Friday, March 1, 2013

ನೆಲದಾಳದಲ್ಲಿ ಸುರಂಗಗಳ ಮೂಲಕ ವ್ಯಾಪಾರ ವಹಿವಾಟು !!!!!


          ಲೇಖನದ ಈ ಶೀರ್ಷಿಕೆಯೇ ನಿಮ್ಮಲ್ಲಿ (ಕೆಲವರಿಗಾದರೂ) ಕುತೂಹಲ ಹುಟ್ಟಿಸಬಹುದು!!! ದೇಶ ದೇಶಗಳ ನಡುವಣ ವ್ಯಾಪಾರ ವಹಿವಾಟು ಹಡಗು/ಬಂದರುಗಳ ಮೂಲಕ ಅಥವ ಟ್ರಕ್/ರೈಲು/ಚೆಕ್ ಪೋಸ್ಟ್ ಗಳ ಮೂಲಕ ಅಥವಾ ವಿಮಾನಗಳ ಮೂಲಕ ನಡೆಯುತ್ತದೆಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವೇ. ಆದರೆ – ದೇಶ ದೇಶದ ಮದ್ಯದ ಗಡಿಯಲ್ಲಿ - ನೆಲದಿಂದ ಅರವತ್ತು ಎಪ್ಪತ್ತು ಅಡಿಗಳಾಳದಲ್ಲಿ – ಸ್ವಲ್ಪ ನಡು ಬಗ್ಗಿಸಿ ಹೋಗಬಹುದಾದ ದೂಳು ತುಂಬಿದ ಅರೆಗತ್ತಲೆಯ ಸುರಂಗಗಳ ಮೂಲಕ - ಮುಖಕ್ಕೊಂದು ಬಟ್ಟೆ ಸುತ್ತಿಕೊಂಡು – ವಾರದಲ್ಲಿ ಆರುದಿನ ಹಗಲೂ ರಾತ್ರಿ (ಬಹುಶಃ ಶುಕ್ರವಾರ ಅಲ್ಲದಿದ್ದರೆ ನೀವೀಗ ಈ ಲೇಖನ ಓದುತ್ತಿರುವ ಸಮಯದಲ್ಲೂ) ನಡೆಯುತ್ತಿರುವ – ವಾರ್ಷಿಕ ಕೆಲವು ದಶಲಕ್ಷ ಡಾಲರುಗಳ – ಸಾಮಾನು ಸರಂಜಾಮುಗಳ ವ್ಯಾಪಾರ ವಹಿವಾಟಿನ ಬಗ್ಗೆ ನೀವು ಕೇಳಿರುವ ಸಂಭವ ಕಡಿಮೆ. (ಬಹುಶಃ) ಈ ವ್ಯವಸ್ತೆ ಪ್ರಪಂಚದ ಅತಿದೊಡ್ಡ ಕಳ್ಳಸಾಗಾಣಿಕಾ ವ್ಯವಸ್ತೆ!!! ಈ ಆಶ್ಚರ್ಯಕರ, ಕುತೂಹಲಬರಿತ ಹಾಗೂ ಸ್ವಾರಸ್ಯಕರ ವಿಷಯದ ಬಗ್ಗೆ ನಿಮಗೆ ತಿಳಿಸುವುದೇ ಈ ಬ್ಲಾಗ್ ಬರಹದ ಉದ್ದೇಶ. ಆದರೆ ಅದಕ್ಕೆ ಪೂರ್ವಭಾವಿಯಾಗಿ ಚರಿತ್ರೆಯ ಪುಟಗಳಲ್ಲಿ ಹಿಮ್ಮುಖ ಪಯಣ. 
             ಬೈಬಲ್ಲಿನ ಹಳೆಯ ಒಡಂಬಡಿಕೆಗಳ ಪ್ರಕಾರ ಇಸ್ರೇಲ್ ಎಂಬುದು ಯಹೂದಿಗಳಿಗೆ ದೇವರೇ ನೀಡಿದ ಭೂಬಾಗ. ಗುಲಾಮರಂತೆ ಈಜಿಪ್ಟಿನಲ್ಲಿ ಬಾಳುತ್ತಿದ್ದ ಯಹೂದಿಗಳು ಗುಂಪುಕಟ್ಟಿಕೊಂಡು ಮೋಸಸ್ ನ ನೇತೃತ್ವದಲ್ಲಿ ಈಜಿಪ್ಟ್ ನಿಂದ (ತಮ್ಮ ಮೂಲ ನೆಲೆ ಕಡೆ) ಹೊರಟಾಗ ಬೆಟ್ಟವೊಂದರಮೇಲೆ ಮೋಸಸ್ ನಿಗೆ ಕಾಣಿಸಿಕೊಳ್ಳುವ ದೇವರು (God) ಯಹೂದಿಗಳಿಗೆ ಇಸ್ರೇಲ್ ಪ್ರದೇಶವನ್ನು ನೀಡುತ್ತಾನೆ. ಯಹೂದಿಗಳು ನೆಲಸುತ್ತಾರೆ. ನಗರ/ದೇವಾಲಯಗಳನ್ನು ಕಟ್ಟಿಕೊಳ್ಳುತ್ತಾರೆ. ಕ್ರಿಸ್ತನ ಹುಟ್ಟು, ಬದುಕು ಹಾಗೂ ಸಾವು – ಎಲ್ಲಾ ಸಂಭವಿಸುವುದು ಇಸ್ರೇಲಲ್ಲೇ. ಆದರೆ ಕ್ರಿಶ್ಚಿಯಾನಿಟಿ ಹಾಗೂ ನಂತರದಲ್ಲಿ ಇಸ್ಲಾಂ ಪ್ರವರ್ದಮಾನಕ್ಕೆ ಬರುತ್ತಿದ್ದಂತೆ ಯಹೂದಿಗಳು ನೆಲಕಚ್ಚುತ್ತಾರೆ. ನಗರಗಳು/ಬೃಹತ್ ದೇವಾಲಯಗಳು ನೆಲಸಮವಾಗುತ್ತದೆ. (ಈಗಲೂ ಸಾವಿರ ವರ್ಷಗಳ ನಂತರವೂ ಅಳಿದುಳಿದ ದೇವಾಲಯದ ಗೋಡೆಯ ಮುಂದೆ ಯಹೂದಿಗಳು ತಮ್ಮ ಗೋಳು ತೋಡಿಕೊಳ್ಳುವುದು ಸಂಪ್ರದಾಯವಂತೆ!!!). ತಮ್ಮ ತಾಯ್ನಾಡಿನಲ್ಲೇ ನೆಲೆ ಕಳೆದುಕೊಳ್ಳುತ್ತಾರೆ. ಆದರೆ ಹುಟ್ಟು ಸಾಹಸಿಗಳೂ, (ಬಹುಶಃ ನಮ್ಮ ಕೊಂಕಣಿಗಳಂತೆ) ಕುಶಲ ವ್ಯಾಪಾರಿಗಳೂ ಆದ ಯಹೂದಿಗಳು ಪ್ರಪಂಚಾದ್ಯಂತ ಹರಡಿಕೊಳ್ಳುತ್ತಾರೆ. ಇಸ್ರೇಲ್ ಪ್ಯಾಲಸ್ತೀನಿಯರ (=ಅರಬ್ ಮುಸ್ಲಿಮರು) ಕೈವಶವಾಗುತ್ತದೆ.
