಲಕ್ಷ್ಮಣಗೌಡ ಬೆಟ್ಟದಮೇಲೆ ಹೊಡೆದುಕೊಂಡು ಬರುತ್ತಾನೆ. ನಾನಾಗಲೇ ಹೇಳಿದೆ ಬೆಟ್ಟದ ಮೇಲೆ ವಿಸ್ತಾರವಾದ ಹುಲ್ಲುಗಾವಲಿನ ಬಯಲುಪ್ರದೇಶ ಹಾಗೂ ನೀರಿದೆಯೆಂದು. ದನಗಳಿಗೆ ಯಥೇಚ್ಛ ಮೇವು!!! ಪರರ ದನಗಳನ್ನು ಮೇಯಿಸಲು ಒಂದು ಬಾಲಕ್ಕೆ(=ಜಾನುವಾರಿಗೆ) ಇಂತಿಷ್ಟು ಎಂದು ದುಡ್ಡು ಕೊಡುತ್ತಾರಂತೆ. ಮಳೆಗಾಲ ಆರಂಬವಾಗುತ್ತಿದ್ದಂತೆಯೇ ಜಾನುವಾರುಗಳು ಹಾಗೂ ಲಕ್ಷ್ಮಣಗೌಡ ಕೆಳಗಿಳಿದು ಹಳ್ಳಿ ಸೇರುತ್ತಾರೆ. ಮೂರ್ನಾಕು ತಿಂಗಳು ಲಕ್ಷ್ಮಣಗೌಡನ ವಾಸ ಬೆಟ್ಟದಮೇಲೆನೇ. ವಾರಕ್ಕೊಮ್ಮೆ ಕೆಳಗಿಳಿದು ಹೋಗಿ ಅಕ್ಕಿ ಉಪ್ಪು ತರುತ್ತಾನೆ.
           ಹಾಗಂತ ಈ ದನಮೆಯಿಸಲು ಬೆಟ್ಟಹತ್ತಿ ಇರುವುದು ತಲಾಂತರದಿಂದ ಬಂದ ಸಂಪ್ರದಾಯವೇನಲ್ಲ. ಮೊದಲೆಲ್ಲಾ ದನಗಳನ್ನ ಬೆಟ್ಟದಮೇಲೆ ಹೊಡೆದುಬಂದುಬಿಡುತ್ತಿದ್ದರಂತೆ. ಮೂರ್ನಾಲ್ಕು ತಿಂಗಳು ಬಿಟ್ಟು ಮಳೆಗಾಲದ ಪ್ರಾರಂಬದಲ್ಲಿ ಎರಡನೇ ಬಾರಿ ಬೆಟ್ಟದಮೇಲೆ ಹೋಗಿ ವಾಪಸ್ ಹೊಡಕೊಂಡು ಬರ್ತಿದ್ರಂತೆ. ಆದ್ರೆ ಈಗ – ಎಂದು ಲಕ್ಷ್ಮಣಗೌಡ ಅನ್ನುತ್ತಿದ್ದಂತೆ ನಮ್ಮಲ್ಲೊಬ್ಬ ಕೇಳಿದ – ಏನು? ಹುಲಿಕಾಟನಾ??. ಊಹೂಂ. ಹುಲಿಯಾದರೆ ಬಿಡಿ. ಎಲ್ಲೋ ಅಪ್ರೂಪಕ್ ತಿನ್ನುತ್ತೆ. ನಮಗ್ ಹೆಚ್ಚಾಗಿ ಕನ್ನಡ್ ಜಿಲ್ಲೆಯಿಂದ ಬೆಟ್ಟಹತ್ತಿ ಬರುವ ಬೇರಿಗಳ ಕಾಟ!!! ಒಳ್ಳೇ ಜನ್ವಾರ್ ಗಳನ್ನೇ ಮಾಯಮಾಡ್ತಾರೆ – ಅಂದ ಲಕ್ಷ್ಮಣಗೌಡ. (ಬೇರಿ=ಬ್ಯಾರಿ=ಮುಸ್ಲಿಮ್ಮರ ಒಂದು ಪಂಗಡ). ಅದಕ್ಕಾಗಿ ಈಗ ಬೆಟ್ಟದಮೇಲೇನೇ ಹಗಲೂ ರಾತ್ರಿ ಎನ್ನದೇ ಇದ್ದು ದನಕಾಯುತ್ತಾರೆ.
         ಎಷ್ಟೆಂದರೂ ಕೋಟೆಯ ಜಾಗ. ಹಿಂದೆಲ್ಲಾ ಹೆಣಗಳು ಬಿದ್ದಿರಬಹುದು. ದೆವ್ವಭೂತಗಳ ಕಾಟವೇನಾದರೂ ಬೆಟ್ಟದಮೇಲೆ ಇದೆಯಾ ಎಂದು ತಿಳಿಯುವ ಕುತೂಹಲ ನಮ್ಮಲ್ಲೊಬ್ಬನಿಗೆ. ಹೇಗೂ ಲಕ್ಷ್ಮಣಗೌಡ ಒಬ್ಬನೇ ಇರುತ್ತಾನಲ್ಲ. ದೆವ್ವಭೂತಗಳ ಜೊತೆಗೆ ಮೋಹಿನಿಯ ಕಾಟವೆನಾದರೂ ಎಂದಾದರೂ ಕಂಡುಬಂದಿತ್ತೆ?? – ಎಂದು ಕೇಳಿದೆವು. ನಸುನಗುತ್ತ ಅಲ್ಲಗಳೆದ ಲಕ್ಷ್ಮಣಗೌಡ. ಆದರೆ ಸ್ವಾರಸ್ಯವೆಂದರೆ – ಸ್ವಲ್ಪದೂರದಲ್ಲಿ ಕಾಣುವ ಶೋಲಾಕಾಡು ತೋರಿಸಿ – ಅಲ್ಲೊಂದು ಹಳೆ ಕೆರೆ ಇರುವುದಾಗಿಯೂ – ಅದೀಗ ಮುಚ್ಚಿಹೋದಂತೆಯೇ ಆಗಿರುವುದಾಗಿಯು – ಆದರೆ ಆಗೀಗ ರಾತ್ರಿ ಗಂಟೆಗಳು (ಮಂಗಳಾರತಿಯ ಸಮಯದಲ್ಲಿ) ಹೊಡೆದಂತೆ ಶಬ್ದಗಳು ಕೇಳಿಸುವುದಾಗಿ ಹೇಳಿದ!!!! ಚಂದದ ಈ ಜಾಗದಲ್ಲಿ ಸಿನೆಮಾ ಶೂಟಿಂಗ್ ನಡೆದಿದ್ಯಾ ಎಂದು ಕೇಳಿದ್ದಕ್ಕೆ – ಅವತ್ಯಾರೋ ಸಿನೆಮಾದವ್ರು ನೋಡ್ಕಂಡ್ ಹೋಗಕ್ಕ್ ಬಂದಿದ್ರು. ಮತ್ ಬರ್ಲಾ ಎಂದ. (ಸಹಜನೆ – ಚಿಕ್ಕಮಗಳೂರಿಂದ ಗಿರಿಕಡೆ ಹೋದರೆ ಟಾರ್ ರಸ್ತೆ ಬುಡದಲ್ಲೇ ಇಲ್ಲಿನಷ್ಟೇ ಚಂದದ ಜಾಗಗಳಿರುವಾಗ ನಟನಟಿಯರ ದಂಡು ಕಷ್ಟಪಟ್ಟು ಬೆಟ್ಟಹತ್ತಿ ಯಾಕೆ ಬರ್ತಾರೆ? ಅಲ್ವಾ).
        ಪಕ್ಕದ ಫೋಟೋದಲ್ಲಿ ಕಾಣುವ-ಹಾರೆಯಿಂದ ಗದ್ದೆಯ ಅಂಚನ್ನ ಕತ್ತಿರಿಸಿದಂತೆ ಕಾಣುವ ಪ್ರಪಾತದ ಬಗ್ಗೆ-ಲಕ್ಷ್ಮಣಗೌಡ ಹೇಳಿದ ವಿಷಯ ರೋಮಾಂಚನಕರ!!! ನಾವು ಕುಳಿತಲ್ಲಿ ದೂರದಿಂದ ಕಾಣುತ್ತಿದ್ದ-ಮೇಲೊಂದಿಷ್ಟು ಕಾಡು ಹುಲ್ಲುಗಾವಲು ಹಾಗೂ ಮತ್ತೊಂದು ಬದಿ ಆಳದ ಪ್ರಪಾತವಿದ್ದ-ಆ ಬೆಟ್ಟದ ಮೇಲೆ ಮೇಯುತ್ತಿದ್ದ ಎರಡು ದನಗಳು-ಒಂದನ್ನೊಂದು ದೂಕಿಕೊಂಡು ಜಗಳವಾಡುತ್ತಿದ್ದವಂತೆ. ಲಕ್ಷ್ಮಣಗೌಡ ನೋಡುತ್ತಿರುವಂತೆಯೇ ಹಿಂದೆಹಿಂದೆ ಬಂದ ಒಂದು ದನ ಕಾಲುಜಾರಿ ಉರುಳಿ ಉರುಳಿ ಆ ಪ್ರಪಾತಕ್ಕೆ ಬಿತ್ತಂತೆ!! ಸಾವಿರಾರು ಅಡಿ ಆಳಕ್ಕೆ ಕಲ್ಲಿನ ಮೇಲೆ ಬಿದ್ದ ಹೊಡೆತಕ್ಕೆ ದನ ಚೂರುಚೂರಾಗಿ ಪಚ್ಚಿ ಅದೆಷ್ಟೋ ದೂರ ಎಸೆಯಲ್ಪಟ್ಟಿತಂತೆ!!! ಇಂತಹ ಅದೆಷ್ಟೋ ಕಥೆಗಳನ್ನ ಅವನ ಬಾಯಿಂದ ಹೊರಡಿಸಬಹುದಾಗಿತ್ತು. ಆದರೆ ಬೆಟ್ಟದಮೇಲೆ ಒಂದು ಸಣ್ಣಸುತ್ತು ಹಾಕಿ ಸೂರ್ಯಾಸ್ತ ನೋಡಿ ಕೆಳಗೆ ಹೊರೆಟೆವು. ಘಟ್ಟದಂಚಿನ ಜಾಗಗಳಿಂದ ಸೂರ್ಯಾಸ್ತ ಸಮುದ್ರದೆಡೆ ಬಯಲುಜಾಗದಲ್ಲಿ ಆಗುವುದು ಸಾದಾರಣ. ಆದರೆ ಘಟ್ಟದಂಚಿನ ಬಲ್ಲಾಳರಾಯನದುರ್ಗದಲ್ಲಿ ಮಾತ್ರ ಸೂರ್ಯಾಸ್ತ, ಎದುರು ಕಾಣುವ ಎತ್ತರದ ಕುದ್ರೆಮುಖ ಬೆಟ್ಟದ ಹಿಂದೆ ಆಗುತ್ತದೆ. (ಅಂದರೆ ಕುದ್ರೆಮುಖ ಹಾಗೂ ಬಲ್ಲಾಳರಾಯನಬೆಟ್ಟಗಳು ಪಶ್ಚಿಮ-ಪೂರ್ವದಲ್ಲಿವೆ. ಪಶ್ಚಿಮಘಟ್ಟದ ಇತರ ಶಿಖರಾಗ್ರಗಳಂತೆ ಉತ್ತರ-ದಕ್ಷಿಣದಲಿಲ್ಲ. ಅವೆರಡು ಬೆಟ್ಟಗಳ ನಡುವೆ ದಕ್ಷಿಣಕನ್ನಡಜಿಲ್ಲೆ ಒಂದಿಷ್ಟು ಒಳಚಾಚಿದೆ. ಆ ಭಾಗದ ಜನರಿಗೆ ಒಂದುಬದಿ ಎತ್ತರದ ಕುದ್ರೆಮುಖ, ಮತ್ತೊಂದು ಬದಿ ಬಲ್ಲಾಳರಾಯನದುರ್ಗ-ಎರಡೂ ಚಂದಾಗಿ ಕಾಣಬಹುದು!!!).
         ನಾವು ಹೋಗಿದ್ದು ಹೋದವರ್ಷ. ಈ ವರ್ಷನೂ ಮುಂಗಾರುಪೂರ್ವದ ರೇವತಿ ಹಾಗೂ ಅಶ್ವಿನಿ ಮಳೆಗಳು ಸಾಕಷ್ಟು ಆಗಿವೆ. ಬಲ್ಲಾಳರಾಯನಬೆಟ್ಟದಮೇಲೆನೂ ಹಸಿರು ನಳನಳಿಸುತ್ತಿರಬಹುದು. ಹೋಗಲು ಸಮಯ ಪ್ರಶಸ್ತವಾಗಿದೆ. (ಜೂನ್ ಮೊದಲವಾರದಲ್ಲಿ ಮುಂಗಾರು ಪ್ರಾರಂಭವಾದರೆ ಏನೂ ಕಾಣುವುದಿಲ್ಲ. ಮಂಜು ಮುಸುಕು). ರಾತ್ರಿ ಹೊರಟರೆ ಬೆಳಿಗ್ಗೆ ಕಳಸ ತಲುಪಿಸಲು ಬಸ್ಸುಗಳೂ ಇವೆ. ಎಲ್ಲಿಗಾದರೂ ಹೋಗಲು ನಿಮ್ಮ ಮನಸಿನಲ್ಲೂ ತುಡಿತವಿರಬಹುದು. ಇನ್ಯಾಕೆ ತಡ? ಬೆಟ್ಟಕ್ಕೆ ಹೋಗಿ. ಲಕ್ಷ್ಮಣಗೌಡನನ್ನು ಕಾಣಿ. ನಿನ್ನಬಗ್ಗೆ (ಹೊಗಳಿ) ಇಂಟರ್ನೆಟ್ ನಲ್ಲಿ ಯಾರೋ ಒಬ್ಬರು ಬರೆದಿದ್ದಾರೆ. ಅದನ್ನು ಪ್ರಪಂಚಾದ್ಯಂತ ಜನ ನೋಡಬಹುದು ಅಂತ ಹೇಳಿ. ಶುಭಪ್ರಯಾಣ!!!!
        ಈ ಲೇಖನ ಓದಿದ ಗುರುತಾಗಿ (ಸಮಯವಿದ್ದರೆ) ಕಾಮೆಂಟಿಸಿ. ಕಾಮೆಂಟ್ ಗಳು ಬರವಣಿಗೆಗಳನ್ನು ತಿದ್ದಿಕೊಳ್ಳಲು (ಹಾಗೂ ಹರಿದುಬರಲು) ಅವಶ್ಯಕ!! ಲೇಖನ ಇಷ್ಟಪಟ್ಟಿದ್ದು ಕಾಮೆಂಟಿಸಲು ಸಮಯವಿಲ್ಲದಿದ್ದರೆ +1 ರ ಮೇಲೆ ಕ್ಲಿಕ್ ಮಾಡಿ.    
           

Friday, February 17, 2012

ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳ ಮೋಹಕ ಪ್ರಪಂಚ !!!!

            ನಾಲ್ಕು ತಿಂಗಳ ಹಿಂದೆ ನಡೆದ ಘಟನೆ. ಅಂದು ರಶ್ ಇತ್ತು. ಆ ಸಮಯದಲ್ಲಿ ಆ ಪರಿಚಿತರು ಏನೋ ಕೇಳಲು ಬಂದರು. ಅದೇ ಸಮಯದಲ್ಲಿ ಅವರ ಮೊಬೈಲಿಗೊಂದು ಕರೆ ಬಂತು. ಹೊರತೆಗೆದು ಮಾತನಾಡಲಾರಂಬಿಸಿದರು. ತಿಂಗಳ ಹಿಂದಷ್ಟೇ (ಜಾವಾ ಇರುವ) ಡಬಲ್ ಸಿಮ್ ನ ಮೈಕ್ರೋಮ್ಯಾಕ್ಸ್ ಮೊಬೈಲ್ ತಗಂಡಿದ್ದ ನನ್ನ ಕಣ್ಣು ಸಹಜವಾಗಿಯೇ ಅವರ ಮೊಬೈಲ್ ಮೇಲೆ ಬಿತ್ತು. ಅನಂತರ ನಡೆದಿದ್ದು ಕೇವಲ ಒಂದೆರಡು ನಿಮಿಷಗಳ ಮಾತುಕತೆ. ಆಂಡ್ರೋಯ್ಡ್ ಸ್ಮಾರ್ಟ್ ಫೋನ್,ಜಿ.ಪಿ.ಎಸ್, ಇಂಟರ್ನೆಟ್ ಹಾಗೂ ಆಂಡ್ರೋಯ್ಡ್ ಅಪ್ಪ್ಲಿಕೇಶನ್ ಗಳ ಬಗ್ಗೆ ಅವರ ಚಿಕ್ಕ ವಿವರಣೆ-(ಹಾಗೂ ಆ ಸಂಬಂದ ಅನಂತರ ವಿಕಿಪೀಡಿಯಾದಲ್ಲಿ ನಾನು ಸಂಗ್ರಹಿಸಿದ ಮಾಹಿತಿ)–ಮೊಬೈಲ್ ಫೋನ್ ಗಳ ಬಗ್ಗೆ ಹಿಂದಿನ ನನ್ನೆಲ್ಲಾ ಅಭಿಪ್ರಾಯಗಳನ್ನು ಬದಲಾಯಿಸಿತು!!!  ತಿಂಗಳ ಹಿಂದಷ್ಟೇ ತಗಂಡ ನನ್ನ ಸಾದಾರಣ ಫೋನನ್ನು–ದುಡ್ಡು ಎಂದಾದರು ಕಂತಿನ ಮೇಲಾದರೂ ಕೊಡು ಎಂದು ಹೇಳಿ-ಹೆಂಡತಿಗೆ ಹೊಸ ಮೊಬೈಲ್ ಒಂದರ ಹುಡುಕಾಟದಲ್ಲಿದ್ದ ನನ್ನ ಸ್ನೇಹಿತನ ಕೈ ಮೇಲೆ ಹಾಕಿ–ಸ್ಮಾರ್ಟ್ ಫೋನ್ ಗಳ ಹುಡುಕಾಟದಲ್ಲಿ ಅಂತರ್ಜಾಲದಲ್ಲಿ ಮುಳುಗಿದೆ!!! ಹಾಗಾದರೆ ಸ್ಮಾರ್ಟ್ ಫೋನ್ ಗಳೆಂದರೇನು? ಆಂಡ್ರೋಯ್ಡ್ ಅಂದರೆ ಏನು?? ಅವುಗಳಿಗೂ ಸಾದಾರಣ ಫೋನ್ ಗಳಿಗೂ ಇರುವ ವ್ಯತ್ಯಾಸಗಳೇನು??? –ಎಂಬುದು ನಿಮ್ಮ ಪ್ರಶ್ನೆಗಳಾಗಿದ್ದರೆ ಅದಕ್ಕೆ ಉತ್ತರವೇ ಈ ಬ್ಲಾಗ್ ಬರಹ. ಸ್ಮಾರ್ಟ್ ಫೋನ್ ಗಳ ಜನಪ್ರಿಯತೆ ರಾಕೆಟ್ ಗತಿಯಲ್ಲಿ ಏರುತ್ತಿದೆ. ಅನೇಕರಿಗೆ ಮುಂದಿನ ನನ್ನ ಬರವಣಿಗೆ ಅತೀ ಸಾದಾರಣ ಹಾಗೂ ಗೊತ್ತಿದ್ದಿದ್ದೆ ವಿಷಯವೇ ಎಂದನ್ನಿಸಿದರೂ ಕೆಲವರಿಗಾದರೂ ಸ್ಮಾರ್ಟ್ ಫೋನ್ ಗಳ ಬಗ್ಗೆ (ಪರಿಚಿತರೊಂದಿಗಿನ ಒಂದೆರಡು ನಿಮಿಷಗಳ ಮಾತುಕತೆಯಲ್ಲಿ) ನನಗಾದಂತೆ ಜ್ಞಾನೋದಯವಾಗಬಹುದು!!! (ಇಂತಹ ಬರಹವೊಂದನ್ನು ಯಾವುದಾದರೊಂದು ಬ್ಲಾಗ್ ನಲ್ಲಿ ಹಿಂದೆಂದಾದರೂ ಓದಿದ್ದರೆ ಅಂದೇ ಸ್ಮಾರ್ಟ್ ಫೋನ್ ಕೊಳ್ಳುವ ನಿರ್ದಾರ ಮಾಡುತ್ತಿದ್ದನೇನೋ). (ಆಂಡ್ರೋಯ್ಡ್ – ಈ ಪದದ ಮೊದಲ ಅಕ್ಷರವನ್ನು apple ನ ಮೊದಲ ಅಕ್ಷರದಂತೆ ದಯವಿಟ್ಟು ಓದಿಕೊಳ್ಳಿ).