            ಆದರೆ ಎರಡನೇ ಮಹಾಯುದ್ದದ ನಂತರ ನಡೆಯುವ ಕೆಲವೊಂದು ಘಟನೆಗಳು ಮಧ್ಯಪ್ರಾಚ್ಯದ (Middle east) ಚಿತ್ರಣವನ್ನೇ ಬದಲಾಯಿಸುತ್ತದೆ. ಯುರೋಪಿನಲ್ಲಿ ಹಿಟ್ಲರ್ ನ ಜನಾಂಗೀಯ ದ್ವೇಷಕ್ಕೆ ಬಲಿಯಾಗಿ ಉಳಿದ ಯಹೂದಿಗಳು – ಸಾವಿರ ವರ್ಷದ ಕೆಳಗೆ ತಾವು ಬಿಡಬೇಕಾಗಿ ಬಂದ – ದೇವರೇ ಯಹೂದಿಗಳಿಗೆ ನೀಡಿದ ಭೂಬಾಗ – ಇಸ್ರೇಲ್ ನಲ್ಲಿ ನೆಲೆಕಂಡುಕೊಳ್ಳುವ ನಿರ್ದಾರ ತೆಗೆದುಕೊಳ್ಳುತ್ತಾರೆ. ಯುದ್ದದಲ್ಲಿ ಗೆದ್ದ ರಾಷ್ಟ್ರಗಳಾದ ಅಮೇರಿಕ ಹಾಗು ಬ್ರಿಟನ್ ಎಲ್ಲಾ ರೀತಿಯ ಸಹಕಾರ ನೀಡುತ್ತವೆ. ಪ್ರಪಂಚಾದ್ಯಂತ ನೆಲಸಿರುವ ಯಹೂದಿಗಳೂ ಇಸ್ರೇಲಿನೆಡೆ ಬರಲಾರಂಬಿಸುತ್ತಾರೆ. ಹೊಸ ವಸಾಹತುಗಳು ಕಟ್ಟಲ್ಪಡುತ್ತವೆ. ಒಂದೂವರೆ ಸಾವಿರ ವರ್ಷಗಳ ನಂತರ ಯಹೂದಿಗಳ ಹೊಸ ದೇಶ ಇಸ್ರೇಲ್ ಮತ್ತೆ ಅದೇ ಜಾಗದಲ್ಲಿ ತಲೆಯೆತ್ತುತ್ತದೆ!!!! ಆದರೆ ಆ ಕನಸು ನನಸಾಗಲು ಅವರು ಪಟ್ಟ (ಹಾಗೂ ಪಡುತ್ತಿರುವ) ಕಷ್ಟಗಳು ಒಂದೆರೆಡಲ್ಲ.
           ಯಹೂದಿಗಳು ಪ್ರಪಂಚಾದ್ಯಂತದಿಂದ ವಲಸೆಬಂದು – ಒಂದೂವರೆ ಸಾವಿರ ವರ್ಷಗಳ ಹಿಂದೆ ನಾವಿದ್ದ ಪ್ರದೇಶವೆಂದು - ಇಸ್ರೇಲ್ ನಲ್ಲಿ ತುಂಬಿಕೊಳ್ಳುತ್ತಿದ್ದಂತೆ – ಅನೇಕ ತಲೆಮಾರುಗಳಿಂದ ಆ ಜಾಗದಲ್ಲಿ ನೆಲೆಸಿದ್ದ ಪ್ಯಾಲಸ್ತೀನಿಯರು ಮೂಲೆಗುಂಪಾಗುತ್ತಾರೆ!!! ಲಕ್ಷಾಂತರ ಪ್ಯಾಲಸ್ತೀನಿಯರು ದೇಶಭ್ರಷ್ಟರಾಗಿ ಪಕ್ಕದ ದೇಶಗಳಿಗೆ ವಲಸೆಹೋಗಬೇಕಾಗುತ್ತದೆ. ಸಂಪೂರ್ಣ ಇಸ್ರೇಲ್ ಯಹೂದಿಗಳ ಕೈವಶವಾಗಿ ಪ್ಯಾಲಸ್ತೀನಿಯರು ಗಾಜಾ ಪಟ್ಟಿ ಹಾಗೂ ವೆಸ್ಟ್ ಬ್ಯಾಂಕ್ ಪ್ರದೇಶಕ್ಕೆ ತಳ್ಳಲ್ಪಡುತ್ತಾರೆ. ಸಹಜವಾಗೇ ಮುಸ್ಲಿಂ ಜಗತ್ತಲ್ಲಿ ಇಸ್ರೇಲ್ ವಿರುದ್ದ ಅಸಮದಾನ ಹೆಡೆಯೆತ್ತುತ್ತದೆ. (ಭಾರತವೂ ಮುಸ್ಲಿಂಮರ ತಾಳಕ್ಕೆ ಕುಣಿಯುವ ನಮ್ಮ ರಾಷ್ಟ್ರನಾಯಕರಿಂದಾಗಿ ಅನೇಕ ದಶಕಗಳ ಕಾಲ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂದ ಕಡಿದುಕೊಂಡಿತ್ತು. ಡೇವಿಸ್ ಕಪ್ ಟೆನಿಸ್ ಫೈನಲ್ ನಲ್ಲಿ ಎದುರಾಳಿ ಇಸ್ರೇಲ್ ಆದಾಗ ಆಡದೆ ಬಿಟ್ಟುಕೊಟ್ಟಿತ್ತು!!!). ಪ್ಯಾಲಸ್ತೀನಿಯರ ಉಗ್ರಗಾಮಿ ಸಂಘಟನೆಗಳು ಹುಟ್ಟಿಕೊಳ್ಳುತ್ತದೆ. ಸುತ್ತಮುತ್ತಲಿನ ಮುಸ್ಲಿಂ ದೇಶಗಳೊಡನೆ ಆಗತಾನೆ ಹುಟ್ಟಿದ ಇಸ್ರೇಲ್ ಯುದ್ದಮಾಡಬೇಕಾಗುತ್ತದೆ. ತಾನು ವಶಪಡಿಸಿಕೊಂಡ ಭೂಭಾಗದಲ್ಲಿ ಒಂದಿಷ್ಟನ್ನು ಈಜಿಪ್ಟ್ ಗೆ ಬಿಟ್ಟುಕೊಟ್ಟು ಶಾಂತಿ ಒಪ್ಪಂದ ಮಾಡಿಕೊಳ್ಳುವ ಇಸ್ರೇಲ್ ತನ್ನ ಸಮರ್ಥ ಮಿಲಿಟರಿ ಶಕ್ತಿಯಿಂದ ಇತರ ಮುಸ್ಲಿಂ ದೇಶಗಳನ್ನು ಎದುರಿಸುತ್ತದೆ!!! ಮಧ್ಯಪ್ರಾಚ್ಯ ಬೆಂಕಿಯ ಕುಲುಮೆಯಾಗುತ್ತದೆ. ವಿಶ್ವಸಂಸ್ಥೆಯ ಮದ್ಯಪ್ರವೇಶದೊಂದಿಗೆ ಶಾಂತಿಮಾತುಕತೆ ನಡೆದು ಆ ಪ್ರದೇಶದಲ್ಲಿ ಯಹೂದಿಯರಿಗೆ ಇಸ್ರೇಲ್ ಹಾಗೂ ಅರಬ್ ಮುಸ್ಲಿಮ್ಮರಿಗೆ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್ ಒಳಗೊಂಡ ಪ್ಯಾಲಸ್ತೈನ್ ಎಂಬ ಎರಡು ದೇಶಗಳನ್ನು ನಿರ್ಮಿಸುವ ಪ್ರಸ್ತಾಪವಾಗುತ್ತದೆ. ಯಹೂದಿಗಳು ಕೂಡಲೇ ಒಪ್ಪಿಕೊಳ್ಳುತ್ತಾರೆ. ಆದರೆ ಅರಾಫಾತ್ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದ ಪ್ಯಾಲಸ್ತೀನಿಯರು ಕೂಡಲೇ ಅಲ್ಲದಿದ್ದರೂ ಅನಂತರದಲ್ಲಿ ಒಪ್ಪಿಕೊಳ್ಳುವ ಅನಿವಾರ್ಯತೆ ಬರುತ್ತದೆ.
           ಆ ನೆಲದಲ್ಲಿ ಎರಡು ದೇಶಗಳು ನಿರ್ಮಾಣವಾದರೂ ಶಾಂತಿ ಮರೀಚಿಕೆಯಾಗುತ್ತದೆ. ಗಾಜಾ ಪಟ್ಟಿ ಹಾಗೂ ವೆಸ್ಟ್ ಬ್ಯಾಂಕ್ ನ ಮುಸ್ಲಿಂ ಯುವಕರು ಇಸ್ರೇಲ್ ಮೇಲೆ ಆಗಾಗ್ಯೆ ಆತ್ಮಾಹುತಿ ಭಯೋತ್ಪಾದಕದಾಳಿ ಮಾಡುತ್ತಲೇ ಇರುತ್ತಾರೆ. ಇಸ್ರೇಲ್ ತಕ್ಕ ಪ್ರತ್ಯುತ್ತರ – ಉಗ್ರಗಾಮಿ ನೆಲೆಗಳ ಮೇಲೆ ರಾಕೆಟ್(ಡ್ರೋಣ್) ದಾಳಿ ಮಾಡಿ ಸೆದೆಬಡಿಯುವ ಮೂಲಕ – ನೀಡುತ್ತದೆ. (ಭಾರತದಲ್ಲಿ – ಇಂತಹ ದಾಳಿಗಳಾದಾಗ – ಅಂತಹ ದಾಳಿಗಳನ್ನು ಭಾರತ ಸಮರ್ಥವಾಗಿ ಎದುರಿಸುತ್ತದೆ – ಎಂದು ನಮ್ಮ ನಾಯಕರು ಸದಾ ಹೇಳಿಕೆ ಕೊಡುತ್ತಾರೆ!!!). ಬಾಂಬ್ ದಾಳಿ ಹಾಗೂ ರಾಕೆಟ್ ದಾಳಿಗಳಲ್ಲಿ ಉದ್ದೇಶಿತ ಜನರ ಜೊತೆ ಎಷ್ಟೋಸಲ ಅಮಾಯಕರೂ ಬಲಿಯಾಗುತ್ತಾರೆ. (ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದಷ್ಟೇ ಇಸ್ರೇಲ್ ರಾಕೆಟ್ ದಾಳಿಯಿಂದ ಸತ್ತ ತನ್ನ ಒಂದುವರ್ಷದ ಕಂದಮ್ಮನನ್ನು ಕೈಯ್ಯಲ್ಲಿ ಹಿಡಿದುಕೊಂಡು ರೋದಿಸುತ್ತಿದ್ದ ಪ್ಯಾಲಸ್ತೈನ್ ಬಿಬಿಸಿ ವರದಿಗಾರನ ಫೋಟೋ ನೀವು ನೋಡಿರಬಹುದು). ಆತ್ಮಹತ್ಯಾದಾಳಿ ತಡೆಯಲು ಇಸ್ರೇಲ್ ಜೆರುಸಲೇಮ್ ನಲ್ಲಿ ಮೈಲಿಗಟ್ಟಲೆ ಉದ್ದ ಗಡಿಯಲ್ಲಿ ಎರೆಡಾಳೆತ್ತರ ಕಾಂಕ್ರೆಟ್ ಗೋಡೆಯನ್ನೇ ನಿರ್ಮಿಸುತ್ತದೆ.