             ಪ್ರಪಂಚಾದ್ಯಂತ ಇಂದು ಇರುವ ಕೋಟ್ಯಾನುಕೋಟಿ ಮೊಬೈಲ್ ಗಳನ್ನು ಮುಖ್ಯವಾಗಿ ಎರಡು ವಿದಗಳನ್ನಾಗಿ ವಿಂಗಡಿಸಬಹುದು. ಒಂದು ಸಾದಾರಣ ಫೋನುಗಳು. ಮತ್ತೊಂದು ಸ್ಮಾರ್ಟ್ ಫೋನುಗಳು. ಸಾದಾರಣ ಮೊಬೈಲ್ ಗಳ ಬಗ್ಗೆ ಎಲ್ಲರಿಗೂ ಗೊತ್ತಿವೆ. ಆದರೆ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವ ಸ್ಮಾರ್ಟ್ ಫೋನ್ ಗಳ ಬಗ್ಗೆ ಹೆಚ್ಚಿನ ಜನಸಾಮಾನ್ಯರಿಗೆ ಹೆಚ್ಚು ಮಾಹಿತಿಯಿಲ್ಲವೆಂಬುದು ನನ್ನ ಅನುಭವ. ಸ್ಮಾರ್ಟ್ ಫೋನ್ ಗಳು ಸಾದಾರಣ ಫೋನ್ ಗಳಿಗಿಂತ ಹೇಗೆ ಭಿನ್ನವೆಂದರೆ ಅವು ಚಿಕ್ಕ ಕಂಪ್ಯೂಟರ್ ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಕಂಪ್ಯೂಟರ್ ಗಳಲ್ಲಿ ಇಂತಿಷ್ಟು ಶಕ್ತಿಯ ಪ್ರೊಸೆಸರ್, ಇಂತಿಷ್ಟು ಸ್ಮರಣಶಕ್ತಿಯ ರಾಂ ಇರುವಂತೆ ಈ ಸ್ಮಾರ್ಟ್ ಫೋನ್ ಗಳಲ್ಲೂ ಇರುತ್ತವೆ. ಹೇಗೆ ಕಂಪ್ಯೂಟರ್ ಗಳಲ್ಲಿ ವಿಂಡೋಸ್ (ಹೆಚ್ಚಿನ ಜನ ಉಪಯೋಗಿಸುವುದು),ಲಿನೆಕ್ಸ್ ಎಂಬೆಲ್ಲಾ  ಕಾರ್ಯತಂತ್ರ ವ್ಯವಸ್ಥೆ ಇರುವಂತೆ ಸ್ಮಾರ್ಟ್ ಫೋನ್ ಗಳಲ್ಲೂ ಒಂದು ಕಾರ್ಯತಂತ್ರವ್ಯವಸ್ಥೆಯಿರುತ್ತದೆ.
         ಸರಿ. ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳೆಂದರೇನು? ಇದಕ್ಕೆ ಉತ್ತರ – ಈ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಲಾಗಿರುವ ಆಪರೇಟಿಂಗ್ ಸಿಸ್ಟಂ ಆದಾರದ ಮೇಲೆ ಅವುಗಳನ್ನು ಪುನಃ ವಿಂಗಡಿಸಬಹುದು. ಆಪಲ್ ಐಫೋನ್ ಗಳು ಆಪಲ್ ನವರದ್ದೇ ಆಪರೇಟಿಂಗ್ ಸಿಸ್ಟಂ ಹೊಂದಿದ್ದರೆ ನೋಕಿಯಾ ಸ್ಮಾರ್ಟ್ ಫೋನ್, ಬ್ಲಾಕ್ ಬೆರಿ ಫೋನ್ ಗಳು ತಮ್ಮದೇ ಆಪರೇಟಿಂಗ್ ಸಿಸ್ಟಂ (ಸಿಂಬಯಾನ್/ಬ್ಲಾಕ್ ಬೆರಿ) ಹೊಂದಿವೆ. ಮೈಕ್ರೋಸಾಫ್ಟ್ ನವರದ್ದೇ ವಿಂಡೋಸ್ ಮೊಬೈಲ್ ಎಂಬ ಆಪರೇಟಿಂಗ್ ಸಿಸ್ಟಂ ಇದೆ. ಪ್ರಪಂಚದ ಒಟ್ಟು ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ರಾಜನಾದರೂ ಸ್ಮಾರ್ಟ್ ಫೋನ್ ವಿಷಯದಲ್ಲಿ ಸ್ವಲ್ಪ ಹಿಂದೆನೇ. ಇನ್ನು ಗೂಗಲ್ ನವರ ಮುಕ್ತ (ಲಿನಕ್ಸ್ ತರಹ) ಆಪರೇಟಿಂಗ್ ಸಿಸ್ಟಮ್ಮೆ ಆಂಡ್ರೋಯ್ಡ್. ಈ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್ ಫೋನ್ ಗಳೇ ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳು. ಇಂದು (((9((ಹಾಗೂ ಇನ್ನು) ಹೆಚ್ಚು ಚಲಾವಣೆಯಲ್ಲಿರುವ ನಾಣ್ಯ!!! ಗೂಗಲ್ ನವರದ್ದು ಯಾವತ್ತೂ ಮುಕ್ತ ಹಾಗೂ ಬಳಕೆದಾರ ಸ್ನೇಹಿ. ಸ್ಯಾಮ್ಸಂಗ್, ಎಲ್.ಜಿ, ಹೆಚ್.ಟಿ.ಸಿ, ಸೋನಿ ಎರಿಕ್ಸನ್ ಮೊದಲಾದ ಕಂಪನಿಗಳು ಆಂಡ್ರೋಯ್ಡ್ ಆಪರೇಟಿಂಗ್ ಸಿಸ್ಟಂ ಇರುವ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಆಪಲ್ ನವರ ಐಫೋನ್ ಗಳು ಅತ್ತ್ಯುತ್ತಮವಾಗಿದ್ದರೂ ಕೂಡ ಅವುಗಳ ಬೆಲೆಯೂ ಅಷ್ಟೇ ಹೆಚ್ಚು. (ಹೋಲಿಸಿದಾಗ) ಕಡಿಮೆ ಬೆಲೆ ಹಾಗೂ ಬಳಕೆದಾರ ಸ್ನೇಹಿಯಾಗಿರುವ ಆಂಡ್ರೋಯ್ಡ್ ಫೋನ್ ಗಳ ಮೇಲೆ ಜನ ಮುಗಿದುಬೀಳುತ್ತಿದ್ದಾರೆ. ಇಂಟರ್ನೆಟ್ ನಿಂದ ಇಳಿಸಿಕೊಳ್ಳಬಹುದಾದ–ಅಂತರ್ಜಾಲದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿರುವ–ಅಪ್ಪ್ಲಿಕೇಶನ್ ಗಳೆಂಬ ಸಾಫ್ಟ್ ವೇರ್ ಗಳು (ಆಪ್ಸ್)–ಎಲ್ಲಾ ಸ್ಮಾರ್ಟ್ ಫೋನ್ ಗಳ ನಿಜವಾದ ಆಕರ್ಷಣೆ. ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಅನೇಕ ಉಪಯುಕ್ತ ಅಪ್ಲಿಕೇಶನ್ ಗಳು ಉಚಿತ!!! ಲೇಖನದ ಮುಂದಿನ ಭಾಗದಲ್ಲಿ–ಮೊಬೈಲ್ ಫೋನ್ ಗಳನ್ನು ಜನೋಪಯೋಗೆ ವಸ್ತುಗಳನ್ನಾಗಿ ಮಾಡುವ–ಅಂತರ್ಜಾಲದ ಆಂಡ್ರೋಯ್ಡ್ ಮಾರುಕಟ್ಟೆಯಲ್ಲಿ ಸಾವಿರ ಸಂಖ್ಯೆಗಳಲ್ಲಿರುವ ಅಪ್ಪ್ಲಿಕೆಶನ್ ಗಳಲ್ಲಿ–ಕೆಲವೊಂದನ್ನು ನಿಮಗೆ ವಿವರಿಸಲಿದ್ದೇನೆ. ಈ ವಿವರಣೆಗಳು ಮಾಮೂಲಿ ಮೊಬೈಲ್ ಗಳಿಗಿಂತ (ಆಂಡ್ರೋಯ್ಡ್) ಸ್ಮಾರ್ಟ್ ಫೋನ್ ಗಳು ಹೇಗೆ ಬಿನ್ನವೆಂಬುದು ನಿಮಗೇ ಗಮನಕ್ಕೆ ತರುತ್ತವೆ.
                ಮೇಲ್ ವ್ಯವಸ್ಥೆ – ಕಂಪ್ಯೂಟರ್ ಗಳಲ್ಲಿ ಎಂ.ಎಸ್. ಆಫಿಸ್ ಔಟ್ಲುಕ್ ಇರುವಂತೆ ಸ್ಮಾರ್ಟ್ ಫೋನ್ ಗಳಲ್ಲೂ ಮೇಲ್ ಕಳಿಸಲು ಹಾಗೂ ಸ್ವೀಕರಿಸಲು ವ್ಯವಸ್ತೆಯಿದೆ. ಒಮ್ಮೆ ಕಾನ್ಫಿಗರ್ ಮಾಡಿದರೆ ಸಾಕು. ನಿಮ್ಮ ಮೇಲ್ ಗಳು ನಿಮ್ಮ ಮೇಲ್ ಅಕೌಂಟ್ ನಿಂದ (ಜಿ ಮೈಲ್/ಯಾಹೂ ಇತ್ಯಾದಿ) ಮೊಬೈಲ್ ಗೇ ಆ ಕ್ಷಣದಲ್ಲಿ ಬಂದು ಬೀಳುತ್ತವೆ!!! ಎಸ್.ಎಂ.ಎಸ್ ತರ ಸಣ್ಣ ಶಬ್ದದೊಂದಿಗೆ. (ನಿಮ್ಮ ಜಿ ಮೈಲ್/ಯಾಹೂ ಅಕೌಂಟ್ ನ ಸೆಟ್ಟಿಂಗ್ ನಲ್ಲಿ POP/IMAP ಎನಾಬಲ್ ಮಾಡಿ ಸೇವ್ ಮಾಡಿರಬೇಕು). ಮೇಲ್ ಗಳನ್ನು ನೋಡಲು ಕಂಪ್ಯೂಟರ್ ಮೊರೆ ಹೋಗುವ ಅವಶ್ಯಕತೆಯಿಲ್ಲ. ಮೊಬೈಲ್ ಉಪಯೋಗಿಸಿ ನೀವು ತೆಗೆದ ಫೋಟೋಗಳನ್ನೂ ಕ್ಷಣಾರ್ದದಲ್ಲಿ ಮೇಲ್ ಮಾಡಬಹುದು. ಆಂಡ್ರೋಯ್ಡ್ ಫೋನ್ ಗಳಲ್ಲಿ ಜಿ ಮೈಲ್ ಎಂಬ ಅಪ್ಪ್ಲಿಕೆಶನ್ನೇ ಇದೆ.
            ಗೂಗ್ಲ್ ಸ್ಕೈ ಮ್ಯಾಪ್ – ಸೂರ್ಯ ಆಗಷ್ಟೇ ಮುಳುಗಿ ಕತ್ತಲಾವರಿಸುತ್ತಿರುವಂತೆ ಚಂದ್ರನ ಪಕ್ಕ ಹೊಳೆಯುವ ಆಕಾಶಕಾಯವೊಂದು ಕಾಣಿಸಲಾರಂಬಿಸುತ್ತದೆ. ನೀವು ಸ್ನೇಹಿತರೊಂದಿಗೆ ನಿಂತಿದ್ದೀರಿ. ಆ ಆಕಾಶಕಾಯ ಯಾವುದೆಂದು ಚರ್ಚೆನಡೆಯುತ್ತಿದೆ – ಗುರುನೋ,ಶುಕ್ರನೋ,ಶನಿಯೋ ಅಥವಾ ಮತ್ತಾವುದೋ ನಕ್ಷತ್ರವೋ ಎಂದು. ಈಗ ನಿಮ್ಮ ಜೇಬಿನಿಂದ ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಹೊರಬರುತ್ತದೆ. ಗೂಗ್ಲ್ ಸ್ಕೈ ಮ್ಯಾಪ್ ಅಪ್ಲಿಕೇಶನ್ ಕ್ಲಿಕ್ ಮಾಡ್ತೀರಿ. ಟವರ್ ಲೋಕೇಶನ್ ಆದಾರದಲ್ಲಿ ನೀವಿರುವ ಸ್ಥಳ ತಿಳಿದುಕೊಂಡು ಆ ಅಪ್ಲಿಕೇಶನ್ ನಿಮ್ಮ ಮೊಬೈಲ್ ಸ್ಕ್ರೀನ್ ನಲ್ಲಿ ನಿಮ್ಮ ಸುತ್ತ ಕಾಣುವ ಗ್ರಹನಕ್ಷತ್ರಗಳನ್ನು ಮೂಡಿಸುತ್ತದೆ!!! ಸ್ಮಾರ್ಟ್ ಫೋನನ್ನು ಚಂದ್ರನತ್ತ ಹಿಡಿದರೆ ಸಾಕು. ಚಂದ್ರ ಹಾಗೂ ಆ ಆಕಾಶಕಾಯ ಯಾವುದೆಂದು (ಇಂಗ್ಲೀಷ್ ನಲ್ಲಿ) ಸ್ಕ್ರೀನ್ ನಲ್ಲಿ ಮೂಡಿರುತ್ತದೆ. ವಾವ್!!! ಎಷ್ಟೊಂದು ಅದ್ಬುತ ಅಲ್ವಾ?? ಸ್ಮಾರ್ಟ್ ಫೋನ್ ಗಳು ನಿಮ್ಮನ್ನು ಮತ್ತಷ್ಟು ಸ್ಮಾರ್ಟ್ ಮಾಡುತ್ತವೆ!!!
          ಜಿ.ಪಿ.ಎಸ್, ಗೂಗ್ಲ್ ಮ್ಯಾಪ್ ಹಾಗೂ ಇವಕ್ಕೆ ಸಂಬಂದಿತ ಅಪ್ಲಿಕೇಶನ್ ಗಳು ಜೇಬಿನಿಂದ ಸ್ಮಾರ್ಟ್ ಫೋನ್ ತೆಗೆದು ಜಿ.ಪಿ.ಎಸ್ ಆನ್ ಮಾಡಿ ಗೂಗ್ಲ್ ಮ್ಯಾಪ್ ಅಪ್ಲಿಕೇಶನನ್ನ ಬೆರಳಿಂದ ಮುಟ್ತೀರಿ. ಈಗ ಮೊಬೈಲ್ ನ ಪರದೆಯಮೇಲೆ (ಟವರ್ ಆದಾರದಮೇಲೆ ನೀವಿರುವ ಜಾಗ ತಿಳಿದುಕೊಂಡು) ನೀವಿರುವ ಜಾಗದ ಮ್ಯಾಪ್ ಮೂಡಲಾರಂಬಿಸುತ್ತದೆ. ಮನೆಮುಂದೆ ನಿಂತಿದ್ದಾರೆ ಮನೆ ಮಾಡು,ಅಂಗಳ, ರಸ್ತೆ ಕಾಣಲಾರಂಬಿಸುತ್ತದೆ. ಈಗ ಪರದೆಯಮೇಲೆ ಬಾಣದ ತುದಿಯ ಆಕಾರದ ಸಣ್ಣ ನೀಲಿ ಬಣ್ಣದ ಗುರುತು ಮೂಡುತ್ತದೆ. ಅದೇ ನಿಮ್ಮ ಸ್ಮಾರ್ಟ್ ಫೋನ್ (ಗುರುತು)!!! ಫೋನ್ ಹಿಡಿದುಕೊಂಡು ನೀವು ಗೇಟಿನತ್ತ ನಡೆಯುತ್ತಿದ್ದಂತೆ ಆ ಬಾಣದ ಗುರುತೂ ಸ್ಕ್ರೀನ್ ಮೇಲಿನ ಮ್ಯಾಪಿನಲ್ಲಿ ಚಲಿಸಲಾರಂಭಿಸುತ್ತದೆ!!! ಬೈಕೋ ಕಾರೋ ಹತ್ತಿ ವೇಗವಾಗಿ ಹೋಗುತ್ತಿದ್ದರೆ ಪರದೆಯಲ್ಲಿ ಕಾಣುವ ರಸ್ತೆಯ ಮ್ಯಾಪಿನಲ್ಲಿ ಆ ಗುರುತೂ ಅಷ್ಟೇ ವೇಗವಾಗಿ ಚಲಿಸುತ್ತಿರುತ್ತದೆ!!! ಇದೇ ಜಿ.ಪಿ.ಎಸ್ ವ್ಯವಸ್ಥೆ. ಜಿ.ಪಿ.ಎಸ್ ಎಂದರೆ ನಾವು (ಜಿ.ಪಿ.ಎಸ್ ಇರುವ ಉಪಕರಣ ಹಿಡಿದವರು) ಪ್ರಪಂಚದ ಎಲ್ಲೇ ಇದ್ದರೂ ನಾವಿರುವ ಖಚಿತ ಸ್ಥಳವನ್ನು ನಮ್ಮ ಉಪಕರಣದಲ್ಲಿ ತೋರಿಸುವ ವ್ಯವಸ್ಥೆ. ಹೆಚ್ಚಿನ ಸ್ಮಾರ್ಟ್ ಫೋನ್ ಗಳಲ್ಲಿ ಜಿ.ಪಿ.ಎಸ್ ರಿಸೀವರ್ ಇರುತ್ತವೆ. ನಗರದೊಳಗಾಗಲಿ ಕಾಡಿನಲ್ಲಾಗಲಿ ನಾವು ಕಳೆದುಹೋಗುವ ಸಂಭವ ಕಡಿಮೆ. ಇನ್ನೂ ಆಶ್ಚರ್ಯವೆಂದರೆ ಜಿ.ಪಿ.ಎಸ್ ವ್ಯವಸ್ಥೆಗೆ ಮೊಬೈಲ್ ನೆಟ್ ವರ್ಕ್ ಸಿಗ್ನಲ್ ಅಗತ್ಯತೆ ಇಲ್ಲದೇ ಇರುವುದು!!! (ಆದರೆ ಗೂಗ್ಲ್ ಮ್ಯಾಪ್ ತೆರೆದುಕೊಳ್ಳಲು ನೆಟ್ ವರ್ಕ್ ಬೇಕು. ಆದರೆ ಒಮ್ಮೆ ನೆಟ್ ವರ್ಕ್ ಇದ್ದಾಗ ನಮ್ಮ ಸುತ್ತಮುತ್ತಲಿನ ಒಂದಿಷ್ಟು ಜಾಗದ ಮ್ಯಾಪ್ ಫೋನ್ ನ ಕೆಷೆಯಲ್ಲಿ ಸಂಗ್ರಹವಾಗಿರುತ್ತದೆ. ಕೂಡಲೇ ನೆಟ್ ವರ್ಕ್ ಸಿಗ್ನಲ್ ಇಲ್ಲದ ಜಾಗಕ್ಕೆ ನಾವು ಹೋದರೂ ಜಾಗದ ಮ್ಯಾಪ್ ಸ್ಕ್ರೀನ್ ನಲ್ಲಿ ಇದ್ದೇ ಇರುತ್ತದೆ!!) ನಡುರಾತ್ರಿಯಲ್ಲಾಗಲಿ ಚಾರಣ ಮಾಡುತ್ತಾ ಕಾಡೊಳಗೆ ದಾರಿ ತಪ್ಪಿದ್ದರೆ ಜಿ.ಪಿ.ಎಸ್ ಇರುವ ಸ್ಮಾರ್ಟ್ ಫೋನ್ ಇದ್ದರೆ ಅಲೆದಾಟ ತಪ್ಪುತ್ತದೆ. ಸರಿದಾರಿಗೆ ಸುಲಭವಾಗಿ ಬರಬಹುದು. ಈ ಜಿ.ಪಿ.ಎಸ್ ಗೆ ಸಂಬಂದಿಸಿದಂತೆ ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳಿಗಾಗಿ (ಮೈ ಟ್ರಾಕ್, ಜಿ.ಪಿ.ಎಸ್ ಎಸ್ಸೇನ್ಶಿಯಲ್ ನಂತಹ) ಅನೇಕ ಅಪ್ಲಿಕೇಶನ್ ಗಳಿವೆ. ಅವುಗಳನ್ನು ಆನ್ ಮಾಡಿ ಫೋನನ್ನು ಜೇಬಿನಲ್ಲಿಟ್ಟುಕೊಂಡು ಜಮೀನಿಗೆ ಒಂದು ಸುತ್ತು ಬಂದರೆ ಜಮೀನಿನ ಮ್ಯಾಪ್ ರೆಡಿ!!! ಸ್ಮಾರ್ಟ್ ಫೋನ್ ಗಳಿದ್ದರೆ (ನಗರಗಳಲ್ಲಿ) ನೇವಿಗೇಶನ್ ಗೇ ಅನೇಕ ಅಪ್ಲಿಕೇಶನ್ ಗಳಿವೆ. ರಾತ್ರಿ ಕೊಲ್ಲೂರಿನಿಂದ ಶೃಂಗೇರಿಕಡೆ ಹೊರಟು–ಮದ್ಯದಲ್ಲೆಲ್ಲಾದರೂ (ಅಪರಾತ್ರಿಯಲ್ಲಿ)-ಸಾಗುತ್ತಿರುವ ದಾರಿ ಸರಿಯೇ ತಪ್ಪೇ ಎಂದು ಅನುಮಾನ ಬಂದರೆ-ಈ ನೇವಿಗೇಶನ್ ಅಪ್ಲಿಕೇಶನ್ ಉಪಯೋಗಿಸಿ–ದಾರಿ ಸರಿಯಾದದ್ದಾಗಿದೆಯೇ ಹಾಗೂ ಶೃಂಗೇರಿ ಎಷ್ಟು ದೂರದಲ್ಲಿದೆ ಹಾಗು ಎಷ್ಟು ಸಮಯದ ದಾರಿ ಎಂಬುದನ್ನು ಕಂಡುಕೊಳ್ಳಬಹುದು!!!! ನಿಜಕ್ಕೂ ಈ ಜಿ.ಪಿ.ಎಸ್ ವ್ಯವಸ್ಥೆ ಅತ್ಯದ್ಭುತ.