             ಇತ್ತ ಪ್ಯಾಲಸ್ತೈನ್ ನಲ್ಲಿ ಅಂತರ್ಯುದ್ದ ಶುರುವಾಗುತ್ತದೆ. ಇಸ್ರೇಲ್ ಅಸ್ತಿತ್ವವನ್ನು ಒಪ್ಪಿಕೊಳ್ಳುವ ಅರಾಫಾತ್ ಪಕ್ಷದ ವಿರುದ್ದ – ಬಿಸಿರಕ್ತದ ಮುಸ್ಲಿಂ ತರುಣರ – ಇಸ್ರೇಲ್ ಅನ್ನು ನಾಮಾವಶೇಷಮಾಡುವ ಉತ್ಸಾಹದ – ತೀವ್ರಉಗ್ರಗಾಮಿ ಸಂಘಟನೆ ಹಮಾಸ್ ಬಲಗೊಂಡು – ಪ್ಯಾಲಸ್ತೈನ್ (ಗಾಜಾ ಪಟ್ಟಿ) ಆಡಳಿತ ಹಮಾಸ್ ಕೈವಶವಾಗುತ್ತದೆ!!! (ಲಷ್ಕರ್-ಎ-ತೊಯ್ಬಾದಂತಹ  ಸಂಘಟನೆಗಳಿಗೆ ಪಾಕಿಸ್ತಾನದ ಆಡಳಿತ ಸಿಕ್ಕರೆ ಹೇಗಾಗಬಹುದೆಂದು ಊಹಿಸಿಕೊಳ್ಳಿ). ಇಸ್ರೇಲ್ ತಲೆನೋವು ಮತ್ತೂ ಹೆಚ್ಚಾಗುತ್ತದೆ.  ಉಗ್ರಗಾಮಿ ಸಂಘಟನೆ ಹಮಾಸ್ ನ ಕೈವಶವಾಗುವ ಗಾಜಾ ಪಟ್ಟಿ ಎಂದು ಕರೆಯಲ್ಪಡುವ ಪ್ರದೇಶ ಏನಂತಾ ವಿಸ್ತಾರವಾದ ಪ್ರದೇಶವೇನಲ್ಲ. ಇಸ್ರೇಲಿನ ಪಶ್ಚಿಮಕ್ಕೆ, ಮೆಡಿಟರೇನಿಯನ್ ಸಮುದ್ರಕ್ಕೆ ತಾಗಿದಂತ, ಭೂಪಟದಲ್ಲಿ ಒಂದು ಸ್ಕೇಲ್ ನ ಪಟ್ಟಿಯಂತೆ ಕಾಣುವ, ೪೦ ಕಿ.ಮೀ. ಉದ್ದ ಹಾಗು ಅಂದಾಜು ೬-೧೨ ಕಿ.ಮೀ. ಅಗಲದ ಚಿಕ್ಕ ಭೂಪ್ರದೇಶ!!! ಆದರೆ ಜನಸಂಖ್ಯೆ ವಿಪರೀತ. ಅಂದಾಜು ಹದಿನಾರು ಲಕ್ಷ!!! ಅವರಲ್ಲಿ ಅರ್ದಕ್ಕರ್ದ ಜನ ಇಸ್ರೇಲಿ ಮುನ್ನುಗ್ಗುವಿಕೆಗೆ ತಮ್ಮ ನೆಲೆ ಕಳೆದುಕೊಂಡ ನಿರಾಶ್ರಿತರು. ಸಹಜವಾಗಿಯೇ ಇಸ್ರೇಲಿಗರ ಮೇಲೆ ದ್ವೇಷ ಕುದಿಯುತ್ತಿರುತ್ತದೆ. ಶ್ರೀಮಂತ ಮುಸ್ಲಿಂ ದೇಶಗಳಿಂದ ಹಣ ಹರಿದುಬರುತ್ತಿರುತ್ತದೆ. ಇತ್ತ ನಿರುದ್ಯೋಗ ತಾಂಡವಾಡುತ್ತಿರುತ್ತದೆ. ಭಯೋತ್ಪಾದಕ ಉಗ್ರಗಾಮಿ ಸಂಘಟನೆಗಳು ಬೇರುಬಿಟ್ಟು ಹೆಮ್ಮರವಾಗಲು ಇದಕ್ಕಿಂತ ಉತ್ತಮ ಕಾರಣಗಳಿವೆಯೇ? ಪರಿಣಾಮ – ಸದಾ ಇಸ್ರೇಲ್ ಮೇಲೆ ಆತ್ಮಾಹುತಿದಾಳಿ, ಅಪಹರಣ, ರಾಕೆಟ್ ದಾಳಿ – ಇತ್ಯಾದಿ. ಇದಕ್ಕೆ ಗಾಜಾದಲ್ಲಿ ಈಗ ಆಡಳಿತದಲ್ಲಿ ಕೂತಿರುವ ಹಮಾಸ್ ನ ಸಂಪೂರ್ಣ ಬೆಂಬಲ.