       ಅಕ್ಕ್ಯುವೆದರ್ ಥೇನ್ ಚಂಡಮಾರುತ ಬರುವುದಕ್ಕೆ ನಾಲ್ಕೈದು ದಿನ ಮೊದಲು. ಸಮಾ ಚಳಿ ಬಾರಿಸುತಿತ್ತು. ಚಳಿ ಬಗ್ಗೆನೇ ಎಲ್ಲರ ಮಾತು. ಸ್ಮಾರ್ಟ್ ಫೋನ್ ಹೊರತೆಗೆದು ಏನೋ ನೋಡಿ ನಾನೆಂದೆ-‘ಮೂರ್ನಾಲ್ಕು ದಿನಗಳಲ್ಲಿ ಮೋಡಗಳ ಆಗಮನವಾಗಲಿದೆ. ಚಳಿ ಕಡಿಮೆಯಾಗಲಿದೆ–ಎಂದು. ನನ್ನ ಭವಿಷ್ಯವಾಣಿ ನಿಜವಾಗಿತ್ತು!! ಮೋಡಗಳ ಆಗಮನವಾಗಿ ಚಳಿ ಹಿಂದೇಟು ಹಾಕಿತ್ತು!!! ಎಲ್ಲರಿಗೂ ಆಶ್ಚರ್ಯ. ಅಂದು ನನ್ನಿಂದ ಆ ಭವಿಷ್ಯವಾಣಿ ಬರಲು ಕಾರಣವಾಗಿದ್ದು ಅಕ್ಕ್ಯುವೆದರ್ ಅಪ್ಲಿಕೇಶನ್. ಅಂತರಜಾಲದಲ್ಲಿ ಬಹು ಪ್ರಸಿದ್ದ ಅಕ್ಕ್ಯುವೆದರ್.ಕಾಂ ನವರ (ಉಚಿತ) ಅಪ್ಲಿಕೇಶನ್. (ನಾನು ಗಮನಿಸಿದಂತೆ) ನಾಲ್ಕೈದು ದಿನಗಳೊಳಗಿನ ಹವಾಮಾನ ಮನ್ಸೂಚನೆ ನೂರಕ್ಕೆ ಎಂಬತ್ತರಷ್ಟು ಸರಿ. ನಗರವಾಸಿಗಳಿಗೆ ಹವಾಮಾನ ಮನ್ಸೂಚನೆ ಅಷ್ಟು ಅಗತ್ಯವೆನ್ನಿಸದಿದ್ದರೂ ರೈತರಿಗೆ ಅಂತಹ ಮನ್ಸೂಚನೆಗಳು ಅತ್ಯಮೂಲ್ಯ.
     ಗ್ಲಿಂಪ್ಸ್ – ಉದಾಹರಣೆ ೧ – ತಂದೆ:- (ದೂರದ್ಯಾವುದೋ ಒಂದು ಊರಿನಲ್ಲಿ ಓದುತ್ತಿರುವ ಮಗನನ್ನುದ್ದೇಶಿಸಿ ಫೋನಿನಲ್ಲಿ) ಏನ್ ಮಾಡ್ತಿದ್ದಿ ಮಗನೇ? ಚನ್ನಾಗಿ ಓದ್ಕಂತಿದ್ದ್ಯಾ?. ಮಗನ ಉತ್ತರ :- ಹೂ ಅಪ್ಪ. ಹಾಸ್ಟಲಲ್ಲೇ ಕುಂತ್ಕಂಡ್ ಓದ್ತಿದ್ದೀನಿ. ಸತ್ಯ :- ಸಿನೆಮಾ ಟಾಕೀಸ್ ಎದುರುಗಡೆ ಕ್ಯೂನಲ್ಲಿ ನಿಂತಿರ್ತಾನೆ!!!
  ಉದಾಹರಣೆ ೨ – ಹೆಂಡತಿ :- (ರಾತ್ರಿಯಾದರೂ ಇನ್ನೂ ಆಪೀಸಿನಿಂದ ಮನೆಗೆ ಬಾರದ ಗಂಡನಿಗೆ ಫೋನಿನಲ್ಲಿ) ರೀ, ಎಲ್ ಎನ್ಮಾಡ್ತಿದ್ದೀರೀ?. ಗಂಡನ ಉತ್ತರ :- ಆಫೀಸಲ್ಲೇ ಇದ್ದೀನಿ. ಇಂಪಾರ್ಟೆಂಟ್ ಮೀಟಿಂಗ್ ಇದೆ. ಇನ್ನೇನ್ ಬಂದ್ಬಿಡ್ತೀನಿ. ಸತ್ಯ :- ಯಾವ್ದೋ ಹೋಟ್ಲಲ್ (ಯಾರೊಂದಿಗೋ) ದೋಸೆ ಮೆಲ್ತಿರ್ತಾನೆ!!!
 ಉದಾಹರಣೆ ೩ – ಮಾಲೀಕ :- (ಯಾವುದೋ ಕೆಲಸಕ್ಕೆ ದೂರದ ಊರಿಗೆ ಕಳಿಸಿದ ಕೆಲಸಗಾರನನ್ನುದ್ದೇಶಿಸಿ ಫೋನಿನಲ್ಲಿ) ಎಲ್ಲಿದ್ದಿ? ಹೋದ್ ಕೆಲಸ ಆಯ್ತಾ?. ಕೆಲಸಗಾರನ ಉತ್ತರ :- ಇಲ್ಲಾ ಸಾರ್. ಇಲ್ಲೇ ಇದ್ದೀನಿ. ಕೆಲಸ ಮುಗ್ಸಿ ನಾಳೆ ಬರ್ತೀನಿ. ಸತ್ಯ :- ಮನೆಗೆ ಹೋಗಿ ಮುಸುಕೆಳಕೊಂಡ್ ಮಲಗಿರ್ತಾನೆ!!
           ತಾವೀಗಿರುವ ಸ್ಥಳದ ಬಗ್ಗೆ ಜನ ಸುಳ್ಳು ಹೇಳಲು ಮುಖ್ಯ ಕಾರಣ ದೂರದಲ್ಲಿದ್ದು ಕೇಳುತ್ತಿರುವವರಿಗೆ ಅದು ಗೊತ್ತಾಗುವುದಿಲ್ಲವೆಂಬುದು. ಅಂತಹ ಸುಳ್ಳಾಟಕ್ಕೆಲ್ಲ ಕಡಿವಾಣ ಹಾಕುವ ಒಂದು ಅಪ್ಲಿಕೇಶನ್ ಸ್ಮಾರ್ಟ್ ಫೋನ್ ಗಳಲ್ಲಿವೆಯೆಂದರೆ ನಿಜಕ್ಕೂ ನಿಮಗೆ ನಂಬಲು ಕಷ್ಟವಾಗಬಹುದು. ಅದೇ ಗ್ಲಿಂಪ್ಸ್ ಎಂಬ ಅಪ್ಲಿಕೇಶನ್!!! ಜಿ.ಪಿ.ಎಸ್. ಆನ್ ಮಾಡಿ ಈ ಗ್ಲಿಂಪ್ಸ್ ಅನ್ನು ಲಾಂಚ್ ಮಾಡುತ್ತಿದ್ದಂತೆಯೇ ತೆರೆಯಮೇಲೆ (ಗೂಗ್ಲ್) ಮ್ಯಾಪ್ ಹಾಗೂ ಅದರಲ್ಲಿ ನಾವಿರುವ ಸ್ಥಳ (ಮಿನುಗುವ ಸಣ್ಣ ಗುರುತಿನಂತೆ) ಕಾಣಿಸಿಕೊಳ್ಳುತ್ತದೆ. ಈ ಲೊಕೇಶನನ್ನು ನಾವು ಯಾರಿಗಾದರೂ ಎಸ್.ಎಂ.ಎಸ್/ಈ ಮೇಲ್ ಮಾಡಬಹುದು. (ಫೇಸ್ ಬುಕ್/ಟ್ವಿಟ್ಟರಲ್ಲೂ ಶೇರ್ ಮಾಡಬಹುದು). ಎಸ್.ಎಂ.ಎಸ್/ಈ ಮೇಲ್ ಗಳು ಕೂಡಲೇ ತಲುಪುತ್ತವಷ್ಟೇ. ಅವರು ಆ ಎಸ್.ಎಂ.ಎಸ್/ಈ ಮೇಲ್ ತೆರೆದರೆ ಅಲ್ಲಿ (ಗೂಗ್ಲ್) ಮ್ಯಾಪ್ ತೆರೆದುಕೊಂಡು ನಮ್ಮ ಲೊಕೇಶನ್ ಕಾಣಿಸುತ್ತದೆ. ಮೇಲಿನ ಉದಾಹರಣೆಗಳಲ್ಲಿ (ಸ್ಮಾರ್ಟ್ ಫೋನ್ ಉಪಯೋಗಿಸಲ್ಪಡುತ್ತಿದ್ದು) ತಂದೆ/ಹೆಣ್ತಿ/ಮಾಲೀಕ ಹೌದಾ. ಎಲ್ಲಿ ಒಂದು ಗ್ಲಿಂಪ್ಸ್ ಮೆಸ್ಸೇಜ್ ಕಳಿಸಿ ನೋಡುವ”- ಅಂದರೆ ಮಗ/ಗಂಡ/ಕೆಲಸಗಾರನ ನಿಜಸ್ಥಳ ಗೊತ್ತಾಗುತ್ತದೆ!! ಈ ಅಪ್ಲಿಕೇಶನನ್ನು ಅನೆಕಕಡೆ ಉಪಯೋಗಿಸಬಹುದೆಂದು ನನ್ನನಿಸಿಕೆ. ರಾತ್ರಿ ಬೀಟ್ ಪೋಲಿಸ್ ನವರು ಠಾಣೆಗೆ ಆಗಾಗ್ಯೆ ಈ ಮೇಲ್/ಎಸ್.ಎಂ.ಎಸ್ ಕಳಿಸುವ ವ್ಯವಸ್ಥೆ ಮಾಡಬಹುದು.
         ಯೂಟ್ಯೂಬ್ – ಅಂತರ್ಜಾಲದ ಯೂಟ್ಯೂಬ್ ನಲ್ಲಿರುವ ಸಾವಿರ ಸಾವಿರ ವಿಡಿಯೋಗಳು ಸ್ಮಾರ್ಟ್ ಫೋನ್ ನಲ್ಲಿ ನಿಮ್ಮ ಕೈಯ್ಯಲ್ಲಿ!! ಯೂಟ್ಯೂಬ್ ಅಪ್ಲಿಕೇಶನ್ ಮಹಿಮೆ. ಕೊಲವೆರಿ ಹಾಡಿನ ಬಗ್ಗೆ ಪೇಪರಲ್ಲಿ ಓದಿದ ನಾನು ಕೂಡಲೇ ಯೂಟ್ಯೂಬ್ ಅಪ್ಲಿಕೇಶನನ್ನು ಸ್ಮಾರ್ಟ್ ಫೋನಲ್ಲಿ ಕ್ಲಿಕ್ಕಿಸಿ ಆ ಕೂಡಲೇ ಆ ಹಾಡು ನೋಡಿದೆ!!
        ಟಾಕಿಂಗ್ ಟಾಮ್ – ಮೇಲೆಲ್ಲಾ ನಾನು ಹೇಳಿದ ಅಪ್ಲಿಕೇಶನ್ ಗಳು ಕೆಲವರ ಸ್ಮಾರ್ಟ್ ಫೋನಲ್ಲಿ ಇರಬಹುದು ಅಥವಾ ಕೆಲವರದ್ದರಲ್ಲಿ ಇಲ್ಲದೇ ಇರಬಹುದು. ಆದರೆ (ಬಹುಶಃ) ಪ್ರತಿಯೊಂದು ಆಂಡ್ರೋಯ್ಡ್ ಸ್ಮಾರ್ಟ್ ಫೋನಲ್ಲಿ ಇದ್ದೇಇರಬಹುದಾದ ಅಪ್ಲಿಕೇಶನ್ನೇ ಮಾತಾಡುವ ತುಂಟ ಬೆಕ್ಕು ಟಾಕಿಂಗ್ ಟಾಮ್!!! ಟಾಕಿಂಗ್ ಟಾಮ್ ಅಪ್ಲಿಕೇಶನ್ ಲಾಂಚ್ ಮಾಡುತ್ತಿದ್ದಂತೆ ತೆರೆಯಮೇಲೆ ಬೆಕ್ಕೊಂದು ಪ್ರತ್ಯಕ್ಷವಾಗಿ ಆಕಳಿಸಲಾರಂಬಿಸುತ್ತದೆ. ನಾವು ಮಾತು ಶುರುಮಾಡುತ್ತಿದ್ದಂತೆ-ಕತ್ತನ್ನು ಪಕ್ಕಕ್ಕೆ ಹೊರಳಿಸಿ ಕಣ್ಣು ಮಿಟುಕಿಸುತ್ತಾ-ಕಿವಿ ಹಿಂದೆ ಅಂಗೈಯನ್ನು ಅಗಲಮಾಡಿ ಹಿಡಿದು-ನಮ್ಮ ಮಾತನ್ನೇ ಆಲಿಸಲಾರಂಬಿಸುತ್ತದೆ. ನಮ್ಮ ಮಾತು ಮುಗಿಸುತ್ತಿದ್ದಂತೆ ನಾವು ಏನು ಮಾತಾಡಿದ್ದೆವೋ ಅದನ್ನೇ ತನ್ನದೇ ಧ್ವನಿಯಲ್ಲಿ (ಸ್ಪಷ್ಟವಾಗಿ) ಒದರುತ್ತದೆ!!! ಪಟಪಟ ಮಾತಾಡುವ ಹೆಂಗಸರ ಮದ್ಯ ಹಿಡಿದರಂತೂ ಹೇಳಿದ್ದೇ ಹೇಳುತ್ತಲಾ ನೋಡೇ ಎಂದು ಬಿದ್ದುಬಿದ್ದು ನೆಗಾಡುತ್ತಾರೆ. ಅದು ಪುನರಾವರ್ತಿಸುವ ನಮ್ಮ ಮಾತುಗಳನ್ನು ರೆಕಾರ್ಡ್ ಮಾಡಿ ಫೇಸ್ ಬುಕ್/ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಬಹುದು. ಅದಕ್ಕೂ ಮಜಾವೆಂದರೆ-ಪರದೆಯ ಮೇಲೆ ಕಾಣುವ ಆ ಬೆಕ್ಕನ್ನ-ಬೆರಳಿನಿಂದ ಮುಟ್ಟುತ್ತಿದ್ದಂತೆ-ಅದು ಮಾಡುವ ಶಬ್ದಗಳು!!! ತಲೆಯನ್ನ ನಾಲ್ಕೈದುಸಲ ಮುಟ್ಟಿದರೆ ದಡ್ ಅಂತ ಅಡ್ಡನೇ ಬೀಳ್ತದೆ. ಹಾಲಿನ ಕ್ಯಾನ್ ಮುಟ್ಟಿ ಒಂದಿಷ್ಟು ಹಾಲು ಹಾಕಬಹುದು. ಗಟಗಟನೆ ಕುಡಿದು ಬಾಯಿ ಒರಸಿಕೊಳ್ಳುತ್ತದೆ. ಶುದ್ದ ಮನರಂಜನೆ. ಮಾತಾಡುವ ಇಂತಾ ಹಲವಾರು ಪ್ರಾಣಿಗಳು ಆಂಡ್ರೋಯ್ಡ್ ಮಾರುಕಟ್ಟೆಯಲ್ಲಿದ್ದರೂ ಅತಿಹೆಚ್ಚು ಡೌನ್ ಲೋಡ್ ಆಗುತ್ತಿರುವ ಅಪ್ಲಿಕೇಶನ್ ಇದು.
         ಸ್ಮಾರ್ಟ್ ಫೋನ್ ಗಳನ್ನು ಜನೋಪಯೋಗಿ ಮಾಡುವ ಇಂತಹ ಹತ್ತಾರು ಅಲ್ಲ ನೂರಾರು ಅಲ್ಲ ಸಾವಿರಾರು ಅಪ್ಲಿಕೇಶನ್ ಗಳು ಅಂತರ್ಜಾಲದಲ್ಲಿವೆ. ಯಾವುದೋ ಇಂಗ್ಲೀಷ್ ಪದದ ಅರ್ಥ ಗೊತ್ತಾಗಲಿಲ್ಲವೆಂದುಕೊಳ್ಳಿ. ಕೂಡಲೇ ಜೇಬಿನಿಂದ ಸ್ಮಾರ್ಟ್ ಫೋನ್ ತೆಗೆದು ಡಿಕ್ಷನರಿ ತೆರೆದು ನೋಡಬಹುದು. ಪ್ರಪಂಚಾದ್ಯಂತ ನಡೆಯುತ್ತಿರುವ ಘಟನೆಗಳನ್ನ ನಿಮಗೆ ಆ ಕೂಡಲೇ ತಿಳಿಸಲು ನೂರಾರು ಅಪ್ಲಿಕೇಶನ್ ಗಳಿವೆ. (ಎಲ್ಲಾ ಇಂಗ್ಲಿಷ್ ನ್ಯೂಸ್ ಚಾನಲ್ ಗಳ ಅಪ್ಲಿಕೇಶನ್ ಗಳಿವೆ. ‘ನ್ಯೂಸ್ ಹಂಟ್ ಅಪ್ಲಿಕೇಶನ್ ನಲ್ಲಿ ಕನ್ನಡ ದಿನಪತ್ರಿಕೆಗಳನ್ನು ಓದಬಹುದು). ನೂರಾರು ಆಟದ ಅಪ್ಲಿಕೇಶನ್ ಗಳಿವೆ. ಅಡಿಗೆಗೆ ಸಂಬಂದಪಟ್ಟವು, ರಸಿಕರ ಮನತಣಿಸುವಂತವು(!!!), ನಾವು ಮಾಡುವ ಉದ್ಯೋಗಗಳಿಗೆ ಸಂಬಂದಿಸಿದ್ದಂತವು (ಇವು ನಿಜಕ್ಕೂ ತುಂಬಾ ಅನುಕೂಲ), ಬಿ.ಎಂ.ಟಿ.ಸಿ ಬಸ್ಸಿನ ವೆಳಾಪಟ್ಟಿ ತಿಳಿಸುವಂತವು, ರೈಲ್ವೆ ವಿಮಾನ ವೆಳಾಪಟ್ಟಿ ತಿಳಿಸುವಂತವು, ಬಾರ್ ಕೋಡ್ ಓದುವಂತವು – ಇನ್ನೂ ಏನೇನಿವೆ ಎಂಬುದನ್ನು ನೀವೇ ನೋಡಲು ಇಲ್ಲಿ ಕ್ಲಿಕ್ಕಿಸಿ ಹಾಗೂ ಬೇಕಾದ್ದನ್ನು ಹುಡುಕಿ. ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗಿ ಮುಂದಿನ ಹತ್ತು ವರ್ಷಗಳಲ್ಲಿ ಅಪ್ಲಿಕೇಶನ್ (ಆಪ್ಸ್) ಎಂಬುದು ಹೆಚ್ಚಿನ ಎಲ್ಲರಿಗೂ ತಿಳಿದಿರುವ ಸರ್ವೇಸಾಮಾನ್ಯ ಪದವಾಗಬಹುದು. ಪತ್ರಿಕೆಗಳ ಒಂದು ಕಾಲಮ್ಮನ್ನು (ಹೊಸ) ಅಪ್ಲಿಕೇಶನ್ ಗಳ ಗುಣಾವಗುಣಗಳನ್ನು ವಿವರಿಸುವುದಕ್ಕೇ ಮೀಸಲಾಗಿಡುವ ದಿನಗಳು ದೂರವಿಲ್ಲ. ಸಂಸ್ಥೆಯೊಂದು (ಖಾಸಗಿ/ಸರ್ಕಾರಿ/ಶೈಕ್ಷಣಿಕ/ಧಾರ್ಮಿಕ/ಸಹಕಾರಿ-ಇತ್ಯಾದಿ) ತನ್ನ ಗ್ರಾಹಕರಿಗೆ ನೀಡುವ ಮಾಹಿತಿ/ಸೇವೆಗಳ ಮಾಹಿತಿಯನ್ನು ಅಪ್ಲಿಕೇಶನ್ ರೂಪದಲ್ಲಿ ಮೊಬೈಲ್ ಗೇ ನೀಡುವ ದಿನಗಳು ದೂರವಿಲ್ಲವೆಂದೆನಿಸುತ್ತದೆ. ಉದಾಹರಣೆಗೆ (ಮುಂದೊಂದು ಕಾಲದಲ್ಲಿ ಬರಬಹುದಾದ) ಕರ್ನಾಟಕ ಟೂರಿಸಂ ಅಪ್ಲಿಕೇಶನನ್ನು ಸ್ಮಾರ್ಟ್ ಫೋನಿಗೆ ಇಳಿಸಿಕೊಂಡು ಸುತ್ತಾಡಕ್ಕೆ ಹೋಗಬಹುದು!! ಜಿ.ಪಿ.ಎಸ್. ಉಪಯೋಗಿಸಿ ನೀವಿರುವ ಸ್ಥಳವನ್ನು ನಿಮ್ಮ ಮೊಬೈಲ್ ಮ್ಯಾಪಿನಲ್ಲೇ ತೋರಿಸಿ ಸುತ್ತಮುತ್ತ ಇರುವ ನೋಡುವ ಸ್ಥಳಗಳ ಮಾಹಿತಿಯನ್ನು ಹಾಗೂ ತಲುಪಲು ಸರಿಯಾದ ದಾರಿಯನ್ನು ಆ ಅಪ್ಲಿಕೇಶನ್ ನಿಮಗೆ ತಿಳಿಸಬಹುದು!!!