             ಗಾಜಾಪಟ್ಟಿಯ ಪ್ಯಾಲಸ್ತೈನರಿಗೆ ಸರಿಯಾಗಿ ಬುದ್ದಿಕಲಿಸಲು ಇಸ್ರೇಲ್ ಮೆಡಿಟರೇನಿಯನ್ ಸಮುದ್ರದ ತೀರದುದ್ದಕ್ಕೂ ಸೇರಿದಂತೆ ಗಡಿಸುತ್ತಲೂ ದಿಗ್ಬಂದನ ಹಾಕುತ್ತದೆ. ಗಾಜಾನಗರಕ್ಕೆ ಹಡಗುಗಳ ಬರುವಿಕೆ ಸಂಪೂರ್ಣವಾಗಿ ನಿಲ್ಲುತ್ತದೆ. ಗಾಜಾ ಅಂತರಾಷ್ಟ್ರೀಯ ವಿಮಾನನಿಲ್ದಾಣ ಹಾಳುಬೀಳುತ್ತದೆ. ತನ್ನ ಗಡಿಯಲ್ಲಿ ಗಾಜಾದೊಳಕ್ಕೆ ಸರಕು ಸಾಗಾಣೆಗೆ ಒಂದೇ ಒಂದು ಚೆಕ್ ಪೋಸ್ಟನ್ನು ಮುಕ್ತವಾಗಿಡುವ ಇಸ್ರೇಲ್, ನೂರೆಂಟು ನಿಬಂದನೆಗಳಿಂದ ಆ ಚೆಕ್ ಪೋಸ್ಟ್ ಮೂಲಕ ಗಾಜಾದೊಳಗೆ ಸರಕುಗಳ ಸಾಗಣೆ ನಿದಾನವೂ, ಕಷ್ಟವೂ ಹಾಗು ತುಂಬಾ ಖರ್ಚಿನದೂ ಆಗುವಂತೆ ಮಾಡಿದೆ. ಯಾವಾಗ ಅಧಿಕೃತ ದಾರಿಗಳು ಕಷ್ಟಕರವಾಗುತ್ತವೋ ಆಗ ತೆರೆದುಕೊಳ್ಳುವುದು ಅನಧಿಕೃತ ದಾರಿಗಳು!!! (ನಿಮ್ಮ ಅನುಭವಕ್ಕೂ ಬಂದಿರಬಹುದು J). ಗಾಜಾಪಟ್ಟಿಯ ವಿಷಯದಲ್ಲಿ ಆಗಿರುವುದೂ ಅದೇ!!! ಗಾಜಾಪಟ್ಟಿಯ ಒಂದೂವರೆ ದಶಲಕ್ಷ ಜನರ ಅಗತ್ಯತೆಗಳ ತಡೆರಹಿತ ಸರಬರಾಜಿಗೆ ಕಂಡುಕೊಂಡಲ್ಪಟ್ಟ ಮಾರ್ಗವೇ ನೆಲದಾಳದ ಸುರಂಗಗಳು!!!
             ಗಾಜಾಪಟ್ಟಿಯ ಒಂದುಕಡೆ ಮೆಡಿಟರೇನಿಯನ್ ಸಮುದ್ರ ಹಾಗೂ ಮತ್ತೆಲ್ಲಾಕಡೆ ಸುತ್ತಲೂ ಇಸ್ರೇಲ್ ಇದ್ದರೂ ಪಕ್ಕದ ಈಜಿಪ್ಟ್ ನೊಂದಿಗೆ ಎಂಟತ್ತು ಕಿಲೋಮೀಟರ್ ಗಳಷ್ಟು ಉದ್ದದ ಗಡಿಯನ್ನು ಹೊಂದಿದೆ. ನಾನು ಹೇಳಹೊರಟಿರುವ ಸುರಂಗಗಳು ಇರುವುದು ಆ ಗಡಿಯ ಕೆಳಗೇ. ಕಯ್ಯಲ್ಲಿ ಬಂದೂಕು ಹಾಗೂ ಧರ್ಮದ ಪಿತ್ತ ನೆತ್ತಿಗೆರಿರುವ ಪ್ಯಾಲಸ್ತೈನ್ ಉಗ್ರರನ್ನು ಈಜಿಪ್ಟ್ ಆಡಳಿತಗಾರರೂ ಸ್ವಲ್ಪ ದೂರವೇ ಇಟ್ಟಿದ್ದಾರೆ. (ಸುಯೆಜ್ ಕಾಲುವೆ ದಡದಲ್ಲಿರುವ ಈಜಿಪ್ಟ್ ಪ್ರವಾಸೀತಾಣಗಳ ಮೇಲೆ ಮುಸ್ಲಿಂ ಉಗ್ರರ ದಾಳಿ ನಡೆದಿತ್ತು. ಅಷ್ಟಲ್ಲದೇ ಈಜಿಪ್ಟ್ ತಮ್ಮ ಶತ್ರು ಇಸ್ರೇಲ್ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದುದು ಪ್ಯಾಲಸ್ತೈನ್ ನವರು ಹೇಗೆ ಸಹಿಸಿಯಾರು?). ಆದ್ದರಿಂದ ಈಜಿಪ್ಟ್ ಕೂಡ ತನ್ನ ಗಡಿಯನ್ನು (ಪ್ರವಾಸಿಗರ ಬರುವಿಕೆ ಹಾಗೂ ತೆರಳುವಿಕೆಗೆ ಒಂದು ಚೆಕ್ ಪೋಸ್ಟ್ ಬಿಟ್ಟು(ಜೇಬಲ್ಲಿ ದುಡ್ಡಿಟ್ಟುಕೊಂಡು ಓಡಾಡುವ ಪ್ರವಾಸಿಗರ ಕಿಮ್ಮತ್ತೆ ಅಂಥದ್ದು!!)) ಮುಚ್ಚಿದೆ!!! ಆದ್ದರಿಂದ ಪ್ಯಾಲಸ್ತೈನ್ ನವರ ದಿನನಿತ್ಯದ ಅಗತ್ಯತೆಗಳೂ ಸುರಂಗಗಳ ಮೂಲಕವೇ ಪುರೈಕೆಯಾಗಬೇಕು!!!!