       ಎಲ್ಲಾ ಸರಿ. ಆಗಿಂದಲೇ ಸ್ಮಾರ್ಟ್ ಫೋನ್ ಗಳ ಬಗ್ಗೆ ಹೊಗಳುತ್ತಲೇ ಇದ್ದೀರಿ, ಅವುಗಳ ಬಗ್ಗೆ ಋಣಾತ್ಮಕ ಅಂಶಗಳು ಯಾವುವೂ ಇಲ್ವೆ??–ಎಂಬ ಪ್ರಶ್ನೆ ಸಹಜವಾಗಿಯೇ ನಿಮ್ಮ ತಲೆಯಲ್ಲಿ ಇಷ್ಟೊತ್ತಿಗಾಗಲೇ ಮೂಡಿರಬಹುದು. ಅದಕ್ಕೆ ಉತ್ತರವೇ ಲೇಖನದ ಈ ಪ್ಯಾರ. ಸ್ಮಾರ್ಟ್ ಫೋನ್ ಗಳಲ್ಲಿ ಎರಡು ಮುಖ್ಯ ನೆಗಿಟಿವ್ ಪಾಯಿಂಟ್ ಗಳಿವೆ. ಒಂದು ಅವುಗಳ ಬೆಲೆ. (ನೋಕಿಯಾ/ಎಲ್.ಜಿ/ಸ್ಯಾಮ್ಸಂಗ್ ನಂತಹ) ದೊಡ್ಡ ಕಂಪನಿಗಳನ್ನು ಬಿಡಿ. ಕಡಿಮೆ ಬೆಲೆಗಳ ಮೊಬೈಲ್ ತಯಾರಿಸುವ ಮೈಕ್ರೋಮ್ಯಾಕ್ಸ್ ನಂತಹ ಕಂಪನಿಗಳ ಸ್ಮಾರ್ಟ್ ಫೋನ್ ಗಳ ಬೆಲೆ (ಸಾದಾರಣವಾಗಿ) ಏಳು ಸಾವಿರ ರುಪಾಯಿಗಳ ಮೇಲೇ. ತುಂಬಾ ಸಾದಾರಣ ಕ್ಯಾಮರಾವಿರುವ (2 MP)-ಸ್ವಲ್ಪ ಇತ್ತೀಚಿನ ಆಂಡ್ರೋಯ್ಡ್ ವರ್ಷನ್ (ಜಿಂಜರ್ ಬ್ರೆಡ್) ಇರುವ-ಸಾದಾರಣ ಅಳತೆಯ ಪರದೆಯಿರುವ-ಸ್ವಲ್ಪ ಉತ್ತಮ ಪ್ರೊಸೆಸರ್ (೮೩೦ Mhz) ಇರುವ-ಹೆಚ್ಚಿನ ಬೆಲೆಯ ಸ್ಮಾರ್ಟ್ ಫೋನ್ ನಲ್ಲಿರುವ ಹೆಚ್ಚಿನ ಎಲ್ಲಾ ಉಪಯೋಗಗಳಿರುವ- ಹಾಗೂ ಆ ಕಾರಣಗಳಿಂದಾಗಿ ಇಂದು ಮಾರುಕಟ್ಟೆಯಲ್ಲಿ ಬಿಸಿದೋಸೆಯಂತೆ ಖಾಲಿಯಾಗುತ್ತಿರುವ-ಸ್ಯಾಮ್ಸಂಗ್ ನವರ ಗ್ಯಾಲಕ್ಸಿ ವೈ ಸ್ಮಾರ್ಟ್ ಫೋನ್ ಬೆಲೆಯೂ ಏಳುಸಾವಿರ ರೂ ಗಳ ಆಚೆನೇ. (ಅದೇ ಸ್ಯಾಮ್ಸಂಗ್ ನವರ ಗ್ಯಾಲಕ್ಸಿ S-2 ಬೆಲೆ ೨೯೦೦೦ !!!). ಇನ್ನೊಂದು ನೆಗಿಟಿವ್ ಪಾಯಿಂಟ್ ಅವುಗಳ ಕಡಿಮೆ ಅವದಿಯ ಬ್ಯಾಟರಿ ಬಾಳಿಕೆ. (ಮತ್ತೆಮತ್ತೆ ಮಾಡಬೇಕೆನಿಸುವ) ಅನೇಕ ಮಂಗಾಟಗಳಿಗೆ ತುಂಬಾ ಅವಕಾಶಗಳಿರುವುದರಿಂದ-ಮೊಬೈಲಿನ ಕೇವಲ ಮಾತನಾಡುವುದಕ್ಕಿಂತ ಬೇರೆ ಉಪಯೋಗಗಳೇ ಹೆಚ್ಚು ಹೆಚ್ಚು ಇರುವುದರಿಂದ-ಬ್ಯಾಟರಿಯ ಬಳಕೆಯೂ ಹೆಚ್ಚು. ಮಾಮೂಲಿ ಮೊಬೈಲಿಗಿಂತ ಹೆಚ್ಚುಬಾರಿ ಚಾರ್ಜ್ ಮಾಡ್ಬೇಕಾಗುತ್ತೆ. ಇನ್ನೊಂದು ವಿಷಯ. ನಾಳೆನೇ ನೀವು ಮಾಮೂಲಿ ಮೊಬೈಲ್ ಬದಲಾಯಿಸಿ ಹೊಸ ಸ್ಮಾರ್ಟ್ ಫೋನ್ ತಗಂಡರೆ, ಉಪಯೋಗಿಸುವ ಮೊದಲು ಒಂದು ಇಂಟರ್ನೆಟ್ ಡಾಟಾ ಪ್ಲಾನ್ ತಗಣುವುದು ಒಳ್ಳೆಯದು. (ಬಿ.ಎಸ್.ಏನ್.ಎಲ್ ನವರದ್ದು ೫೭ ಹಾಗೂ ೯೬ ರೂಗಳ/ತಿಂಗಳಿಗೆ ಪ್ಲಾನ್-2Gಗೆ-ಇದೆ). ಇಲ್ಲದಿದ್ದರೆ ನಿಮ್ಮ ಕರೆನ್ಸಿ (ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಗಳನ್ನು ಉಪಯೋಗಿಸಿದಂತೆಲ್ಲಾ) ನೀರಿನಂತೆ ಖಾಲಿಯಾಗಲಾರಂಬಿಸಿ ನನ್ನನ್ನು ಬೈದುಕೊಳ್ಳುತ್ತೀರಿ.
       ಈ ಲೇಖನ-ಮೊಬೈಲ್ ಗಳು ಕೇವಲ ಪರಸ್ಪರ ಮಾತಾಡಲು (ಮಾತ್ರ) ಇರುವುವು-ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ-ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆಯೆಂಬುದು ನನ್ನನಿಸಿಕೆ. ಇನ್ನುಮುಂದಾದರೂ ನೀವು-ನಾಲ್ಕಾರು ಜನ ಒಟ್ಟುಸೇರಿ ಮಾತಾಡುತ್ತಿರುವಾಗ-ನೆಂಟರಿಷ್ಟರ ಹುಡುಗನೊಬ್ಬ/ಸ್ನೇಹಿತನೊಬ್ಬ ಅದೆಷ್ಟೋ ಸಾವಿರ ರೂಪಾಯಿಯ ಮೊಬೈಲ್ ತಗಂಡ-ಎಂಬ ಮಾತು ಬಂದಾಗ-ಚಿನ್ನದ ಉಂಗುರಗಳನ್ನು ಬೆರಳುಗಳಿಗೆ ಹಾಕಿದ ಕೈಯ್ಯಿಂದ-ಜೋಬಿನಿಂದ ನೋಕಿಯಾ (ಯಾವುದೋ ನಂಬರಿನ) ಹಳೆ ಸೆಟ್ ಹೊರತೆಗೆದು-ನಾನಿನ್ನೂ ಉಪಯೋಗಿಸುತ್ತಿರುದು ಇದನ್ನೇ-ಎಂದು (ಸಾವಿರಾರು ರೂಪಾಯಿ ಮೊಬೈಲನ್ನು ಕೊಂಡವರನ್ನು ಟೀಕೆ ಮಾಡುವ ದಾಟಿಯಲ್ಲಿ) ಹೇಳಲಾರಿರೆಂದು ಭಾವಿಸುತ್ತೇನೆ.(ನನಗಾದ ಅನುಭವ !!!)
         (ಯಾವುದೇ ಒಂದು) ಮೊಬೈಲಿನ ಬಳಕೆ ನನಗೆ ತೀರಾ ಇತ್ತೀಚಿನದು. ಕೇವಲ ಒಂದೂ ಮುಕ್ಕಾಲು ವರ್ಷವಾಯಿತಷ್ಟೇ(ಬೆಟ್ಟ-ಗುಡ್ಡಗಳ ಹಳ್ಳಿಗಾಡಿಗಳಲ್ಲಿನ ನೆಟ್ವರ್ಕ್ ಸಮಸ್ಯೆಯೇ ಇದಕ್ಕೆ ಕಾರಣ). ಅದಲ್ಲದೆ ಈ (ಮೊಬೈಲ್ ಗಳಿಗೆ ಸಂಬಂದಿಸಿದ) ತಾಂತ್ರಿಕತೆ ನಾನು ಓದಿದ ವಿಷಯವೂ ಅಲ್ಲ ಹಾಗು ನನ್ನ ಕಾರ್ಯಕ್ಷೇತ್ರವೂ ಅಲ್ಲ. (ನನ್ನ ಕಾರ್ಯಕ್ಷೇತ್ರ ಯಾವುದೆಂಬ ಸಹಜ ಕುತೂಹಲ ನಿಮ್ಮ ಮನದಲ್ಲಿ ಮೂಡಿದರೆ ಅದಕ್ಕೆ ಉತ್ತರ ನನ್ನ ಈ ಎರಡು ಹಿಂದಿನ ಬ್ಲಾಗ್ ಬರಹಗಳು-ಬರಹ೧ ಹಾಗು ಬರಹ ೨). ಈ ಎರಡು ಕಾರಣಗಳೇ ಸಾಕು ಒಂದಿಷ್ಟು ತಪ್ಪುಗಳು ಈ ಲೇಖನದಲ್ಲಿ ನುಸಿಳಿರಲು. ಈ ಲೇಖನವನ್ನು ಓದಿದ ವಿಷಯಕ್ಕೆ ಸಂಬಂದಪಟ್ಟ ತಂತ್ರಜ್ಞರು ಅವುಗಳನ್ನು (ಕಾಮೆಂಟ್ ನಲ್ಲಿ ಬರೆಯುವ ಮೂಲಕ) ನನ್ನ ಗಮನಕ್ಕೆ ತಂದರೆ ನನಗೆ ನನ್ನ ತಪ್ಪುಗಳ ಅರಿವಾಗಿ ತಿಳುವಳಿಕೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ. ನಾನು ಆರಂಬದಲ್ಲೇ ಬರೆದಿದ್ದೇನೆ. ಈ ಸ್ಮಾರ್ಟ್ ಫೋನುಗಳ ಬಗ್ಗೆ ವಿವರಣೆ ಕೆಲವರಿಗೆ ತೀರಾ ಸಾಮಾನ್ಯ ಹಾಗು ಗೊತ್ತಿದ್ದಿದ್ದೇ ಎಂದನಿಸಿದರೂ ಕೆಲವರಿಗಾದರೂ ಆಶ್ಚರ್ಯವಾಗಬಹುದು. ಸ್ಮಾರ್ಟ್ ಫೋನುಗಳ ಬಗ್ಗೆ ನಿಮಗೆ ಗೊತ್ತಿತ್ತೇ? ಅಥವಾ ಜ್ಞಾನೋದಯವಾಗಲ್ಪಡುತ್ತಿದೆಯೇ?? ನೀವು ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಉಪಯೋಗಿಸುವವರಾಗಿದ್ದಾರೆ ಒಂದಿಷ್ಟು ಆಸಕ್ತಿದಾಯಕ ಆಪ್ಸ್ ಗಳನ್ನ ಹಂಚಿಕೊಳ್ಳಬಹುದು. (ಕಾಮೆಂಟ್ ರೂಪದಲ್ಲಿ) ಓದುಗರ ಅಭಿಪ್ರಾಯಗಳಿಗೆ ಸದಾ ಸ್ವಾಗತ. (ಲೇಖನ ಮೆಚ್ಚುಗೆಯಾಗಿದ್ದು ಕಾಮೆಂಟ್ ಬರೆಯಲು ಪುರುಸೊತ್ತಿಲ್ಲದಿದ್ದರೆ ಕೆಳಗೆ +1 ರ ಮೇಲೆ ಕ್ಲಿಕ್ಕಿಸಬಹುದು).
  

Tuesday, October 18, 2011

ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............


              ಭ್ರಷ್ಟಾಚಾರದ ವಿರುದ್ದ ಹೋರಾಡಲು ಒಂದು ಹರಿತ ಆಯುಧಕ್ಕಾಗಿ ಉಪವಾಸ ಸತ್ಯಾಗ್ರಹಗಳೆಲ್ಲಾ ನಡೆದುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇನ್ನು ಸಿದ್ದವಾಗಿ ಬರಲಿರುವ ಲೋಕಪಾಲ್ ಮಸೂದೆ ಎಷ್ಟು ಹರಿತವೋ ಎಂಬುದನ್ನು ಕಾಲವೇ ಹೇಳಬೇಕು. ಭ್ರಷ್ಟಾಚಾರದ ವಿರುದ್ದ ಹೋರಾಡಲು ಈಗಾಗಲೇ ಒಂದು (ಸಾಕಷ್ಟು ಹರಿತವಾದ) ಆಯುದವಿದೆಯೆಂದು ಎಷ್ಟು ಜನಕ್ಕೆ ಗೊತ್ತು?? ಆ ಆಯುದವನ್ನು ಉಪಯೋಗಿಸಿ ಅಲ್ಲಿ ಎನು ನಡಿಯುತ್ತಿದೆ? ಎಂದು ತಿಳಿದುಕೊಂಡು ಭ್ರಷ್ಟಾಚಾರದ ಆಳವನ್ನು ಕಾಣಬಹುದು ಎಂಬುದು ಎಷ್ಟು ಜನರಿಗೆ ಗೊತ್ತಿದೆ?? ಆ ಆಯುದದ ಹೆಸರು ನಿಮಗೆಲ್ಲಾ ಎಲ್ಲೋ ಕೇಳಿ ಗೊತ್ತಿರಬಹುದು. ನಿಮ್ಮಲ್ಲಿ ಕೆಲವರಾದರೂ ಅದನ್ನು ಉಪಯೋಗಿಸಿಯೂ ಉಪಯೋಗಿಸಿರಬಹುದು. (ಕಾಮೆಂಟ್ ನಲ್ಲಿ ನಿಮ್ಮ ಅನುಭವ ಹೇಳಬಹುದು). ಅದೇ ಮಾಹಿತಿ ಹಕ್ಕು ಎಂಬ ಕಾನೂನು!!! ಈ ಲೇಖನ ಓದಿದ ಮೇಲೆ ಒಂದಿಬ್ಬರು ಇದನ್ನು ಉಪಯೋಗಿಸಿ ಅಲ್ಲಿ ಎನು ನಡಿಯುತ್ತಿದೆ ಎಂದು ತಿಳಿದುಕೊಂಡು ಸಂಬಂದಪಟ್ಟವರಿಗೆ ದೂರು ಕೊಟ್ಟರೆ ಕಾಮಗಾರಿಗಳು ಸ್ವಲ್ಪವಾದರೂ ಸರಿಯಾಗುತ್ತದೆ ಎಂಬುದೇ ನನ್ನ ಆಶಯ ಹಾಗೂ ನನ್ನ ಅನುಭವ. (ಹಾಗೆಲ್ಲಾ ಕಾಟಾಚಾರಕ್ಕೆ ಏನೇನೋ ಮಾಡದಂತೆ ಸ್ವಲ್ಪವಾದರೂ ಸರಿಯಾಗಿ ಕೆಲಸಮಾಡುವಂತೆ ಚುರುಕು ಮುಟ್ಟಿಸುತ್ತದೆ).ನಮ್ಮೂರ ರಸ್ತೆಯೊಂದರ ಕಳಪೆ ಡಾಮರ್ ಕಾಮಗಾರಿ ನಡೆದಾಗ - ಈ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ - ಕಾಮಗಾರಿಯ ಎಸ್ಟಿಮೆಶನ್ ತರಿಸಿ - ದೂರು ಕೊಡುತ್ತೇವೆಂದಾಗ – ಜಿಲ್ಲಾಪಂಚಾಯತ್ ಇಂಜೀನಿಯರ್ ಮತ್ತು ರಸ್ತೆ ಕಂಟ್ರಾಕ್ಟರ್ ನಮ್ಮ ಮನೆಯವರೆಗೂ ಪಾದಬೆಳೆಸಿ – ತಪ್ಪಾಗಿದ್ದನ್ನು ಒಪ್ಪಿಕೊಂಡು - ರಸ್ತೆಗೆ ಹೊಸದಾಗಿ ಜಲ್ಲಿ ಟಾರಿನ ಒಂದು ಪದರ ಹಾಕಿದ ವಿಷಯವೇ ಈ ಬ್ಲಾಗಿನ ಬರಹ.
ಟಾರ್ ಹಾಕಿದ್ದರೂ ಕೆಳಗೆ ಕಾಣಿಸುವ ದೊಡ್ಡಜಲ್ಲಿಕಲ್ಲುಗಳು!! 