ಸುರಂಗ ನಿರ್ಮಾಣ 
             ಒಂದಿಷ್ಟು ದುಡ್ಡು – ಹೊರದೇಶಗಳಲ್ಲಿ ದುಡಿಯುತ್ತಿರುವ ಕುಟುಂಬದ ಸದಸ್ಯರು ಕಳುಹಿಸಿದ ದುಡ್ಡೋ ಅಥವಾ ಶಾಂತಿಕಾಲದಲ್ಲಿ ಇಸ್ರೇಲ್ ಫಾರ್ಮ್ ಗಳಲ್ಲಿ ದುಡಿದಾಗ ಉಳಿಸಿಟ್ಟ ದುಡ್ಡೋ ಅಥವಾ ಸುರಂಗನಿರ್ಮಾಣಕ್ಕಾಗಿ ಸ್ನೇಹಿತರಿಂದ ಸಾಲ ಎತ್ತಿದ ದುಡ್ಡೋ – ಒಂದಿಷ್ಟು ದುಡ್ಡು ಒಟ್ಟುಮಾಡಿಕೊಂಡ ಒಂದಿಷ್ಟು ಜನ ಒಂದೆಡೆ ಸೇರಿ ಒಂದು ಬಿಸಿನೆಸ್ ಶುರುಮಾಡುತ್ತಾರೆ. ಅದೇ ಸುರಂಗ ನಿರ್ಮಾಣ!!! ಗಡಿಯಿಂದ ಕೆಲವೇ ಮೀಟರ್ ಗಳ ದೂರದಲ್ಲಿ, ಒಂದು ತಾತ್ಕಾಲಿಕ ಟೆಂಟ್ ನಿರ್ಮಾಣವಾಗುತ್ತದೆ. ಮೊದಲು ನಲವತ್ತೈವತ್ತು ಅಡಿ ಆಳ ಬಾವಿತರ ತೋಡುತ್ತಾರೆ. ಅನಂತರ ಅಡ್ಡಡ್ಡ ಕೊರೆಯುತ್ತಾರೆ. ನೆಲದಾಳದಲ್ಲಿಯೇ ಸುರಂಗ ನಿರ್ಬಂದಿತ ಗಡಿದಾಟುತ್ತದೆ!! ನಂತರ ಈಜಿಪ್ಟ್ ಕಡೆ ಮೇಲೆ ಹತ್ತಿಬರುವಂತೆ ಪುನಃ ಬಾವಿತರ ಕೊರೆಯುತ್ತಾರೆ!! ಅಲ್ಲಿಗೆ ಸ್ವಲ್ಪ ಬಗ್ಗಿ ನಡೆದುಕೊಂಡು ಸಾಗಬಹುದಾದ ಸುರಂಗ ರೆಡಿ. ಸುರಂಗ ನಿರ್ಮಾಣದ ಕೆಲಸ ಹಾಗೂ ಅದರ ನಿರ್ವಹಣೆ ಕೆಲಸ ಅತ್ಯಂತ ಅಪಾಯಕಾರಿಯದ್ದು. ಜಾರಿ ಬೀಳುವ ಮಣ್ಣು (ಕೆಲಸಗಾರರನ್ನು) ಹೂತೇ ಹಾಕಬಹುದು. ಶ್ವಾಸಕೋಶ ಸಂಬಂದಿತ ಕಾಯಿಲೆಗಳು ಸದಾ. ಆದರೂ ಅಂತರ್ಯುದ್ದ ಹಾಗೂ ಅಶಾಂತಿ ಪೀಡಿತ ಪ್ಯಾಲಸ್ತೈನ್ ನಲ್ಲಿ ಕೆಲಸಗಾರರಿಗೆನೂ ಬರಗಾಲವಿಲ್ಲ. ಟ್ಯುಶನ್ ಗೆ ದುಡ್ಡು ಹೊಂದಿಸಲು ಪ್ಯಾಲಸ್ತೈನ್ ಯುವಕರು ಈ ಅರೆಕಾಲಿಕ ಕೆಲಸಕ್ಕೆ ಸದಾ ಸಿದ್ದ!!! (ಉತ್ತಮ ಶಿಕ್ಷಣ ಪಡೆದು ಪ್ರಪಂಚದ ಬೇರೆಡೆ ತೆರಳಿ ಕೆಲಸಮಾಡಿ ಮನೆಗೂ ಸ್ವಲ್ಪ ದುಡ್ಡು ಕಳಿಸುವುದು – ಇದು ಅಂತರ್ಯುದ್ದಪೀಡಿತ/(ಹಾಲೀ ಅಥವಾ ಮಾಜಿ)ಕಮ್ಯುನಿಸ್ಟ್ ರಾಷ್ಟ್ರಗಳ ಯುವಕರ ಹೆಬ್ಬಯಕೆ). ಕೆಲವು ವರ್ಷಗಳ ಕೆಳಗೆ – ಸುರಂಗ ನಿರ್ಮಾಣ ಕಾರ್ಯ ಉತ್ತುಂಗದಲ್ಲಿದ್ದಾಗ – ನಂಬಿದರೆ ನಂಬಿ ಬಿಟ್ಟರೆ ಬಿಡಿ – ಹದಿನೈದು ಸಾವಿರಕ್ಕೂ ಹೆಚ್ಚು ಜನರಿಗೆ – ಪ್ರತ್ಯಕ್ಷ ಅಥವಾ ಪರೋಕ್ಷ ಕೆಲಸಕೊಡಲ್ಪಟ್ಟಿದೆ ಈ ವ್ಯವಸ್ತೆಯಿಂದ!!! ಇಂದು ಸುರಂಗಗಳು ಗಡಿಯಪಕ್ಕದಲ್ಲಿ ಎಲ್ಲೆಂದರಲ್ಲಿವೆ. (ಅಧಿಕೃತ ಪ್ರವಾಸೀ ಕೈಪಿಡಿಯಲ್ಲೂ ಉಲ್ಲೇಖವಿದೆಯಂತೆ!!).
            ಈ ಸುರಂಗಗಳ ಮೂಲಕ ಸಾಗಿಸಲ್ಪಡುವ ಸರಕುಗಳು – ನಿರೀಕ್ಷಿತ – ಬೆಂಗಳೂರಿನ ಕಾಲುಭಾಗದಷ್ಟಿನ ಜನಸಂಖ್ಯೆಗೆ ಬೇಕಾದ ಅಗತ್ಯತೆಗಳು. ಆಹಾರ ಧಾನ್ಯಗಳು, ಔಷಧಿಗಳು, ಪೆಟ್ರೋಲ್/ಗ್ಯಾಸ್ ಇತರೆ ಇಂಧನಗಳು, ಬಟ್ಟೆಬರೆಗಳು,ಕಂಪ್ಯೂಟರ್/ಟೀವಿ/ಮೊಬೈಲ್/ಇತರ ಎಲೆಕ್ಟ್ರಾನಿಕ್ ಉಪಕರಣಗಳು, ಅಪಾರ್ಟ್ ಮೆಂಟ್ ಹಾಗೂ ಇತರ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಿಮೆಂಟ್/ಜಲ್ಲಿ/ಉಕ್ಕು ಇತ್ಯಾದಿ ಪರಿಕರಗಳು, ಕುರಿಗಳು, ದನದ ಕರುಗಳು, ಹಣ್ಣುಹಂಪಲುಗಳು. ಒಂದೊಮ್ಮೆಯಂತೂ ಗಾಜಾ ಮೃಗಾಲಯಕ್ಕೆ ಬೇಕಾದ ಸಿಂಹವೊಂದನ್ನೂ (ಕಷ್ಟಪಟ್ಟು) ಸುರಂಗದ ಮೂಲಕ ಸಾಗಿಸಲಾಯಿತಂತೆ!!! ಗಾಜಾದ ಶ್ರೀಮಂತರ/ಅಧಿಕಾರಿಗಳ ಓಡಾಟಕ್ಕೆ ಹವಾನಿಯಂತ್ರಿತ ವಿ.ಐ.ಪಿ. ಸುರಂಗಗಳಿದ್ದಾವಂತೆ!!! ಆಡಳಿತದಲ್ಲಿರುವ ಹಮಾಸ್ ಸಂಘಟನೆಗೆ ಆಯುಧಗಳು ಹಾಗೂ ಹೊರಗಿನಿಂದ ದುಡ್ಡು ಕಳ್ಳಸಾಗಾಣಿಕೆಯಾಗುವುದು ಈ ಸುರಂಗಗಳ ಮೂಲಕವೇ!!! ಸುರಂಗಗಳ ಮೂಲಕ ಸಾಮಾನು ಸಾಗಿಸುವ ಸಾಗಾಟಗಾರರು ಸಾಗಿಸಲ್ಪಡುವ ಪ್ರತಿ ಸರಕಿಗೂ ಇಂತಿಷ್ಟೆಂದು ಸುರಂಗ ನಿರ್ವಾಹಕರಿಗೆ ಹಣ ಕೊಡಬೇಕು. ಅಷ್ಟೇ ಅಲ್ಲದೆ ಹಮಾಸ್ ಕೂಡಾ ಅದರಮೇಲೆ ತೆರಿಗೆ ವಿದಿಸುತ್ತದೆ. ಆ ತೆರಿಗೆಯೇ ವರ್ಷಕ್ಕೆ ಬರಾಬ್ಬರಿ ಏಳುನೂರು ದಶಲಕ್ಷ ಡಾಲರಿನಷ್ಟಾಗುತ್ತದೆಂದರೆ ಆ ವಹಿವಾಟಿನ ಅಗಾದತೆ ನಿಮ್ಮ ಕಲ್ಪನೆಗೆ ಬರಬಹುದು. ಈಗ ಬಹುಶಃ – ಲೇಖನದ ಪ್ರಾರಂಭದಲ್ಲಿ ನಾನು ಹೇಳಿದ ಮಾತು – ಈ ವ್ಯವಸ್ತೆ ಪ್ರಪಂಚದ ಅತಿದೊಡ್ಡ ಕಳ್ಳಸಾಗಾಣಿಕಾ ವ್ಯವಸ್ತೆ – ಎಂದು ನಾನು ಹೇಳಿದ್ದರಲ್ಲಿ ನಿಮಗೆ ಅನುಮಾನವೇ ಇರಲಿಕ್ಕಿಲ್ಲ.
          ಶಾಂತ ಕಾಲಘಟ್ಟದಲ್ಲಿ ಬದುಕುತ್ತಿರುವ ನಮಗೆ (ಕರ್ನಾಟಕದವರಿಗೆ) ಅಲ್ಲಿಯ ವಿಪ್ಲವಗಳು ಅರಿವಿಗೆ ಬರುವುದು ಸ್ವಲ್ಪಕಷ್ಟವೇ. ಅಲ್ಲಿನದು ದಿನನಿತ್ಯ ಸಂಘರ್ಷದ ಬದುಕು. ಪ್ರಪಂಚ ಏನೇಹೇಳಿದರೂ - ತನ್ನ ಸುರಕ್ಷತೆ ತನಗೆ ಮುಖ್ಯ ಎಂದು ಇಸ್ರೇಲ್ – ಪ್ಯಾಲಸ್ತೈನ್ ಮುಸ್ಲಿಮರ ಭಯೋತ್ಪಾದಕತೆ/ಮಾನವ ಬಾಂಬ್ ಗಳನ್ನು – ನಿರ್ದಾಕ್ಷಿಣ್ಯ ಕ್ರಮಗಳಿಂದ ಸಾಕಷ್ಟು ಹತ್ತಿಕ್ಕಿದೆ. (ಪ್ರಪಂಚದ ಅನೇಕ ದೇಶಗಳು ಗಾಜಾಕ್ಕೆ ಸಂಬಂದಪಟ್ಟಂತೆ ಇಸ್ರೇಲ್ ಕ್ರಮವನ್ನು ಖಂಡಿಸಿವೆ. ಬ್ರಿಟನ್ ಪ್ರದಾನಿ ಕ್ಯಾಮರೂನ್ ಅಂತೂ ಗಾಜಾಪಟ್ಟಿಯನ್ನು ಒಂದು ಬಂದೀಖಾನೆಗೆ ಹೋಲಿಸುತ್ತಾರೆ. ಇಸ್ರೇಲ್ ತಲೆಕೆಡಿಸಿಕೊಳ್ಳುತ್ತಿಲ್ಲ). ಜೆರುಸಲೇಮ್ ಸುತ್ತ ಎರಡಾಳೆತ್ತರ ಕಾಂಕ್ರೀಟ್ ಗೋಡೆ ಎಬ್ಬಿಸಿರುವ ಇಸ್ರೇಲ್ – (ನಿರುದ್ಯೋಗಿ) ಪ್ಯಾಲಸ್ತೈನಿಯರು ಬೆಳಿಗ್ಗೆ ಸರದಿಸಾಲಿನಲ್ಲಿ ನಿಂತು – ಹೆಂಡತಿಯಿದ್ದು ಮಕ್ಕಳೂ ಜೊತೆಗೆ ವಾಸಿಸುತ್ತಿರುವ ದಾಖಲೆಯ ಗುರುತಿನ ಚೀಟಿ ತೋರಿಸಿ – ಗೋಡೆಯೀಚೆಯ ಇಸ್ರೇಲಿ ಜಾಗಗಳಿಗೆ ಬಂದು ಕೆಲಸಮಾಡಿ ಸಂಪಾದನೆ ಮಾಡಿಕೊಂಡು – ಸಂಜೆ ವಾಪಸ್ ಗೋಡೆಯಾಚೆಯ ತಮ್ಮ ಮನೆಗಳಿಗೆ ಹೋಗುವ ಅನಿವಾರ್ಯತೆ ತಂದಿದೆ!!!! ಒಂದು ಪೆಟ್ಟು ತನಗೆ ಬಿದ್ದರೆ – ಹತ್ತು ಪೆಟ್ಟು ಹೊಡೆದು – ಅಂತರರಾಷ್ಟ್ರೀಯ ಸಮುದಾಯದ ಖಂಡನೆ ಹೆಚ್ಚಾದಾಗ – ಉದಾರತೆ ತೋರಿಸುವವರಂತೆ – ಹೊಡೆತ ನಿಲ್ಲಿಸುತ್ತದೆ ಇಸ್ರೇಲ್!!!! ಸುರಂಗಗಳು ಪ್ಯಾಲಸ್ತೈನ್ ನವರ ಪಾಲಿಗೆ ಇಸ್ರೇಲ್ ದೌರ್ಜನ್ಯಕ್ಕೆ ತಕ್ಕ ಪ್ರತ್ಯುತ್ತರ. ಜೀವನದ ನರನಾಡಿ.