            ಸುಮಾರು ಎರಡೂವರೆ ವರ್ಷದ ಕೆಳಗೆ ನಡೆದ ಘಟನೆ. ಬಸ್ಸುಗಳೋಡಾಡುವ ಮುಖ್ಯರಸ್ತೆಯಿಂದ ಎರಡೂವರೆ ಕಿ.ಮೀ. ದೂರವಿರುವ ನಮ್ಮೂರಿನ ಜಲ್ಲಿ ರಸ್ತೆಯ ಬದಿಗೆ ಅಲ್ಲಲ್ಲಿ ಲಾರಿಯಿಂದ ಕಲ್ಲುಗಳು ದಡದಡಾಂತ ಇಳಿಸಲ್ಪಟ್ಟವು. ನಾಲ್ಕೈದು ದಿನಗಳಲ್ಲಿ ಆ ದೊಡ್ಡ ಕಲ್ಲುಗಳನ್ನು ಸುತ್ತಿಗೆಯಲ್ಲಿ ಕುಟ್ಟಿ ಪುಡಿ ಮಾಡಲು ಒಂದೆರಡು ಲಂಬಾಣಿ ಕುಟುಂಬಗಳ ಆಗಮನವೂ ಆಯ್ತು. (ಸ್ವಲ್ಪ ಗಾಜುಗಣ್ಣಿನ ಬಿಳಿ ಕೆಂಪು ಮೈಬಣ್ಣದ ಅವರ ಚಿಳ್ಳೆಪಿಳ್ಳೆಗಳು – ಆಹಾ-ನೋಡಲು ಒಂದಕ್ಕಿಂತ ಒಂದು ಮುದ್ದಾಗಿದ್ದವು). ನೋಡುನೋಡುತ್ತಿದ್ದಂತೆಯೇ ಆ ಸುಡು ಬಿಸಿಲಿನಲ್ಲಿ ಮೂರು ಕೋಲಿನ ತಾತ್ಕಾಲಿಕ ಚಪ್ಪರ ಹಾಕಿಕೊಂಡು ಅದರಡಿ ಕೂತು ಆ ಕಲ್ಲುಗಳನ್ನು ಸುತ್ತಿಗೆಯಲ್ಲಿ ಒಡೆದು ಮುಷ್ಟಿಗಾತ್ರದ ಜಲ್ಲಿಗಳನ್ನಾಗಿ ಮಾಡಿದರು. ಐದಾರು ದಿನಗಳಲ್ಲೇ ಮತ್ತೊಂದಿಷ್ಟು ಜನರು, ರೋಡ್ ರೋಲರ್, ಡಾಮರ್ ಡ್ರಂಗಳು, ‘ಬೇಬಿಜೆಲ್ಲಿ’, ಡಾಮರ್-ಜಲ್ಲಿಕಲ್ಲು ಮಿಶ್ರಣ ಮಾಡುವ ಯಂತ್ರ-ಎಲ್ಲದರ ಆಗಮನವಾಯಿತು. ಹಳೆ ರಸ್ತೆಯನ್ನು ಅಗೆದು, ಅದಕ್ಕೆ ದೊಡ್ಡ ಜಲ್ಲಿ ಸುರಿದು, ರೋಡ್ ರೋಲರ್ ಓಡಿಸಿ, ಮಟ್ಟಮಾಡಿದಂತೆ ಮಾಡಿ, ಅದರಮೇಲೆ ಬೇಬಿಜಲ್ಲಿ ಡಾಂಬರ್ ಬಿಸಿ ಮಿಶ್ರಣ ಚೆಲ್ಲಿ, ಮತ್ತೊಂದೆರಡು ಬಾರಿ ರೋಡ್ ರೋಲರ್ ಓಡಿಸಿ, ಒಂದೂವರೆ ದಿನದಲ್ಲೇ ಟಾರ್ ರಸ್ತೆ ರೆಡಿಮಾಡಿ ಉಳಿದ (ಉಳಿಸಿದ) ಬೆಬಿಜಲ್ಲಿ,ಟಾರ್ ಡ್ರಂ ಎಲ್ಲಾ ಲಾರಿಗೆ ತುಂಬಿ ಕೆಲಸ ಮುಗಿಸಿ ಹೋದರು!!! ಚಿಕ್ಕಜಲ್ಲಿ ಹಾಗೂ ಡಾಂಬರ್ ಮಿಶ್ರಣ ಹಾಕಿದ್ದರೂ ಕೆಳಗೆ ಹಾಕಿದ್ದ ದೊಡ್ದಜಲ್ಲಿ ಕಾಣುತ್ತಿತ್ತು. ಸರಿಯಾಗಿ ಕಾಲಲ್ಲಿ ಒದ್ದರೆ ಎಲ್ಲಾ ಕಿತ್ತುಬರುವಂತಿತ್ತು. ಮಾಡುವಾಗ ಊರ ಜನ ಕೇಳಿದಾಗ – ಅದಿನ್ನೂ ಸೆಟ್ ಆಗಬೇಕು. ಕೆಲವೇ ದಿನದಲ್ಲಿ ಎಲ್ಲಾ ಸರಿಯಾಗಿ ಫಸ್ಟ್ ಕ್ಲಾಸ್ ಆಗುತ್ತದೆ – ಎಂಬ ಉತ್ತರ – ಮೇಸ್ತ್ರಿ ಕಡೆಯಿಂದ!!! ಶುದ್ದ ಕಳಪೆ ಕಾಮಗಾರಿ. ನಾನು ಮಾತ್ರ-ಅಲ್ಲಿ ಏನೂ ವೀರಾವೇಶದ ವಾಗ್ವಾದ ಮಾಡದೇ-ಆ ಕಾಮಗಾರಿ ಮಾಡುವಾಗಿನ ಫೋಟೋಗಳನ್ನ ತೆಗೆದಿಟ್ಟುಕೊಂಡೆ.
        ಈ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ ಬೇಕಾದ ಮಾಹಿತಿ ಕೇಳಲು ಸಂಬಂದಪಟ್ಟ ಕಛೇರಿಗಳಿಗೆ ಅಲೆಯುವ ಅವಶ್ಯಕತೆಯಿಲ್ಲ. ಒಂದು ರೂಪಾಯಿಗೆ ಕ್ಸೆರಾಕ್ಸ್ ಅಂಗಡಿಗಳಲ್ಲಿ ಸಿಗುವ ಮಾಹಿತಿ ಹಕ್ಕು ಫಾರಂ ತಂದು ಮನೆಯಲ್ಲೇ ಕೂತು ಭರ್ತಿಮಾಡಿ ಅಂಚೆ ಕಛೇರಿಯಿಂದ ಹತ್ತು ರೂಪಾಯಿ ಐ.ಪಿ.ಓ ತಂದು ಅದರೊಟ್ಟಿಗಿಟ್ಟು ಸಂಬಂದಪಟ್ಟ ಇಲಾಖೆಗೆ ಕೊರಿಯರ್ ಮಾಡಿದರೆ ಮುಗಿಯಿತು. ಒಂದು ತಿಂಗಳೊಳಗೇ ನಿಮ್ಮ ಮನೆಗೇ ಉತ್ತರ ಬರುತ್ತದೆ. (ಹಾಗೆ ಏನೂ ಉತ್ತರವೇ ಕೊಡದಿದ್ದರೆ ಅಧಿಕಾರಿಗಳು ದಿನಕ್ಕೆ ೨೫೦ ರೂಪಾಯಿ ದಂಡ ತೆರಬೇಕು). ಮಾಹಿತಿ ಹಕ್ಕು ಕಾನೂನನ್ನು ಮೊದಲ ಬಾರಿಗೆ ಬಳಸಿ ಜಿಲ್ಲಾ ಪಂಚಾಯತಿಯಿಂದ ಕಾಮಗಾರಿ ನಡೆದ ನಮ್ಮ ರಸ್ತೆಯ ಕೆಲಸದ ಎಸ್ಟಿಮೆಶನ್ ತರಿಸಿದೆ. (ಎಸ್ಟಿಮೆಶನ್=ಕಾಮಗಾರಿ ಹೇಗೆ ನಡೆಯಬೇಕು ಹಾಗೂ ಅದಕ್ಕೆ ಖರ್ಚೆಷ್ಟು ಎಂಬುದರ ಸಂಪೂರ್ಣ ವಿವರ). ಜೊತೆಗೆ ಜಲ್ಲಿ ಡಾಮರ್ ಕಾಮಗಾರಿ ಕಳಪೆಯಾದರೆ ಯಾರಿಗೆ ದೂರುಕೊಡಬೇಕೆಂಬ ಇನ್ನೊಂದು ಮಾಹಿತಿಯನ್ನೂ ಕೇಳಿದ್ದೆ!!!  ಪುಟವೊಂದಕ್ಕೆ ಎರಡು ರುಪಾಯಂತೆ (ಅದನ್ನೂ ಪೋಸ್ಟಲ್ ಐ.ಪಿ.ಓ. ಮೂಲಕ ಕೊರಿಯರ್ ಮಾಡಬೇಕು) ಐದಾರು ಪುಟಗಳ ಮಾಹಿತಿ ಕೈ ತಲುಪಿತು. ಎಸ್ಟಿಮೆಶನ್ ನೋಡಿದರೆ ನಮಗೆ ಗೊತ್ತಾಗುವುದು ಕಳಪೆ ಕಾಮಗಾರಿಯ ಸಂಪೂರ್ಣ ಮಾಹಿತಿ!!! ಪ್ರತಿ ಹಂತದಲ್ಲೂ ಕಳಪೆ ಹಾಗೂ ಕಾಟಾಚಾರದ ಕೆಲಸ ನಡೆದಿತ್ತು.
"ಕೆಲವೇ ದಿನದಲ್ಲಿ ಫಸ್ಟ್ ಕ್ಲಾಸ್ ಆಗುವ ರಸ್ತೆಯಂತೆ!!!"
          A4 ಸೈಜಿನ ಎರಡು ಪೇಪರ್ ತೆಗೆದುಕೊಂಡು – ಕಾಮಗಾರಿ ಯಾವ್ಯಾವ ಹಂತದಲ್ಲಿ ಎಷ್ಟೆಷ್ಟು ಕಳಪೆಯಾಗಿದೆಯೆಂದು ೧,೨,೩,೪..... ಎಂದು ಒಂದರಕೆಳಗೆ ಒಂದರಂತೆ ಸವಿಸ್ತಾರವಾಗಿ ಬರೆದುಕಾಮಗಾರಿ ನೂರಕ್ಕೆ ನೂರು ಎಸ್ಟಿಮೆಶನ್ ನಂತೆ ಮಾಡುವುದು ಕಷ್ಟಸಾದ್ಯವಾದರೂ ಸಂಪೂರ್ಣ ಕಳಪೆಯಾಗಿರುವುದರಿಂದ ದೂರುಕೊಡುವುದು ಅನಿವಾರ್ಯವಾಗಿದೆ. ಕಾಮಗಾರಿಯ ವಿವಿದ ಹಂತಗಳ ಫೋಟೊ ತೆಗೆದಿಟ್ಟುಕೊಂಡಿದ್ದು ಕಳಪೆಯಾಗಿದ್ದನ್ನು ಸರಿಪಡಿಸದಿದ್ದರೆ ಇಲಾಖೆಗೆ ಅಧಿಕೃತ ದೂರುಕೊಡಬೇಕಾಗುತ್ತದೆ. ಅಧಿಕೃತ ದೂರುಕೊಡುವ ಮೊದಲು (ಅಧಿಕೃತ ದೂರನ್ನು ಯಾರಿಗೆ ಕೊಡಬೇಕೆಂಬ ಮಾಹಿತಿಯನ್ನು ಮೊದಲೇ ಕೇಳಿಪಡೆದುಕೊಂಡಿದ್ದೆನಷ್ಟೇ!!) ನಿಮ್ಮ ಗಮನಕ್ಕೆ ಈ ಪತ್ರ – ಎಂಬ ಎಚ್ಚರಿಕೆಯೊಂದಿಗೆ ಪತ್ರವೊಂದನ್ನುಮೂರು ಪ್ರತಿಗಳನ್ನಾಗಿ ಕ್ಸೆರಾಕ್ಸ್ ಮಾಡಿ – ೧) ಜಿಲ್ಲಾ ಪಂಚಾಯತ್ ಇಂಜೀನಿಯರ್, ೨) ಜಿಲ್ಲಾ ಪಂಚಾಯತ್ ನಮ್ಮ ಕ್ಷೇತ್ರದ ಸದಸ್ಯರು ಹಾಗೂ ೩) ಕಾಮಗಾರಿ ಮಾಡಿದ ಕಂಟ್ರಾಕ್ಟರ್ – ಈ ಮೂರೂ ವಿಳಾಸಕ್ಕೆ ಕೊರಿಯರ್ ಮಾಡಿದೆ. ಸದಾ ನಗುಮೊಗದ ನಮ್ಮ ಘನವೆತ್ತ ಜಿಲ್ಲಾ ಪಂಚಾಯತ್ ಸದಸ್ಯರಿಂದ (ಈಗ ಮಾಜಿ) ಈವರೆಗೂ ಉತ್ತರ ಬಂದಿಲ್ಲ – ಉತ್ತರ ಕಳಿಸುವವರಿಗೆ ಕಷ್ಟವಾಗದಂತೆ ನನ್ನ ವಿಳಾಸ ಬರೆದಿದ್ದ ಐದು ರೂಪಾಯಿ ಪೋಸ್ಟ್ ಕವರ್ ಇಟ್ಟು ಕಳಿಸಿದ್ದರೂ ಕೂಡ!!!
        ಆದರೆ ಇಂಜೀನಿಯರ್ ಹಾಗೂ ಕಂಟ್ರಾಕ್ಟರ್ ಗೆ ಕಳಿಸಿದ್ದ ಪತ್ರ ಕೆಲಸಮಾಡಿತ್ತು. ನೀವು ಮಾಡಿದ ರಸ್ತೆ ಕಾಮಗಾರಿ ಕಳಪೆಯಾಗಿದೆಯೆಂದು ಗ್ರಾಮಸ್ಥರಿಂದ ದೂರು ಬಂದಿದ್ದು, ಮಳೆಗಾಲ ಕಳೆದ ನಂತರ ಸರಿಪಡಿಸದಿದ್ದರೆ ನಿಮ್ಮಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ – ಎಂದು ಇಂಜೀನಿಯರ್ ಕಂಟ್ರಾಕ್ಟರ್ಗೆ ಒಂದು ಪತ್ರ ಬರೆದು ಅದರ ನಕಲನ್ನು ನನಗೆ ಕಳಿಸಿದರು. ಕಂಟ್ರಾಕ್ಟರ್ ಕಡೆಯಿಂದಲೂ ಮಳೆಗಾಲ ಕಳೆದ ನಂತರ ಸರಿಪಡಿಸಿಕೊಡುವ ಆಶ್ವಾಸನೆಯ ಪತ್ರ ಬಂತು. ಇಷ್ಟೆಲ್ಲಾ ಓದಿ ನೀವು – ವಾವ್!!! ಆ ವರ್ಷ ಮಳೆಗಾಲ ಕಳೆದಕೂಡಲೇ ಕಂಟ್ರಾಕ್ಟರ್ ಬಂದು ರಸ್ತೆ ಸರಿಮಾಡಿಕೊಟ್ಟರು ತಾನೇ – ಎಂದು ಉದ್ಗಾರ ತೆಗೆಯಬೇಡಿ. ಮಳೆಗಾಲ ಮುಗಿದು ನಾಲ್ಕೈದು ತಿಂಗಳುಗಳಾದನಂತರವೂ ಅವರದ್ದು ಜಾಣಮರೆವು!!! ಆ ಜಾಣಮರೆವಿಗೆ ಔಷದಿಯಾಗಿ ಉಪಯೋಗಿಸಿದ್ದು ಮತ್ತೊಮ್ಮೆ ಮಾಹಿತಿಹಕ್ಕು ಕಾನೂನು!!! ಈ ಬಾರಿ ಕೇಳಿದ ಮಾಹಿತಿ – ರಸ್ತೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯ ಸಂಪೂರ್ಣ ವಿವರ (ಟೆಂಡರ್ ಕರೆದ ದಿನಾಂಕ, ತೆರೆದ ದಿನಾಂಕ, ಭಾಗವಹಿಸಿದ್ದ ಬಿಡ್ಡುದಾರರು, ಕೊಟ್ ಮಾಡಿದ ಬಿಡ್). ಚುರುಕು ಮುಟ್ಟಿತು. ಒಂದು ದಿನ (ನಾನು ಮನೆಯಲ್ಲಿರಲಿಲ್ಲ) ಕಂಟ್ರಾಕ್ಟರ್ ಹಾಗೂ ಇಂಜೀನಿಯರ್ ನಮ್ಮಮನೆಯವರೆಗೂ ಬಂದು – ಟಾರ್ ನ ಗುಣಮಟ್ಟ ಕಡಿಮೆಯಿದ್ದುದರಿಂದ ಹಾಗಾಗಿದ್ದು – ಎಂದು ಸ್ಪಷ್ಟೀಕರಣ ನೀಡಿ (!!!) ಇನ್ನೊಂದು ಪದರ ಟಾರ್ ಹಾಕಿ ಸರಿಪಡಿಸುವುದಾಗಿ ಹೇಳಿದರು. ಒಂದೆರೆಡು ದಿನಗಳಲ್ಲೇ ಮತ್ತೊಮ್ಮೆ ಲಾರಿ, ಬೇಬಿಜೆಲ್ಲಿ, ಟಾರ್ ಡ್ರಂಗಳು, ಟಾರ್ ಮತ್ತು ಜಲ್ಲಿ ಮಿಶ್ರಣಮಾಡುವ ಯಂತ್ರ, ರೋಡ್ ರೋಲರ್  ಹಾಗೂ ಕೆಲಸಗಾರರು – ಇವರೆಲ್ಲರ ಆಗಮನವಾಯಿತು. ರಸ್ತೆಯನ್ನೊಮ್ಮೆ ಗುಡಿಸಿ – ಹೊಸದಾಗಿ ಬಿಸಿ ಟಾರ್ ಜಲ್ಲಿ ಮಿಶ್ರಣ ಸುರಿದು – ಅದರಮೇಲೆ ರೋಡ್ ರೋಲರ್ ಓಡಿಸಿ – ರಸ್ತೆ ಸರಿಪಡಿಸಿದರು!!!! (ನಾಳೆ ನಮ್ಮೂರಿಗೆ ನೀವು ಬಂದಾಗ – ಎಲ್ಲಿ ಆ ಸೂಪರ್ ಸುಪ್ರಿಂ ರೋಡ್? ಎಂದು ಕೇಳಿದರೆ – ಇದು ಎರಡೂವರೆ ವರ್ಷ ಹಿಂದಿನ ಕಥೆ. ಮೂರ್ನಾಲ್ಕು ತಿಂಗಳಲ್ಲೇ ಹಾಳಾಗುವ ಬದಲು ಈಗ ಕಿತ್ತುಹೋಗಲು ಶುರುವಾಗಿದೆ!!!)
           ಸ್ವಲ್ಪ ಕಲ್ಪಿಸಿಕೊಳ್ಳೋಣ. ಮಾಹಿತಿ ಹಕ್ಕು ಎಂಬ ಕಾನೂನೇ ಇಲ್ಲದಿದ್ದರೆ? ಕಳಪೆ ರಸ್ತೆ ಕಾಮಗಾರಿ ದೂರುಕೊಡಲು ನಾನು ಜಿಲ್ಲಾಪಂಚಾಯತ್ ಆಫೀಸಿಗೆ ಹೋಗುವುದು. ಎಸ್ಟಿಮೆಶನ್ ಎಲ್ಲಿ ಸಿಗುತ್ತೆ?ಎಲ್ಲಿ ದೂರು ಕೊಡುವುದು? – ಎಂದು ನಾನು ಕೇಳುವುದು!! ಕೇಳುತ್ತಿರುವಂತೆಯೇ (ಯಾವನೋ ಒಬ್ಬ ಎಲ್ಲಾ ಸರಿಮಾಡುವವನು ಬಂದ – ಎಂಬಂತೆ ಆಶ್ಚರ್ಯ ಹಾಗು ಅಸಡ್ಡೆಯಿಂದ ನನ್ನನ್ನು ನೋಡುತ್ತಾ) ಅಲ್ಲಿ ಕೂತ ಯಾವನೋ ಒಬ್ಬ ಸಿಬ್ಬಂದಿ – ಕಿಸಕ್ಕನೆ ನಗುತ್ತಾ – ಸಾಹೇಬ್ರಿಲ್ಲ, ನಾಳೆ ಬನ್ನಿ – ಎಂದು ಹೇಳುವುದು. ಯಾವ ಎಸ್ಟಿಮೆಶನ್ ಮಾಹಿತಿ ಹಕ್ಕು ಕಾನೂನಿನ ಸಹಾಯದಿಂದ – ಇಪ್ಪತ್ತು ಮೂವತ್ತು ರೂಪಾಯಿಗೆ ನಮ್ಮ ಮನೆಬಾಗಿಲಿಗೆ ಬರುತ್ತದೋ – ಅದೇ ಎಸ್ಟಿಮೆಶನ್ ಗೆ ಆ ಕಾನೂನು ಇಲ್ಲದಿದ್ದರೆ - ನಾವು ಎಷ್ಟೊಂದು ಕಷ್ಟಪಡಬೇಕಾಗುತ್ತಿತ್ತು ಅಲ್ವಾ. 
            ಎಲ್ಲರಿಗೂ ಗೊತ್ತಿರುವ ಸತ್ಯವೇನೆಂದರೆ (ಹೆಚ್ಚಿನ ಎಲ್ಲಾ ಕಾಮಗಾರಿಗಳಲ್ಲಿ) ಕಾಮಗಾರಿಗೆಂದು ಬಿಡುಗಡೆಯಾಗುವ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗಿರುವುದಿಲ್ಲ. ಕಾಮಗಾರಿಗಳನ್ನು ಕಾಟಾಚಾರಕ್ಕೆಮಾಡಿ ಇಂಜೀನಿಯರ್, ಕಂಟ್ರಾಕ್ಟರ್ ಹಾಗು (ಹೆಚ್ಚಿನ ಸಂದರ್ಭದಲ್ಲಿ) ರಾಜಕಾರಣಿ – ಈ ಮೂರೂ ಜನ ಸೇರಿ ದುಡ್ಡು ಹೊಡೆಯುತ್ತಾರೆ. ಈ ಮೂರೂ ಜನರಲ್ಲಿ ರಾಜಕಾರಣಿ ಸ್ವಲ್ಪ ಸುರಕ್ಷಿತ. ಅವರು ತಿಂದಿದ್ದು ಗೊತ್ತೇ ಆಗುವುದಿಲ್ಲ!!! (ಕಂಡಲ್ಲೆಲ್ಲಾ ನಮಸ್ಕಾರ ಮಾಡುವ ಸದಾ ನಯವಂತಿಕೆ ಪ್ರದರ್ಶಿಸುವ ರಾಜಕಾರಣಿ (ಸಾದಾರಣವಾಗಿ) ದೊಡ್ಡ ಕಳ್ಳ ಆಗಿರುತ್ತಾನೆ). ಆದರೆ ಕಂಟ್ರಾಕ್ಟರ್ ಹಾಗೂ ಇಂಜೀನಿಯರ್ – ಒಬ್ಬ ಕಳಪೆ ಕಾಮಗಾರಿ ಮಾಡಿದವನು ಹಾಗೂ ಮತ್ತೊಬ್ಬ ಅದು ಸರಿಯಿದೆ. ಹಣ ಮಂಜೂರು ಮಾಡಬಹುದು ಎಂದು ಸಹಿ ಹಾಕಿದವನು – ಇಬ್ಬರೂ ಅಂಜಿಕೆಯಿಂದಲೇ ಇರುತ್ತಾರೆ. ಜನರಿಂದ ದೂರು ದಾಖಲಾಗಿ ಉನ್ನತ ತನಿಖೆಯಿಂದ ಕಾಮಗಾರಿ ಕಳಪೆಯೆಂದು ಸಾಬೀತಾದರೆ – ಕಂಟ್ರಾಕ್ಟರ್ ಕಪ್ಪು ಪಟ್ಟಿಗೆ ಸೇರಿದರೆ – ಇಂಜೀನಿಯರ್ ಸಸ್ಪೆಂಡ್ ಆಗಿ ಮನೆಗೆ ಹೋಗುತ್ತಾರೆ. ಸರ್ಕಾರ ಕಾಮಗಾರಿಗಳಿಗೆ ಲಕ್ಷಾಂತರ ರೂಪಾಯಿ ತೆಗೆದಿರಿಸಿ ಹ್ಯಾಗಾದರೂ ಮಾಡು ರಾಜಾ ಎಂದು ಹೇಳಿ ಕಂಟ್ರಾಕ್ಟರ್ ಕೈ ಮೇಲೆ ಹಾಕುವುದಿಲ್ಲ. ಗುಣಮಟ್ಟ ಕಾಪಾಡಲು ಇಂಜೀನಿಯರ್ ನೇಮಕ, ಹಾಗೂ ಗುಣಮಟ್ಟ ಕಳಪೆಯಾದರೆ ಅದನ್ನು ಸಾರ್ವಜನಿಕರು ದೂರುಕೊಡುವ ವ್ಯವಸ್ಥೆ ಹಾಗೂ ತನಿಖೆ ಇದ್ದೇ ಇರುತ್ತದೆ. ಇಂಜೀನಿಯರ್ ಹಾಗೂ ಕಂಟ್ರಾಕ್ಟರ್ ಸೇರಿ – ಕಳಪೆ ಕಾಮಗಾರಿ ಮಾಡಿ – ದುಡ್ಡು ನುಂಗಲು ಮುಖ್ಯ ಕಾರಣ – ತಾವೇನು ಮಾಡಿದರೂ ನಡೆಯುತ್ತೆ. ಜನ ಗೊಣಗುಟ್ಟುತ್ತಾರೆಯೇ ವಿನಃ (ಸರಿಯಾದ ಕ್ರಮದಲ್ಲಿ) ಕೆಳುವುದಿಲ್ಲ. (ಸರಿಯಾದ ಕ್ರಮದಲ್ಲಿ) ದೂರು ಕೊಡುವುದಿಲ್ಲ – ಎಂಬ ಧೈರ್ಯ!!! ಜನರ ಪರವಾಗಿ ಪ್ರಶ್ನಿಸಬೇಕಾಗಿದ್ದ ಜನಪ್ರತಿನಿದಿಯ ಕೈ ಬೆಚ್ಚಗೆ ಮಾಡಿ ಬುಟ್ಟಿಗೆ ಹಾಕಿಕೊಂಡ ಧೈರ್ಯ!!! ಜನ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ ನನ್ನ ಕುತ್ತಿಗೆಗೆ ತರುತ್ತಾರೆ, ನಾನು ಸಸ್ಪೆಂಡ್ ಆಗಬಹುದು ಎಂಬ ಹೆದರಿಕೆಯೇ ಸಾಕು – ಅತೀ ಕಳಪೆ ಕಾಮಗಾರಿಗೂ ಕಣ್ಮುಚ್ಚಿ ಇಂಜೀನಿಯರ್ ಸಹಿಹಾಕದಿರಲು!!! ಆದರೆ ಕೆಳುವರ್ಯಾರು? ಎಷ್ಟು ಜನ?? 
              ಗ್ರಾಮಾಂತರ ಪ್ರದೇಶದಲ್ಲೂ ಇಂದು ಬದಲಾವಣೆಗಳಾಗಿವೆ. ಪ್ರತೀ ಚಿಕ್ಕ ಹಳ್ಳಿಗಳಲ್ಲೂ ಧರ್ಮಸ್ಥಳ ಸಂಘ, ಸ್ವಸಹಾಯ ಸಂಘಗಳು, ಆ ಸಂಘ, ಈ ಸಂಘ – ಎಂದು ಹತ್ತಾರು ಸಂಘಗಳಿವೆ. ಯಾವುದೇ ಕಾಮಗಾರಿ ಹಳ್ಳಿಗೆ-ಊರಿಗೆ ಮಂಜೂರಾದರೆ ಸಂಘದ ಪರವಾಗಿ ಯಾರಾದರೊಬ್ಬರು ಆ ಕಾಮಗಾರಿಯ ಎಸ್ಟಿಮೆಶನನ್ನು ಮಾಹಿತಿ ಹಕ್ಕಿನ ಮೂಲಕ ತರಿಸಿ ಸ್ವಲ್ಪವಾದರೂ ಗಮನಿಸುತ್ತಿದ್ದಾರೆ ಕಾಮಗಾರಿಗಳು ಅಷ್ಟು ಕಳಪೆಯಾಗಲಿಕ್ಕಿಲ್ಲವೆಂಬುವುದು ನನ್ನ ಅಭಿಪ್ರಾಯ. ಕಾಮಗಾರಿ ತುಂಬಾ ಕಳಪೆ ಮಾಡಿದರೆ ಜನ ಪ್ರಶ್ನಿಸುತ್ತಾರೆ ಎಂಬ ಹೆದರಿಕೆ (ಸ್ವಲ್ಪವಾದರೂ) ಇಂಜೀನಿಯರ್ ಹಾಗೂ ಕಂಟ್ರಾಕ್ಟರ್ ಗಳಿಗೆ ಇರುತ್ತದೆ. ಈ ಲೇಖನ ಓದಿದವರಲ್ಲಿ – ನೂರಕ್ಕೆ ಹತ್ತರಷ್ಟು ಜನರಾದರೂ – ನಾಲ್ಕೈದು ಜನ ಪರಿಚಯದ ಜನರಿಗೆ ಅಥವಾ ಸಂಘದ ಸದಸ್ಯರಿಗೆ ಈ ವಿಷಯ ಹೇಳಿ – ಒಬ್ಬಿಬ್ಬರಾದರೂ (ಸಂಬಂದಪಟ್ಟ) ಮಾಹಿತಿ ಕೇಳಿದರೂ – ನಾನು ಬರೆದ ಈ ಬರಹ ಸಾರ್ಥಕವೆಂಬುದು ನನ್ನಭಿಪ್ರಾಯ.
          ಈ ಬರಹ ಮುಗಿಸುವ ಮೊದಲು ಒಂದು ಪ್ಯಾರಾವನ್ನು ಮಾಹಿತಿ ಹಕ್ಕು ಕಾನೂನು ವಿಷಯದಲ್ಲಿ ಹುಲಿಗಳಂತಿರುವ ಇಬ್ಬರಬಗ್ಗೆ ನಿಮಗೆ ತಿಳಿಸಲು ಮೀಸಲಾಗಿಡಲು ಬಯಸುತ್ತೇನೆ. ಅವರೇ ಕೊಪ್ಪದ ಸಮೀಪದ ತಲಮಕ್ಕಿ ಸುಬ್ರಮಣ್ಯ ಹಾಗೂ ಬಾಳೆಹೊನ್ನೂರು ಫೋಟೊ ಭಟ್ರು. ಕೊಪ್ಪಾ ಸಮೀಪ ತಲಮಕ್ಕಿ ಎಂಬ ಹಳ್ಳಿಯಲ್ಲಿರುವ ಸುಬ್ರಮಣ್ಯ – ತಲಮಕ್ಕಿಯ ತಮ್ಮ ಹಳ್ಳಿಯಲ್ಲಿರುವ ಫೋನಿಗೆ – ಅದು ಕೊಪ್ಪಾ ಎಕ್ಸ್ಚೇಂಜ್ ನಿಂದ ಹೊರಟಿದ್ದಕ್ಕೆ – ಬಿ.ಎಸ್.ಏನ್.ಎಲ್ ನವರು ಪಟ್ಟಣದ ಬಾಡಿಗೆ ಹಾಕುವುದಕ್ಕೆ ವಿರೋದಿಸಿ (ಗ್ರಾಮಾಂತ ಎಕ್ಸ್ಚೇಂಜ್ ಹಾಗೂ ಪಟ್ಟಣದ ಎಕ್ಸ್ಚೇಂಜ್ ಫೋನ್ ಗಳಲ್ಲಿ ಬಾಡಿಗೆಯಲ್ಲಿ ತುಂಬಾ ವ್ಯತ್ಯಾಸವಿದೆ) ಹೋರಾಡಿ ಗೆದ್ದವರು!!! ಇನ್ನು ಬಾಳೆಹೊನ್ನೂರಿನ (ಆರ್.ಟಿ.ಓ ಏಜೆಂಟ್!!!) ಫೋಟೊ ಭಟ್ರು. ಹೆಗಲಿಗೊಂದು ಜೋಳಿಗೆ ಹಾಕಿಕೊಂಡು ಭಟ್ರು ಶೂನ್ಯದೆಡೆ ನೋಡುತ್ತಾ ಸಿಗರೆಟ್ ಹಚ್ಚಿ ಧಂ ಎಳೆದರೆಂದರೆ ಯಾವುದೋ ಮಾಹಿತಿ ಕೇಳಲು ಸ್ಕೆಚ್ ಹಾಕುತ್ತಿದ್ದಾರೆಂದೇ ಅರ್ಥ. ಜನಜಾಗೃತಿಗೆ ಸಂಬಂದಿಸಿದ ಸಂಘವೊಂದರ ಸದಸ್ಯರೂ ಆಗಿರುವ ಭಟ್ಟರು ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ ಅನೇಕ ಅವ್ಯವಹಾರಗಳನ್ನು ಬಯಲಿಗೆಳೆದಿದ್ದಾರೆ. ಕೆನರಾ ಬ್ಯಾಂಕ್ ಚಿನ್ನದ ನಾಣ್ಯ ಪ್ರಕರಣದಲ್ಲಿ – ಇವರು ಕೇಳಿದ ನಾಲ್ಕು ಮಾಹಿತಿ ನೀಡದೆ ಸತಾಯಿಸಿದ ಬ್ಯಾಂಕ್ ಅಧಿಕಾರಿ – ೨೫೦೦೦ ರೂಪಾಯಿ ದಂಡ ಕಟ್ಟಬೇಕಾಯಿತು!!! (ಕೇಂದ್ರ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿ – ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ – ಅಧಿಕಾರಿ, ಇವರು ಹಾಗೂ ಕೇಂದ್ರ ಮಾಹಿತಿ ಆಯೋಗ (ದೆಹಲಿ) ಇವರ ನಡುವೆ ವೀಡಿಯೋ ಕಾನ್ಫಾರೆನ್ಸ್ ನಡೆದು ಬಗೆಹರಿದ ಘಟನೆ ಇದು)
    ವಿಶೇಷ ಸೂಚನೆ :- ಈ ಬರಹ ಓದಿ ಸ್ಪೂರ್ತಿಹೊಂದಿ ಒಂದಿಷ್ಟು ಮಾಹಿತಿ ಕೇಳೋಣ ಎಂದು ಹೊರಟವರು ನೀವಾಗಿದ್ದರೆ – ಚಿಕ್ಕ (ಆದರೆ ಬೆಲೆಕಟ್ಟಲಾಗದ) ಸಲಹೆ - ಎಳ್ಳಷ್ಟೂ ಸಂಬಂದವಿಲ್ಲದ, ಕೇವಲ ಅಧಿಕಾರಿಗಳಿಗೆ ಕಿರುಕುಳ ಕೊಡುವ ಒಂದೇ ಉದ್ದೇಶವಿಟ್ಟುಕೊಂಡು ಅನವಶ್ಯಕ ಮಾಹಿತಿಗಳನ್ನ ದಯವಿಟ್ಟು ಕೇಳಬೇಡಿ. (ಅದರಲ್ಲೂ ಪೋಲಿಸ್ ಇಲಾಖೆಯ ಬಗ್ಗೆ). ಯಾಕೆ? ಏನಾಗುತ್ತೆ?? – ಎಂಬುವುದು ನಿಮ್ಮ ಪ್ರಶ್ನೆಯಾಗಿದ್ದರೆ – ಅದಕ್ಕೆ ನನ್ನ ಉತ್ತರ – ಇಲ್ಲದಸಲ್ಲದ ಮಾಹಿತಿಗಳನ್ನು ಬೇರೆಬೇರೆ ಇಲಾಖೆಗಳಲ್ಲಿ ಕೇಳಿ ಪರಿಪಾಟಲು ಪಟ್ಟ ನನ್ನ ಸ್ನೇಹಿತನೊಬ್ಬನ ಕಥೆ – ನನ್ನ ಬ್ಲಾಗಿನಲ್ಲೇ ಮುಂದೊಂದುದಿನ ಬರೆಯುತ್ತೇನೆ.
              (ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ. ನಿಮ್ಮನಿಸಿಕೆಗಳು ನಮ್ಮ (ಮುಂದಿನ) ಬರಹಗಳನ್ನ ಸರಿಪಡಿಸುವ ಔಷಧ. ಬರಹ ಇಷ್ಟವಾಗಿ ಕಾಮೆಂಟ್ ಬರೆಯಲು ಪುರುಸೊತ್ತು ಸಿಗದಿದ್ದರೆ ಈ ಕೆಳಗಿರುವ +1 ರ ಮೇಲೆ ಕ್ಲಿಕ್ ಮಾಡಬಹುದು. ಫೇಸ್ ಬುಕ್ ನಲ್ಲಿ ಶೇರ್ ಮಾಡಿದರೆ ಹತ್ತಾರು ಜನರಿಗೆ ತಲುಪಿ, ಮೂರ್ನಾಲ್ಕು ಜನರಾದರೂ ಮಾಹಿತಿ ಕೇಳುವ ಮನಸ್ಸುಮಾಡಿ, ಒಂದಿಬ್ಬರಾದರೂ ಮಾಹಿತಿ ಕೇಳಿ ಒಂದಿಷ್ಟು ಉಪಯೋಗವಾದರೆ ನನ್ನ ಈ ಬರಹ ಸಾರ್ಥಕ) 
.  

Monday, July 4, 2011

ಕ್ರಯೋನಿಕ್ಸ್: ಕಾಯುತಿವೆ ಹೆಣಗಳು. ಮರುಹುಟ್ಟಿಗಾಗಿ!!!!!!!!


                   ಅಮೇರಿಕಾ ಸಂಯುಕ್ತ ಸಂಸ್ಥಾನದ ಆ ನಗರವೊಂದರಲ್ಲಿ – ಹೊರಗಿನಿಂದ ತೀರಾ ಸಾದಾರಣವಾಗಿ ಕಾಣುವ ಆ ಕಟ್ಟಡವೊಂದರ ಒಳಗೆ - ಕೇವಲ ಯಂತ್ರಗಳ ಗುಯ್ ಗುಟ್ಟುವಿಕೆ ಸದ್ದಿನ ಆ ಗಂಭೀರ ಪರಿಸರದಲ್ಲಿ – ಮೈನಸ್ ೧೯೬ ಡಿಗ್ರೀಯ ದ್ರವರೂಪ ಸಾರಜನಕದ ಅತಿ ಶೀತ ವಾತಾವರಣದ ಆ ಪ್ರತಿಯೊಂದು ಕೋಶದೊಳಗೆ – ಹೌದು ನಿಜ(!!!!) – ಕಾಯುತಿವೆ ದೇಹಗಳು. ಮರುಹುಟ್ಟಿಗಾಗಿ!!!! ಹಾಗೆ ದೇಹಗಳನ್ನು ಆ ರೀತಿ ಕಾಪಿಡಲು – ಪ್ರಾಣ ಆ ದೇಹದಿಂದ ಹೋಗುವುದಕ್ಕಿಂತ ತುಂಬಾ ಮೊದಲೇ – ಆ ದೇಹ ಹೊಂದಿದ್ದ ವ್ಯಕ್ತಿಗಳಿಗೂ ಹಾಗೂ ಆ ಸಂಸ್ಥೆಗೂ ಒಪ್ಪಂದವಾಗಿ ಹಣಸಂದಾಯವಾಗಿದೆ!!. ಅದರಂತೆ ಅವುಗಳನ್ನು (ಆ ದೇಹಗಳನ್ನು) ಸಂರಕ್ಷಿಸಿಡಲಾಗಿದೆ. ಸರಿ. ಪ್ರಾಣ ಹೋದ ದೇಹಗಳನ್ನು ಮಣ್ಣುಮಾಡುವುದು ಬಿಟ್ಟು ಅಲ್ಲೇಕೆ ಅತಿ ಶೀತದಲ್ಲಿ ಸಂರಕ್ಷಿಡಲಾಗಿದೆ?? ಕ್ರಯೋನಿಕ್ಸ್ ಅಂದರೆ ಎನು??? ಈ ಎಲ್ಲಾ ಕೌತುಕಮಯ ವಿಷಯವನ್ನು ನಿಮ್ಮ ಮುಂದಿಡುವುದೇ ಈ ಬ್ಲಾಗ್ ಬರಹದ ಉದ್ದೇಶ. ಆ ದೇಹಗಳು ಮರುಹುಟ್ಟು ಪಡೆಯಬಹುದೇ ಎಂಬ ಪ್ರಶ್ನೆಗೆ ಮಾತ್ರ ಕಾಲವೇ ಉತ್ತರ ಹೇಳಬೇಕು.