           ನನ್ನ ಪ್ರತಿ ಬ್ಲಾಗ್ ಲೇಖನಗಳ ಕೊನೆಯಂತೆ ಈ ಲೇಖನದ್ದೂ. ಈ ಗಾಜಾಪಟ್ಟಿಯ ಕಳ್ಳಸಾಗಾಣಿಕಾ ಸುರಂಗಗಳ ಬಗ್ಗೆ, ಈ ವ್ಯವಹಾರ ವಹಿವಾಟಿನ ಬಗ್ಗೆ ನಿಮಗೆ ಗೊತ್ತಿತ್ತೆ? ಅಥವಾ ಈ ಲೇಖನದ ಮೂಲಕವೇ ಗೊತ್ತಾಗಿದ್ದೆ?? ನಿಮ್ಮಭಿಪ್ರಾಯಗಳಿಗೆ ಕಾತುರನಾಗಿದ್ದೇನೆ!!! ಕಾಮೆಂಟಿಸಿ. (ಕಾಮೆಂಟ್ ಮಾಡಲು ಪುರುಸೊತ್ತಿಲ್ಲದಿದ್ದರೆ +1 ರ ಮೇಲೆ ಕ್ಲಿಕ್ ಮಾಡಬಹುದು). ನಿಮ್ಮ ಕಾಮೆಂಟ್ ಗಳು ನಮ್ಮ ತಪ್ಪು ಒಪ್ಪುಗಳಿಗೆ ಕನ್ನಡಿ.

9 comments:

  1. Even with 24/7 internet connectivity, I never knew about this!! Very interesting and wonderful narration. Thank you Subbanna!!

    ReplyDelete
  2. ಈ ಲೇಖನದ ಎಳ್ಳಷ್ಟು ಭಾಗ ಮುಂಚೆ ಗೊತ್ತಿರಲಿಲ್ಲ. ಇಷ್ಟೆಲ್ಲಾ ಕಳ್ಳ ಮಾರ್ಗಗಳು ಇವೆಯೇ? ಎಂದು ಆಶ್ಚರ್ಯ ಆಗುತ್ತಿದೆ

    ReplyDelete
  3. didn't know this earlier. good read

    ReplyDelete
  4. ತಲೆಬರಹವನ್ನು ನೋಡಿಯೇ ಅಚ್ಚರಿಯಾಯಿತು. ಬರಹವನ್ನು ಓದುತ್ತ ಹೋದಂತೆ, ಇಲ್ಲಿಯವರೆಗೆ ಸ್ವಲ್ಪವೂ ಗೊತ್ತಿಲ್ಲದ ಹೊಸ ಲೋಕವೊಂದನ್ನು ಹೊಕ್ಕಂತೆ ಅನಿಸಿತು. Thank you very much, ಸುಬ್ರಹ್ಮಣ್ಯರೆ!

    ReplyDelete
  5. ಸುಬ್ರಹ್ಮಣ್ಯಜೀ,
    ಇದನ್ನಾ ಪೇಪರಿಗೆ ಕೊಟ್ಟರೆ ಇನ್ನೂ ಅನುಕೂಲವಿತ್ತೇನೋ...
    ತುಂಬಾ ತುಂಬಾ ತುಂಬಾ ಚೆಂದದ ಮಾಹಿತಿ..
    ನನಗಂತೂ ಈ ಬಗ್ಗೆ ಏನೂ ಗೊತ್ತಿರಲಿಲ್ಲ...ಇಸ್ರೇಲ್ ಹಾಗೂ ಪ್ಯಾಲಸ್ತೈನ್ ಎಂಬ ದೇಶಗಳ ನಡುವೆ ಜಗಳವಿತ್ತೆಂಬುದ ಬಿಟ್ಟು...
    ಆಬ್ಬಾ ಆ ಜನರ ಅದು ಹೇಗೆ ಬದುಕುತ್ತಾರಪಾ....
    ನಾವೇ ಸುಖಿಗಳು...
    ಹಮ್...ಇಸ್ರೇಲಿಗರ ಗಟ್ಟಿತನವನ್ನೂ ಮೆಚ್ಚಲೇಬೇಕು...
    ವಂದನೆಗಳು ಅದ್ಭುತವಾದ ಮಾಹಿತಿಗೆ..
    ನಮಸ್ತೆ:)

    ReplyDelete
  6. nanagoo i bagge modalu gottiralilla. Shashank Redemption chalana chitra jnapakakke bantu. i janara badukige hOlisidare naavu nijavaagiyoo sukhigaLu.

    sarve janaH sukhinO bhavaMtu.

    ReplyDelete
  7. ಈ ವಿಷಯಗಳನ್ನೆಲ್ಲಾ ಓದುತ್ತಿದ್ದಂತೆ ಆಶ್ಚರ್ಯವಾಯಿತು. ಇಸ್ರೇಲ್ ಪ್ಯಾಲೆಸ್ತೇನ್ ಜಗಳದ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದರೂ ಸಹ ಇಷ್ಟು ವಿವರವಾಗಿ ಗೊತ್ತಿರಲಿಲ್ಲ. ಜೊತೆಗೆ ಈ ಕಳ್ಳ ಸುರಂಗಗಳ ಬಗ್ಗೆ ಇದೇ ಮೊದಲು ಗೊತ್ತಾಗಿದ್ದು. ರೋಚಕವಾಗಿ ವಿಷಯ ಹಾಗೂ ಬರಹ. ಯಾವುದಾದರೂ ಪತ್ರಿಕೆ/ಮ್ಯಾಗಜೀನಲ್ಲಿ ಪ್ರಕಟಿಸಿದರೆ ಚೆನ್ನಾಗಿರುತ್ತದೆ. ಧನ್ಯವಾದಗಳು.

    ReplyDelete
  8. ತಿಳಿದಿರದ ವಿಶಯ ತಿಳಿಯಿತು.

    ReplyDelete