ದ್ರವಸಾರಜನಕದ ಕೋಶ 

                   ಮನುಷ್ಯರ ಆಯಸ್ಸು ನಮಗೆಲ್ಲಾ ಗೊತ್ತಿರುವಂತೆ ಹೆಚ್ಚೆಂದರೆ ೧೨೦ ವರ್ಷ. ಅದೆಷ್ಟೇ ಶಕ್ತಿಶಾಲಿ ವ್ಯಕ್ತಿಯಾದರೂ ಒಂದಲ್ಲಾ ಒಂದು ದಿನ ಸಾಯಲೇ ಬೇಕು. ಸತ್ತಮೇಲೆ ಒಂದೇ ಮಣ್ಣು ಇಲ್ಲಾ ಬೂದಿಯಾಗಬೇಕು. ಹೀಗೆಂದು ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ ಎಲ್ಲರೂ ಹೀಗೆ ತಿಳಿದುಕೊಂಡಿಲ್ಲ!! ಈ ಪ್ರಪಂಚದಲ್ಲಿ-ಕೆಲವೇ ಕೆಲವು ಮಂದಿ ಮಾತ್ರ-ಮುಂದೆಂದೋ ಒಂದು ದಿನ ವಿಜ್ಞಾನ ಮುಂದುವರೆದು-ಮರಣ ಹೊಂದಿದರೂ ಕೊಳೆಯಲು ಬಿಡದೆ ದೇಹವನ್ನು ಸುಸ್ಥಿತಿಯಲ್ಲಿಟ್ಟಿದ್ದರೆ-ಭವಿಷ್ಯದಲ್ಲಿ ಮುಂದೆಂದಾದರೂ ಮರುಜೀವ ಪಡೆಯಬಹುದೆಂದು ನಂಬಿದ್ದಾರೆ!!!!! ಅವರೇ ಕ್ರಯೋನಿಸ್ಟ್ ಗಳು (ಅತಿಶೀತದೇಹಸಂರಕ್ಷಕವಾದಿಗಳು-ಎಂದು ಕರೆಯಬಹುದೇನೋ!!!). ಹಾಗೆ ದೇಹವನ್ನು (ಅಥವಾ ಅಂಗಾಗಗಳನ್ನು) ಸಾವಿನ ನಂತರ ಕೊಳೆಯದಂತೆ ಅತಿಶೀತದಲ್ಲಿ ಸಂರಕ್ಷಿಸಿಡುವ ವಿದಾನವೇ ಕ್ರಯೋನಿಕ್ಸ್!!!
            ಆ ರೀತಿ ಸಾವನ್ನು ತಾತ್ಕಾಲಿಕವೆಂದು ಸ್ವೀಕರಿಸಿ ಮುಂದೆಂದೋ ಬದುಕುವ ಕನಸುಕಂಡವರು ಸಾವಿರಾರುಜನ ಇರಬಹುದು. ಆದರೆ ಆ ದಿಕ್ಕಿನಲ್ಲಿ ಪ್ರಯತ್ನ ಮಾಡಿದವನು ಮಾತ್ರ ಭೌತಶಾಸ್ತ್ರದ ಆ ಪ್ರೊಫೆಸರ್. ಆತನ ಹೆಸರೇ ರಾಬರ್ಟ್ ಚೆಸ್ಟರ್ ವಿಲ್ಸನ್ ಎಟಿಂಜರ್. ಈ ವಿಷಯದ ಬಗ್ಗೆ ಪ್ರಾಸ್ಪೆಕ್ಟಾಫ್ ಇಮ್ಮೊರ್ಟಾಲಿಟಿ (Prospect of Immortality)ಎಂಬ ಮಹಾ ಪ್ರಬಂದ ಬರೆದ ಈ ಕನಸುಗಾರ ಅದನ್ನು ಕಾರ್ಯರೂಪಕ್ಕೂ ತಂದ. ಆತನ ಕನಸಿನ ಫಲವೇ ೧೯೭೬ ರಲ್ಲಿ ಡೆಟ್ರಾಯಿಟ್ ಹೊರವಲಯದಲ್ಲಿ ಸ್ಥಾಪಿತವಾದ ಇಂತಹ ದೇಹಗಳನ್ನು ಭವಿಷ್ಯಕ್ಕಾಗಿ ಸಂರಕ್ಷಿಸಿಡುವ ಕ್ರಯೋನಿಕ್ಸ್ ಇನ್ಸ್ಟಿಟ್ಯುಟ್. ಎಟಿಂಜರ್ ದೇಹಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿಡುವ ಆ ಕೇಂದ್ರ ತೆರೆದಮೇಲೆ ಆದ ಮೊದಲ ಗಿರಾಕಿಯೇ ಆತನ ಅಮ್ಮ!!! ಹೌದು. ದ್ರವರೂಪ ಸಾರಜನಕದ ಆ ಕೋಶದೊಳಗೆ ಮೊತ್ತಮೊದಲು ಸಂರಕ್ಷಿಸಿಟ್ಟಿದ್ದು ಎಟಿಂಜರ್ ಸತ್ತ ತನ್ನ ತಾಯಿಯನ್ನ!!! ಇಂದು ಆಕೆಯ ದೇಹದ ಜೊತೆಗೆ ಎಟಿಂಜರ್ನ ಮೊದಲ ಹಾಗೂ ಎರಡನೆಯ ಹೆಂಡತಿಯರ ದೇಹಗಳೂ ಹಾಗೂ ೯೨ ಇತರೆ ದೇಹಗಳೂ ದ್ರವಸಾರಜನಕದ ಅತಿಶೀತ ಕೊಶಗಳಲ್ಲಿ ಕೆಡದೇ ಆ ಕೇಂದ್ರದಲ್ಲಿ ಸಂರಕ್ಷಿಸಲ್ಪಟ್ಟಿದೆ. ಕೇವಲ ಮನುಷ್ಯವರದ್ದೊಂದೇ ಅಲ್ಲ, ೬೪ ನಾಯಿ-ಬೆಕ್ಕು ಮೊದಲಾದ ಮುದ್ದಿನ ಪ್ರಾಣಿಗಳ ದೇಹ ಅಲ್ಲದೇ ೧೬೦ ಮನುಷ್ಯರ ಅಂಗಾಂಗಗಳನ್ನು ಅಲ್ಲಿ ಸಂರಕ್ಷಿಸಿಡಲಾಗಿದೆ. (ನೀವು ಓದುತ್ತಿರುವ ದಿನದ ಲೆಕ್ಕ ಬೇರೆಯೇ (ಹೆಚ್ಚು) ಇರಬಹುದು. ತಿಳಿಯುವ ಕುತೂಹಲವಿದ್ದರೆ ಇಲ್ಲಿ ಕ್ಲಿಕ್ಕಿಸಿ). ಇಲ್ಲಿ ಮಜಾ ಏನೆಂದರೆ ೯೨ ವರ್ಷದ ಆ ಪುಣ್ಯಾತ್ಮ ಎಟಿಂಜರ್ ಇನ್ನೂ ಬದುಕಿಯೇ ಇದ್ದಾನೆ.  
        ಇವರಿಗೆಲ್ಲ ತಲೆಕೆಟ್ಟಿದೆಯೇ? ಕಾನೂನು ಇದನ್ನು ಒಪ್ಪುತ್ತದೆಯೇ?? ಜೇಬು ತುಂಬಾ ದುಡ್ಡಿದ್ದು ಸಂಸಾರದಲ್ಲಿ ಮುನಿಸಿಕೊಂಡು ಮುಂದೊಮ್ಮೆ ಹುಟ್ಟುವ ಬಯಕೆಯ ಧನಿಕರೆ?? ಇಲ್ಲ. ಜೀವ ಇರುವಾಗ ಸಾವಿರಾರು ಡಾಲರ್ ತೆತ್ತು ತಮ್ಮ ದೇಹವನ್ನು ಶೈತ್ಯದಲ್ಲಿ ಸಂರಕ್ಷಿಸಿರುವ ಹಾಗೂ ಹಾಗೂ ಹಣ ಪಾವತಿಸಿ ಮುಂಗಡವಾಗಿ ಅಲ್ಲಿ ಸ್ಥಳ ಕಾದಿರಿಸಿರುವ ಅನೇಕ ಜನ ತಮ್ಮತಮ್ಮ ಕ್ಷೇತ್ರದಲ್ಲಿ ಮೆದಾವಿಗಳೇ!!! ಅಮೇರಿಕಾ (ಯು.ಎಸ್.ಎ) ಮತ್ತು ರಷ್ಯಾಗಳಲ್ಲಿ ಮಾತ್ರ ಹೆಣಗಳನ್ನು ಈ ರೀತಿ ಇಡಲು ಕಾನೂನಿನ ಒಪ್ಪಿಗೆ ಇದೆ. ಅದಕ್ಕೇ ಯುರೋಪಿನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಜರ್ಮನಿಯ ಕ್ರಯೋನಿಸ್ಟ್ ಗಳು ಅಮೆರಿಕಾದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹತ್ತಿರ ಹತ್ತಿರ ಒಂದೂಕಾಲು ಲಕ್ಷ ಯುರೋಸಮಗ್ರ ದೇಹಶೀತಲೀಕರಣ ಸೌಲಭ್ಯಕ್ಕೆ ಸಹಿಮಾಡಿದರೆ-ಸಾವು ಸಮೀಪಿಸುತ್ತಿರುವಂತೆಯೇ ರಕ್ತ ತೆಳುಮಾಡುವ ರಾಸಾಯನಿಕ ಹಾಗೂ ವೈಟಮಿನ್ ಇ ಗಳನ್ನು ರಕ್ತನಾಳಗಳೊಳಗೆ ತಳ್ಳುವುದು-ಒಮ್ಮೆ ಸಾವು ಅಧಿಕೃತವಾಗಿ ಧೃಡಪಟ್ಟನಂತರ ದೇಹವನ್ನು ಶೀತಲೀಕರಿಸುವುದು-ಅದೇ ಸಮಯದಲ್ಲಿ ರಕ್ತವನ್ನು ಬದಲಾಯಿಸಿ ಅದರ ಸ್ಥಾನದಲ್ಲಿ ಸಂರಕ್ಷಣಾ ದ್ರಾವಣವನ್ನು ರಕ್ತನಾಳದಲ್ಲಿ ತುಂಬುವುದು-ಕೊನೆಯಲ್ಲಿ ದ್ರವರೂಪ ಸಾರಜನಕ ಕೋಶದಲ್ಲಿ ಸಂರಕ್ಷಿಸಿಡುವುದು-ಎಲ್ಲವೂ ಸೇರಿ ಬರುತ್ತದೆ!!! (ಒಮ್ಮೆಲೇ ಅಷ್ಟು ಹಣ ತೆರಲು ಆಗದಿದ್ದರೆ ವಿಮೆಯಂತೆ ಕಂತುಗಳಲ್ಲಿ ಕಟ್ಟಬಹುದಂತೆ) ಎಂಥಾ ಆಶ್ಚರ್ಯ!!!!! (‘ದ್ರವರೂಪದ ಸಾರಜನಕ- ಹಾಗೆಂದರೇನು?? ಎಂಬುವುದು ನಿಮ್ಮ ಪ್ರಶ್ನೆಯಾಗಿದ್ದರೆ- ನೀವು ವ್ಯವಸಾಯ ವೃತ್ತಿಯವರಾಗಿದ್ದು ನಿಮ್ಮ ಮನೆಯಲ್ಲಿ ದನಕರುಗಳಿದ್ದರೆ-ದನಗಳಿಗೆ ಕೃತಕ ಗರ್ಭದಾರಣೆ ಮಾಡಿಸುತ್ತಿದ್ದರೆ-ಕೃತಕ ಗರ್ಭದಾರಣೆ ಮಾಡಿಸಲು ಬಂದವರನ್ನು ಕೇಳಿದರೆ-ಅವರು ಹೇಳುತ್ತಾರೆ ಅದರ ಉಪಯೋಗ ಹಾಗೂ ಪ್ರಾಮುಖ್ಯತೆ).
     ಮುಂದೆಂದಾದರೂ ಒಂದು ದಿನ ಆ ದೇಹಗಳು ಜೀವಪಡೆದು ಎದ್ದು ನಡೆಯುತ್ತವೆಯೇ? ಇದು ಸಾದ್ಯವೇ?? ಇವತ್ತು ಈ ಪರಿಕಲ್ಪನೆ ನಂಬಲೇ ಕಷ್ಟವಾಗುತ್ತದೆಯಲ್ಲವೆ. ಹಾಗಾದರೆ ಅತಿಶೀತದಲ್ಲಿ ದೇಹಗಳ ಸಂರಕ್ಷಣೆ (ಹಾಗು ಮುಂದೆ ಅದರ ಉಪಯೋಗ) ಅಸಾದ್ಯವೆ? ಅಥವಾ ಕಷ್ಟಸಾದ್ಯವೆ? ನಿಸರ್ಗದಲ್ಲಿ ಲಕ್ಷಾಂತರ ವರ್ಷಗಳಿಂದ-ಅನೇಕ ಪ್ರಾಣಿಗಳು-ಅತಿ ಶೀತ ವಾತಾವರಣಕ್ಕೆ ಮೊದಲೇ ಸಜ್ಜಾಗಿ-ತನ್ನೆಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿ-ಅನೇಕ ತಿಂಗಳುಗಳ ಹಿಮಚಳಿಯನ್ನು ನಿದ್ರಿಸಿ ಕಳೆಯುತ್ತವೆ.(ಹೈಬರ್ನೆಶನ್-ಎಂದು ಕರೆಯುತ್ತಾರೆ). ನಾನು-ಅತಿಶೀತವಾತಾವರಣದಲ್ಲಿ ಜೀವವನ್ನು ಸಂರಕ್ಷಿಸಿಡುವ ಬಗ್ಗೆ ಮುಂದೆ ಕೊಡಲಿರುವ ಉದಾಹರಣೆ-ಕೆಲವು ದಶಕಗಳ ಹಿಂದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವೆಂಬುದನ್ನು-ಆ ಉದಾಹರಣೆ ಓದಿದಮೇಲೆ ನೀವೇ ಒಪ್ಪುತ್ತೀರಿ.
        ಇಂದು ವೀರ್ಯಾಣು ಹಾಗೂ ಅಂಡಾಣು ಬ್ಯಾಂಕುಗಳು ಎಲ್ಲಾ (ಸಾದಾರಣ ದೊಡ್ಡ) ಊರುಗಳಲ್ಲೂ ಇವೆ. ವೀರ್ಯಾಣು ಹಾಗೂ ಅಂಡಾಣುಗಳನ್ನು ಎಂದೋ ತೆಗೆದು ಅತಿಶೀತವಾತಾವರಣದಲ್ಲಿ ಸಂರಕ್ಷಿಸಿಟ್ಟಿರುತ್ತಾರೆ. ಅಗತ್ಯಬಿದ್ದಾಗ ಅಗತ್ಯವಿದ್ದವರಿಗೆ ಅದನ್ನು ವರ್ಗಾಯಿಸುತ್ತಾರೆ. ಕೃತಕಗರ್ಭದಾರಣೆಯಿಂದ ಮಗು ಹುಟ್ಟುವುದು ಇಂದು ಅತ್ಯಾಶ್ಚರ್ಯದ ವಿಷಯವೇ ಅಲ್ಲ. ಅತಿಶೀತವಾತಾವರಣದಲ್ಲಿ ವೀರ್ಯಾಣುಗಳು (ಅಂದರೆ ಜೀವ) ಹಾಳಾಗದೆ ಇರುತ್ತವೆ ಎಂಬುದೂ ಅಷ್ಟೇ ಸತ್ಯ!!! ಸ್ಟೆಮ್ ಸೆಲ್ ಗಳಿಗೂ ಬ್ಯಾಂಕ್ ಬಂದಿದೆ. ಇಂದು ಪರಿಹಾರವೇ ಇಲ್ಲದ ಅನೇಕ ಆರೋಗ್ಯಕ್ಕೆ ಸಂಬಂದಪಟ್ಟ ಸಮಸ್ಯೆಗಳಿಗೆ ಮುಂದೆ ಈ ಸ್ಟೆಮ್ ಸೆಲ್ ಗಳು ದಾರಿಯಾಗಲಿವೆ. ಇವೆಲ್ಲಾ ಸಂಗತಿಗಳು ಕೆಲವು ದಶಕಗಳ ಹಿಂದೆ ಕಲ್ಪಿಸಿಕೊಳ್ಳಲೂ ಸಾದ್ಯವಿರಲಿಲ್ಲವಲ್ಲವೆ?
     ಈ ಅತಿಶೀತದೇಹಸಂರಕ್ಷಣೆ ಬಗ್ಗೆ ನಮ್ಮದೇನೆ ಕುತೂಹಲವಿದ್ದರೆ ಅದು ಕುತೂಹಲವಷ್ಟೇ. ನಮ್ಮದೇನೆ ಪ್ರಶ್ನೆಗಳಿದ್ದರೂ ಅವು ಕೇವಲ ಪ್ರಶ್ನೆಗಳಷ್ಟೇ. ಆ ಕುತೂಹಲಗಳಿಗೆ ಆ ಪ್ರಶ್ನೆಗಳಿಗೆ ಸದ್ಯಕ್ಕಂತೂ ಸಮರ್ಪಕ ಉತ್ತರ ಸಿಗುವ ಸಂಬವವಿಲ್ಲ. ಅವು ಪ್ರಶ್ನೆಗಳಾಗಿ ನಮ್ಮಲ್ಲಿಯೇ ಉಳಿಯುತ್ತವೆ. ಕಾಲವೇ ಅವಕ್ಕೆ ಉತ್ತರಹೇಳಬೇಕು. ಆ ಕಾಲವನ್ನು ನಮ್ಮ ಕ್ಷಣಿಕ ಜೀವಿತಾವದಿಯಲ್ಲಿ ನಾವು ಕಾಣುತ್ತೇವೆಯೇ ಎಂಬುದನ್ನೂ ಕಾಲವೇ ಉತ್ತರಿಸಬೇಕು!! ಒಂದಂತೂ ನಿಜ.   ಒಂದಿಷ್ಟು ಮನುಷ್ಯರು-ಆ ಮನುಷ್ಯರ ಚಿತ್ರ ವಿಚಿತ್ರ ಆಸೆಗಳು-ಆ ಆಸೆಗಳನ್ನು ಪೂರೈಸಲು ಎಷ್ಟಾದರೂ ದುಡ್ಡು ಚೆಲ್ಲುವ ಅವರ ಮನೋಭಾವ-ಆ ಮನೋಭಾವವನ್ನೇ ಬಂಡವಾಳವನ್ನಾಗಿಸಿ ದುಡ್ಡುಮಾಡುವ ಒಂದಿಷ್ಟು ಮಂದಿ. ಒಟ್ಟಾರೆ ಈ ಪ್ರಪಂಚವೇ ವಿಚಿತ್ರ.
     ಕ್ರಯೋನಿಕ್ಸ್ ಬಗ್ಗೆ ಈ ಮೊದಲೇ ನಿಮಗೆ ಗೊತ್ತಿತ್ತೆ? ಅಥವಾ ನಿಮಗೂ ಇದೊಂದು ಹೊಸ ವಿಷಯವೇ? ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ. (ಈ ಲೇಖನ ನಿಮಗೆ ಮೆಚ್ಚುಗೆಯಾಗಿದ್ದು ಕಾಮೆಂಟ್ ಬರೆಯಲು ಪುರುಸೊತ್ತಿಲ್ಲದಿದ್ದರೆ   (ಈ ಪ್ಯಾರದ) ಕೆಳಗೆ +1 ರ ಮೇಲೆ ಕ್ಲಿಕ್ ಮಾಡಬಹುದು!!)






Wednesday, May 4, 2011

ಬೊಜ್ಜು ಕರಗಿಸುವ ತಾಯತ!!!!!!!


              ಕೂತೇ ಮಾಡುವ ಕೆಲಸ, ಕಡಿಮೆ ಓಡಾಟ, ಜೋಬು ತುಂಬುವ ಸಂಬಳದಿಂದ ಸದಾ (ಅಗತ್ಯಕ್ಕಿಂತ ಹೆಚ್ಚು) ತುಂಬುತ್ತಿರುವ ಹೊಟ್ಟೆ, ಓಡಾಡಲು ಸದಾ ಕಾರು-ಸ್ಕೂಟರ್-ಬೈಕ್, ಸುಭದ್ರ ಆರ್ಥಿಕತೆಯಿಂದ ಮಾನಸಿಕ ನೆಮ್ಮದಿ, ಮನಕ್ಕೊಪ್ಪುವ ಮಡದಿ/ಗಂಡ - ಹೀಗೆ ಅನೇಕ (ಒಮ್ಮೊಮ್ಮೆ ಒಂದೇ ಅಥವಾ ಅದಕ್ಕಿಂತ ಹೆಚ್ಚಿನ) ಕಾರಣಗಳಿಂದ ಇಂದು ಬೊಜ್ಜು ಎಂಬುದು ಒಂದು ಅತಿ ದೊಡ್ಡ ಸಮಸ್ಯೆಯಾಗಿದೆ ಎಂಬ ಮಾತನ್ನು ಯಾರೂ ಅಲ್ಲಗೆಳೆಯಲಾರಿರೆಂದು ನನ್ನ ನಂಬಿಕೆ. ಹೊಟ್ಟೆ, ತೊಡೆಯ ಸುತ್ತ (ಕೆಲವರಿಗೆ ಕುತ್ತಿಗೆ ಹಾಗು ಸರ್ವ ಅಂಗಾಂಗಗಳ ಸುತ್ತ!!!) ಶೇಖರವಾಗುವ ಈ ಬೊಜ್ಜು ನಿಮಗೆಲ್ಲರಿಗೂ ಗೊತ್ತಿರುವಂತೆ ಅನೇಕ (ಜೀವವನ್ನೇ ಮೊಟಕುಗೊಳಿಸುವಂತಹ) ಕಾಯಿಲೆಗಳಿಗೆ ಹೆದ್ದಾರಿ. ಮದುಮೇಹ, ಹೃದಯ ಸಂಬಂದೀ ಕಾಯಿಲೆಗಳು, ಮೂಳೆ ಸವೆಯುವಿಕೆ, ಗಂಟು ನೋವು, ಸೊಂಟ ನೋವು, ಋತುಚಕ್ರದಲ್ಲಿ ಏರುಪೇರು- ಒಂದೇ ಎರಡೇ???. ಓದುತ್ತಾ ಓದುತ್ತಾ ಒಮ್ಮೆ ಸೊಂಟದ ಮೇಲೆ ಕೈ ಆಡಿಸಿಕೊಂಡು (ಟೈರ್ ತರ ಬೊಜ್ಜು ಹೆಬ್ಬೆರಳು ಹಾಗು ಉಳಿದ ಬೆರಳುಗಳ ಮದ್ಯ ಸಿಕ್ಕರೆ) ಗಾಬರಿಯಾಗಬೇಡಿ. ಎಲ್ಲವಕ್ಕೂ ಒಂದು ಪರಿಹಾರವಿದೆ. ಆ ಪರಿಹಾರವೇ ಬೊಜ್ಜು ಕರಗಿಸುವ ತಾಯತ!!!! ಅದರ ಬಗ್ಗೆ ನನಗೆ ಮಾಹಿತಿಯಿದ್ದು (ನಿಮ್ಮಲ್ಲಿ ಕೆಲವರಿಗಾದರೂ ಉಪಯೋಗವಾಗಲೆಂಬ ಪರೋಪಕಾರ ಬುದ್ದಿಯಿಂದ) ಅದನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ!!!!
ನಂತರ!!!!
        ಹೌದು.ನಿಜ. ಅಂತದ್ದೊಂದು ತಾಯತವಿರುದು ನಂಬುವುದು ಕಷ್ಟವಾದರೂ ಇರುವುದು ನಿಜ. ನೀವೂ ಅಂತದ್ದೊಂದು ತಾಯತ ಕಟ್ಟಿಕೊಂಡರೆ ನಿಮ್ಮ ಬೊಜ್ಜೂ ದಿನೇದಿನೇ ಕರಗಿ ಸ್ಮಾರ್ಟ್ ಆಗುವುದು ನಿಮ್ಮ ಗಮನಕ್ಕೆ ಬಂದೇ ಬರುತ್ತದೆ. ಇನ್ನೇಕೆ ತಡ?. ಆದರೆ ಒಂದು ವಿಚಾರ. ಹೇಗೆ ಗಣಪತಿ ವ್ರತ ಮಾಡುತ್ತೇನೆಂದು ಹೇಳಿ ಕಾಟಾಚಾರಕ್ಕೆ ನಾಲ್ಕು ಹೂ ಏರಿಸಿದರೆ ಆ ವ್ರತದ ಫಲ ದೊರಕದೆ ಮಡಿಯಿಂದ ಒಂದು ನಿರ್ದಿಷ್ಟ ಕ್ರಮದಲ್ಲಿ ವ್ರತ ಮಾಡಿದಾಗ ಮಾತ್ರ ಅದರ ಫಲ ದೊರಕುತ್ತದೋ ಹಾಗೆಯೇ-ಹೇಗೆ ಸತ್ಯನಾರಾಯಣ ಕಥೆ ಮಾಡುತ್ತೇನೆಂದು ಹೇಳಿ ಒಟ್ರಾಶಿ ಮಾಡಿದರೆ ಅದರ ಫಲ ದೊರಕದೆ ಮಡಿಯಿಂದ ಕ್ರಮವರಿತು ಮಾಡಿದರೆ ಮಾತ್ರ ಸತ್ಫಲ (!!??) ದೊರೆಯುತ್ತದೋ ಹಾಗೆಯೇ-ಹೇಗೆ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡುತ್ತೇನೆಂದು ಹೇಳಿ ನಿಯಮ ನಿಷ್ಠೆಯಿಂದ ವ್ರತ ಮಾಡದೆ ಹೋದರೆ ಅಲ್ಲಿ ಜ್ಯೋತಿಯೂ ಕಾಣದೆ ತೊಂದರೆಗಳುಂಟಾಗುತ್ತವೋ ಹಾಗೆಯೇ-ಈ ತಾಯತ ಕಟ್ಟಿಕೊಂಡರೂ ಫಲ ಸಿದ್ದಿಯಾಗಬೇಕಾದರೆ (ಅಂದರೆ ಬೊಜ್ಜುಕರಗಿ ದಪ್ಪ ಕಡಿಮೆಯಾಗಬೇಕಾದರೆ) ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು!!! ಹಾಗಾದರೆ ಮಾತ್ರ ಫಲಸಿದ್ದಿ. ತಲೆಕೆಡಿಸಿಕೊಳ್ಳಬೇಡಿ. ತುಂಬಾ ಸುಲಭದ ನಿಯಮಗಳನ್ನು (ಹೆಚ್ಚೇನಿಲ್ಲ) ಪಾಲಿಸಿದರಾಯಿತಷ್ಟೆ. ಕಡಿಮೆ ಬೊಜ್ಜಿನ ಸ್ಮಾರ್ಟ್ ಶರೀರ ನಿಮ್ಮದಾಗುತ್ತದೆ!!! ತಾಯತ ಕಟ್ಟಿಕೊಂಡು ಪಾಲಿಸಬೇಕಾದ ಆ ನಿಯಮಾವಳಿಗಳನ್ನ ಅತಿ ಮುಖ್ಯವಾದವುಗಳು ಮೊದಲು ಮೊದಲು-ಕಡಿಮೆ ಕಡಿಮೆ ಮುಖ್ಯವಾದದ್ದು ಅನಂತರ ಅನಂತರ-ಈ ಕ್ರಮದಲ್ಲಿ ಕೆಳಗೆ ಬರೆದಿದ್ದೇನೆ.
     ೧) ರಾತ್ರಿ ಮಲಗುವಾಗ ಬೆಳಿಗ್ಗೆ ೫:೫೦ಕ್ಕೆ ಅಲರಾಂ ಇಡುವುದು. ಮೊಬೈಲ್ ನಲ್ಲಾದರೆ ಒಮ್ಮೆ ಮಾಡಿದರೆ ಸಾಕು. (ಪ್ರತಿ ದಿನ ಆ ಸಮಯಕ್ಕೇ ಎಬ್ಬಿಸುತ್ತೆ). ನಾನು ಹೇಳಲಿಲ್ವಾ. ಎಷ್ಟೊಂದು ಸುಲಭದ ನಿಯಮಗಳು!!!
     ೨) ಅಲರಾಂ ಹೊಡೆದಕೂಡಲೇ ಎದ್ದು ಪ್ರಾತಃ ವಿದಿಗಳನ್ನು ಮುಗಿಸಿ ೬:೦೫ ರಿಂದ ೬:೪೫ ರವರೆಗೆ-ಮೊದಲು ಸ್ವಲ್ಪ ಹೊತ್ತು ಮೆಲು ಓಟ (ಜಾಗಿಂಗ್)-ಅನಂತರ ವೇಗದ ನಡಿಗೆ ಮಾಡಲೇಬೇಕು. ಮೊದಲು ಹದಿನೈದು ದಿನ ಐದು ನಿಮಿಷ ಜಾಗಿಂಗ್ ಮೋವತ್ತೈದು ನಿಮಿಷ ವೇಗದ ನಡಿಗೆ. ನಂತರದ ೧೫ ದಿನ ೧೦ ನಿಮಿಷ ಜಾಗಿಂಗ್ ಹಾಗು ೩೦ ನಿಮಿಷ ನಡಿಗೆ. ಹೀಗೆ ಹದಿನೈದು ಹದಿನೈದು ದಿನಕ್ಕೊಮ್ಮೆ ಜಾಗಿಂಗ್ ಸಮಯ ಹೆಚ್ಚಿಸಿ ಕೊನೆಗೆ ಪ್ರತಿದಿನ ೧೫ ನಿಮಿಷ ಜಾಗಿಂಗ್ ಹಾಗು ೨೫ ನಿಮಿಷ ವೇಗದ ನಡಿಗೆ ಮಾಡಲೇಬೇಕು. (ಅನುಕೂಲಕ್ಕೆ ತಕ್ಕಂತೆ (ಹಾಗೂ ಕಾಲಕ್ಕೆ ತಕ್ಕಂತೆ) ಶುರುಮಾಡುವ ಸಮಯವನ್ನು ಹಿಂದೊತ್ತಬಹುದು. ಆದರೆ ಮುಂದೂಡುವಂತಿಲ್ಲ!!!) 
ಮೊದಲು
    ೩) ಬೆಣ್ಣೆ/ತುಪ್ಪ ವಾರಕ್ಕೆ ಮೂರುಬಾರಿಗಿಂತ ಹೆಚ್ಚು ಉಪಯೋಗಿಸಬಾರದು.
    ೪) ಐಸ್ಕ್ರೀಂ ವಾರಕ್ಕೆ ನಾಕುಬಾರಿಗಿಂತ ಹೆಚ್ಚು ತಿನ್ನಬಾರದು.
    ೫) ಸಿಹಿ ಪದಾರ್ತ, ಕುರ್ಕುರೆ ತರ ತಿಂಡಿಗಳು, ಪಾನಿಪುರಿ ಇತ್ಯಾದಿಗಳನ್ನು ತಿನ್ನಬಹುದು. ಆದರೆ ದಿನಕ್ಕೊಮ್ಮೆ ಮಾತ್ರ. (ಹೆಚ್ಚಿಗೆ ಉಪಯೋಗಿಸಿದರೆ ತಾಯತದಿಂದ ನಿರೀಕ್ಷಿತ ಫಲ ದೊರೆಯುವುದಿಲ್ಲ)
    ೬) ಎಣ್ಣೆ-ಉಪಯೋಗಿಸದಿದ್ದರೆ ತಾಯತದ ಫಲ ಬೇಗ ಸಿಗುತ್ತದೆ. ೧೫ ದಿನಕ್ಕೊಮ್ಮೆ ಅಲ್ಪಸ್ವಲ್ಪ ಹಾಕಿದರೂ ಓಕೆ. 
    ೭) ಬತ್ತಿ-ಊಹೂಂ. ಎಂದೆಂದೂ ಬೇಡ. ಬತ್ತಿ ಎಳೆದರೆ ನಿಷ್ಫಲ ಗ್ಯಾರಂಟಿ!!!
           ನೋಡಿ. ತಾಯತ ಕಟ್ಟಿಕೊಂಡು ನಿರೀಕ್ಷಿತ ಫಲ ದೊರಕಲು ಮಾಡಲೇಬೇಕಾದ ನಿಯಮಾವಳಿಗಳು ಎಷ್ಟೊಂದು ಸುಲಭವಿದೆಯಲ್ಲವಾ?? ಅಯ್ಯಪ್ಪಮಾಲೆ ಹಾಕಿದವರು ಮಾಡಲೇಬೇಕಾದ-ಅತಿ ಮುಂಚೆ ಹಾಗೂ ರಾತ್ರಿ ಚಳೀಲಿ ತಣ್ಣೀರ್ ಸ್ನಾನ-ಅಂತಹ ಕಷ್ಟ ನಿಯಮಾಚರಣೆಗಳಿಲ್ಲ. ಬೇರೆ ವ್ರತಾಚರಣೆಗಳಿಗೆ ಹೋಲಿಸಿದರೆ ನನ್ನ ಬಳಿಯಿರುವ ಬೊಜ್ಜು ಕರಗಿಸುವ ತಾಯತ ಕಟ್ಟಿಕೊಂಡು ಪಾಲಿಸಬೇಕಾದ ನಿಯಮಗಳು ನಿಜಕ್ಕೂ ಸುಲಭ ಹಾಗು ಸರಳ. ಜೋಬಿಗೆ ಕತ್ತರಿಹಾಕುವ ಯಾವ ಸಲಹೆ-ಸೂಚನೆಗಳೂ ಇಲ್ಲ. ಹಾಗೆ ಮಾಡಬೇಡಿ-ಹೀಗೆ ಮಾಡಬೇಡಿ, ಅದು ಮುಟ್ಟಬೇಡಿ-ಇದು ತಿನ್ನಬೇಡಿ-ಎಂಬ ದೊಡ್ಡ ಪಟ್ಟಿ ಇಲ್ಲ ಅಲ್ವಾ? ದೇವರ ದಯೆಯಿಂದ ಅಂತಹ ತಾಯತ ನನಗೆ ಲಭಿಸಿದೆ!!!
          ಇಷ್ಟು ಓದುತ್ತಿರುವಂತೆ ನಿಮ್ಮ ಮನದಲ್ಲಿ (ಕೆಲವರಿಗಾದರೂ) ಮೂಡುತ್ತಿರುವ ಭಾವನೆಗಳನ್ನು ಇಲ್ಲಿ ಕುಳಿತೇ ನಾನು ಅರ್ಥಮಾಡಿಕೊಳ್ಳಬಲ್ಲೆ. ಅಂತಹ ತಾಯತ ಇರುವುದು ಹೌದೇ? (ಉತ್ತರ:ಹೌದು), ಇರುವುದು ಹೌದಾದರೆ ನಿಮ್ಮಲ್ಲಿ ಇರುವುದು ಹೌದೇ?? (ಇದಕ್ಕೂ ಉತ್ತರ : ಹೌದೌದು!!!). ನಿಮ್ಮಲ್ಲಿ ಇರುವುದೇ ಹೌದಾದರೆ ನಿಮ್ಮ ಸಂಪರ್ಕ ಮಾಹಿತಿಗಳು (ಮೊಬೈಲ್ ನಂಬರ್, ಮೈಲ್ ಐ.ಡಿ) ಎಲ್ಲಿ???-ಈ ಎಲ್ಲಾ ಕುತೂಹಲಕ್ಕೆ ಇಗೋ ಇಲ್ಲಿದೆ ಮಾಹಿತಿ- ಆ ಸಂಪರ್ಕಮಾಹಿತಿಗಳೆಲ್ಲ ನಿಮಗೆ ಅಗತ್ಯವಿಲ್ಲ. ಫ್ಯಾನ್ಸಿ ಐಟಂ ಅಥವಾ ಕುಂಕುಮ ಎಲ್ಲ ಸಿಗುವ ಯಾವುದಾದರೂ ಅಂಗಡಿಗೆ ಹೋಗಿ ಎರಡು ರುಪಾಯಿಗೋ ಐದು ರುಪಾಯಿಗೋ ಸಿಗುವ ಕಾಶಿದಾರವೊಂದನ್ನು ತನ್ನಿ.ತೊಳೆದು ಇಷ್ಟದೇವರ ಮುಂದಿಟ್ಟು (ನನ್ನ ಗಮನಕ್ಕೆ ಬರಲೆಂದು) ಈ ಲೇಖನದ ಕೊನೆಯಲ್ಲಿ ಕಾಮೆಂಟ್ ನಲ್ಲಿ ಬರೆಯಿರಿ/ಫೇಸ್ ಬುಕ್ ನನ್ನ ವಾಲ್ ನಲ್ಲಿ ಬರೆಯಿರಿ/ಆರ್ಕುಟ್ ನಲ್ಲಿ ಸ್ಕ್ರಾಪ್ ಮಾಡಿರಿ. ೨೪ ಘಂಟೆಗಳಲ್ಲಿ ಆ ತಾಯತಕ್ಕೆ ಶಕ್ತಿಯನ್ನು ಇಲ್ಲಿಂದಲೇ ಆವಾಹನೆ ಮಾಡುತ್ತೇನೆ!!!!! ಅನಂತರ ಕಟ್ಟಿಕೊಂಡು ನಿಯಮ ಪಾಲಿಸಿ. (ಹೊರಗಡೆ ಕೆಲಸದ ಸಮಯದಲ್ಲಿ ಕಟ್ಟಿಕೊಂಡಿರಲು ಕಿರಿಕಿರಿಯಾದರೆ ಬೆಳಿಗ್ಗೆ ಆರರಿಂದ ಎಂಟರವರೆಗೆ ಕಟ್ಟಿಕೊಂಡರೆ ಸಾಕು). ಆರು ತಿಂಗಳಲ್ಲೇ ನಿಮ್ಮ ಬೊಜ್ಜು ಸಾಕಷ್ಟು ಕರಗಿ ನೀವು ತೆಳ್ಳಗಾಗುವುದರಲ್ಲಿ ಅನುಮಾನವೇ ಇಲ್ಲ!!! ಈ ತಾಯತದ ಇನ್ನೊಂದು ಮಹಿಮೆಯೆಂದರೆ ಇದು ನಿಮ್ಮನ್ನು ದಿನವಿಡೀ ಉಲ್ಲಸಿತರಾಗಿಟ್ಟಿರುತ್ತದೆ!!
        ಆರು ತಿಂಗಳಲ್ಲಿ ಬೊಜ್ಜು ಕರಗದಿದ್ದರೆ??-ಇದಲ್ಲವೇ ನಿಮ್ಮ ಪ್ರಶ್ನೆ? ಆರು ತಿಂಗಳು ತಾಯತ ಕಟ್ಟಿಕೊಂಡರೂ ಬೊಜ್ಜು ಸ್ವಲ್ಪವೂ ಕರಗದಿದ್ದರೆ ನಿಯಮಾಚರಣೆಗಳಲ್ಲಿ ಏನೋ ಲೋಪವಾಗಿದೆಯೆಂದೇ ಅರ್ಥ. ನಿಯಮಾಚರಣೆಗಳನ್ನು ನೂರಕ್ಕೆ ನೂರು ಪಾಲಿಸಿದರೂ ಬೊಜ್ಜು ಸ್ವಲ್ಪವೂ ಕರಗದಿದ್ದರೆ (ಈ ರೀತಿ ಸಲಹೆಕೊಟ್ಟಿದ್ದಕ್ಕೆ ಪರಿಹಾರವಾಗಿ) ನಿಮ್ಮ ದುಡ್ಡನ್ನು ನಾನೇ ವಾಪಸ್ ಕೊಡುತ್ತೇನೆ!!! ಮುಂದಿನ ಬಾರಿ ದೇವರಿಗೆ ಕಾಣಿಕೆಹಾಕುವಾಗ ಐದು ರೂಪಾಯಿ ಕಡಿಮೆ ಹಾಕಿ ಹಾಗೂ (ಮೇಲೆ ತಿಳಿಸಿದ ಕ್ರಮದಲ್ಲಿ-ಕಾಮೆಂಟ್/ವಾಲ್/ಸ್ಕ್ರಾಪ್) ನನ್ನ ಗಮನಕ್ಕೆ ತನ್ನಿ. ಇಲ್ಲಿಂದಲೇ ಐದು ರೂಪಾಯಿಯನ್ನು ದೇವರಿಗೆ (೨೪ ಘಂಟೆಯಲ್ಲಿ) ಜಮಾ ಮಾಡುತ್ತೇನೆ!!!!
(ಅತಿ ಮುಖ್ಯ ಸೂಚನೆ : ಎರಡನೇ ನಿಯಮ ಆಚರಣೆ ಮಾಡುವಾಗ ಎದೆ ಅಥವಾ ಹೊಟ್ಟೆಯ ಮೇಲ್ಬಾಗದಲ್ಲಿ ನೋವು ಬಂದರೆ ಕೂಡಲೇ ಹೃದಯತಜ್ಞರ ಸಲಹೆ ಪಡೆದು ಇ.ಸಿ.ಜಿ ಹಾಗೂ ಟಿ.ಎಂ.ಟಿ. ಮಾಡಿಸಿಕೊಳ್ಳಲೇಬೇಕು.)